Advertisement

ಅಲೆಮಾರಿಗಳ ಸ್ವಂತ ಸೂರಿಗೆ ಸಹಾಯ

09:34 PM Jul 04, 2021 | Team Udayavani |

ಹಿರಿಯೂರು: ಬಡತನದ ನೋವು-ಸಂಕಷ್ಟ ಇದ್ದರೂ ಮಕ್ಕಳನ್ನು ಕೆಲಸಕ್ಕೆ, ಕುರಿ ಕಾಯಲು ಕಳುಹಿಸಬೇಡಿ. ಶಾಲೆಗೆ ಕಳುಹಿಸಿ ವಿದ್ಯಾವಂತರನ್ನಾಗಿ ಮಾಡಬೇಕು ಎಂದು ವಸತಿ ಸಚಿವ ವಿ. ಸೋಮಣ್ಣ ಕರೆ ನೀಡಿದರು.

Advertisement

ತಾಲೂಕಿನ 33 ಗ್ರಾಪಂಗಳ ವ್ಯಾಪ್ತಿಯಲ್ಲಿ ವಾಸ ಮಾಡುತ್ತಿರುವ ಅಲೆಮಾರಿ, ಅರೆ ಅಲೆಮಾರಿ ಸಮುದಾಯದ 4448 ಫಲಾನುಭವಿಗಳಿಗೆ ಸರ್ಕಾರದ ವಸತಿ ಯೋಜನೆಗಳ ಅಡಿ ಮನೆ ನಿರ್ಮಿಸಿಕೊಳ್ಳಲು ಕಾರ್ಯಾದೇಶ ಪತ್ರ ವಿತರಣೆ ಮತ್ತು 5000 ಜನರಿಗೆ ಕೋವಿಡ್‌ ಲಸಿಕೆ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸ್ವಾತಂತ್ರÂ ದೊರೆತು 75 ವರ್ಷ ಕಳೆದರೂ ಸಮಾಜದ ಕಟ್ಟ ಕಡೆಯ ಸಮುದಾಯದವರಿಗೆ ಮನೆಗಳು ಸಿಕ್ಕಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ದೇಶದ ಎಲ್ಲ ರಾಜ್ಯಗಳಿಗೆ ಕೋಟ್ಯಂತರ ರೂ. ಬಿಡುಗಡೆ ಮಾಡಿ ಬಡವರು ಮನೆಗಳನ್ನು ನಿರ್ಮಾಣ ಮಾಡಿಕೊಳ್ಳುವಂತೆ ಮಾಡಿದ್ದಾರೆ.

ರಾಜ್ಯದಲ್ಲಿ 65 ಸಾವಿರ ಅಲೆಮಾರಿ ಕುಟುಂಬಗಳಿಗೆ ಮನೆಗಳನ್ನು ನೀಡಲಾಗಿದೆ. ಪ್ರತಿ ಮನೆಗೆ 1.20 ಲಕ್ಷ ರೂ.ಗಳನ್ನು ಸರ್ಕಾರದಿಂದ ನೀಡಲಾಗುತ್ತಿದೆ ಎಂದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಡವರಿಗೆ, ಅಲೆಮಾರಿಗಳಿಗೆ ಒಂದು ಅಡಿ ಜಾಗವನ್ನೂ ನೀಡಿಲ್ಲ. ಆದರೆ ಇಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರು ಕೊರೊನಾ ಸಂಕಷ್ಟದಲ್ಲೂ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ.

ಬಡವರು ಸರ್ಕಾರದ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಉತ್ತಮವಾಗಿ ಮನೆಗಳನ್ನು ನಿರ್ಮಿಸಿಕೊಳ್ಳಬೇಕು. ಮುಂದಿನ ದಿನದಲ್ಲಿ ಎಸ್‌ಸಿ-ಎಸ್‌ಟಿ ಹಾಗೂ ಎಲ್ಲ ವರ್ಗದ ಬಡವರಿಗೆ ಮನೆ ಮಂಜೂರು ಮಾಡಲಾಗುವುದು. ವಿಶೇಷವಾಗಿ ಹಿರಿಯೂರು ನಗರಕ್ಕೆ 3000 ಮನೆಗಳನ್ನು ನೀಡುವುದಾಗಿ ಭರವಸೆ ನೀಡಿದರು.

ಅಧಿಕಾರಿಗಳು ಬಡವರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಒದಗಿಸಬೇಕು. ಕೇಂದ್ರ ಸರ್ಕಾರದ ಅನುದಾನದಲ್ಲಿ ನಾಳೆಯಿಂದಲೇ ಮನೆ ಕಟ್ಟುವ ಕೆಲಸ ಪ್ರಾರಂಭಿಸಿ. ಮನೆ ನಿರ್ಮಾಣದ ಬಗ್ಗೆ ನನಗೆ ವರದಿ ನೀಡಬೇಕು. ನಾಲ್ಕು ತಿಂಗಳ ನಂತರ ಬಂದು ಪರಿಶೀಲಿಸುವುದಾಗಿ ತಿಳಿಸಿದರು. ಸಂಸದ ಎ. ನಾರಾಯಣಸ್ವಾಮಿ ಮಾತನಾಡಿ, ಚಿತ್ರದುರ್ಗ ಜಿಲ್ಲೆಗೆ 22,400 ಮನೆಗಳನ್ನು ಸಚಿವರು ಮಂಜೂರು ಮಾಡಿದ್ದಾರೆ.

Advertisement

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉತ್ತಮವಾಗಿ ಕೆಲಸ ಮಾಡುತ್ತಿವೆ. ಕೋವಿಡ್‌ ಲಸಿಕೆ ಬಗ್ಗೆ ಮೊದಲು ಅಪಪ್ರಚಾರ ಮಾಡಿದವರು ಕಾಂಗ್ರೆಸ್‌ ನವರಾಗಿದ್ದಾರೆ. ಸುಳ್ಳು ಆರೋಪ ಮಾಡುವುದನ್ನು ನಿಲ್ಲಿಸಬೇಕು ಎಂದು ತಾಕೀತು ಮಾಡಿದರು. ಅಧ್ಯಕ್ಷತೆ ವಹಿಸಿದ್ದ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಮಾತನಾಡಿ, ವಸತಿ ರಹಿತರಿಗೆ ಮನೆ ನೀಡುವ ಕೆಲಸವನ್ನು ವಸತಿ ಸಚಿವ ಸೋಮಣ್ಣನವರು ಮಾಡಿದ್ದಾರೆ. ತಾಲೂಕಿಗೆ ಅತಿ ಹೆಚ್ಚು ಮನೆಗಳನ್ನು ನೀಡಿ 330 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಧರ್ಮಪುರ ಕೆರೆಗೆ ನೀರು ಹರಿಸುವ ಕಾರ್ಯಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದೆ. ಇನ್ನು ಗಾಯತ್ರಿ ಜಲಾಶಯಕ್ಕೆ ನೀರು ತರಬೇಕಾಗಿದೆ. ಈ ಕೆಲಸದಲ್ಲಿ ವಸತಿ ಸಚಿವರು ಸಹಾಯ ಮಾಡಬೇಕು. ಹಿರಿಯೂರನ್ನು ಗುಡಿಸಲು ಮುಕ್ತ ತಾಲೂಕನ್ನಾಗಿ ಮಾಡಲು ಶ್ರಮಿಸುವುದಾಗಿ ತಿಳಿಸಿದರು. ಶ್ರೀ ಕೃಷ್ಣ ಯಾದವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಕಾರ್ಯಕ್ರಮದಲ್ಲಿವಸತಿ ಯೋಜನೆ ಅಧಿಕಾರಿ ಪರಶುರಾಮ್‌, ರಾಜ್ಯ ಯಾದವ ಸಂಘದ ಅಧ್ಯಕ್ಷ ಡಿ.ಟಿ. ಶ್ರೀನಿವಾಸ್‌, ಜಿಪಂ ಸಿಇಒ ಡಾ| ನಂದಿನಿದೇವಿ, ತಹಶೀಲ್ದಾರ್‌ ಶಿವಕುಮಾರ್‌, ಯಾದವ ಸಂಘದ ಅಧ್ಯಕ್ಷ ರಂಗಸ್ವಾಮಿ, ಶಿವಣ್ಣ, ತಿಪ್ಪೇಸ್ವಾಮಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಚಿತ್ರಜಿತ್‌ ಯಾದವ್‌, ಸದಸ್ಯರಾದ ಬಾಲಕೃಷ್ಣ, ಸಿ.ಎಂ. ಸ್ವಾಮಿ, ಡಾ| ವೆಂಕಟೇಶ್‌, ತಾಪಂ ಇಒ ಪ್ರಸಾದ್‌ ಮೊದಲಾದವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next