Advertisement

ಚಿಕ್ಕಮಗಳೂರು: ಕಾಂಗ್ರೆಸ್‌ ಅಭ್ಯರ್ಥಿ ಮೇಲೆ ಅಡಗಿದೆ ಸಿ.ಟಿ.ರವಿ ಭವಿಷ್ಯ

12:24 AM Mar 14, 2023 | Team Udayavani |

ಚಿಕ್ಕಮಗಳೂರು: ಕಾಫಿ ನಾಡು ಚಿಕ್ಕಮಗಳೂರು ಹಿಂದೊಮ್ಮೆ ಕಾಂಗ್ರೆಸ್‌ ಭದ್ರಕೋಟೆ. ಬದಲಾದ ರಾಜಕೀಯ ಸ್ಥಿತಿಯಲ್ಲಿ ಬಿಜೆಪಿ ತೆಕ್ಕೆಗೆ ಜಾರಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಈ ಕ್ಷೇತ್ರದ ಶಾಸಕ. ಐದು ಬಾರಿ ಸ್ಪರ್ಧಿಸಿ ಒಮ್ಮೆ ಸೋಲು ಕಂಡಿದ್ದು, ಸತತ ನಾಲ್ಕು ಬಾರಿ ಚುನಾಯಿತ ರಾಗಿದ್ದಾರೆ. ಈ ಬಾರಿ ಅವರ ಗೆಲುವಿನ ನಾಗಾಲೋಟಕ್ಕೆ ಬ್ರೇಕ್‌ ಹಾಕಲು ವಿಪಕ್ಷಗಳು ಮಾಸ್ಟರ್‌ ಪ್ಲ್ಯಾನ್‌ ರೂಪಿಸುತ್ತಿದ್ದು. ಲಿಂಗಾಯತ ಅಸ್ತ್ರ ವರ್ಕ್‌ ಆಗುತ್ತಾ ಎಂಬುದೇ ಸದ್ಯದ ಕುತೂಹಲ.

Advertisement

ಎರಡು ಬಾರಿ ಸಚಿವರಾಗಿ ಸದ್ಯ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಹಾಗೂ ಒಕ್ಕಲಿಗ ಸಮುದಾಯವನ್ನು ಪ್ರತಿನಿಧಿಸುವ ಸಿ.ಟಿ.ರವಿ ಈ ಬಾರಿ ಚುನಾವಣೆಯಲ್ಲಿ ಚಿಕ್ಕಮ ಗಳೂರು ಕ್ಷೇತ್ರದ ಅಭ್ಯರ್ಥಿ ಎನ್ನಲಾಗುತ್ತಿದೆ. ಬಿಜೆಪಿಯಿಂದ ಸ್ಪರ್ಧಿಸುವ ಆಸೆ ಅನೇಕರಲ್ಲಿದ್ದರೂ ರವಿ ವಿರುದ್ಧ ತೊಡೆ ತಟ್ಟುವ ಸಾಹಸಕ್ಕೆ ಯಾರೂ ಮುಂದಾಗಿಲ್ಲ. ಒಂದು ವೇಳೆ ಪ್ರಯ ತ್ನಿಸಿದರೂ ರಾಜಕೀಯ ಭವಿಷ್ಯ ಕಮರುವ ಭಯ ಅವರನ್ನು ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಪಕ್ಷ ಅಧಿಕೃತಗೊಳಿಸದಿದ್ದರೂ ಸಿ.ಟಿ.ರವಿಯೇ ಅಭ್ಯರ್ಥಿ ಎನ್ನಲಾಗುತ್ತಿದೆ.

ಕಾಂಗ್ರೆಸ್‌ನಲ್ಲಿ 6 ಜನ ಆಕಾಂಕ್ಷಿಗಳು: ಕಾಂಗ್ರೆಸ್‌ನ ಹೊಸ ನಿಯಮದಂತೆ ಆರು ಮಂದಿ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿ ಕೊಂಡು ಸ್ಪರ್ಧೆಗೆ ಕಾಯುತ್ತಿದ್ದಾರೆ. ಆದರೆ, ರವಿ ಓಟಕ್ಕೆ ಬ್ರೇಕ್‌ ಹಾಕಬೇಕು. ಕಾಂಗ್ರೆಸ್‌ ಭದ್ರಕೋಟೆಯನ್ನು ಮತ್ತೂಮ್ಮೆ ಸುಭದ್ರ ಮಾಡಿಕೊಳ್ಳಬೇಕೆಂಬ ನಿರೀಕ್ಷೆಯಲ್ಲಿರುವ ಎಐಸಿಸಿ-ಕೆಪಿಸಿಸಿ ಮುಖಂಡರು ಅಭ್ಯರ್ಥಿಗಳ ಆಯ್ಕೆಗೆ ಅಳೆದು ತೂಗುತ್ತಿದ್ದಾರೆ.

ರವಿ ವಿರುದ್ಧ 2018ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಸೋಲುಂಡ ಲಿಂಗಾಯತ ಸಮುದಾಯದ ಬಿ. ಎಚ್‌.ಹರೀಶ್‌ ಕಾಂಗ್ರೆಸ್‌ ಕದ ತಟ್ಟಿದ್ದು, ಅಭ್ಯರ್ಥಿಯಾಗಲು ಅರ್ಜಿ ಸಲ್ಲಿಸಿದ್ದಾರೆ. ಹಾಗೇ ಜಿಪಂ ಮಾಜಿ ಅಧ್ಯಕ್ಷ, ಸಿದ್ದರಾಮಯ್ಯ ಸರ್ಕಾರದ ಅವ ಧಿಯಲ್ಲಿ ಅರಣ್ಯ, ವಸತಿ ಮತ್ತು ವಿಹಾರಧಾಮಗಳ ನಿಗಮದ ಅಧ್ಯಕ್ಷರಾಗಿದ್ದ ಕುರುಬ ಸಮುದಾಯದ ಎ.ಎನ್‌.ಮಹೇಶ್‌, ಜಿಪಂ ಮಾಜಿ ಅಧ್ಯಕ್ಷೆ ಹಾಗೂ ಬಿಜೆಪಿಯಿಂದ ವಲಸೆ ಬಂದಿರುವ ಕುರುಬ ಸಮುದಾಯದ ರೇಖಾ ಹುಲಿಯಪ್ಪಗೌಡ, ಸಖ ರಾಯಪಟ್ಟಣ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹಾಗೂ ಲಿಂಗಾಯತ ಸಮುದಾಯದ ಮಹಡಿಮನೆ ಸತೀಶ್‌, ಜಿಲ್ಲಾ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಹಾಗೂ ಒಕ್ಕಲಿಗ ಸಮುದಾಯದ ಡಾ|ಡಿ.ಎಲ್‌.ವಿಜಯಕುಮಾರ್‌, ಕಾಂಗ್ರೆಸ್‌ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಹಾಗೂ ಮುಸ್ಲಿಂ ಸಮುದಾಯದ ನಯಾಜ್‌ ಅಹಮದ್‌ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ.

ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಗೊಂಡಿರುವ ಎಚ್‌.ಡಿ.ತಮ್ಮಯ್ಯ ಹಾಗೂ ವಿಧಾನ ಪರಿಷತ್‌ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸದಿದ್ದರೂ ಅಭ್ಯರ್ಥಿಗಳ ರೇಸ್‌ನಲ್ಲಿ ಅವರ ಹೆಸರು ಓಡುತ್ತಿದೆ. ಕ್ಷೇತ್ರದಲ್ಲಿ ಲಿಂಗಾಯತ ಹಾಗೂ ಕುರುಬ ಸಮುದಾಯವೇ ನಿರ್ಣಾಯಕ ವಾಗಿದ್ದು, ಕಾಂಗ್ರೆಸ್‌ ಬಹುತೇಕ ಈ ಸಮು ದಾಯ ದವರನ್ನೇ ಕಣಕ್ಕಿಳಿಸಲಿದೆ ಎನ್ನಲಾಗುತ್ತಿದೆ.

Advertisement

ಗಾಯತ್ರಿ ಶಾಂತೇಗೌಡ ಅವರಿಗೆ ಟಿಕೆಟ್‌ ನೀಡಿದಲ್ಲಿ ಬಿಜೆಪಿಗೆ ಬಿಗ್‌ ಫೈಟ್‌ ನೀಡಬಹುದಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಆದರೆ ಅವರು ಸ್ಪರ್ಧೆ ವಿಚಾರವಾಗಿ ಎಲ್ಲಿಯೂ ತುಟಿಬಿಚ್ಚಿಲ್ಲ. ಕೆಪಿಸಿಸಿ ನಾಯಕರು ಹೇಳಿದರೆ ಸ್ಪರ್ಧಿಸುವ ಸಾಧ್ಯತೆಯಿದೆ. ಇನ್ನೊಂದೆಡೆ ಬಿ.ಎಚ್‌.ಹರೀಶ್‌ ಹಾಗೂ ಎಚ್‌. ಡಿ.ತಮ್ಮಯ್ಯ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್‌ ನೀಡಿದರೂ ಅಸಮಾಧಾನ ಸ್ಫೋಟಗೊಳ್ಳುವ ಸಾಧ್ಯತೆಯಿದೆ. ಕೆಪಿಸಿಸಿ ಮುಖಂಡರು ಹೇಗೆ ನಿಭಾಯಿಸುತ್ತಾರೆ ಎಂದು ನೋಡಬೇಕಿದೆ.

ಜೆಡಿಎಸ್‌ ಅಭ್ಯರ್ಥಿ ಬದಲಿಸುತ್ತಾ?: ಜೆಡಿಎಸ್‌ ರಾಷ್ಟ್ರೀಯ ಮೊದಲ ಪಟ್ಟಿಯಲ್ಲೇ ಚಿಕ್ಕಮಗಳೂರು ಕ್ಷೇತ್ರದಿಂದ ಬಿ.ಎಂ.ತಿಮ್ಮಶೆಟ್ಟಿ ಹೆಸರು ಹೊರಡಿಸಿಯೇ ಬಿಟ್ಟಿತು. ಆದರೆ, ಎಚ್‌. ಡಿ. ಕುಮಾರಸ್ವಾಮಿ ಪಂಚರತ್ನ ಯಾತ್ರೆ ಬಳಿಕ ಅಭ್ಯರ್ಥಿ ಬದಲಾವಣೆಯ ಮಾತುಗಳು ಕ್ಷೇತ್ರದಲ್ಲಿ ಕೇಳಿ ಬರುತ್ತಿವೆ. ಎಸ್‌.ಎಲ್‌.ಭೋಜೇಗೌಡ ಹಾಗೂ ದಿ|ಧರ್ಮೇಗೌಡರ ಅವರ ಪುತ್ರ ಸೋನಾಲ್‌ ಗೌಡ ಹೆಸರು ಈ ನಡುವೆ ನುಸುಳಿ ಬರುತ್ತಿದೆ.

ಸಿ.ಟಿ.ರವಿಗೆ ಆಪ್ತನೇ ಸವಾಲು?
ಚಿಕ್ಕಮಗಳೂರು ಕ್ಷೇತ್ರದಲ್ಲಿ ಲಿಂಗಾಯತ ಮತ್ತು ಕುರುಬ ಸಮುದಾಯದ ಮತಗಳೇ ನಿರ್ಣಾಯಕ. ಸಿ.ಟಿ.ರವಿ ಗೆಲುವಿನ ಹಿಂದೆ ಎರಡು ಸಮುದಾಯಗಳ ಪಾತ್ರ ಹೆಚ್ಚಿದೆ. ಬಿಜೆಪಿಯಲ್ಲಿ ಟಿಕೆಟ್‌ ಕೇಳಿ ಅಸಮಾಧಾನಗೊಂಡ ಲಿಂಗಾಯತ ಮುಖಂಡ ಹಾಗೂ ಅವರ ಆಪ್ತ ಎಚ್‌.ಡಿ.ತಮ್ಮಯ್ಯ ಕಾಂಗ್ರೆಸ್‌ ಸೇರ್ಪಡೆಗೊಂಡು ಟಿಕೆಟ್‌ಗಾಗಿ ಕಸರತ್ತು ನಡೆಸುತ್ತಿದ್ದಾರೆ. ಒಂದು ವೇಳೆ ತಮ್ಮಯ್ಯಗೆ ಟಿಕೆಟ್‌ ನೀಡಿದಲ್ಲಿ ಆಪ್ತನ ವಿರುದ್ಧ ಸೆಣಸಬೇಕಿದೆ. ಅಲ್ಲದೇ ಲಿಂಗಾಯತ ಸಮುದಾಯಕ್ಕೆ ಪ್ರಾತಿನಿಧ್ಯ ಸಿಗಬೇಕು ಎಂಬ ಭಾವನೆ ಸಮುದಾಯದವರಲ್ಲಿದ್ದು, ತಮ್ಮಯ್ಯ ಅವರನ್ನು ಬೆಂಬಲಿಸಿದರೆ ರವಿ ಗೆಲುವಿಗೆ ಪ್ರಯಾಸ ಪಡಬೇಕಾಗುತ್ತದೆ. ಹಾಗೆಯೇ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ರವಿ ಮಾಡಿರುವ ಟೀಕೆಗಳು ಕುರುಬ ಸಮುದಾಯವನ್ನು ಕೆರಳಿಸಿದೆ ಎನ್ನಲಾಗಿದೆ.

 

-ಸಂದೀಪ ಜಿ.ಎನ್‌.ಶೇಡ್ಗಾರ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next