Advertisement

Legislative Council: ಇದು ಟ್ರೇಲರ್‌ ಮಾತ್ರ, ಅಭಿ ಪಿಕ್ಚರ್‌ ಬಾಕಿ ಹೈ: ಸಿ.ಟಿ. ರವಿ

12:04 AM Jul 16, 2024 | Team Udayavani |

ಬೆಂಗಳೂರು: ವಾಲ್ಮೀಕಿ ನಿಗಮದಲ್ಲಿ ಶೇ. 100ರಷ್ಟು ಹಣವನ್ನೂ ಅಕ್ರಮವಾಗಿ ವರ್ಗಾಯಿಸಲಾಗಿದೆ. ಹಗರಣದ ಸಂಬಂಧ ಬರೀ ಟ್ರೇಲರ್‌ ಮಾತ್ರ ಬಿಟ್ಟಿದ್ದೇನೆ. ಅಭಿ ಪಿಕ್ಚರ್‌ ಬಾಕಿ ಹೈ… ಎಂದು ಬಿಜೆಪಿ ಸದಸ್ಯ ಸಿ.ಟಿ. ರವಿ (C.T.Ravi) ಹೇಳಿದರು.

Advertisement

ನಿಯಮ 68ರಡಿ ಚರ್ಚೆ ಆರಂಭಿಸಿದ ಸಿ.ಟಿ. ರವಿ, ನಮ್ಮ ಸರಕಾರದ ಅವಧಿಯಲ್ಲಿ ಅಧಿಕಾರಿಗಳು ಮತ್ತು ಸರಕಾರದ ಮೇಲೆ ಶೇ. 40 ಕಮಿಷನ್‌ನ ಆರೋಪ ಹೊರಿಸಲಾಗಿತ್ತು. ಆದರೆ ಈಗ ವಾಲ್ಮೀಕಿ ನಿಗಮದಲ್ಲಿನ ಹಣ ಲೂಟಿ ಹೊಡೆಯಲು ವ್ಯವಸ್ಥಿತವಾಗಿ ಯೋಜನೆ ರೂಪಿಸಲಾಗಿದೆ ಎಂದರು.

ಇಡೀ ಪ್ರಕರಣ ಕಿಂಗ್‌ಪಿನ್‌ ಎಂದು ಗುರುತಿಸಲಾಗಿರುವ ವ್ಯಕ್ತಿಯ ಜತೆಯಲ್ಲಿ ಸರ್ಪಕ್ಕೆ ಇನ್ನೊಂದು ಹೆಸರನ್ನು ಹೊಂದಿರುವ ಮಾಜಿ ಸಚಿವರ ವ್ಯಾಪಾರ ಪಾಲುದಾರಿಕೆಯಿದೆ. ಹಾಗೆಯೇ ಸರಕಾರದ ನಂ. 1 ಮತ್ತು ನಂ. 2ನೇ ಸ್ಥಾನದಲ್ಲಿರುವವರೊಂದಿಗೆ ಗಾಢವಾದ ಸ್ನೇಹವಿದೆ. ಅದರಲ್ಲೂ ನಂ. 1 ಸ್ಥಾನದಲ್ಲಿರುವ
ವರ ಅಡುಗೆ ಮನೆಗೆ ಹೋಗುವಷ್ಟು ಸಲಿಗೆ ಹೊಂದಿದ್ದಾನೆ. ಹಾಗೆಯೇ ನಂ. 2 ಜತೆಯಲ್ಲಿ ಒಂದೇ ಏರ್‌ಕ್ರಾಫ್ಟ್ನಲ್ಲಿ ಹೋಗುತ್ತಾನೆ ಎಂದು ಆರೋಪಿಸಿದರು.

ಹಾಗೆಯೇ, ವಾಲ್ಮೀಕಿ ನಿಗಮದ ಹಣದಲ್ಲಿ ಶಾಸಕರೊಬ್ಬರ ಕುಟುಂಬ ಸದಸ್ಯರು ಜಮೀನು ಖರೀದಿಸಿ¨ªಾರೆ, ಲ್ಯಾಂಬೋರ್ಗಿನಿಯಂತಹ ಐಷಾರಾಮಿ ಕಾರು ಖರೀದಿಸಿದ್ದಾರೆ. ಇತ್ತೀಚೆಗೆ ನಂ.1 ಸ್ಥಾನದಲ್ಲಿರುವವರು ಅಹಿಂದ ಕಾರ್ಡ್‌ ಬಳಸುತ್ತ ಜನರ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದಾರೆ ಎಂದರು.

ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆಡಳಿತ ಪಕ್ಷದ ಸದಸ್ಯರು, ಯಾರ ಹೆಸರನ್ನು ಬಳಸಬಾರದು ಎಂಬ ಸಭಾಪತಿಗಳ ಸ್ಪಷ್ಟ ಸೂಚನೆ ಇದ್ದರೂ ನಂ. 1, ನಂ. 2 ಎಂಬ ಪದಗಳನ್ನು ಬಳಸುತ್ತಿರುವುದು ತಪ್ಪು. ನಮ್ಮನ್ನು ಕೆಣಕುವಂತೆ ಮಾತನಾಡುತ್ತಿದ್ದಾರೆ ಎಂದು ಹೇಳಿದರು. ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಆಗ ಮಧ್ಯಪ್ರವೇಶಿಸಿದ ಉಪಸಭಾಪತಿ ಎಂ.ಕೆ. ಪ್ರಾಣೇಶ್‌, ಯಾರನ್ನೂ ಕೆಣಕುವಂತೆ ಮಾತನಾಡಬೇಡಿ. ಕೇವಲ ವಿಷಯವನ್ನು ಮಂಡಿಸಿ ಎಂದು ಸಿ.ಟಿ. ರವಿ ಅವರಿಗೆ ಸೂಚಿಸಿದರು.

Advertisement


ಇನ್ನೂ ನಾಲ್ಕೈದು ಸಚಿವರು ರಾಜೀನಾಮೆ ಕೊಡುತ್ತಾರೆ!

ವಾಲ್ಮೀಕಿ ನಿಗಮದ ಹಗರಣದ ಬಗ್ಗೆ ನಮ್ಮ ಹೋರಾಟದಿಂದಾಗಿ ಒಂದು ವಿಕೆಟ್‌ ಪತನವಾಗಿದೆ. ರಾಜ್ಯ ಸರಕಾರ ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಪ್ರತೀ ನಿಗಮ, ಇಲಾಖೆಯಲ್ಲೂ ಭ್ರಷ್ಟಾಚಾರ ಮಾಡಿ ತಾವು ಮಾಡದ ಭ್ರಷ್ಟಾಚಾರವಿಲ್ಲ ಎನ್ನುವಂತಾಗಿದೆ. ಹೀಗೆ ಮುಂದುವರಿದರೆ ಇನ್ನೂ ನಾಲ್ಕೈದು ಸಚಿವರು ರಾಜೀನಾಮೆ ನೀಡುತ್ತಾರೆ ನೋಡ್ತಾ ಇರಿ ಎಂದು ಸಿ.ಟಿ. ರವಿ ಆಡಳಿತ ಪಕ್ಷದವರನ್ನು ಕಿಚಾಯಿಸಿದರು. ಅದಕ್ಕೆ ಸಚಿವ ಪ್ರಿಯಾಂಕ್‌ ಖರ್ಗೆ, ನಮ್ಮನ್ನು ಖಾಲಿ ಆಮೇಲೆ ಮಾಡಿ. ಮೊದಲು ವಿಧಾನಪರಿಷತ್‌ಗೆ ವಿಪಕ್ಷ ನಾಯಕ ಮತ್ತು ಮುಖ್ಯ ಸಚೇತಕರನ್ನು ಆಯ್ಕೆ ಮಾಡಿ ಎಂದರು.

ಯು.ಬಿ. ವೆಂಕಟೇಶ್‌ ವಿರುದ್ಧ ಕ್ರಮದ ಎಚ್ಚರಿಕೆ
ಚರ್ಚೆ ವೇಳೆ ಸಿ.ಟಿ. ರವಿ ಮಾತಿಗೆ ಪದೇಪದೆ ಅಡ್ಡಿ ಪಡಿಸುತ್ತಿದ್ದ ಕಾಂಗ್ರೆಸ್‌ನ ಯು.ಬಿ. ವೆಂಕಟೇಶ್‌ ವಿರುದ್ಧ ಸಿಟ್ಟಾದ ಉಪ ಸಭಾಪತಿ ಪ್ರಾಣೇಶ್‌, ಹೀಗೆ ಪದೇಪದೆ ಎದ್ದು ನಿಂತು ಮಾತನಾಡುವುದನ್ನು ನಿಲ್ಲಿಸಿ. ಇಲ್ಲದಿದ್ದರೆ ಕಠಿನ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಾನು ಯಾರಿಗೂ ಕರೆ ಮಾಡಿಲ್ಲ: ಪರಂ
ಚರ್ಚೆಯ ಸಂದರ್ಭ ಮಧ್ಯ ಪ್ರವೇಶಿಸಿದ ಗೃಹ ಸಚಿವ ಪರಮೇಶ್ವರ್‌, ನಾನು ಈ ವರೆಗೆ ಈ ಪ್ರಕರಣದಲ್ಲಿ ಒಬ್ಬರಿಗೂ ಕರೆ ಮಾಡಿಲ್ಲ. ಪ್ರಕರಣ ಸಂಬಂಧ ಎಸ್‌ಐಟಿ, ಸಿಬಿಐ ಹಾಗೂ ಇ.ಡಿ. ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಹಗರಣ ಸಂಬಂಧ ಪರಿಮಿತಿಯೊಳಗೆ ಚರ್ಚೆಯಾಗಬೇಕು. ಸರಕಾರವು ವಿಪಕ್ಷಗಳ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next