Advertisement

ಚೆರ್ಕಳ –ಕಲ್ಲಡ್ಕ ಅಂತಾರಾಜ್ಯ ರಸ್ತೆಯಲ್ಲಿ ಹೊಂಡಗಳದ್ದೇ ಸಾಮ್ರಾಜ್ಯ

06:15 AM Aug 01, 2017 | Team Udayavani |

ಕಾಸರಗೋಡು: ಚೆರ್ಕಳ- ಕಲ್ಲಡ್ಕ ಅಂತಾರಾಜ್ಯ ರಸ್ತೆಯುದ್ದಕ್ಕೂ ಬೃಹತ್‌ ಹೊಂಡಗುಂಡಿ ಸೃಷ್ಟಿಯಾಗಿದೆ. ಪಳ್ಳತ್ತಡ್ಕದ ರಸ್ತೆ ಯಲ್ಲಂತೂ ಜೀವಕ್ಕೆ ಕಂಟಕವಾಗುವ ರೀತಿ ಯಲ್ಲಿ ಹೊಂಡಗಳೇ ಕಾಣಿಸುತ್ತವೆ. ಈ ಪ್ರದೇಶದಲ್ಲಿ ರಸ್ತೆಯನ್ನು ಹುಡುಕಬೇಕಾದ ಪರಿಸ್ಥಿತಿಯಿದೆ. ವಾಹನ ಚಾಲಕರು ಈ ರಸ್ತೆಯಲ್ಲಿ ಸಾಗಬೇಕಾದರೆ ಹರಸಾಹಸ ಮಾಡಬೇಕಾಗುತ್ತದೆ. ಅಲ್ಲದೆ ಇದು ಚಾಲಕರಿಗಂತೂ ಸಾಹಸವೇ ಸರಿ. ಹೀಗಿದ್ದರೂ ಸಂಬಂಧಪಟ್ಟವರು ಕಣ್ಣಿದ್ದೂ ಕುರುಡಾಗಿ ವರ್ತಿಸುತ್ತಿದ್ದಾರೆ.

Advertisement

ಚೆರ್ಕಳ – ಕಲ್ಲಡ ಅಂತಾರಾಜ್ಯ ರಸ್ತೆಯಲ್ಲಿ ಪಳ್ಳತ್ತಡ್ಕ ಸೇತುವೆಯಲ್ಲೂ ಬೃಹತ್‌ ಹೊಂಡ ಗುಂಡಿ ಸೃಷ್ಟಿಯಾಗಿದ್ದು, ವಾಹನ ಚಾಲಕರಿಗೆ ತಮ್ಮ ವಾಹನವನ್ನು ಸುಗಮವಾಗಿ ಸಾಗಿಸಲು ಸಾಧ್ಯವಾಗದೆ ಹಿಡಿ ಶಾಪ ಹಾಕುವ ಪರಿಸ್ಥಿತಿ ಎದುರಾಗಿದೆ. ಅಲ್ಲಲ್ಲಿ ಡಾಮರು ಕಿತ್ತು ಹೋಗಿದ್ದು ಯಾವುದೇ ಕ್ಷಣದಲ್ಲೂ ಅಪಾಯಕ್ಕೆ ಕಾರಣವಾಗುವಂತಿದೆ.

ಜನಮಾನಸದಲ್ಲಿ ಪಾತಾಳ ಎಂಬುದಿದೆ ಎಂದು ಹಿಂದಿನಿಂದಲೇ ನಂಬಿಕೊಂಡು ಬಂದವರು. ಆ ಪಾತಾಳ ಹುಡುಕುವ ಅಗತ್ಯವಿಲ್ಲ. ಈ ರಸ್ತೆಯೇ ಪಾತಾಳವಾಗಿ ಗೋಚರಿಸುತ್ತಿದೆ. ರಸ್ತೆಯುದ್ದಕ್ಕೂ ಡಾಮರು ಕಿತ್ತು ಹೋಗಿ ಅಲ್ಲಲ್ಲಿ ಹೊಂಡಗುಂಡಿಯಾಗಿರುವ ಅಂತಾರಾಜ್ಯ ರಸ್ತೆ ಎಂದು ಹೇಳಿಕೊಳ್ಳಲು ನಾಚಿಕೆಯಾಗಬೇಕು. ಚೆರ್ಕಳ, ಎಡನೀರು, ನೆಲ್ಲಿಕಟ್ಟೆ, ಬದಿಯಡ್ಕ, ಪಳ್ಳತ್ತಡ್ಕ ಹೀಗೆ ರಸ್ತೆಯುದ್ದಕ್ಕೂ ರಸ್ತೆ ಕೆಟ್ಟು ಹೋಗಿದ್ದು, ಪಾದಚಾರಿಗಳು ಕೂಡ ರಸ್ತೆಯಲ್ಲಿ ಸುಗಮವಾಗಿ  ನಡೆದುಕೊಂಡು ಹೋಗಲು ಸಾಧ್ಯವಿಲ್ಲದಂತಾಗಿದೆ. ಚೆರ್ಕಳದಿಂದ ಬದಿಯಡ್ಕದ ವರೆಗೆ ರಸ್ತೆಯ ಪರಿಸ್ಥಿತಿ ಅತ್ಯಂತ ಕೆಟ್ಟ ಸ್ಥಿತಿಯಲ್ಲಿದೆ. ಎಡನೀರು ತಿರುವಿನಿಂದ ಎಡನೀರು ಜಂಕ್ಷನ್‌ ವರೆಗೆ ರಸ್ತೆಯಲ್ಲಿ ಹೊಂಡಗಳೇ ಇವೆ. ಇಲ್ಲಿ ರಸ್ತೆಯನ್ನು ದುರ್ಬೀನು ಇಟ್ಟು ನೋಡಿದರೂ ಕಾಣಸಿಗದು. ಎದಿ ರ್ತೋಡು, ನೆಲ್ಲಿಕಟ್ಟೆಯಲ್ಲೂ  ರಸ್ತೆಯ ಸ್ಥಿತಿ ಶೋಚನೀಯವಾಗಿದೆ.

ಮಳೆಗೆ ಮುನ್ನವೇ ಹೊಂಡ!
ಮಳೆ ಆರಂಭಕ್ಕೆ ಮುನ್ನವೇ ಹೊಂಡ ಗುಂಡಿ ಬಿದ್ದು ಶೋಚನೀಯ ಸ್ಥಿತಿಯಲ್ಲಿರುವ ರಸ್ತೆ ದುರಸ್ತಿಗಾಗಿ ವಿವಿಧ ಸಂಘ ಸಂಸ್ಥೆಗಳು ಹಲವು ಬಾರಿ ಲೋಕೋಪಯೋಗಿ ಇಲಾಖೆಯನ್ನು ಆಗ್ರಹಿಸಿದ್ದರೂ ರಸ್ತೆ ದುರಸ್ತಿ ಮಾಡದಿರುವುದರಿಂದ ರಸ್ತೆ ಮತ್ತಷ್ಟು ಕೆಟ್ಟು ಹೋಗಲು ಕಾರಣವಾಯಿತು. ರಸ್ತೆ ಹೊಂಡ ಮುಚ್ಚಿ ಶೀಘ್ರವೇ ದುರಸ್ತಿಗೊಳಿಸದಿದ್ದಲ್ಲಿ ಚಳವಳಿ ನಡೆಸಲು ನೇತೃತ್ವ  ನೀಡಲಾಗುವುದು ಎಂದು ಸ್ಥಳೀಯರು ಮುನ್ನೆಚ್ಚರಿಕೆ ನೀಡಿದ್ದಾರೆ.

ರಸ್ತೆಯುದ್ದಕ್ಕೂ ಹೊಂಡಗುಂಡಿ ಸೃಷ್ಟಿಯಾಗಿರುವುದರಿಂದ ಪದೇ ಪದೇ ವಾಹನ ಅಪಘಾತಕ್ಕೆ ಕಾರಣವಾಗುತ್ತಿದೆ. ಹೊಂಡ ತಪ್ಪಿಸುವ ಯತ್ನದಲ್ಲಿ ಇನ್ನೊಂದು ಹೊಂಡಕ್ಕೆ ಬಿದ್ದು ವಾಹನ ಗಳಲ್ಲಿ ಪ್ರಯಾಣಿಸುವವರು ಗಾಯ ಗೊಳ್ಳುತ್ತಿರುವ ಘಟನೆಗಳು ಸಾಮಾನ್ಯ ವಾಗಿದೆ. ಕೆಲವೊಮ್ಮೆ ಇತರ ವಾಹನ ಗಳಿಗೂ ಸ್ಪರ್ಶಿಸಿ, ಢಿಕ್ಕಿ ಹೊಡೆದು ಹಾನಿಯಾಗುವುದೂ ಇದೆ. ಇದರಿಂದಾಗಿ ವಾಹನ ಚಾಲಕರ ಮತ್ತು ನಿರ್ವಾಹಕರ ಮಧ್ಯೆ ಮಾತಿನ ಚಕಮಕಿ ನಡೆದು ರಸ್ತೆ ತಡೆ ಉಂಟಾಗುತ್ತಿದೆ. ಗರ್ಭಿಣಿ ಮಹಿಳೆಯರಿಗಂತೂ ಈ ರಸ್ತೆಯಲ್ಲಿ ಸಾಗುವುದೆಂದರೆ ಸಾಹಸವೇ ಆಗಿದೆ. ತುಂಬು ಗರ್ಭಿಣಿಯರಾಗಿದ್ದರೆ ವಾಹನ ಗಳಲ್ಲೇ ಹೆರಿಗೆಯಾಗಬಹುದು ಎಂಬಂತ ಸ್ಥಿತಿಯಲ್ಲಿದೆ ರಸ್ತೆ.

Advertisement

ಪಾದಚಾರಿಗಳಿಗೂ ಕಂಟಕ 
ರಸ್ತೆ ಬದಿಯಲ್ಲಿ ನಡೆದು ಹೋಗುವವರ ಮೇಲೂ ವಾಹನಗಳಿಂದ ಕೆಸರು ನೀರಿನ ಅಭಿಷೇಕ ದಿನಂಪ್ರತಿ ನಡೆಯುತ್ತಿದೆ. ಇಂತಹ  ಸಂದರ್ಭಗಳಲ್ಲಿ ಪಾದಚಾರಿಗಳು ವಾಹನ ಚಾಲಕರಿಗೆ ಹಿಡಿ ಶಾಪ ಹಾಕುವುದನ್ನೂ ನೋಡಬಹುದು. ರಸ್ತೆ ಹೊಂಡವನ್ನು ತಪ್ಪಿಸಲು ರಸ್ತೆಯ ಪಕ್ಕಕ್ಕೆ ಸರಿಯುವ ವಾಹನಗಳು ಕಾಲ್ನಡಿಗೆ ಯಲ್ಲಿ ಸಾಗುವ ದಾರಿಹೋಕರಿಗೆ ಢಿಕ್ಕಿ ಹೊಡೆಯುವುದೂ ಇದೆ.

ಹೊಂಡಗುಂಡಿ ರಸ್ತೆಯಲ್ಲಿ ಸುಗಮವಾಗಿಸಾಗಲು ಸಾಧ್ಯವಾಗದಿರುವುದರಿಂದ ಸಾರಿಗೆ ಬಸ್‌ಗಳು ಹಾಗೂ ಖಾಸಗಿ ಬಸ್‌ಗಳಿಗೆ ನಿಗದಿತ ಸಮಯದಲ್ಲಿ ತಲುಪಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಹೊಂಡಗುಂಡಿಗಳಿಲ್ಲದಿದ್ದಲ್ಲಿ ಅತ್ಯಂತ ವೇಗದಲ್ಲಿ ಬಸ್‌ಗಳನ್ನು ಓಡಿಸುವುದರಿಂದಾಗಿ ವಾಹನ ಅಪಘಾತಕ್ಕೂ ಕಾರಣವಾಗುತ್ತಿದೆ. ಈ ರಸ್ತೆಯಲ್ಲಿ ವಾಹನ ಅಪಘಾತ ಸಂಭವಿಸದ ದಿನಗಳೇ ಇಲ್ಲ. ಹೀಗಿದ್ದರೂ ಸಂಬಂಧಪಟ್ಟವರು ಈ ರಸ್ತೆಯ ಬಗ್ಗೆ ಗಮನ ಹರಿಸಿಲ್ಲ. ಅವಗಣನೆಗೆ ತುತ್ತಾಗಿರುವ ಈ ರಸ್ತೆ ದುರಸ್ತಿ ಕಾರ್ಯ ನಡೆಯುವುದಾದರೂ ಎಂದು?

ಚೆರ್ಕಳದಿಂದ ಬದಿಯಡ್ಕ, ಪೆರ್ಲ, ವಿಟ್ಲ ದಾರಿಯಾಗಿ ಕಲ್ಲಡ್ಕಕ್ಕೆ ಬಸ್‌ ಸರ್ವೀಸ್‌ ಇದೇ ರಸ್ತೆಯಲ್ಲಿ ನಡೆಸುತ್ತಿದೆ. ಈ ರಸ್ತೆಯಲ್ಲಿ ಕೇರಳ ಹಾಗೂ ಕರ್ನಾಟಕ ರಾಜ್ಯ ಸಾರಿಗೆ ಬಸ್‌ಗಳು, ಖಾಸಗಿ ಬಸ್‌ಗಳು ಸಹಿತ ನೂರರಷ್ಟು ಬಸ್‌ಗಳು ಪ್ರತಿದಿನ ಸರ್ವೀಸ್‌ ನಡೆಸುತ್ತಿವೆ. ಇದಲ್ಲದೆ ನೂರಾರು ಖಾಸಗಿ  ಶಾಲಾ ಬಸ್‌ಗಳು ಮತ್ತು ಇತರ ವಾಹನಗಳೂ ಇದೇ ರಸ್ತೆಯಲ್ಲಿ ಸಾಗುತ್ತಿವೆ. ಕಾಸರಗೋಡು, ಚೆರ್ಕಳಕ್ಕೆ ತಲುಪಬೇಕಾದ ಪೆರ್ಲ, ಬದಿಯಡ್ಕ, ನೆಲ್ಲಿಕಟ್ಟೆ, ಮುಳ್ಳೇರಿಯ ಮೊದಲಾದೆಡೆಗಳಲ್ಲಿರುವ ಸಾವಿರಾರು ಪ್ರಯಾಣಿಕರು ಬಹುತೇಕ ಆಶ್ರಯಿಸುವುದು ಇದೇ ರಸ್ತೆಯನ್ನು. ಎಡನೀರು ಜಂಕ್ಷನ್‌ನ ವಿವಿಧೆಡೆಗಳಲ್ಲಿ ರಸ್ತೆ ಕಾಂಕ್ರೀಟು ಮಾಡಿದ್ದು ಉಳಿದ ಭಾಗಗಳಲ್ಲಿ ರಸ್ತೆ ಸ್ಥಿತಿ ಅತ್ಯಂತ ಹೀನಾಯ ಸ್ಥಿತಿಯಲ್ಲಿದೆ. ರಸ್ತೆಯಲ್ಲಿ ಹೊಂಡಗಳದ್ದೇ ಸಾಮ್ರಾಜ್ಯ. ರಸ್ತೆ ದಯನೀಯ ಸ್ಥಿತಿಯಲ್ಲಿರುವುದರಿಂದ ಆಟೋ ರಿಕ್ಷಾ, ಟ್ಯಾಕ್ಸಿಗಳು ಬಾಡಿಗೆಗೆ ಸರ್ವೀಸ್‌ ನಡೆಸಲು ನಿರಾಕರಿಸುತ್ತಿವೆ ಎಂದು ಪ್ರಯಾಣಿಕರು ಹೇಳುತ್ತಿದ್ದಾರೆ. ರಸ್ತೆಯಲ್ಲಿ ಸರ್ವೀಸ್‌ ಮಾಡುವ ಬಸ್‌ಗಳ ಬಿಡಿಭಾಗಗಳು ಪದೇ ಪದೇ ಕೆಟ್ಟು ಹೋಗುವುದರಿಂದ ಆಗಾಗ ಬಸ್‌ ಸರ್ವೀಸ್‌ ಮೊಟಕುಗೊಳ್ಳುತ್ತಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

– ಪ್ರದೀಪ್‌ ಬೇಕಲ್‌

Advertisement

Udayavani is now on Telegram. Click here to join our channel and stay updated with the latest news.

Next