Advertisement

ಚಾರ್ಮಾಡಿ ಬಸ್ ತಡೆದ ಘಟನೆ; ಕರ್ತವ್ಯಕ್ಕೆ ಅಡ್ಡಿ ದೂರು: ಮೂವರು ವಶಕ್ಕೆ

10:04 PM Jun 19, 2023 | Team Udayavani |

ಬೆಳ್ತಂಗಡಿ: ಚಾರ್ಮಾಡಿಯಲ್ಲಿ ಬಸ್‌ ತಡೆ ಹಿಡಿದು ಗಲಾಟೆ ನಡೆಸಿ ನಿರ್ವಾಹಕ ಹಾಗೂ ಚಾಲಕನ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಬಗ್ಗೆ ಬಸ್‌ ನಿರ್ವಾಹಕ ದೂರು ನೀಡಿದಂತೆ ಮೂವರನ್ನು ಧರ್ಮಸ್ಥಳ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Advertisement

ಘಟನೆಗೆ ಸಂಬಂಧಿಸಿ ಚಾರ್ಮಾಡಿ ಗ್ರಾಮದ ಮಹಮ್ಮದ್‌ ಶಬೀರ್‌ (21), ಮಹಮ್ಮದ್‌ ಮಹಾರೂಫ್‌ (22) ಹಾಗೂ ಮಹಮ್ಮದ್‌ ಮುಬಶೀರ್‌ (23) ಎಂಬವರನ್ನು ರವಿವಾರ ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.

ಶನಿವಾರ ಸಂಜೆ ಮಂಗಳೂರಿನಿಂದ ಮೂಡಿಗೆರೆಗೆ ತೆರಳುತ್ತಿದ್ದ ಮೂಡಿಗೆರೆ ಡಿಪೋದ ಕೆ.ಎಸ್‌. ಆರ್‌.ಟಿ.ಸಿ.ಬಸ್‌ಗೆ ಉಜಿರೆಯಲ್ಲಿ ಬಸ್‌ ಹತ್ತಿದ ಚಾರ್ಮಾಡಿ ಕಡೆಯ ವಿದ್ಯಾರ್ಥಿಗಳು ಹತ್ತಾರು ಮಂದಿ ಬಾಗಿಲಲ್ಲಿ ನೇತಾಡುತ್ತಿದ್ದ ಸಂದರ್ಭ ನಿರ್ವಾಹಕ ಶಿವಕುಮಾರ್‌ ಅವರನ್ನು ಬಸ್‌ ಒಳಗೆ ತೆರಳುವಂತೆ ಅಥವಾ ಹಿಂದಿನಿಂದ ಬರುವ ಬಸ್‌ನಲ್ಲಿ ಬರಲು ತಿಳಿಸಿದ್ದಾರೆ. ಇದಕ್ಕೆ ನಿರ್ವಾಹಕನಿಗೆ ಬಸ್‌ ನಿನ್ನ ಅಪ್ಪನದ್ದ ನಾನು ಇದೇ ಬಸ್ಸಿನಲ್ಲಿ ಪ್ರಯಾಣಿಸುತ್ತೇನೆ ಎಂದು ಅವಾಚ್ಯ ಪದದಿಂದ ಬೈದು ಮಾತಿನ ಚಕಮಕಿ ಉಂಟಾಗಿದೆ.

ಈ ವೇಳೆ ಉಳಿದ 20ಕ್ಕೂ ಅಧಿಕ ವಿದ್ಯಾರ್ಥಿಗಳು ನಿರ್ವಾಹಕನ ಬಳಿಗೆ ಬಂದು ಬೆದರಿಕೆಯೊಡ್ಡಿದ್ದಾರೆ. ಬಳಿಕ ಬಸ್‌ ಮುಂದೆ ತೆರಳಿ ಸಂಜೆ 6ಗಂಟೆಗೆ ಚಾರ್ಮಾಡಿ ಬಳಿ ಬಸ್‌ ತಲುಪಿದಾಗ, ಗುಂಪೊಂದು ತಡೆ ಹಿಡಿದು ಅಲ್ಲಿ ಮತ್ತೆ ಗಲಾಟೆ ಉಂಟುಮಾಡಿದ ಕುರಿತು ದೂರಿನಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next