Advertisement

ರಸ್ತೆಯಲ್ಲಿಯೇ ಕೋಳಿ ತ್ಯಾಜ್ಯ ವಿಲೇವಾರಿ

07:21 AM Jan 24, 2019 | |

ಚನ್ನಪಟ್ಟಣ: ಸಮರ್ಪಕವಾಗಿ ವಿಲೇವಾರಿ ಮಾಡಬೇಕಾದ ಕೋಳಿ ತ್ಯಾಜ್ಯವನ್ನು ಕೆಲ ಅಂಗಡಿಗಳ ಮಾಲೀಕರು ರಸ್ತೆ ಬದಿ ಮತ್ತು ನಿರ್ಜನ ಪ್ರದೇಶಗಳಲ್ಲಿ ಬಿಸಾಡಿ ಹೋಗುತ್ತಿದ್ದು, ದುರ್ವಾಸನೆ ಬೀರುವ ಈ ತ್ಯಾಜ್ಯದಿಂದ ರಸ್ತೆಯಲ್ಲಿ ಸಂಚಾರಿಸುವ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.

Advertisement

ನಿರ್ಜನ ಪ್ರದೇಶದಲ್ಲಿ ಗುಂಡಿತೆಗೆದು, ಕೋಳಿ ತ್ಯಾಜ್ಯವನ್ನು ಅದರಲ್ಲಿ ಮುಚ್ಚಿ ವಿಲೇವಾರಿ ಮಾಡಬೇಕಾಗಿರುವುದು ನಿಯಮವಾಗಿದ್ದು, ಕೆಲವರು ಈ ಗೋಜಿಗೆ ಹೋಗದೆ ಪ್ಲಾಸ್ಟಿಕ್‌ ಚೀಲಗಳಲ್ಲಿ ತ್ಯಾಜ್ಯವನ್ನು ತುಂಬಿ ರಸ್ತೆ ಬದಿಯಲ್ಲಿ ಬಿಸಾಡಿ ಹೋಗುತ್ತಿರುವುದರಿಂದ ಆ ಪ್ರದೇಶದ ವಾತಾವರಣ ಕಲುಷಿತವಾಗುವ ಜತೆಗೆ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದೆ.

ಪ್ರಯಾಣಿಕರ ಸಂಚಾರಕ್ಕೆ ಅಡ್ಡಿ: ಬೆಂಗಳೂರು- ಮೈಸೂರು ಹೆದ್ದಾರಿ, ಪಟ್ಟಣದ ಹೊರ ವಲಯದ ರಾಮಮ್ಮನ ಕೆರೆ ಏರಿ, ಸಾತನೂರು ರಸ್ತೆ, ಗ್ರಾಮಾಂತರ ಪ್ರದೇಶದ ದೇವರಹೊಸಹಳ್ಳಿ, ಕೂಡೂರು, ಹೊಂಗನೂರು, ಕೋಡಂಬಹಳ್ಳಿ ಸೇರಿದಂತೆ ಹಲವೆಡೆ ರಸ್ತೆ ಬದಿಯಲ್ಲಿ ಕೋಳಿ ತ್ಯಾಜ್ಯವನ್ನು ವಿಲೇವಾರಿ ಮಾಡುತ್ತಿರುವುದರಿಂದ ಸಂಚಾರ ಮಾಡುವ ಪ್ರಯಾಣಿಕರು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ತ್ಯಾಜ್ಯ ದುರ್ವಾಸನೆ ಬೀರುವುದರ ಜತೆಗೆ ಇದನ್ನು ತಿನ್ನಲು ಆಗಮಿಸುವ ಬೀದಿ ನಾಯಿಗಳಿಂದ ಸಾರ್ವಜನಿಕರಿಗೆ ಇನ್ನಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆ ಬದಿಯಲ್ಲಿಯೇ ಕೋಳಿ ಮಾಂಸ ಆಸ್ವಾದಿಸುತ್ತಾ, ರಸ್ತೆಯಲ್ಲಿ ಹೋಗುವ ಸಾರ್ವಜನಿಕರ ಮೇಲೆ ನಾಯಿಗಳು ದಾಳಿ ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ.

ಏನಿದು ಕೋಳಿ ತ್ಯಾಜ್ಯ?: ಕೋಳಿಯನ್ನು ಸ್ವತ್ಛ ಮಾಡಿದ ನಂತರ ಅದರ ದೇಹದಲ್ಲಿನ ನಿರುಪಯುಕ್ತ ಭಾಗಗಳನ್ನೇ ಕೋಳಿ ತ್ಯಾಜ್ಯ ಎನ್ನಲಾಗುತ್ತದೆ. ಕೋಳಿಯನ್ನು ಸ್ವತ್ಛ ಮಾಡುವಾಗ ಅದರ ದೇಹದೊಳಗಿನ ಕರುಳು, ಮೇಲಾºಗದ ರೆಕ್ಕೆ ಪುಕ್ಕಗಳು, ಕಾಲಿನ ಸ್ವಲ್ಪ ಭಾಗವನ್ನು ತೆಗದು ಹಾಕಲಾಗುತ್ತದೆ.

Advertisement

ನಂತರ ಅದನ್ನು ಒಂದೆಡೆ ಶೇಖರಿಸಿ ವಿಲೇವಾರಿ ಮಾಡಲಾಗುತ್ತದೆ. ಈ ತ್ಯಾಜ್ಯವನ್ನು ನಿರ್ಜನ ಪ್ರದೇಶಗಳಲ್ಲಿ ಗುಂಡಿ ತೆಗೆದು, ಕೋಳಿ ತ್ಯಾಜ್ಯ ಮುಚ್ಚುವ ಮೂಲಕ ವಿಲೇವಾರಿ ಮಾಡಬೇಕಾಗಿದೆ. ಕೆಲ ಕೋಳಿ ಅಂಗಡಿ ಮಾಲೀಕರು ಇದನ್ನು ಅನುಸರಿಸಿದರೆ ಇನ್ನೂ ಕೆಲವರು ರಸ್ತೆ ಬದಿಯಲ್ಲಿ ಬಿಸಾಡಿ ಕೈ ತೊಳೆದುಕೊಳ್ಳುತ್ತಿದ್ದಾರೆ.

ಬೀದಿ ನಾಯಿಗಳ ಹಾವಳಿ: ಎಲ್ಲೆಂದರಲ್ಲಿ ಬಿಸಾಡುತ್ತಿರುವ ಈ ಕೋಳಿ ತ್ಯಾಜ್ಯದಿಂದಾಗಿ ಬೀದಿ ನಾಯಿಗಳಿಗೆ ಪ್ರತಿದಿನ ಮೃಷ್ಠಾನ್ನ ಭೋಜನವಾಗಿದೆ. ಇದನ್ನು ತಿಂದು ದಷ್ಟಪುಷ್ಟವಾಗಿ ಕೊಬ್ಬಿರುವ ಬೀದಿ ನಾಯಿಗಳು ಕೆರೆಯಂಗಳದಲ್ಲಿ ಒಂಟಿಯಾಗಿ ಮೇಯುವ ಕುರಿ, ದನ, ಕರುಗಳ ಮೇಲೆ ದಾಳಿ ನಡೆಸಲು ಮುಂದಾಗುತ್ತಿವೆ.

ಇದರ ಜತೆಗೆ ರಸ್ತೆ ಬದಿಯಲ್ಲಿ ಸಂಚಾರಿಸುವ ಸಾರ್ವಜನಿಕರ ಮೇಲೂ ಸಹ ದಾಳಿ ನಡೆಸುತ್ತಿವೆ. ತಾಲೂಕಿನ ದೇವರಹೊಸಹಳ್ಳಿ ಭಾಗದಲ್ಲಿ ತ್ಯಾಜ್ಯವನ್ನು ತಿನ್ನಲು ಕಾಡಿನಿಂದ ಚಿರತೆಗಳೂ ಸಹ ಗ್ರಾಮಗಳತ್ತ ಬರುತ್ತಿದ್ದು, ಆ ಭಾಗದಲ್ಲಿ ತ್ಯಾಜ್ಯದ ಜತೆಗೆ ಕರುಗಳು, ಕುರಿಗಳನ್ನೂ ಸಹ ತಿಂದಿರುವ ಉದಾಹರಣೆಗಳು ಸಾಕಷ್ಟಿವೆ.

ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ: ಎಲ್ಲೆಂದರಲ್ಲಿ ತ್ಯಾಜ್ಯ ಬಿಸಾಡಿ ಕೈತೊಳೆದು ಕೊಳ್ಳುತ್ತಿರುವ ಕೋಳಿ ಅಂಗಡಿಗಳ ಮಾಲೀಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಾದ ತಾಲೂಕು ಆಡಳಿತ ಹಾಗೂ ಆರೋಗ್ಯಾಧಿಕಾರಿಗಳ ಜಾಣ ಕುರುಡಿನಿಂದ ಈ ಪ್ರಕರಣ ದಿನೇ ದಿನೇ ಹೆಚ್ಚಾಗುತ್ತಿದೆ. ಸಂಬಂಧಿಸಿದ ಗ್ರಾಮ ಪಂಚಾಯ್ತಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕೃತ್ಯ ಎಸಗುತ್ತಿರುವ ಕೋಳಿ ಅಂಗಡಿ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಜತೆಗೆ ಅವರ ಅಂಗಡಿ ಪರವಾನಗಿಯನ್ನೇ ರದ್ದುಪಡಿಸಬೇಕು. ನಿರ್ಜನ ಪ್ರದೇಶಗಳಲ್ಲಿ ಸಮರ್ಪಕವಾಗಿ ವಿಲೇವಾರಿ ಮಾಡಲು ಕಟ್ಟುನಿಟ್ಟಿನ ಸೂಚನೆ ಹೊರಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಮಾಡಿದ್ದಾರೆ. 

ಪಟ್ಟಣ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಕೋಳಿ ಅಂಗಡಿಗಳ ಮಾಲೀಕರಿಗೆ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಲು ಸೂಚಿಸಲಾಗುವುದು. ನಿಯಮ ಅನುಸರಿಸುತ್ತಿದ್ದಾರೆ ಎಂಬುದನ್ನು ಪರಿಶೀಲಿಸಲು ಆರೋಗ್ಯ ವಿಭಾಗದ ಅಧಿಕಾರಿಗಳನ್ನು ಪರಿಶೀಲನೆಗೆ ಕಳುಹಿಸಲಾಗುವುದು. ನಿಯಮ ಉಲ್ಲಂಘನೆ ಮಾಡುವವರಿಗೆ ಪರವಾನಗಿ ರದ್ದುಪಡಿಸಲಾಗುವುದು.
-ಪುಟ್ಟಸ್ವಾಮಿ, ಪೌರಾಯುಕ್ತ

ರಸ್ತೆ ಬದಿಯಲ್ಲಿ ಕೋಳಿ ತ್ಯಾಜ್ಯ ಬಿಸಾಡುವುದರಿಂದ ನಾಯಿಗಳ ಅದನ್ನು ತಿನ್ನಲು ಬಂದು ಪಕ್ಕದಲ್ಲಿ ಪಾದಚಾರಿಗಳ ಮೇಲೆ ಎರಗುತ್ತಿವೆ. ಇದರಿಂದ ರಸ್ತೆ ಸಂಚಾರ ಮಾಡಲು ಭಯವಾಗುತ್ತಿದೆ. ಸಂಬಂಧಪಟ್ಟ ಆಡಳಿತ ಈ ಬಗ್ಗೆ ಗಮನಹರಿಸಿ ಸಮಸ್ಯೆ ಸರಿಪಡಿಸಬೇಕು.
-ಮಹೇಂದ್ರಕುಮಾರ್‌, ಚನ್ನಪಟ್ಟಣ

* ಎಂ.ಶಿವಮಾದು

Advertisement

Udayavani is now on Telegram. Click here to join our channel and stay updated with the latest news.

Next