Advertisement

ಚೆನ್ನಿಮೂಲೆ: ಪಾಳುಬಿದ್ದ ಕಲ್ಲಿನ ಕೋರೆಯಲ್ಲೂ ನೀರು!

03:16 PM Apr 24, 2017 | Team Udayavani |

ಉಪ್ಪಳ: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲ ಬೇಗೆ. ಕೆರೆ, ಬಾವಿ, ತೋಡು, ಹಳ್ಳ, ನದಿ ಹೀಗೆ ಜಲಸಂಪನ್ಮೂಲಗಳು ಬತ್ತಿ ಹೋಗುತ್ತಿವೆ. ಹೀಗಿರುವಂತೆ ಅಲ್ಲಲ್ಲಿ ಜಲೋದ್ಭವ ಆಗುತ್ತಿರುವುದು ಅಚ್ಚರಿಗೆ ಕಾರಣವಾಗುತ್ತಿದೆ. ಕೆಲವು ದಿನಗಳ ಹಿಂದೆ ಮಂಜೇಶ್ವರ ಗೋವಿಂದ ಪೈ ಸ್ಮಾರಕ  ಸರಕಾರಿ ಕಾಲೇಜು ಪರಿಸರದ ಕಾಲನಿಯ ಸರಕಾರಿ ಬತ್ತಿ ಹೋದ ಬಾವಿಯಲ್ಲಿ ಇದ್ದಕ್ಕಿದ್ದಂತೆ ಜಲೋದ್ಭವ ಆಗಿತ್ತು. ಇದೀಗ ಪೈವಳಿಕೆ ಗ್ರಾಮ ಪಂಚಾಯತ್‌ ಪ್ರದೇಶದಲ್ಲಿ ಪಾಳು ಬಿದ್ದ ಕಲ್ಲಿನ ಕೋರೆಯಲ್ಲಿ ನೀರು ನಿಧಿಯಾಗಿ ಲಭಿಸಿದೆ. ಬತ್ತಿ ಹೋದ ಬರಡು ಭೂಮಿಯಲ್ಲೂ ಅಲ್ಲಲ್ಲಿ ನೀರು ಲಭಿಸುತ್ತಿರುವುದು ಅಚ್ಚರಿಗೆ ಕಾರಣವಾಗುತ್ತಿದೆ.

Advertisement

ಪೈವಳಿಕೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಬಾಯಾರುಪದವಿನಿಂದ ಸುಮಾರು 6 ಕಿ.ಮೀ. ದೂರದಲ್ಲಿರುವ ಚೆನ್ನಿಮೂಲೆಯಲ್ಲಿರುವ ಪಾಳು ಕಲ್ಲಿನ ಕೋರೆಯೊಂದರಲ್ಲಿ ಅಚ್ಚರಿ ಎಂಬಂತೆ ನೀರು ಸಿಕ್ಕಿದೆ. ಕಲ್ಲಿನ ಕೋರೆಯಲ್ಲಿ ನೀರು ಲಭಿಸಿರುವುದರಿಂದ ಗ್ರಾಮಸ್ಥರಲ್ಲಿ ಅಚ್ಚರಿ ಹಾಗೂ ಸಂತಸ ಮೂಡಿಸಿದೆ. ಸುಡು ಬೇಸಿಗೆಯಲ್ಲಿ ನೀರಿಗಾಗಿ ಹಾಹಾಕಾರ ಎನ್ನುವ ಸಂದರ್ಭದಲ್ಲೇ ಪಣೆಯ ಮಾಲಕ ಜೆಸಿಬಿ ಯಂತ್ರದ ಮೂಲಕ ತೋಡಿದ ಗುಂಡಿಯಲ್ಲಿ ನೀರು ಸಿಕ್ಕಿದ್ದು ಅಚ್ಚರಿಯ ಸಂಗತಿಯಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

ಚೆನ್ನಿಮೂಲೆಯಲ್ಲಿ ಮೂರು ವರ್ಷಗಳ ಹಿಂದೆ ಕೆಂಪು ಕಲ್ಲಿನ ಪಣೆಯೊಂದನ್ನು ಆರಂಭಿಸಲಾಗಿತ್ತು. ಸುಮಾರು 20 ಅಡಿ ಆಳಕ್ಕೆ ಹೋದಾಗ ಅಲ್ಲಿ ಮಣ್ಣು ಸಿಕ್ಕಿದ್ದರಿಂದ ಪಣೆಯನ್ನು ಅರ್ಧದಲ್ಲಿ ನಿಲ್ಲಿಸಲಾಯಿತು. ಬದಲಾಗಿ ಅಲ್ಲಿಯೇ ಸಮೀಪದ ಇನ್ನೊಂದು ಸ್ಥಳದಲ್ಲಿ ಕೆಂಪು ಕಲ್ಲಿನ ಕೋರೆ ಆರಂಭಿಸಲಾಗಿತ್ತು. ಬಿರು ಬಿಸಿಲಿನ ನಡುವೆ ಕೆಲವು ದಿನಗಳ ಹಿಂದೆ ಜೆಸಿಬಿ ಬಳಸಿ ಹಳೆ ಕೋರೆ(ಪಣೆಯಲ್ಲಿ)ಯಲ್ಲಿ ಒಂದು ಗುಂಡಿಯನ್ನು ತೋಡಿದಾಗ ನೀರಿನ ಸಣ್ಣ ಒರತೆ ಕಾಣಿಸಿತು. ಸುಮಾರು 7 ರಿಂದ ಹತ್ತು ಅಡಿ ಆಳವಿರುವ ಗುಂಡಿಯಲ್ಲಿ ನೀರು ಸಿಕ್ಕಿರುವುದು ಸಂತಸ ತಂದಿದೆ ಎನ್ನುತ್ತಾರೆ ಕೋರೆ ಮಾಲಕ ಮಹಮ್ಮದ್‌ ಬಂದ್ಯೋಡು. ಬೇಸಿಗೆ ಸಮಯ ಕೋರೆಯಲ್ಲಿ ದುಡಿಯುವ ಕಾರ್ಮಿಕರಿಗಾಗಿ ಬಹಳಷ್ಟು ನೀರಿನ ಆವಶ್ಯಕತೆ ಇತ್ತು. ಸಮೀಪದ ಜಲನಿಧಿ ಟ್ಯಾಂಕ್‌ನಲ್ಲಿಯೂ ನೀರು ಇಲ್ಲದಾಯಿತು. ಆ ವೇಳೆ ಜೆಸಿಬಿ ಮೂಲಕ ಸಣ್ಣಗುಂಡಿ ತೋಡಿಸಿದ್ದು ಇದರಲ್ಲಿ ನೀರು ಸಿಕ್ಕಿದೆ. ಇದು ಕಾರ್ಮಿಕರ ಕುಡಿಯುವ ಹಾಗು ಅಡುಗೆ ಆವಶ್ಯಕತೆಯನ್ನು ಪೂರೈಸಿದೆ. ಹೆಚ್ಚಿನ ನೀರು ಸಮೀಪದ ಮನೆ ಮಂದಿ ಕೊಂಡೊಯ್ಯುತ್ತಿದ್ದಾರೆ ಎಂದು ಮಹಮ್ಮದ್‌ ಸಂತಸದಿಂದಲೇ ಹೇಳುತ್ತಿದ್ದಾರೆ.
ಸ್ಥಳಿಯಾಡಳಿತ ಆಸಕ್ತಿ ವಹಿಸಿ ಸಣ್ಣಗುಂಡಿಯನ್ನು ಬಾವಿ ರೂಪದಲ್ಲಿ ಅಗಲೀಕರಿಸಿ ಜಲನಿಧಿ ಆವಶ್ಯಕತೆಗಾಗಿ ನೀರನ್ನು ಪೂರೈಸ ಬಹುದು ಎನ್ನುತ್ತಾರೆ ಅವರು. ಎತ್ತರದ ಪ್ರದೇಶದಲ್ಲಿರುವ ಈ ಕಲ್ಲಿನ ಕೋರೆಯಲ್ಲಿ ಹೇಗೆ ನೀರು ಸಿಕ್ಕಿದೆ ಎನ್ನುವುದು ಅಚ್ಚರಿಗೆ ಕಾರಣವಾಗಿದೆ!

ಮಳೆಗಾಲದಲ್ಲಿ ಇಂಗು ಗುಂಡಿ : ನೀರಿನ ಒರತೆ ಕಾಣಿಸಿಕೊಂಡ ಕಲ್ಲಿನ ಕೋರೆಯನ್ನು ಮಳೆಗಾಲದ ಸಂದರ್ಭದಲ್ಲಿ ನೀರು ಶೇಖರಿಸುವ ಇಂಗು ಗುಂಡಿಯಾಗಿ ಪರಿವರ್ತಿಸಲಾಗುವುದು. 

ಸುಮಾರು 20 ಅಡಿ ಆಳವಿರುವ ಈ ಪಣೆಯಲ್ಲಿ ನೀರು ಇಂಗಿಸಿದರೆ ಹೆಚ್ಚು ಪ್ರಯೋಜನಕಾರಿಯಾಗಬಲ್ಲುದು. ಜಿಲ್ಲೆಯಲ್ಲಿನ ಇತರ ಪಾಳು ಪಣೆಗಳಲ್ಲಿಯೂ ಹೊರ ರಕ್ಷಣಾ ಗೋಡೆ ನಿರ್ಮಿಸಿ ನೀರು ಶೇಖರಿಸಿ, ಇಂಗಿಸುವ ಕ್ರಮವನ್ನು ಅನುಸರಿಸಿದರೆ ಬೇಸಿಗೆ ಕಾಲದಲ್ಲಿ ನೀರಿನ ûಾಮವನ್ನು ನಿವಾರಿಸಬಹುದು ಎಂಬ ಭರವಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ ಮುಹಮ್ಮದ್‌ ಬಂದ್ಯೋಡು.

Advertisement
Advertisement

Udayavani is now on Telegram. Click here to join our channel and stay updated with the latest news.

Next