Advertisement

ಇಂದ್ರಿಯ ನಿಗ್ರಹ ಇಲ್ಲದಿದ್ರೆ ಅಧಃಪತನ

06:37 PM Aug 06, 2021 | Team Udayavani |

ಹೊಸದುರ್ಗ: ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಳ್ಳದಿದ್ದರೆ ಮಾನವ ಅಧಃಪತನ ಹೊಂದುತ್ತಾನೆ. ದೊಡ್ಡ ಸ್ಥಾನದಲ್ಲಿರುವವರು ಇದಕ್ಕೆ ಉದಾಹರಣೆಯಾಗಿದ್ದಾರೆ. ಇಂದು ದೇವರು ಪ್ರದರ್ಶನದ ಸರಕಾಗುತ್ತಿದ್ದು, ಇದರಿಂದಾಗಿ ವ್ಯಕ್ತಿಯ ಮತ್ತು ಸಮಾಜದ ಆರೋಗ್ಯ ಹದಗೆಡುತ್ತಿದೆ ಎಂದು ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Advertisement

ಸಾಣೇಹಳ್ಳಿಯ ಶ್ರೀ ತರಳಬಾಳು ಜಗದ್ಗುರು ಶಾಖಾ ಮಠ ಆಯೋಜಿಸಿರುವ “ಮತ್ತೆ ಕಲ್ಯಾಣ’ ಅಂತರ್ಜಾಲ ಉಪನ್ಯಾಸ ಮಾಲಿಕೆಯ ಐದನೇ ದಿನವಾದ ಗುರುವಾರದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. ಕುಲ, ಛಲ, ರೂಪ, ಯೌವನ, ಅಧಿಕಾರ, ತಪಸ್ಸು, ಧನ ಮದಗಳು ಮನುಷ್ಯನನ್ನು ದಿಕ್ಕು ತಪ್ಪಿಸುತ್ತವೆ. ಅಲ್ಲಮ ಮಾತು, ಮತಿಗೆ ನಿಲುಕುವವರಲ್ಲ. “ವಾಕು ಪಾಕವಾದಡೇನು ಮನ ಪಾಕವಾಗದನ್ನಕ್ಕ’ ಎನ್ನುವ ಮೂಲಕ ಕೇವಲ ವಾಗಾjಲದಿಂದ ಶಿವಪಥಿಕನಾಗಲು ಸಾಧ್ಯವಿಲ್ಲ ಎಂದಿದ್ದಾರೆ. ಆದರ್ಶ ಬದುಕಿಗೆ ಬೇಕಾದ ವಿಚಾರಗಳು ಇವರ ವಚನಗಳಲ್ಲಿ ಹೇರಳವಾಗಿವೆ.

ಮನ ಮತ್ತು ಮಾತು ಎರಡೂ ಪಕ್ವಗೊಳ್ಳಬೇಕು. ತಮ್ಮನ್ನು ತಾವು ಅರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು. ಶಿವಚೇತನಕ್ಕೆ ಹುಟ್ಟು-ಸಾವುಗಳಿಲ್ಲ. ಆತ್ಮನೇ ಪರಮಾತ್ಮನೆಂಬ ಭಾವವನ್ನು ಬೆಳೆಸಿಕೊಳ್ಳಬೇಕು ಎನ್ನುವ ಅವರ ನುಡಿಗಳು ಸರ್ವ ಕಾಲಕ್ಕೂ ಪ್ರಸ್ತುತ ಎಂದರು. ಅಲ್ಲಮ ಬಯಲೊಡಲಿಗ. ವಯಸ್ಸು, ಅನುಭವದಿಂದ ಶರಣರಲ್ಲೇ ಹಿರಿಯರು. ಬಸವಣ್ಣ, ಸಿದ್ಧರಾಮ, ಅಕ್ಕಮಹಾದೇವಿ, ಮುಕ್ತಾಯಕ್ಕ ಮುಂತಾದ ಸಾಧಕರಿಗೆ ಮಾರ್ಗದರ್ಶನ ಮಾಡಿದ ಮಹಾನ್‌ ಗುರು. ಅಲ್ಲಮನ ಮಾತುಗಳಲ್ಲಿ ಕಠೊರತೆ, ವಿಡಂಬನೆ, ವೈಚಾರಿಕತೆ, ವೈಜ್ಞಾನಿಕತೆ, ಅನುಭಾವಿಕ ನಿಲುವು, ಸರಳತೆ, ಜೀವನ ಸಂದೇಶ, ಬೆರಗು, ಬೆಡಗುಗಳಿವೆ. ಅಲ್ಲಮರನ್ನು ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಅಲ್ಲಮರು ಭಕ್ತಿ, ಜ್ಞಾನ, ವೈರಾಗ್ಯ ಮತ್ತು ಅನುಭಾವಗಳಿಂದ ಜಗತ್ತಿಗೆ ಕವಿದಿದ್ದ ಕಾರ್ಗತ್ತಲನ್ನು ಹೊಡೆದೋಡಿಸಿ ನೈಜ ಬೆಳಕನ್ನು ಕರುಣಿಸಿದ ಮಹಿಮಾಪುರುಷ ಹಾಗೂ ನಿಜ ಜಂಗಮ. ಅವರೊಬ್ಬ ಅದ್ಭುತ ವ್ಯಕ್ತಿತ್ವದ ಮಹಾನ್‌ ಚೇತನ. ಸ್ಥಾವರವನ್ನು ನಿರಾಕರಿಸಿ ಜಂಗಮತ್ವವನ್ನು ಅಪ್ಪಿಕೊಂಡವರು ಎಂದು ಬಣ್ಣಿಸಿದರು.

ಉಪನ್ಯಾಸ ಮಾಲಿಕೆಯಲ್ಲಿ “ಅಲ್ಲಮಪ್ರಭುದೇವರು’ ವಿಷಯದ ಕುರಿತು ಕಾರವಾರದ ಡಾ| ಶ್ರೀದೇವಿ ಕೆರೆಮನೆ ಮಾತನಾಡಿ, 12ನೇ ಶತಮಾನದ ಶರಣರಲ್ಲಿ ಬಹಳ ವಿಶಿಷ್ಟವಾದ ವ್ಯಕ್ತಿತ್ವ ಹೊಂದಿದವರು ಅಲ್ಲಮಪ್ರಭುದೇವರು. ಶಿಕಾರಿಪುರ ತಾಲೂಕಿನ ಬಳ್ಳಿಗಾವಿ ಇವರ ಹುಟ್ಟೂರು. ಇವರ ಜೀವನ ಕ್ರಮದ ಬಗೆಗೆ ವಿಭಿನ್ನ ಐತಿಹ್ಯಗಳಿವೆ. ವೀರಶೈವ ಸಾಹಿತ್ಯದಲ್ಲಿ ಮುಂಬರುವ ಒಬ್ಬನೇ ಒಬ್ಬ ಸಾಹಿತಿಯೂ ಅಲ್ಲಮಪ್ರಭುವನ್ನು ಉಲ್ಲೇಖೀಸದೇ ಬಿಟ್ಟಿಲ್ಲ. ಅಷ್ಟರಮಟ್ಟಿಗೆ ಅಲ್ಲಮ ಕನ್ನಡ ಸಾಹಿತ್ಯವನ್ನು ಆವರಿಸಿಕೊಂಡಿದ್ದಾರೆ.

ಹರಿಹರನ “ಪ್ರಭುದೇವರ ರಗಳೆ’, ಚಾಮರಸನ “ಪ್ರಭುಲಿಂಗ ಲೀಲೆ;, ಅಲ್ಲಮನ ಬಗ್ಗೆ ಸಾಕಷ್ಟು ವಿವರ ಒದಗಿಸುತ್ತವಾದರೂ ಅವನನ್ನು ಮನುಷ್ಯ ಎಂದು ಒಪ್ಪಿಕೊಳ್ಳದೆ ಶಿವಚೇತನವನ್ನಾಗಿಸಿ, ಪವಾಡ ಮಾಡುವ ಸಿದ್ಧ ಪುರುಷನನ್ನಾಗಿ ತೋರಿಸಿದ್ದಾರೆ. ಅಲ್ಲಮನ ವಚನಗಳನ್ನು ಎಲ್ಲಿಂದ ಬೇಕಾದರೂ ಪ್ರವೇಶಿಸಬಹುದು. ಅವುಗಳಿಗೆ ಯಾವುದೇ ನಿರ್ದಿಷ್ಟ ಚೌಕಟ್ಟಿಲ್ಲ ಎಂದು ಹೇಳಿದರು. ವಚನಗಳನ್ನು ಅರ್ಥೈಸಿಕೊಳ್ಳುವುದು ಅಂದುಕೊಂಡಷ್ಟು ಸುಲಭವಲ್ಲ. ಅಲ್ಲಮ ಒಂದು ರೀತಿಯಲ್ಲಿ ಕನ್ನಡಿ ಇದ್ದಂತೆ. ಅದರಲ್ಲಿ ಯಾರು ಮುಖವನ್ನು ನೋಡಿಕೊಳ್ಳುತ್ತಾರೋ ಅವರ ಮುಖ ಕಾಣುವುದು. ಅಲ್ಲಮನನ್ನು ಅರ್ಥ ಮಾಡಿಕೊಂಡರೆ ನಮ್ಮನ್ನು ನಾವೇ ಅರ್ಥ ಮಾಡಿಕೊಂಡಂತೆ ಎಂದರು.

Advertisement

ತರೀಕೆರೆ ತಾಲೂಕು ಕರಕುಚ್ಚಿಯ ಎನ್‌.ವಿ. ಅರುಣ್‌ ಕುಮಾರ್‌ ಸ್ವಾಗತಿಸಿದರು. ಶಿವಸಂಚಾರದ ಕೆ. ಜ್ಯೋತಿ, ಕೆ. ದಾûಾಯಣಿ, ಎಚ್‌.ಎಸ್‌. ನಾಗರಾಜ್‌ ವಚನಗೀತೆ ಪ್ರಸ್ತುತಪಡಿಸಿದರು. ಶರಣ್‌ ತಬಲಾ ಸಾಥ್‌ ನೀಡಿದರು. ಶಿವಮೊಗ್ಗದ ಸಹಚೇತನ ನಾಟ್ಯಾಲಯ ಕೇಂದ್ರದ ಕಲಾವಿದರು ವಚನ ನೃತ್ಯ ಪ್ರದರ್ಶಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next