Advertisement

ಮಲ್ಲಾಪುರ ಕೆರೆಯಲ್ಲಿ ಮೀನುಗಳ ಸಾವು

11:06 AM Apr 09, 2020 | Naveen |

ಚಿತ್ರದುರ್ಗ: ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 13ರ ಪಕ್ಕದಲ್ಲೇ ಇರುವ ಮಲ್ಲಾಪುರ ಕೆರೆಯಲ್ಲಿ ರಾಶಿ ರಾಶಿ ಮೀನುಗಳು ಸತ್ತು ಬಿದ್ದುದ್ದು, ದುರ್ವಾಸನೆ ಬರುತ್ತಿದೆ. ಇದರಿಂದ ಮಲ್ಲಾಪುರ ಸೇರಿದಂತೆ ಸುತ್ತಮುತ್ತಲಿನ ಜನತೆ ಕೆರೆ ಬಳಿ ಹಾದು ಹೋಗುವುದು ಕಷ್ಟವಾಗಿದೆ. ಅಗತ್ಯ ವಸ್ತುಗಳ ಖರೀದಿಗೆ ನಗರಕ್ಕೆ ಬರುವವರು ಕೂಡಾ ವಾಸನೆಗೆ ಮೂಗು ಮುಚ್ಚಿ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಕೋವಿಡ್-19 ವೈರಸ್‌ನಿಂದ ಭಯಭೀತರಾಗಿರುವ ಜನರಿಗೆ ಮೀನುಗಳು ಸಾವಿರಾರು ಸಂಖ್ಯೆಯಲ್ಲಿ ಸತ್ತು ಕೆಟ್ಟ ವಾಸನೆ ಬರುತ್ತಿರುವುದರಿಂದ ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ.

Advertisement

ಚಿತ್ರದುರ್ಗದ ನಗರದ ಎಲ್ಲಾ ತ್ಯಾಜ್ಯ ಮಲ್ಲಾಪುರ ಕೆರೆಯ ಒಡಲು ಸೇರುತ್ತಿದ್ದು, ಆಳುವ ವರ್ಗದವರು ಈ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ. ಕೆರೆಯಲ್ಲಿ ಶೇಖರಣೆಯಾಗುತ್ತಿರುವ ಮಲೀನ ಹಾಗೂ ವಿಷಯುಕ್ತ ನೀರು ಕೂಡಾ ಮೀನುಗಳ ಮಾರಣ ಹೋಮಕ್ಕೆ ಕಾರಣವಾಗಿರಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಬಿಸಿಲಿನ ಪ್ರಮಾಣ ಹೆಚ್ಚಾಗಿರುವುದು, ಇತ್ತೀಚೆಗೆ ಸುರಿದ ಮಳೆಯ ಕಾರಣಕ್ಕೆ ಈ ರೀತಿ ಮೀನುಗಳು ಸಾಯುತ್ತಿರಬಹುದು ಎಂದು ಅಂದಾಜಿಸಲಾಗಿದೆ. ತಕ್ಷಣ ಈ ಮೀನುಗಳನ್ನು ಹಿಡಿದು ಹೂಳಬೇಕು. ಜತೆಗೆ ಕೆರೆಯಲ್ಲಿರುವ ಇತರೆ ಮೀನುಗಳನ್ನು ಹಿಡಿದು ಮಾರಾಟ ಮಾಡಬೇಕು. ಆಗ ಕೆರೆಯಲ್ಲಿನ ಮೀನುಗಳ ಪ್ರಮಾಣ ಕಡಿಮೆಯಾಗಿ ಉಸಿರಾಟಕ್ಕೆ ಅನುಕೂಲವಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕೆರೆಯಲ್ಲಿ ಮೀನುಗಾರಿಕೆ ನಡೆಸಲು ಸಾಕಷ್ಟು ಹಣ ಹೂಡಿ ಗುತ್ತಿಗೆ ಪಡೆದಿದ್ದವರು ಕೂಡಾ ಇದರಿಂದ ಕಂಗಾಲಾಗಿದ್ದು, ಈಗ ಲಾಕ್‌ ಡೌನ್‌ ಇರುವುದರಿಂದ ಮೀನು ಮಾರಾಟ ಕೂಡಾ ಕಷ್ಟವಾಗಲಿದೆ. ಈ ಸಂದರ್ಭದಲ್ಲಿ ಮೀನುಗಳು ಸಾಯುತ್ತಿರುವುರು ಆತಂಕವನ್ನು ಹೆಚ್ಚಿಸಿದೆ.

ಮಳೆ ಬಂದಾಗ ಹೊಸ ನೀರು ಹರಿದು ಬರುವುದರಿಂದ ಈ ರೀತಿ ಮೀನುಗಳು ಮರಣ ಹೊಂದುತ್ತವೆ ಎಂದು ತಜ್ಞರು ಹೇಳುತ್ತಿದ್ದಾರೆ. ಈಗ ಸತ್ತಿರುವ ಮೀನುಗಳನ್ನು ನಾವೇ ತೆಗೆದು ಹಾಕುತ್ತಿದ್ದೇವೆ. ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಸಂಪರ್ಕಕ್ಕೆ ಸಿಗುತ್ತಿಲ್ಲ. ಕಳೆದ ಐದು ವರ್ಷದಿಂದ ಕೆರೆ ಸ್ವತ್ಛವಾಗಿಲ್ಲ. ಈ ಎಲ್ಲಾ ಕಾರಣಕ್ಕೆ ಇಷ್ಟು ಪ್ರಮಾಣದಲ್ಲಿ ಮೀನು ಗಳು ಸಾಯುತ್ತಿರಬಹುದು ಎಂದು ಮಹಾತ್ಮಾ ಗಾಂಧಿ ಕೆರೆ ಬಳಕೆದಾರರ ಸಂಘದ ಅಧ್ಯಕ್ಷೆ ಸಿದ್ದಲಿಂಗಮ್ಮ, ಖಜಾಂಚಿ ಸಿದ್ದಪ್ಪ ಪಿಳ್ಳಿಕೇರೆನಹಳ್ಳಿ ಹಾಗೂ ಕಾರ್ಯದರ್ಶಿ ಬಸವರಾಜ್‌ “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next