ನವದೆಹಲಿ: ಚೀನಾವನ್ನು ಅಸುರ ಶಕ್ತಿ ಅಥವಾ ರಾಕ್ಷಸ ಎಂದು ಬಣ್ಣಿಸುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್), ಚೀನಾವನ್ನು ಆರ್ಥಿಕವಾಗಿ ದುರ್ಬಲಗೊಳಿಸುವ ನಿಟ್ಟಿನಲ್ಲಿ “ಮಂತ್ರ’ ವೊಂದನ್ನು ಕಂಡುಹಿಡಿದಿದೆ!
ಚೀನಾ ಉತ್ಪಾದಿಸುವ ದಿನಬಳಕೆ ವಸ್ತು ಗಳಿಗೆ ಭಾರತವೇ ಅತಿ ದೊಡ್ಡ ಮಾರುಕಟ್ಟೆ. ಭಾರತೀಯರು ನಿತ್ಯ ಜೀವನದಲ್ಲಿ ಬಳಸುವ ವಸ್ತುಗಳ ಪೈಕಿ ಶೇ.50ಕ್ಕೂ ಹೆಚ್ಚು “ಮೇಡ್ ಇನ್ ಚೀನಾ’ ವಸ್ತುಗಳಿರುತ್ತವೆ. ಭಾರತೀಯರು ಚೀನಾ ಉತ್ಪಾದಿತ ವಸ್ತುಗಳನ್ನು ತಿರಸ್ಕರಿಸಿದರೆ ಆ ದೇಶ ಆರ್ಥಿಕವಾಗಿ ಕುಗ್ಗುತ್ತದೆ ಎಂಬುದು ಆರ್ಎಸ್ಎಸ್ ವಾದ.
ಈ ನಿಟ್ಟಿನಲ್ಲಿ ಭಾರತೀಯರಲ್ಲಿ ಜಾಗೃತಿ ಮೂಡಿಸುವ ಸಂಬಂಧ ಸಂಘಪರಿವಾರ, “ಕೈಲಾಶ್, ಹಿಮಾಲಯ ಔರ್ ಟಿಬೆಟ್ ಚೀನ್ ಕಿ ಅಸುರಿ ಶಕ್ತಿ ಸೆ ಮುಕ್¤ ಹೋ’ (ಕೈಲಾಸಪರ್ವತ, ಹಿಮಾಲಯ ಮತ್ತು ಟಿಬೆಟ್ ಚೀನಾದ ಅಸುರ ಶಕ್ತಿಯಿಂದ ಮುಕ್ತವಾಗಲಿ) ಎಂಬ ಮಂತ್ರ ಕಂಡುಹಿಡಿದಿದೆ. ಈ ಮಂತ್ರವನ್ನು ಜಾತಿ ಧರ್ಮ ಭೇದವಿಲ್ಲದೆ ಎಲ್ಲರೂ ದಿನಕ್ಕೆ 5 ಬಾರಿ ಪಠಿಸಬೇಕು. ಇದೊಂದು ಸಂಕಲ್ಪವಾಗಬೇಕು ಎಂಬುದು ಆರ್ಎಸ್ಎಸ್ ಆಶಯ. “ಪ್ರತಿ ದಿನ ಪ್ರಾರ್ಥನೆಗೆ ಮುನ್ನ ದೇವರು ಅಥವಾ ಅಲ್ಲಾಹ್ ಎದುರು ಈ ಮಂತ್ರ ಪಠಿಸು ವುದರಿಂದ ಚೀನಾಗೆ ಹಿನ್ನಡೆಯಾಗುತ್ತದೆ. ಅಷ್ಟೇ ಅಲ್ಲದೆ ಭಾರತದ ಹೋರಾಟಕ್ಕೆ ಒಂದು ಆಧ್ಯಾತ್ಮಿಕ ಶಕ್ತಿ ಬರುತ್ತದೆ. ಜತೆಗೆ ಸಕಾರಾತ್ಮಕ ಫಲಿತಾಂಶ ಸಿಗುತ್ತದೆ,’ ಎನ್ನುವುದು ಆರ್ಎಸ್ಎಸ್ ಪ್ರಚಾರಕ್ ಹಾಗೂ ರಾಷ್ಟ್ರೀಯ ಕಾರ್ಯಕಾರಿ ಸದಸ್ಯರಾಗಿರುವ ಇಂದ್ರೇಶ್ ಕುಮಾರ್ ಅವರ ಅಭಿಪ್ರಾಯ. ಆದರೆ ಅದೆಷ್ಟು ಜನ ಆರ್ಎಸ್ಎಸ್ ಮನವಿಯನ್ನ ಪುರಸ್ಕರಿಸಿ, ಮಂತ್ರ ಪಠಿಸು ತ್ತಾರೆ ಎನ್ನುವುದೇ ಈಗಿರುವ ಪ್ರಶ್ನೆ.