Advertisement

ಬೆಳೆಗಾರರೇ ಸ್ಥಾಪಿಸಿರುವ ತೆಂಗು ಸಂಸ್ಕರಣೆ ಘಟಕ ಲೋಕಾರ್ಪಣೆ

03:44 PM Sep 19, 2020 | Suhan S |

ಚಾಮರಾಜನಗರ: ಸಹಕಾರ ತತ್ವದಡಿ ರಾಜ್ಯದಲ್ಲೇ ಮೊದಲ ಬಾರಿಗೆ ತೆಂಗು ಬೆಳೆಗಾರರೇ ತಾಲೂಕಿನ ಮುಣಚನಹಳ್ಳಿ ಬಳಿ ಸ್ಥಾಪಿಸಿರುವ ಚಾಮರಾಜನಗರ ತಾಲೂಕು ತೆಂಗು ಬೆಳೆಗಾರರ ಸಂಸ್ಕರಣ ಮತ್ತು ಮಾರಾಟ ಸಹಕಾರ ಸಂಘದ ತೆಂಗು ಸಂಸ್ಕರಣಾ ಘಟಕವನ್ನು ಶುಕ್ರವಾರ ಲೋಕಾರ್ಪಣೆ ಮಾಡಲಾಯಿತು.

Advertisement

ಸುತ್ತೂರು ಕ್ಷೇತ್ರದ ಶಿವರಾತ್ರಿ ದೇಶಿಕೇಂದ್ರಮಹಾಸ್ವಾಮೀಜಿ ಅವರು ಆನ್‌ಲೈನ್‌ ಮೂಲಕ ಕಾರ್ಯಕ್ರಮದ ಉದ್ಘಾಟಿಸಿ ಆಶೀರ್ವಚನ ನೀಡಿದರು. 9 ಕೋಟಿ ರೂ.ವೆಚ್ಚದ ತೆಂಗು ಸಂಸ್ಕರಣ ಘಟಕ ಉದ್ಘಾಟಿಸಿ ಮಾತನಾಡಿದ ಸಚಿವ ಎಸ್‌. ಸುರೇಶ್‌ಕುಮಾರ್‌, ಘಟಕವು ರೈತರ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ನಾವು ಎಲ್ಲರಿಗಾಗಿ ಎಲ್ಲರೂ ನಮಗಾಗಿ ಎಂಬ ಸಹಕಾರ ತತ್ವವನ್ನು ಅನುಸರಿಸಿದಾಗ ಅಭಿವೃದ್ಧಿ ಸಾಧ್ಯ ಎಂದರು.

ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌, ಸುವರ್ಣ ಕಲ್ಪತರು ಬ್ರಾಂಡಿನ ತೆಂಗಿನ ಪುಡಿ ಪ್ಯಾಕೆಟ್‌ ಬಿಡುಗಡೆಗೊಳಿಸಿ ಮಾತನಾಡಿ, ಸಹಕಾರ ಆಡಳಿತದಲ್ಲಿ ಒಬ್ಬರಿಗೊಬ್ಬರು ಸಹಕಾರ ನೀಡಿದಾಗ ಮಾತ್ರ ಬೆಳೆವಣಿಗೆ ಹೊಂದಲು ಸಾಧ್ಯ. ಆಡಳಿತ ಮಂಡಳಿಯಲ್ಲಿ ಬದ್ಧತೆ, ಸಾರ್ವಜನಿಕರ ವಿಶ್ವಾಸಗಳಿಸಿದಾಗ ಸಹಕಾರ ಸಂಘಗಳು ಅಭಿವೃದ್ಧಿಯಾಗಲಿವೆ ಎಂದು ತಿಳಿಸಿದರು.

ಅ.2ಕ್ಕೆ ಆರ್ಥಿಕ ಸ್ಪಂದನೆ: ಕೋವಿಡ್‌ ಹಿನ್ನೆಲೆಯಲ್ಲಿ ಆರ್ಥಿಕ ತೊಂದರೆಗೆ ಒಳಗಾಗಿರುವ ಸಣ್ಣ ರೈತರು, ಅತಿ ಸಣ್ಣ ರೈತರು, ವ್ಯಾಪಾರಸ್ಥರು, ಉದ್ದಿಮೆದಾರರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿರುವವರಿಗೆ ನೆರವಾಗಲು ವಿಭಾಗ ಮಟ್ಟದಲ್ಲೂ ಆರ್ಥಿಕ ಸ್ಪಂದನೆಕಾರ್ಯಕ್ರಮಕ್ಕೆ ಮೈಸೂರಿನಲ್ಲಿ ಅಕ್ಟೋಬರ್‌ 2 ರಂದು ಚಾಲನೆ ನೀಡಲಾಗುತ್ತಿದೆ. 8 ಸಾವಿರದಿಂದ 4 ಲಕ್ಷ ರೂ ವರೆಗೆ ಸಾಲ ಸೌಲಭ್ಯ ನೀಡುವ ಉದ್ದೇಶ ಹೊಂದಲಾಗಿದೆ ಎಂದರು. ಶಾಸಕ ಸಿ. ಪುಟ್ಟರಂಗಶೆಟ್ಟಿ ಮಾತನಾಡಿ, ಜಿಲ್ಲೆಯಲ್ಲಿ ತೆರೆದಿರುವ ತೆಂಗು ಸಂಸ್ಕರಣ ಘಟಕದ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ಸಹಕಾರ ಇಲಾಖೆ ಬಿಡುಗಡೆ ಮಾಡಬೇಕು ಎಂದು ಕೋರಿದರು.

ಪ್ರೋ ಎಂ.ಡಿ. ನಂಜುಂಡಸ್ವಾಮಿ ಪುತ್ಥಳಿಯನ್ನು ಚಿಂತಕ ಪ. ಮಲ್ಲೇಶ್‌ ಅನಾವರಣಗೊಳಿಸಿದರು. ಈ ವೇಳೆ ಶಾಸಕರಾದ ಆರ್‌. ನರೇಂದ್ರ, ಸಿ.ಎಸ್‌. ನಿರಂಜನ್‌ಕುಮಾರ್‌, ತೆಂಗು ಬೆಳೆಗಾರರ ಸಂಸ್ಕರಣ ಮತ್ತು ಮಾರಾಟ ಸಹಕಾರ ಸಂಘದ ಅಧ್ಯಕ್ಷ ಎಂ.ಎಂ.ಮಹೇಶ್‌, ಜಿಪಂ ಅಧ್ಯಕ್ಷೆ ಎಂ. ಅಶ್ವಿ‌ನಿ, ಸದಸ್ಯರಾದ ಸಿ.ಎನ್‌. ಬಾಲರಾಜು, ತಾಪಂ ಉಪಾಧ್ಯಕ್ಷ ಕೆ.ರವೀಶ್‌, ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಜಿಲ್ಲಾಧ್ಯಕ್ಷ ಹೆಬ್ಬಸೂರು ಬಸವಣ್ಣ, ಜಿಲ್ಲಾಧಿಕಾರಿ ಡಾ. ಎಂ.ಆರ್‌. ರವಿ, ಜಿಪಂ ಸಿಇಒ ಭೋಯರ್‌ ಹರ್ಷಲ್‌ ನಾರಾಯಣ ರಾವ್‌, ಎಸ್ಪಿ ದಿವ್ಯಾಸಾರಾ ಥಾಮಸ್‌, ಘಟಕದ ಕಾರ್ಯದರ್ಶಿ ಶಾಂತಮಲ್ಲಪ್ಪ, ಪ್ಲಾಂಟ್‌ ಇಂಜಿನಿಯರ್‌ ಚಂದ್ರಶೇಖರ್‌ ಇತರರಿದ್ದರು.

Advertisement

ಸುವರ್ಣ ಕಲ್ಪತರು ಬ್ರಾಂಡ್‌ ನೇಮ್‌ :  ಈ ತೆಂಗಿನ ಪುಡಿಗೆ ಸುವರ್ಣ ಕಲ್ಪತರು ಎಂಬ ಬ್ರಾಂಡ್‌ ನೇಮ್‌ ನೀಡಲಾಗಿದೆ. ಈಗಾಗಲೇ ಎಫ್ಎಸ್‌ಎಸ್‌ಎಐ ಪ್ರಮಾಣ ಪಡೆದಿದೆ. 1 ಕೆ.ಜಿ. ಪ್ಯಾಕ್‌ಗೆ225 ರೂ. ಹಾಗೂ ಅರ್ಧ ಕೆ.ಜಿ. ಪ್ಯಾಕ್‌ಗೆ 120 ರೂ. ದರ ನಿಗದಿ ಮಾಡಲಾಗಿದೆ ಎಂದು ಸಹಕಾರ ಸಂಘದ ಅಧ್ಯಕ್ಷ ಮಹೇಶ ಪ್ರಭು,ಪ್ಲಾಂಟ್‌ಎಂಜಿನಿಯರ್‌ಚಂದ್ರಶೇಖರ್‌ ತಿಳಿಸಿದರು. ತೆಂಗಿನಕಾಯಿ ಪುಡಿಯನ್ನು ಬಿಸ್ಕೆಟ್‌ ಕಾರ್ಖಾನೆಗಳು, ಬೇಕರಿಗಳು, ಗೃಹೋಪಯೋಗಿ ರೀಟೇಲ್‌ಗೆ ಸಗಟು ಮಾರಾಟ ಮಾಡಲಾಗುತ್ತದೆ. ರೀಟೇಲ್‌ ಪ್ಯಾಕನ್ನು ಮಾಲ್‌ಗ‌ಳಿಗೆ, ದಿನಸಿ ಅಂಗಡಿಗಳಿಗೆ, ಇ ಕಾಮರ್ಸ್‌ ಗೆ ಮಾರಾಟಕ್ಕೆ ನೀಡಲಾಗುತ್ತದೆ. ಈ ತೆಂಗಿನಪುಡಿಯನ್ನು ಐಸ್‌ಕ್ರೀಂ, ಬಿಸ್ಕೆಟ್ಸ್‌, ಚಾಕಲೇಟ್‌ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಚಟ್ನಿ ಪುಡಿ, ಕುಕೀಸ್‌ ಗಳಲ್ಲಿ ಬಳಸುತ್ತಾರೆ. ಬೇಕರಿ ಪದಾರ್ಥಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.

ತೆಂಗಿನ ಪುಡಿ ತಯಾರಿಕೆ ಹೇಗೆ? :  ತೆಂಗು ಸಂಸ್ಕರಣಾ ಘಟಕದಲ್ಲಿ ತೆಂಗಿನ ಕಾಯಿಯಿಂದ ತೆಂಗಿನಪುಡಿಯನ್ನು ತಯಾರಿಸಿ ಮಾರುಕಟ್ಟೆಗೆಕಳುಹಿಸಲಾಗುತ್ತದೆ.ರೈತರು ಸಿಪ್ಪೆ ಸುಲಿದು ಘಟಕಕ್ಕೆ ಜುಟ್ಟು ರಹಿತ ತೆಂಗಿನಕಾಯಿ ಮಾರುತ್ತಾರೆ. ಅದನ್ನು ವೇಬ್ರಿಜ್‌ನಲ್ಲಿ ತೂಕ ಮಾಡಲಾಗುತ್ತದೆ. ಬಲಿತ ಕಾಯಿಯನ್ನುಕೊಳ್ಳಲಾಗುತ್ತದೆ. ಎಳಸುಇದ್ದರೆ ವಾಪಸ್‌ ನೀಡಲಾಗುತ್ತದೆ. ಈ ತೆಂಗಿನಕಾಯಿಯನ್ನುಕನಿಷ್ಠ5 ರಿಂದ 7 ದಿನ ಸಂಗ್ರಹಿಸಲಾಗುತ್ತದೆ. ಯಂತ್ರದ ಸಹಾಯದಿಂದಕರಟ ತೆಗೆಯಲಾಗುತ್ತದೆ. ಚಾಕುವಿನಿಂದಕಂದು ಬಣ್ಣದ ಟೆಸ್ಟಾ (ಸಿಪ್ಪೆ)ತೆಗೆಯಲಾಗುತ್ತದೆ. ಬಳಿಕಕಾಯಿಯನ್ನು ತಣ್ಣೀರಿನಲ್ಲಿ ಸ್ವಚ್ಛಗೊಳಿಸಲಾಗುವುದು. ಕೊಳೆತಕಾಯಿಯಿದ್ದರೆ ತೆಗೆಯಲಾಗುವುದು.ಮಷಿನ್‌ನಲ್ಲಿ ಬಳಿಕ ತುಂಡು ತುಂಡು ಮಾಡಲಾಗುತ್ತದೆ. ಮತ್ತೆ ಸ್ವಚ್ಛಗೊಳಿಸ ಲಾಗುವುದು. ಪಿನ್‌ಮಿಲ್‌ನಲ್ಲಿಕಾಯಿಯನ್ನು ಹಸಿ ತುರಿ ಮಾಡಲಾಗುತ್ತದೆ. ಹಸಿ ತುರಿ ಡ್ರೈಯರ್‌ಗೆ ಹೋಗುತ್ತದೆ. ಡ್ರೈಯರ್‌ನಿಂದ ತೇವಾಂಶ ತೆಗೆಯಲಾಗುತ್ತದೆ. ಅದು ಒಣತುರಿ ಮಾಡುತ್ತದೆ. ಈ ಒಣತುರಿಯನ್ನು ಮತ್ತೆ ಬೇಕಾದ ಆಕಾರಕ್ಕೆ ಗ್ರೇಡಿಂಗ್‌ ಮಾಡಲಾಗುತ್ತದೆ. ನಂತರ25ಕೆ.ಜಿ. ಪ್ಯಾಕ್‌ಮಾಡಲಾಗುವುದು.1 ಕೆ.ಜಿ., ಅರ್ಧ ಕೆ.ಜಿ. ಪ್ಯಾಕ್‌ ಮಾಡಲಾಗುವುದು. ಈ ಪುಡಿಯನ್ನು 6 ತಿಂಗಳಕಾಲ ಬಳಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next