Advertisement

“ಬಾಲ್ಯ ವಿವಾಹ ಹೆಣ್ಣು ಮಕ್ಕಳ ಆರೋಗ್ಯಕ್ಕೆ ಮಾರಕ’

05:46 PM Aug 10, 2017 | |

ಸೋಮೇನಹಳ್ಳಿ: ಹೆಣ್ಣು ಮಕ್ಕಳಿಗೆ 18 ವರ್ಷಕ್ಕಿಂತ ಮುಂಚಿತವಾಗಿ ವಿವಾಹ ಮಾಡಿದರೆ ಮಾನಸಿಕ ಮತ್ತು ದೈಹಿಕ
ಬೆಳವಣಿಗೆ ಕುಂಠಿತವಾಗಿ ಅನೇಕ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ ಎಂದು ಬೀಚಗಾನಹಳ್ಳಿ ಪ್ರಾಥಮಿಕ ಆರೋಗ್ಯ
ಕೇಂದ್ರದ ವೈದ್ಯಾಧಿಕಾರಿ ಡಾ.ಮಹಿಮಾ ತಿಳಿಸಿದರು. ಗುಡಿಬಂಡೆ ತಾಲೂಕು ಸೋಮೇನಹಳ್ಳಿ ಸರಕಾರಿ ಪ್ರೌಢಶಾಲಾ ಆವರಣದಲ್ಲಿ ಮಕ್ಕಳ ಸಹಾಯವಾಣಿ ತಂಡ ಹಮ್ಮಿಕೊಂಡಿದ್ದ “ತೆರೆದ ಮನೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬಾಲ್ಯ ವಿವಾಹ ಅಪಾಯಕಾರಿ: ಗ್ರಾಮೀಣ ಭಾಗದ ಜನರು ಮೂಢ ನಂಬಿಕೆಗಳಿಂದ ಇನ್ನೂ ಹೊರಗೆ ಬಂದಿಲ್ಲ. ಮಕ್ಕಳು
ದೊಡ್ಡವಳಾದರೆ ಶಾಲೆ ಬಿಡಿಸಿ ಮನೆಯಲ್ಲೇ ಕೂರಿಸುತ್ತಾರೆ. ನಂತರ ವರನನ್ನು ಹುಡುಕಿ ಬಾಲ್ಯ ವಿವಾಹ ಮಾಡಲು ಮುಂದಾಗುತ್ತಾರೆ.
ಕಲಿಯುವ, ನಲಿಯುವ ವಯಸ್ಸಿನ ಮಕ್ಕಳಿಗೆ ಮದುವೆ ಮಾಡುವುದರಿಂದ ಮಾನಸಿಕ, ದೈಹಿಕ ಬೆಳವಣಿಗೆ ಸಾಧ್ಯವಾಗದೇ ಮಕ್ಕಳು
ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಚಿಕ್ಕ ವಯಸ್ಸಿನಲ್ಲಿ ಮಕ್ಕಳು ಗರ್ಭಿಣಿಯರಾದರೆ ಹೆರಿಗೆ ಸಮಯದಲ್ಲಿ ತಾಯಿ ಮರಣ
ಹೊಂದುವ ಸಂಭವವಿರುತ್ತದೆ ಎಂದು ಎಚ್ಚರಿಕೆ ನೀಡಿದರು.

Advertisement

ಬಾಲ್ಯ ವಿವಾಹಕ್ಕೆ ಪ್ರೋತ್ಸಾಹ ಬೇಡ: ಚಿಕ್ಕ ವಯಸ್ಸಿನಲ್ಲಿ ಮಕ್ಕಳು ಗರ್ಭಿಣಿಯರಾದರೆ ಹುಟ್ಟುವ ಮಗುವಿಗೆ ಕೈ, ಕಾಲು ಮುಂತಾದ
ಭಾಗಗಳು ಸರಿಯಾಗಿ ಬೆಳವಣಿಗೆಯಾಗದೇ ಅಂಗವಿಕಲರಾಗಬಹುದು. ಕಿಡ್ನಿ, ಹೃದಯ ಮುಂತಾದ ಸಮಸ್ಯೆಗಳಿಗೆ ತುತ್ತಾಗಬಹುದು.
ಹೆರಿಗೆ ಸಮಯದಲ್ಲಿ ಮಗು ಸರಿಯಾಗಿ ಬೆಳವಣಿಗೆಯಾಗದೆ ಸಾವನ್ನಪ್ಪಬಹುದು. ಹುಟ್ಟುವ ಮಗುವಿನ ತೂಕ ಎರಡೂವರೆ
ಕೆ.ಜಿ.ಗಿಂತ ಕಡಿಮೆ ಇರಬಾರದು. ಆದ್ದರಿಂದ, ಬಾಲ್ಯ ವಿವಾಹಕ್ಕೆ ಯಾರೂ ಪ್ರೋತ್ಸಾಹ ನೀಡಬಾರದೆಂದು ಅರಿವು ಮೂಡಿಸಿದರು.
ಮಕ್ಕಳನ್ನು ಕೂಲಿಗೆ ಕಳಿಸಬೇಡಿ: ಮುಖ್ಯ ಅತಿಥಿಯಾಗಿ ಮಾತನಾಡಿದ ಮಕ್ಕಳ ಸಹಾಯವಾಣಿ ತಂಡದ ಸಂಯೋಜಕಿ
ಸೌಭಾಗ್ಯಮ್ಮ, ಪೋಷಕರು ಬಡತನದ ಕಾರಣದಿಂದಾಗಿ ಮಕ್ಕಳನ್ನು ಶಾಲೆ ಬಿಡಿಸಿ ಭಿಕ್ಷಾಟನೆ, ಕೂಲಿ ಕೆಲಸಕ್ಕೆ ಕಳುಹಿಸುವುದು
ಸರಿಯಲ್ಲ. ಅಂತಹ ಪ್ರಕರಣಗಳು ಕಂಡು ಬಂದರೆ ಸಂಬಂಧಿಸಿದವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ.
ಮನೆಗಳಲ್ಲಿ ಮಕ್ಕಳಿಗೆ ಹಿಂಸೆ ಕೊಡುವುದು, ಓದುವ ಹಂಬಲದ ಮಕ್ಕಳನ್ನು ಶಾಲೆ ಬಿಡಿಸುವುದು, ಮಕ್ಕಳ ಮನಸ್ಸಿನ ಮೇಲೆ
ಪರಿಣಾಮವನ್ನುಂಟು ಮಾಡುವ ರೀತಿಯಲ್ಲಿ ನಡೆದುಕೊಳ್ಳುವುದು ಸರಿಯಲ್ಲ. ಓದುವ ಹಕ್ಕು ಮಕ್ಕಳಿಗೆ ಇರುವುದರಿಂದ ಅದನ್ನು
ನೆರವೇರಿಸುವುದು ಮತ್ತು ಉತ್ತಮ ಶಿಕ್ಷಣ ಕೊಡಿಸುವುದು ಪೋಷಕರ ಕರ್ತವ್ಯವಾಗಿದೆ ಎಂದರು.

ಬಾಲ್ಯ ವಿವಾಹ ತಡೆಗೆ ಮುಂದಾಗಿ: ಬಾಲ್ಯ ವಿವಾಹದ ಕುರಿತು ಸುಳಿವು ಸಿಕ್ಕಲ್ಲಿ ಕೂಡಲೇ ಮಕ್ಕಳ ಸಹಾಯವಾಣಿ ಅಥವಾ ಮಹಿಳಾ
ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ತಿಳಿಸಿದರೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಸಂಭವನೀಯ ವಿವಾಹವನ್ನು ತಡೆದು ಮಗುವನ್ನು
ರಕ್ಷಿಸುತ್ತಾರೆ ಎಂದು ಹೇಳಿದರು.  ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ.ಅಧ್ಯಕ್ಷೆ ಜಿ.ಎಂ. ರಜನಿ ಮಾತನಾಡಿ, ಅಂಗನವಾಡಿಗಳಲ್ಲಿ
ತಿಂಗಳಿಗೆ ಎರಡು ಸಲ ಗರ್ಭಿಣಿಯರು ಮತ್ತು ಬಾಣಂತಿಯರ ಸಭೆ ನಡೆಸಬೇಕು. ಆದರೆ, ಕೆಲವು ಅಂಗನವಾಡಿಗಳಲ್ಲಿ ಸಭೆ ನಡೆಸುತ್ತಿಲ್ಲ. ಅವರಿಗೆ ಸರಬರಾಜಾಗುವ ಆಹಾರವನ್ನು ಅಂಗನವಾಡಿ ಕಾರ್ಯಕರ್ತೆಯರು ನೀಡುತ್ತಿಲ್ಲವೆಂದು ಆರೋಪಿಸಿದರು.
ಕಾರ್ಯಕ್ರಮದಲ್ಲಿ ಗುಡಿಬಂಡೆ ತಾಲೂಕು ಸಿಡಿಪಿಒ ಪದ್ಮಾವತಮ್ಮ, ಸೋಮೇನಹಳ್ಳಿ ಗ್ರಾ.ಪಂ.ಉಪಾಧ್ಯಕ್ಷ ಜೆ.ಕೆ.ವೆಂಕಟೇಶ್‌,
ಪಿಡಿಒ ಎ.ಆರ್‌.ಶ್ರೀನಿವಾಸ್‌, ಸದಸ್ಯರಾದಸಖೀನಾಬಿ, ಲಕ್ಷ್ಮೀನರಸಮ್ಮ, ವೆಂಕಟನರಸಮ್ಮ, ನಾರಾಯಣ, ತಾಪಂ ಇಒ ಬಿ.ಎಸ್‌.ರಮೇಶ್‌, ಅಂಗನವಾಡಿ ಕಾರ್ಯಕರ್ತೆಯರಾದ ವಿಜಯಲಕ್ಷ್ಮೀ, ಗಿರಿಜಮ್ಮ, ಮಕ್ಕಳ ಸಹಾಯವಾಣಿ ತಂಡದ ಸದಸ್ಯ ಸೀತಾರಾಮ ನಾಯಕ್‌, ಭಾಸ್ಕರ್‌, ಸರಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಜಿ.ಎಂ.ಪರಮನಟ್ಟಿ, ಶಂಕರ ಭಾರತಿ ಸಂಸ್ಕೃತ ಪಾಠಶಾಲೆ ಮುಖ್ಯ ಶಿಕ್ಷಕಸುಬ್ರಾಯ ವಿ.ಭಟ್‌, ಸಹ ಶಿಕ್ಷಕರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next