Advertisement

ಸಾರೋಟಲ್ಲಿ ಮೆರವಣಿಗೆ ಮಾಡಿಸಿಕೊಂಡಿದ್ದರಿಂದ ಶನಿ ಹೆಗಲೇರಿದ್ದ: ಜಿಟಿಡಿ

09:19 PM Mar 19, 2023 | Team Udayavani |

ಹುಣಸೂರು: ಪುತ್ರ ಹರೀಶ್‌ಗೌಡನನ್ನು ನಿಮ್ಮ ಮಡಿಲಿಗೆ ಹಾಕಿದ್ದೀನಿ, ಪಟ್ಟದ ಅಧಿಕಾರ ಹುಣಸೂರಿನಿಂದಲೇ ಆಗಬೇಕು.ಇಲ್ಲಿಂದಲೇ ಅಧಿಕಾರ ಸಿಗಬೇಕು. ತಾಯಂದಿರು ಆಶಿರ್ವದಿಸಬೇಕೆಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಮನವಿ ಮಾಡಿದರು.

Advertisement

ಹುಣಸೂರಿನ ಕಲ್ಕುಣಿಕೆಯಲ್ಲಿ ವಿವಿಧ ಸಮುದಾಯಗಳ ಮುಖಂಡರು ಆಯೋಜಿಸಿದ್ದ ಜೆಡಿಎಸ್ ಪಕ್ಷ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಹುಣಸೂರಲ್ಲಿ ಎರಡು ಬಾರಿ ಶಾಸಕ, ಮಂತ್ರಿಯಾಗಿದ್ದ ಅವಧಿಯಲ್ಲಿ ನಗರಕ್ಕೆ ಕೆ.ಆರ್.ನಗರದಿಂದ ಕಾವೇರಿ ನೀರುಪೂರೈಕೆ, ನೀರಾವರಿ ಯೋಜನೆ ಮೂಲಕ 35 ಸಾವಿರ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಪೂರೈಕೆ, ಹಾರಂಗಿ ನಾಲೆಗಳ ಅಭಿವೃದ್ದಿ, 75 ನೀರಿನ ಟ್ಯಾಂಕ್ ನಿರ್ಮಾಣ, ಶಾಲಾ-ಕಾಲೇಜು, ಅಸ್ಪತ್ರೆ, ಪಶುಆಸ್ಪತ್ರೆ ಮಂಜೂರು, ರಸ್ತೆಗಳ ಅಭಿವೃದ್ದಿ, ನಾಲ್ಕು ಸಬ್ ಸ್ಟೇಷನ್ ಮಾಡಿಸಿದ್ದೆ, ಸೇತುವೆ ನಿರ್ಮಾಣ, ನಗರದ ರಸ್ತೆ ಅಭಿವೃದ್ದಿ, ಎಂಎಲ್‌ಸಿಯಾಗಿದ್ದ ಚಿಕ್ಕಮಾದುರಿಂದ ಸಾಗುವಳಿ ವಿತರಣೆ, ಹೀಗೆ ಸಮಗ್ರ ಅಭಿವೃದ್ದಿ ಮಾಡಿಸಿರುವ ಹೆಮ್ಮೆ ಇದೆ. ಇದಕ್ಕೆ ವಿರೋಧಿ ಎನ್ನುತ್ತೀರಾ ಎಂದು ಪ್ರಶ್ನಿಸಿದರು.

ಅಂಬೇಡ್ಕರ್,ವಾಲ್ಮೀಕಿ, ಜಗಜೀವನರಾಂ ಸಮುದಾಯ ಭವನಕ್ಕೆ ಅನುದಾನ, ಕುರುಬ ಸಮುದಾಯ ಭವನಕ್ಕೆ 1.25 ಕೋಟಿ ಮಂಜೂರು ಮಾಡಿಸಿದ್ದೆ, ಸಿದ್ದರಾಮಯ್ಯ ಒಂದು ಕೋಟಿ ಕೊಟ್ಟಿದ್ದಾರೆ ಅಂತಾರಲ್ಲಾ, ಸರಿನಾ ಎಂದು ಪ್ರಶ್ನಿಸಿದ ಅವರು 25 ವರ್ಷ ಸಿದ್ದರಾಮಯ್ಯರ ಗೆಲುವಿಗೆ ದುಡಿದಿದ್ದೇನೆ. ಅಂದು ದೇವೇಗೌಡ್ರು, ಕುಮಾರಸ್ವಾಮಿರನ್ನ ಮನವೊಲಿಸಿ ಕುರುಬ ಸಮಾಜದ ಪೆಟ್ರೋಲ್‌ಬಂಕ್ ಕುಮಾರಸ್ವಾಮಿ, ಎಚ್.ವಿಶ್ವನಾಥ್ ಅವರಿಗೆ ಟಿಕೆಟ್ ಕೊಡಿಸಿದ್ದು, ಸಾ.ರಾ.ಮಹೇಶ್, ಕೆ.ಮಹದೇವ್, ಅಶ್ವಿನ್‌ಗೆ ಗೆಲ್ಲಿಸಿದ್ದೇನೆ, ಫಜಲ್, ಗಿರಿಜನ ಮಹಿಳೆ ಜಾಜಿಯಮ್ಮನನ್ನು ಗೆಲ್ಲಿಸಿದ್ದೆ, ರಮೇಶ,ಕಣ್ಣಯ್ಯ, ಲಕ್ಷ್ಮಣನಿಗೆ ಅಧಿಕಾರ ಕೊಡಿಸಿದ್ದೆ. ದಲಿತ ಪುಟ್ಟಮಾದಯ್ಯನಿಗೆ ಅಧ್ಯಕ್ಷರನ್ನಾಗಿ ಮಾಡಿದೆ ಎಂದರು.

ಶನಿದೇವರು ಹೆಗಲೇರಿದ
ನಗರದ ಬೀದಿಗಳಲ್ಲಿ ವೈರ್ ನೇತಾಡುತ್ತಿತ್ತು ಹೊಸದಾಗಿ ೩೫೦೦ ವಿದ್ಯುತ್ ಕಂಬ ಬದಲಾಯಿಸಿದೆ. ಸೇತುವೆ ಕಟ್ಟಿಸಿದೆ.15 ಎಕರೆ ಜಾಗ ಇದೆ.15 ವರ್ಷದಿಂದ ನಿವೇಶನ ಕೊಟ್ಟಿಲ್ಲ. ತಾಲೂಕಿನ ರಸ್ತೆಗಳ ಅಭಿವೃದ್ದಿ, ಹೊಸ ಆಸ್ಪತ್ರೆ,ಶಾಲಾ-ಕಾಲೇಜು ನಿರ್ಮಾಣ, ಕೆರೆ ನೀರು ತುಂಬಿಸಿದ್ದೆ. ಕಟ್ಟೆಮಳಲವಾಡಿ ನಾಲೆ ಅಭಿವೃದ್ದಿಗೊಳಿಸಿ ೩೫ ಬೃಹತ್ ನೀರಾವರಿಗೆ ಸೇರಿಸಿದೆ. ನಿಮ್ಮ ಮಕ್ಕಳು ವಿದ್ಯಾವಂತರಾಗಿದ್ದಾರೆಂದರೆ ಈ ಜಿಟಿಡಿ ಶ್ರಮ ಇದೆ. ಆಕಸ್ಮಿಕವಾಗಿ ಹುಣಸೂರಿಗೆ ಬಂದೆ. ಚಿಕ್ಕಮಾದು ನನ್ನನ್ನು ಜೋಡಿ ಸಾರೋಟಿನಲ್ಲಿ ಮೆರವಣಿಗೆ ಮಾಡಿಸಿದ್ದರು. ಶನಿದೇವರು ಹೆಗಲೇರಿದ ಚಿಕ್ಕಮಾದು ನಾನು ಇಬ್ಬರೂ ಸೋತು ಹೋದೆವೆಂದು ಮಾರ್ಮಿಕವಾಗಿ ನುಡಿದರು.

ತ್ಯಾಗ ಮಾಡೋರಿಗೆ ವ್ಯಾಪಾರ ಮಾಡೋರು ಸವಾಲ್ ಹಾಕ್ತಿಯಪ್ಪ
ಕುಮಾರಣ್ಣ, ರೇವಣ್ಣ, ಸಿದ್ದರಾಮಯ್ಯನವರ ಬೆಂಬಲದಿಂದ ಅಭಿವೃದ್ದಿಗೊಳಿಸಿದ್ದೆ. ಶೆಟ್ರು ರಿಯಲ್ ಎಸ್ಟೇಟ್, ಮೈನ್ಸ್ ಮಾಡಿ ಎಲೆಕ್ಷನ್‌ಗೆ ಆಗುವಷ್ಟು ದುಡ್ಡು ಇಟ್ಟಿದ್ದೀಯಪ್ಪಾ, ದುಡ್ಡು ತಗೊಳ್ಳಿ ಬಿಡಬೇಡಿ.ಆದರೆ ಕುಮಾರಣ್ಣನಿಗೆ ಬೆಂಬಲ ಕೊಡಿ. ನನ್ನ ಅನುದಾನವನ್ನೂ ಹುಣಸೂರಿಗೆ ಕೊಡುತ್ತೇನೆ. ಹರೀಶ್ ಗೌಡನಿಗೆ ಬೆಂಬಲ ಕೊಡಿ ಎಂದರು.

Advertisement

ಪೊಲೀಸರು ನ್ಯಾಯಕೊಡಿ
ಪೊಲೀಸರು ನ್ಯಾಯದ ಪರವಾಗಿರ್ರೀ, ಕಾಂಗ್ರೆಸ್‌ನವರ ಪರವಾಗಿ ಎಷ್ಟು ದಿನ ಕೆಲಸ ಮಾಡುತ್ತೀರಾ. ಎಷ್ಟು ದಿನ ಉಳಿತೀರಾ, ಕೇಸ್ ಹಾಕ್ತಿರಾ, ಇನ್ನು 15 ದಿನದಲ್ಲಿ ಎಲ್ಲಾ ಮುಗೀತು. ನಿಮ್ಮ ಆಟ ನಡೆಯಲ್ಲ. ವಕೀಲನಿಗೆ ಕುತ್ತಿಗೆ ಪಟ್ಟಿ ಹಿಡಿದು ಹೊಡೀತಾರಾ, ಯಾರು ರೌಡಿ. ಈ ಎಂಎಲ್‌ಎ ಕೇಸ್ ಹಾಕಿಸುವುದಕ್ಕೆ ಇರೋದು ನಮ್ಮ ಸರ್ಕಾರ ಬಂದರೆ ಎಲ್ಲಾ ಕೇಸ್‌ಗಳನ್ನು ಬಿ.ರಿಪೋರ್ಟ್ ಹಾಕಿಸುತ್ತೇನೆ. ಜನರು ತಾಳ್ಮೆಯಿಂದಿರಿ ಹೆದರ ಬೇಡಿ ಎಂದು ಗೆಲುವಿನ ವಿಶ್ವಾಸದ ಮಾತುಗಳನ್ನಾಡಿದರು.

ತಾಲ್ಲೂಕು ಅಧ್ಯಕ್ಷ ದೇವರಾಜಒಡೆಯರ್, ಜಿ.ಪಂ.ಸದಸ್ಯ ಮಾಜಿ ಫಜಲುಲ್ಲಾ, ರಂಜಿತಾ ಚಿಕ್ಕಮಾದು, ಪುರಸಭೆ ಸದಸ್ಯರಾದ ಮಾಜಿ ಕಲ್ಕುಣಿಕೆ ಆನಂದ್, ದೇವರಾಜ್, ಪಕ್ಷದ ವಕ್ತಾರ ಎಂ.ಶಿವಕುಮಾರ್ ಮಾತನಾಡಿ ತಾಲೂಕಿನಲ್ಲಿ ಹಿಟ್ಲರ್ ಆಡಳಿತವಿದ್ದು ಕೊನೆಗಾಣಿಸಬೇಕೆಂದರು.

ಅಫೆಕ್ಸ್ ಬ್ಯಾಂಕ್ ಅಧ್ಯಕ್ಷ, ನಿಯೋಜಿತ ಜೆಡಿಎಸ್ ಅಭ್ಯರ್ಥಿ ಜಿ.ಡಿ.ಹರೀಶ್‌ಗೌಡ ಮಾತನಾಡಿ ಯಾವುದೇ ಉತ್ಸವ ಆರಂಭವಾಗೋದು ಕಲ್ಕುಣಿಕೆಯ ರಂಗನಾಥ ಬಡಾವಣೆಯಿಂದ. ಇಂದು ಜೆಡಿಎಸ್ ಉತ್ಸವ ಇಲ್ಲಿಂದಲೇ ಪ್ರಾರಂಭ ಮಾಡಿದ್ದು, ಮುಂದಿನ ಚುನಾವಣೆಯಲ್ಲಿ ಈ ಉತ್ಸವ ವಿಧಾನಸೌದ ಪ್ರವೇಶಿಸಲಿದೆ. ಕಲ್ಕುಣಿಕೆಯಲ್ಲಿ ಒಗ್ಗಟ್ಟಿದೆ. ಜಿಟಿಡಿಯವರು ಶಾಸಕ, ಸಚಿವರಾದ ವೇಳೆ ಬೆಂಬಲ ನೀಡಿದ್ದರಿಂದ ಪಟ್ಟಣಕ್ಕೆ ಕಾವೇರಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದರು. ಇದಕ್ಕೆ ಜನಾಶೀರ್ವಾದ ಕಾರಣ. ಕಾವೇರಿ ನೀರು ವಿಸ್ತರಿಸಲು ಇಂದಿಗೂ ಸಾಧ್ಯವಾಗಿಲ್ಲ.ತಾಲೂಕಿನಲ್ಲಿ ಮುಖ್ಯರಸ್ತೆ ಆಗಿಲ್ಲ.ಎಲ್ಲರ ಪ್ರೀತಿ ಆಶಿರ್ವಾದ ನನ್ನ ಮೇಲಿರಲಿ ಅಭಿವೃದ್ದಿ ಮಾಡಲು ನಾನು ಬದ್ದ ಎಂದರು.

ಹರೀಶ್ ಗೌಡ ಬಂದಿದ್ದಾನೆ, ದಬ್ಬಾಳಿಕೆ ಮಾಡುತ್ತಾನೆ ಎನ್ನುತ್ತಿದ್ದಾರೆ. ನನ್ನ ಮೇಲೂ ಕೇಸ್ ಹಾಕಿಸಿದ್ದಾರೆ. ಪೋಟೋ ಹಾಕಿಕೊಂಡರೆ ಪೊಲೀಸರಿಂದ ಪೋನ್ ಮಾಡಿಸುತ್ತಾರೆ. ತಾಲೂಕಿನಲ್ಲಿ ೧೫ ವರ್ಷದಿಂದೀಚೆಗೆ ಕಾಂಗ್ರೆಸ್‌ನಲ್ಲಿ ಒಬ್ಬ ನಾಯಕನೆಂದು ಹೇಳಿಕೊಳ್ಳುವವರು ಯಾರೂ ಇಲ್ಲ. ಯಾರಿಗೆ ಪ್ರಾತಿನಿತ್ಯ ಕೊಟ್ಟಿದ್ದೀರಾ.15ವರ್ಷಗಳ ಹಿಂದೆ ಗಾರ್ಮೆಂಟ್ಸ್ ತರುತ್ತೇನೆ ಎಂದ್ದೀರಿ. ಈಗ 2 ಸಾವಿರ ಗ್ಯಾರಂಟಿ ಎನ್ನುತ್ತೀದ್ದೀರಾ ನಿಮ್ಮ 2 ನೇ ಅವತಾರ ಇದು. ಅಪ ಪ್ರಚಾರ ನಿಲ್ಲಿಸಿ. ನಾನೇ ವೆಚ್ಚ ಭರಿಸಿ ಕಸಬಾ ಸೊಸೈಟಿ ಕಟ್ಟಡ ನಿರ್ಮಿಸಿಕೊಟ್ಟಿದ್ದೀನಿ. ಸೊಸೈಟಿ ವತಿಯಿಂದ 2.5 ಕೋಟಿ ಸಾಲ ಮನ್ನಾ ಆಗಿದೆ.ಕುಮಾರಣ್ಣ ಮಾತಿಗೆ ತಪ್ಪಿಲ್ಲ, ಖಂಡಿತಾ ಸಾಲ ಮನ್ನಾ ಮಾಡುತ್ತಾರೆ ಎಂದರು.

ನಮ್ಮ ಮತದಾರರು, ಮಹಿಳೆಯರು, ಮುಗ್ದರಲ್ಲ. ಚುನಾವಣೆಯಲ್ಲಿ ಈ ಹರೀಶನನ್ನು ಹರಸಿ, ಜೆಡಿಎಸ್ ಬೆಂಬಲಿಸುವಂತೆ ಮನವಿ ಮಾಡಿದರು.

ಈ ವೇಳೆ ದೇವರಾಜ ಒಡೆಯರ್,ಯಶೋಧ,ರಂಜಿತಾ, ಶಿವಕುಮಾರ್, ಸತೀಶ್‌ಕುಮಾರ್,ಪಾಂಡು, ಆನಂದ,ಕೃಷ್ಣನಾಯಕ,ಕಾವೇರಿ ದಿನೇಶ್ ಸೇರಿದಂತೆ ಸಾವಿರಕ್ಕೂ ಹೆಚ್ಚು ಂಮದಿ ಭಾಗವಹಿಸಿದ್ದರು.

ಮೆರವಣಿಗೆ
ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸುತ್ತಾ. ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಹಾಗೂ ನಿಯೋಜಿತ ಅಭ್ಯರ್ಥಿ ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‌ಗೌಡರನ್ನು ಕಲ್ಕುಣಿಕೆ ಸರ್ಕಲ್‌ನಿಂದ ರಂಗನಾಥ ಬಡಾವಣೆವರೆಗೆ ನಗಾರಿ, ದೊಳ್ಳು ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಸಿದರು, ಮೂಲಕ ಕರೆತಂದು ನಂತರ ವೇದಿಕೆ ಕಾರ್ಯಕ್ರಮ ನಡೆಸಿದರು. ಹಲವರು ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next