Advertisement

ಅಪಘಾತಗಳಲ್ಲಿ ಮಕ್ಕಳ ಸಾವೇ ಅಧಿಕ

12:59 AM Aug 08, 2019 | Team Udayavani |

ಬೆಂಗಳೂರು: ದೇಶದಲ್ಲಿ ಸಂಭವಿಸುತ್ತಿರುವ ರಸ್ತೆ ಅಪಘಾತಗಳಲ್ಲಿ ಶೇ.64ರಷ್ಟು ಶಾಲಾ ಮಕ್ಕಳು ಬಲಿಯಾಗುತಿದ್ದು, ಇದರಲ್ಲಿ 14 ವರ್ಷದ ಕೆಳಗಿನ ಮಕ್ಕಳ ಪ್ರಮಾಣ ಶೇ.38ರಷ್ಟಿದೆ! ನಗರದ ಹೊಸೂರು ರಸ್ತೆಯ ನಿಮ್ಹಾನ್ಸ್‌ (ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ) ಸಭಾಂಗಣದಲ್ಲಿ ನಿಮ್ಹಾನ್ಸ್‌ ಮತ್ತು ಸುರಕ್ಷತಾ ಸಂಪರ್ಕ ಸಂಸ್ಥೆ ಅಂಡರ್‌ ರೈಟರ್ಸ್‌ ಲ್ಯಾಬೋರೇಟರೀಸ್‌ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಉಪಾಧ್ಯಕ್ಷ ಸುರೇಶ್‌ ಸುಗವನಮ್‌ ಈ ಕುರಿತು ಮಾಹಿತಿ ನೀಡಿದರು.

Advertisement

ಮಕ್ಕಳ ಅಪಘಾತ ಪ್ರಕರಣಗಳು ದೇಶದಲ್ಲಿ ಹೆಚ್ಚಾಗುತ್ತಿದ್ದು, ಇವುಗಳನ್ನು ನಿಯಂತ್ರಿಸಲು ಶಾಲೆಗಳು ಕಾರ್ಯಗಾರಗಳನ್ನು ನಡೆಸಬೇಕು ಮತ್ತು ಪೋಷಕರಲ್ಲಿ ಜಾಗೃತಿ ಮೂಡಿಸಬೇಕು ಎಂದರು. ರಸ್ತೆ ಅಪಘಾತಗಳ ಜತೆಗೆ ಸುಟ್ಟ ಗಾಯಗಳು ಮತ್ತು ನೀರಿನಲ್ಲಿ ಮುಳುಗಡೆ ಪ್ರಕರಣಗಳು ಕ್ರಮವಾಗಿ ಶೇ.13 ಮತ್ತು 19ರಷ್ಟು ಏರಿಕೆಯಾಗಿವೆ. ಇನ್ನು ವಿಷ ಸೇವಿಸಿ ಸಾವನ್ನಪ್ಪುತ್ತಿರುವ ಮಕ್ಕಳ ಸಂಖ್ಯೆ ಕೂಡ ಶೇ.6ರಷ್ಟು ಏರಿಕೆಯಾಗಿದೆ. ಅಪಘಾತಗಳಿಗೆ ತುತ್ತಾಗಿ ಅಂಗಾಂಗ ವೈಫ‌ಲ್ಯ ಎದುರಿಸುವ ಮಕ್ಕಳ ಸಂಖ್ಯೆ ಶೇ.12ರಷ್ಟಿದೆ ಎಂದು ಮಾಹಿತಿ ನೀಡಿದರು.

ರಾಜ್ಯದ ಕೆಲ ಶಾಲೆಗಳಲ್ಲಿ ಸುರಕ್ಷತಾ ಸಮೀಕ್ಷೆ ನಡೆಸಿದ್ದು, ಶೇ.50ರಷ್ಟು ಶಾಲೆಗಳು ಮಾತ್ರ ಸುರಕ್ಷತಾ ಕ್ರಮಗಳನ್ನು ಪಾಲಿಸುತ್ತಿವೆ. ಬಹುತೇಕ ಶಾಲೆಗಳ ಕಟ್ಟಡಗಳು ಶಿಥಿಲಗೊಂಡಿದ್ದು, ಶಾಲೆಗಳ ಸುತ್ತಮುತ್ತ ರಸ್ತೆ ಗುಂಡಿಗಳು, ಕೊಳವೆಬಾವಿಗಳು ಸೇರಿದಂತೆ ಹಲವಾರು ರೀತಿಯ ಅಪಾಯ ಸೃಷ್ಟಿಸಬಹುದಾದ ವಾತಾವರಣವಿದೆ. ಕಳೆದ ಒಂದು ದಶಕದಲ್ಲಿ ಹಲವು ರೀತಿ ಅಪಘಾತಗಳಿಂದ ಐದು ಲಕ್ಷ ಮಕ್ಕಳು ಮೃತಪಟ್ಟಿದ್ದಾರೆ. ಆದಷ್ಟು ಬೇಗ ಮಕ್ಕಳ ಸುರಕ್ಷತೆಗೆ ಪರಿಹಾರ ಕಂಡುಕೊಳ್ಳಬೇಕು ಇಲ್ಲವಾದಲ್ಲಿ ಮುಂದಿನ ಪೀಳಿಗೆಗೆ ಮಕ್ಕಳ ಸಂಖ್ಯೆ ಕ್ಷೀಣಿಸಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ನಿಮ್ಹಾನ್ಸ್‌ ನಿರ್ದೇಶಕ ಪ್ರೊ.ಗಂಗಾಧರ್‌, ಮಕ್ಕಳ ಅಪಘಾತ ಮತ್ತು ಸಾವಿನ ಬಗ್ಗೆ ನಿರ್ಲಕ್ಷ್ಯ ಮನೋಭಾವವಿದೆ. ಇವುಗಳಿಗೆ ಪರಿಹಾರ ಕಂಡುಕೊಳ್ಳಲು ತಳಮಟ್ಟದಿಂದ ಜಾಗೃತಿ ಮತ್ತು ಕಾನೂನು ಅನುಷ್ಟಾನ ಮಾಡುವ ಅಗತ್ಯವಿದೆ ಎಂದರು. ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ. ಕೆ.ಜಿ.ಜಗದೀಶ್‌ ಮಾತನಾಡಿ ಶಾಲಾ ವ್ಯಾಪ್ತಿಯಲ್ಲಿ ಆಗುತ್ತಿರುವ ಅಪಘಾತಗಳ ತಡೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ನಿಮ್ಹಾನ್ಸ್‌ ಸಾರ್ವಜನಿಕ ಸ್ವಾಸ್ಥ್ಯ ಕೇಂದ್ರದ ಮುಖ್ಯಸ್ಥ ಡಾ.ಜಿ.ಗುರುರಾಜ್‌, ಕುಲಸಚಿವ ಪ್ರೊ. ಶೇಖರ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next