Advertisement

Chikkaballapur: ಕೈ ಚೆಲ್ಲಿದ ಜನಪ್ರತಿನಿಧಿಗಳು: ಸುಂಕ ವಸೂಲಿಗೆ ನಗರಸಭೆ ಟೆಂಡರ್‌!

06:36 PM Oct 10, 2024 | Team Udayavani |

ಚಿಕ್ಕಬಳ್ಳಾಪುರ: ನಗರದ ಬೀದಿ ಬದಿ ವ್ಯಾಪಾರಿಗಳು ನಗರಸಭೆಗೆ ಪಾವತಿಸುವ ನೆಲ ಸುಂಕವನ್ನು ನಾವು ಪಾವತಿಸುವುದಾಗಿ ಹೇಳಿದ್ದ ಕ್ಷೇತ್ರದ ಜನಪ್ರತಿನಿಧಿಗಳು ನುಡಿದಂತೆ ನಡೆಯದ ಕಾರಣ ನಗರಸಭೆ ಅ.15ಕ್ಕೆ ನೆಲ ಸುಂಕ ವಸೂಲಾತಿಗೆ ಬಹಿರಂಗ ಹರಾಜಿಗೆ ಟೆಂಡರ್‌ ಕರೆದಿದೆ.

Advertisement

ಪಾವತಿಸುವ ನೆಲ ಸುಂಕವನ್ನು ವ್ಯಾಪಾರಿಗಳಿಗೆ ಹೊರೆಯಾಗದಂತೆ ನಾವೇ ಪಾವತಿಸುವುದಾಗಿ ಶಾಸಕ ರಾದ ಆರಂಭದಲ್ಲಿ ಪ್ರದೀಪ್‌ ಈಶ್ವರ್‌ ಘೊಷಿಸಿದ್ದರು. ಆದರೆ ಅದು ಕಾರ್ಯಗತ ಆಗಲೇ ಇಲ್ಲ. ಸದ್ಯ ನಗರಸಭೆ ತನ್ನ ಆದಾಯ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ನೆಲ ಸುಂಕ ವಸೂಲಾತಿಗೆ ಬಹಿರಂಗ ಟೆಂಡರ್‌ ಕರೆದಿದೆ. ಆ ಮೂಲಕ ಇನ್ನು ಮುಂದೆ ನಗರದ ಬೀದಿ ಬದಿ ವ್ಯಾಪಾರಿಗಳಿಗೆ ಸುಂಕ ಕಟ್ಟುವುದು ಅನಿರ್ವಾಯವಾಗಲಿದೆ. ಈ ಮೊದಲು ಶಾಸಕರಾಗಿದ್ದ ಡಾ.ಕೆ.ಸುಧಾಕರ್‌ ಹಲವು ವರ್ಷಗಳ ಕಾಲ ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ತಮ್ಮ ಟ್ರಸ್ಟ್‌ ಮೂಲಕ ನೆಲ ಸುಂಕ ಪಾವತಿ ಮಾಡಿ ನೆರವಾಗಿದ್ದರು. ಬಳಿಕ ಕ್ಷೇತ್ರದ ಶಾಸಕರಾದ ಪ್ರದೀಪ್‌ ಈಶ್ವರ್‌ ಬೀದಿ ಬದಿ ವ್ಯಾಪಾರಿಗಳ ನೆಲ ಸುಂಕವನ್ನು ತಾವೇ ಭರಿಸುವುದಾಗಿ ಹೇಳಿದ್ದರು. ಆದರೆ ನಗರಸಭೆಗೆ ಶಾಸಕರ ಕಡೆಯಿಂದ ನೆಲ ಸುಂಕ ಪಾವತಿ ಆಗಿರಲಿಲ್ಲ. ಇದೀಗ ನಗರಸಭೆ ಬಹಿರಂಗ ಹರಾಜು ಕರೆದಿರುವುದು ನಗರದ ಪುಟ್‌ಪಾತ್‌ ವ್ಯಾಪಾರಿಗಳಲ್ಲಿ ನೆಲ ಸುಂಕ ಕಟ್ಟಬೇಕಾದ ಅನಿರ್ವಾಯತೆ ಇದೆ. ಇನ್ನೂ ನಗರಸಭೆ ಮಾರ್ಗಸೂಚಿ ಪ್ರಕಾರ ನೆಲ ಸುಂಕ ವಸೂಲಿಗೆ ಟೆಂಡರ್‌ ಕರೆಯುವುದು ಕಡ್ಡಾಯ. ಟೆಂಡರ್‌ ಮೂಲಕವಾದರೂ ನಗರದ ಬೀದಿ ಬದಿ ವ್ಯಾಪಾರಿಗಳ ನೆರವಿಗೆ ಕ್ಷೇತ್ರದ ಚುನಾಯಿತ ಜನಪ್ರತಿನಿಧಿಗಳು ಬರುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಸದ್ಯ ಯಾವದೇ ಚುನಾವಣೆ ಇಲ್ಲದೇ ಇರುವುದರಿಂದ ಕ್ಷೇತ್ರದ ಜನ ಪ್ರತಿನಿಧಿಗಳು ಕೊಟ್ಟ ಮಾತಿನಂತೆ ನಗರದ ಬೀದಿ ಬದಿ ವ್ಯಾಪಾರಿಗಳಿಗೆ ತಾವೇ ಹರಾಜು ಮೂಲಕ ನೆಲ ಸುಂಕ ಪಾವತಿಗೆ ಮುಂದಾಗುತ್ತಾರೋ ಅಥವ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.

ನಗರಸಭೆಯಿಂದ 15.50 ಲಕ್ಷ ರೂ.ನೆಲ ಸುಂಕ ನಿಗದಿ: ಸ್ಥಳೀಯ ನಗರಸಭೆ 2024-25ನೇ ಸಾಲಿಗೆ ನೆಲ ಸುಂಕವನ್ನು ಜಿಎಸ್‌ಟಿ ಹೊರತುಪಡಿಸಿ 15.50 ಲಕ್ಷ ರೂ. ನಿರೀಕ್ಷಿಸಿದೆ. ಇಷ್ಟು ಮೊತ್ತವನ್ನು ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲವಾಗಲು ಕ್ಷೇತ್ರದ ಚುನಾಯಿತ ಜನಪ್ರತಿನಿಧಿಗಳು ಭರಿಸಿ ಬೀದಿ ಬದಿ ವ್ಯಾಪಾರಿಗಳಿಗೆ ನೆರವಾಗುತ್ತಾರ ಎಂಬುದನ್ನು ಕಾದು ನೋಡಬೇಕಿದೆ.

ಕಾಗತಿ ನಾಗರಾಜಪ್ಪ

Advertisement
Advertisement

Udayavani is now on Telegram. Click here to join our channel and stay updated with the latest news.

Next