Advertisement

ವಾಸ್ತವಿಕತೆ ತಪಸ್ಸಿಗೆ ಸಮಾನ: ಮುರುಘಾ ಶರಣರು

07:03 PM Aug 23, 2021 | Team Udayavani |

ಚಿತ್ರದುರ್ಗ: ಭೌತಿಕತೆ ಕಡೆ ಸಾಗುವವರಿಗೆ ವಾಸ್ತವಿಕತೆಯ ಅರಿವಾಗುವುದಿಲ್ಲ. ಆಗೊಮ್ಮೆ ಈಗೊಮ್ಮೆ ಬರುವ ಸುಖ, ದುಃಖ ಶಾಶ್ವತವಲ್ಲ. ಸುಖವನ್ನು ಮಾನವ ಮರೆಯುತ್ತಾ ಹೋಗುತ್ತಾನೆ. ಆದರೆ ಅವನು ಅನುಭವಿಸಿದ ದುಃಖ ಯಾತನೆಯನ್ನು ಮರೆಯುವುದಿಲ್ಲ. ಹಾಗಾಗಿ ಅವಾಸ್ತವಿಕತೆಯಿಂದ ವಾಸ್ತವಿಕತೆಯ ಕಡೆಗೆ ಪಯಣಿಸುತ್ತಾ ಬದುಕು ಕಟ್ಟಿಕೊಳ್ಳಬೇಕು ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು. ಸದಾಶಿವನಗರ ಬಡಾವಣೆಯ ಶಂಕರಾಚಾರ್‌ ನಿವಾಸದ ಬಳಿ ನಡೆದ “ನಿತ್ಯ ಕಲ್ಯಾಣ’ ಕಾರ್ಯಕ್ರಮದಲ್ಲಿ ಮಾತನಾಡಿದರು.

Advertisement

ವಾಸ್ತವಿಕತೆ ಎನ್ನುವುದು ತತ್ವ. ವಾಸ್ತವಿಕತೆಯ ಬಗ್ಗೆ ಜನರಿಗೆ ಅರಿವು ಇಲ್ಲ. ಅವಾಸ್ತವಿಕತೆ ಎಂದರೆ ನಾಟಕೀಯವಾಗಿರುವುದು ಮತ್ತು ನಯವಂಚಕತನದಿಂದ ಇರುವಿಕೆ. ವಾಸ್ತವಿಕೆ ಅಂದರೆ ಸಹಜವಾಗಿ ಇರುವುದು. ಸಹಜತೆ ಮಾತ್ರವಲ್ಲ ನೈಜತೆ, ಸಮತೋಲನ ಸ್ಥಿತಿಯಿಂದ ಕೂಡಿದ್ದಾಗಿದೆ. ವಾಸ್ತವಿಕತೆಯ ಅರಿವು ಜನರಿಗಾಗಬೇಕು. ವಾಸ್ತವಿಕತೆ ಇರುವವರು ಮಾನ, ಅಪಮಾನವನ್ನು ಸಮಾನವಾಗಿ ಸ್ವೀಕರಿಸುತ್ತಾರೆ.

ವಾಸ್ತವಿಕತೆ ತಪಸ್ಸಿಗೆ ಸಮಾನ ಎಂದರು. ಭೌತಿಕತೆ ಕಡೆ ಸಾಗುವವರಿಗೆ ವಾಸ್ತವಿಕತೆಯ ಅರಿವಾಗುವುದಿಲ್ಲ. ಅಂಥವರು ಕುಗ್ಗಿ ಹೋಗುತ್ತಾರೆ. ಸಣ್ಣದಾದ ದುಃಖದಿಂದ ಕೆಲವರು ವೇದನೆಗೆ ಒಳಗಾಗುತ್ತಾರೆ. ಸಣ್ಣದಾದ ಸುಖ ಬಂದರೆ ಹಿಗ್ಗುತ್ತಾರೆ. ಆಗೊಮ್ಮೆ ಈಗೊಮ್ಮೆ ಬರುವ ಸುಖ, ದುಃಖ ಶಾಶ್ವತವಲ್ಲ. ಸುಖವನ್ನು ಮಾನವ ಮರೆಯುತ್ತಾ ಹೋಗುತ್ತಾನೆ. ಆದರೆ ಅವನು ಅನುಭವಿಸಿದ ದುಃಖ, ಯಾತನೆ ಮರೆಯುವುದಿಲ್ಲ. ಹಾಗಾಗಿ ಅವಾಸ್ತವಿಕತೆಯಿಂದ ವಾಸ್ತವಿಕತೆಯ ಕಡೆಗೆ ಪಯಣ ಮಾಡಬೇಕು ಎಂದು ತಿಳಿಸಿದರು.

ಸಮ್ಮುಖ ವಹಿಸಿದ್ದ ತಿಳುವಳ್ಳಿ ಕಲ್ಮಠದ ಶ್ರೀ ಬಸವ ನಿರಂಜನ ಸ್ವಾಮಿಗಳು ಮಾತನಾಡಿ, ವಾಸ್ತವಿಕತೆ ಎಂದರೆ ಇರುವುದು, ಅವಾಸ್ತವಿಕತೆ ಎಂದರೆ ಇಲ್ಲದಿರುವುದು. ಇದ್ದುದರಲ್ಲೆ ಸಂತೋಷ ಕಾಣುವ ಪ್ರವೃತ್ತಿ ನಮ್ಮದಾಗಬೇಕು. ನಾವು ಆಕಾಶಕ್ಕೆ ಏಣಿ ಹಾಕಲು ಸಾಧ್ಯವಿಲ್ಲ. ಆಸೆ ಒಳ್ಳೆಯದಲ್ಲ. ತೃಪ್ತ ಭಾವನೆ ಇದ್ದರೆ ದುಃಖ ಬರುವುದಿಲ್ಲ. ಸಹಜವಾಗಿ ಸರಳವಾಗಿ ಜೀವನ ರೂಢಿಸಿಕೊಳ್ಳಬೇಕು. ಮೌಢಾÂಚರಣೆಗಳನ್ನು ಬದಿಗೊತ್ತಬೇಕು ಎಂದು ತಿಳಿಸಿದರು.

ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬು ಪತ್ತಾರ್‌ ಮಾತನಾಡಿ, ಈ ಮೊದಲು ಪುರಾಣ, ಕಥೆಗಳನ್ನು ನಮ್ಮ ಹಿರಿಯರು ಕೇಳುತ್ತಿದ್ದರು ಹಾಗೂ ಹೇಳುತ್ತಿದ್ದರು. ಕಷ್ಟ, ಸುಖಗಳನ್ನು ಹಂಚಿಕೊಳ್ಳುತ್ತಿದ್ದರು. ಇಂದು ತಂತ್ರಜ್ಞಾನದಿಂದ ಅಂತಹ ಕಾರ್ಯಕ್ರಮಗಳು ಕಡಿಮೆಯಾಗುತ್ತಿವೆ. ನಮ್ಮದು ಬಸವಣ್ಣನವರ ನಾಡು. ಅವರ ವಚನಗಳು ಜಗತ್ತಿನಾದ್ಯಂತ ಪರಿಚಯವಾಗಿವೆ. ಅಂಥ ವಚನಗಳನ್ನು ನಮ್ಮ ಮಕ್ಕಳಿಗೆ ತಿಳಿಸಬೇಕು ಎಂದು ಹೇಳಿದರು. ಉಪ್ಪಾರ ಸಮುದಾಯ ನಿಗಮದ ಅಧ್ಯಕ್ಷ ಗಿರೀಶ್‌ ಮಾತನಾಡಿದರು.

Advertisement

ನಗರಸಭಾ ಉಪಾಧ್ಯಕ್ಷೆ ಶ್ವೇತಾ ವೀರೇಶ್‌ ವೇದಿಕೆಯಲ್ಲಿದ್ದರು. ಜಮುರಾ ಕಲಾವಿದರು ಪ್ರಾರ್ಥಿಸಿದರು. ಕಾರ್ಯಕ್ರಮದ ದಾಸೋಹಿ ಶಂಕರಾಚಾರ್‌ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next