Advertisement

Chief ಆ್ಯಂಡ್‌ ಬೆಸ್ಟ್‌! ವಿದೇಶಿ ಕಂಪನಿಗಳಲ್ಲಿ ಭಾರತೀಯ ಸಿಇಓಗಳು

04:51 PM Mar 02, 2020 | Sriram |

ನೋಕಿಯಾ, ಗೂಗಲ್‌, ಮೈಕ್ರೋಸಾಫ್ಟ್, ಅಡೋಬ್‌, ಮಾಸ್ಟರ್‌ಕಾರ್ಡ್‌, ಡಿಯಾಜಿಯೊ, ಡೆಲಾಯಿಟ್‌, ಪ್ಯಾಲೊ ಆಲ್ಟೊ, ಹರ್ಮನ್‌ ಇಂಟರ್‌ನ್ಯಾಷನಲ್‌- ಇವೆಲ್ಲವೂ ಮಲ್ಟಿನ್ಯಾಷನಲ್‌ ಕಂಪನಿಗಳ ಹೆಸರುಗಳು. ನಾನಾ ದೇಶಗಳಲ್ಲಿ ಸ್ಥಾಪನೆಗೊಂಡು ಈಗ ಜಗತ್ತಿನಾದ್ಯಂತ ಯಶಸ್ವಿಯಾಗಿರುವ ಈ ಸಂಸ್ಥೆಗಳ ನಡುವೆ ಒಂದು ಸಾಮ್ಯತೆ ಇದೆ. ಅದೇನು ಗೊತ್ತಾ? ಇವಿಷ್ಟೂ ಕಂಪನಿಗಳ ಸಿಇಓಗಳು(ಚೀಫ್ ಎಕ್ಲಿಕ್ಯುಟಿವ್‌ ಆಫೀಸರ್‌) ಭಾರತೀಯರು!

Advertisement

ಜಗತ್ತಿನ ತಂತ್ರಜ್ಞಾನ ಸಂಸ್ಥೆಗಳಲ್ಲೇ ದೊಡ್ಡಣ್ಣ ಎಂಬ ಹೆಸರನ್ನು ಪಡೆದಿದ್ದು ಐಬಿಎಂ. ಅದನ್ನು “ಬಿಗ್‌ ಬ್ಲೂ’ ಎಂದೇ ಸಂಬೋಧಿಸಲಾಗುತ್ತಿತ್ತು. ಜಗತ್ತಿನ ದೊಡ್ಡ ದೊಡ್ಡ ದೇಶಗಳು, ಸರ್ಕಾರಿ ಸಂಸ್ಥೆಗಳು, ಕಂಪನಿಗಳ ದೈನಂದಿನ ವ್ಯವಹಾರಗಳ ಕಾರ್ಯಾಚರಣೆಗೆ ಬೇಕಾಗುವ ಮೇನ್‌ಫ್ರೆàಮ್‌ ಕಂಪ್ಯೂಟರ್‌ಗಳನ್ನು ಒದಗಿಸುತ್ತಿದ್ದ ಸಂಸ್ಥೆ ಐಬಿಎಂ. ತಂತ್ರಜ್ಞಾನ ಜಗತ್ತಿನಲ್ಲಿ ವೈಭವೋಪೇತ ಇತಿಹಾಸ ಹೊಂದಿದ ಐಬಿಎಂ ಸಂಸ್ಥೆಗೆ ಇತ್ತೀಚಿಗಷ್ಟೇ ಭಾರತೀಯ ಅರವಿಂದ್‌ ಕೃಷ್ಣ ಅವರನ್ನು ಸಿಇಓ(ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ) ಆಗಿ ನೇಮಕ ಮಾಡಲಾಗಿದೆ. ಏಪ್ರಿಲ್‌ 6ರಿಂದ ಈ ನೇಮಕ ಜಾರಿಗೆ ಬರಲಿದೆ. ಇದರಿಂದಾಗಿ, ಬಹುರಾಷ್ಟ್ರೀಯ ಕಂಪನಿಗಳು, ಭಾರತೀಯರನ್ನು ಸಿಇಓ ಆಗಿ ನೇಮಕಗೊಳಿಸುವ ಟ್ರೆಂಡನ್ನು ಪಾಲಿಸುತ್ತಿವೆ ಎನ್ನುವ ವಾದಕ್ಕೆ ಪುಷ್ಠಿ ಸಿಕ್ಕಂತಾಗಿದೆ. ಇದರ ಹಿಂದೆ ಕೆಲ ಕಾರಣಗಳನ್ನು ಪಟ್ಟಿ ಮಾಡಬಹುದು-

1. ಅನೇಕತೆ
ಬಹುರಾಷ್ಟ್ರೀಯ ಕಂಪನಿಗಳಲ್ಲಿ ನಾನಾ ದೇಶಗಳಿಗೆ ಸೇರಿದ ಉದ್ಯೋಗಿಗಳಿರುತ್ತಾರೆ. ಅವರ ಆಚಾರ ವಿಚಾರಗಳು ಬೇರೆ ಬೇರೆ ಇರುತ್ತವೆ. ಇದು ಭಾರತೀಯರಾದ ನಮಗೆ ಹೊಸತೇನಲ್ಲ. ನಮ್ಮಲ್ಲಿ ಪ್ರದೇಶದಿಂದ ಪ್ರದೇಶಕ್ಕೆ ಭಾಷೆ, ಸಂಸ್ಕೃತಿ ಬದಲಾಗುತ್ತದೆ. ಹೀಗಾಗಿ ಎಲ್ಲರೊಂದಿಗೆ ಹೊಂದಿಕೊಂಡು ಬಾಳುವ ಗುಣ ನಮಗೆ ಹುಟ್ಟಿನಿಂದಲೇ ಬಂದಿರುತ್ತದೆ. ಈ ಗುಣ ಮಲ್ಟಿನ್ಯಾಷನಲ್‌ ಕಂಪನಿಗಳಲ್ಲಿ ಕೆಲಸ ಮಾಡುವಾಗ ಸಹಾಯಕ್ಕೆ ಬರುತ್ತದೆ.


2. ಲೆಕ್ಕ
“ಭಾರತೀಯರು ಲೆಕ್ಕದಲ್ಲಿ ತುಂಬಾ ಜಾಣರು’ ಎಂಬ ಮಾತು ವಿದೇಶಗಳಲ್ಲಿ ಪ್ರಚಲಿತದಲ್ಲಿದೆ. ಈ ಅಭಿಪ್ರಾಯದ ಹಿಂದೆ ಹಾಲಿವುಡ್‌ ಸಿನಿಮಾ, ಮನರಂಜನಾ ಉದ್ಯಮದ ಕಾಣಿಕೆಯೂ ಇದೆ. ಆದರೆ ಒಂದಂತೂ ನಿಜ, ಭಾರತೀಯರು ತಮ್ಮ ಜೀವನದ ಪ್ರತಿಯೊಂದು ಹಂತದಲ್ಲಿಯೂ ಲೆಕ್ಕಾಚಾರ ಮಾಡಿಯೇ ಮೇಲೆ ಬಂದಿರುತ್ತಾರೆ. ಒಂದು ಶತಕೋಟಿ ಜನಸಂಖ್ಯೆ ಇರುವ ಈ ದೇಶದಲ್ಲಿ ಪ್ರತಿಯೊಂದು ವಿಚಾರದಲ್ಲೂ ಸ್ಪರ್ಧೆ ಇದೆ. ಹೀಗಾಗಿ ಲೆಕ್ಕಾಚಾರ ಮಾಡಬೇಕಾದ್ದು ಅನಿವಾರ್ಯ. ಕಂಪನಿಗಳ ವಿಚಾರಕ್ಕೆ ಬಂದಾಗಲೂ ಮಾರುಕಟ್ಟೆಯಲ್ಲಿ ತೀವ್ರ ಸ್ಪರ್ಧೆ ಎದುರಿಸಬೇಕಾಗಿರುವುದರಿಂದ ಭಾರತೀಯರ ಸ್ಪರ್ಧಾತ್ಮಕ ಮನೋಭಾವದಿಂದ ಕಂಪನಿಗೆ ಖಂಡಿತ ಲಾಭವಿದೆ.

3. ಕುಟುಂಬ ಮೌಲ್ಯ
ಇಂದಿರಾ ನೂಯಿ ಪೆಪ್ಸಿ ಕಂಪನಿಯ ಸಿಇಓ ಆಗಿ ಆಯ್ಕೆ ಆದಾಗ ಅವರ ತಾಯಿ ಮನೆಗೆ ನೆಂಟರಿಷ್ಟರೆಲ್ಲಾ ಬಂದು ಶುಭ ಹಾರೈಸಿ ಸಂಭ್ರಮದಲ್ಲಿ ಪಾಲ್ಗೊಂಡು ಸಂತಸದಲ್ಲಿ ಭಾಗಿಯಾಗಿದ್ದರು. ಸಿಇಓ ಸ್ಥಾನದಿಂದ ನಿರ್ಗಮಿಸುವಾಗ ಇಂದಿರಾ ಅವರಿಗೆ ಆ ಘಟನೆ ನೆನಪಾಗಿತ್ತು. ಕೂಡಲೆ ಅವರು ಸಂಸ್ಥೆಯ ಉನ್ನತ ಹುದ್ದೆಯಲ್ಲಿದ್ದವರ ಮನೆಯವರಿಗೆ, ಹೆತ್ತವರಿಗೆ ಪತ್ರ ಬರೆದರು. ನಿಮ್ಮ ಮಗ, ಸಂಸ್ಥೆಯಲ್ಲಿ ಅದೆಷ್ಟು ಒಳ್ಳೆಯ ಕೆಲಸದಲ್ಲಿ ತೊಡಗಿದ್ದಾರೆ ಎನ್ನುವ ಅರ್ಥದಲ್ಲಿ ಇದ್ದ ಆ ಪತ್ರ ಭಾವಪೂರ್ಣವಾಗಿತ್ತು. ಇಂಥ ಘಟನೆಗಳಿಂದ ಕಚೇರಿಗಳಲ್ಲಿ ಆಪ್ತ ವಾತಾವರಣ ನಿರ್ಮಾಣ ಸಾಧ್ಯ. ಭಾರತೀಯರ ಕುಟುಂಬ ಮೌಲ್ಯಗಳ ಕುರಿತು ಜಗತ್ತಿಗೇ ಗೊತ್ತಿದೆ.

– ಹರ್ಷವರ್ಧನ್‌ ಸುಳ್ಯ

Advertisement
Advertisement

Udayavani is now on Telegram. Click here to join our channel and stay updated with the latest news.

Next