ಬಾದಾಮಿ: ಬರಗಾಲ, ಚುನಾವಣೆ, ಕೊರೊನಾ ನೆಪದಿಂದ ಮುಂದೂಡುತ್ತಲೇ ಬಂದಿರುವ “ಚಾಲುಕ್ಯ ಉತ್ಸವ’ವನ್ನು ಸರಕಾರ ಈ ಬಾರಿ ಆಚರಿಸಲು ಮುಂದಾಗಬೇಕೆಂಬ ಒತ್ತಾಯ-ಕೂಗು ಕೇಳಿ ಬಂದಿದೆ.
ಐತಿಹಾಸಿಕ ಚಾಲುಕ್ಯರ ಕಾಲದ ಗತವೈಭವ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿ ನಡೆಸುತ್ತ ಬಂದಿರುವ “ಚಾಲುಕ್ಯ ಉತ್ಸವ’ ಕಳೆದ ಆರು ವರ್ಷಗಳಿಂದ ಆಯೋಜಿಸಿಲ್ಲ. 2018ರಲ್ಲಿ ವಿಧಾನಸಭೆ ಚುನಾವಣೆ, 2019ರಲ್ಲಿ ಲೋಕಸಭೆ ಚುನಾವಣೆ, 2020-21ರಲ್ಲಿ ಕೊರೊನಾ ನೆಪದಿಂದ ಸರಕಾರ ಚಾಲುಕ್ಯ ಉತ್ಸವ ಆಯೋಜಿಸಿರಲಿಲ್ಲ. ಸರಕಾರ ಈ ಬಾರಿಯಾದರೂ ಚಾಲುಕ್ಯ ಉತ್ಸವ ನಡೆಸುವುದೇ ಎಂದು ಜನರು ಕಾಯ್ದು ಕಾಯುತ್ತಿದ್ದಾರೆ.
2015, ಫೆ. 8, 9 ಮತ್ತು 10 ಮೂರು ದಿನಗಳ ಕಾಲ ಚಾಲುಕ್ಯ ಉತ್ಸವ ನಡೆಸಲಾಗಿತ್ತು. 2016, 2017, 2018, 2019, 2020, 2021 ಹೀಗೆ ಆರು ವರ್ಷಗಳ ಕಾಲ ಸತತ ಬರಗಾಲ, ಚುನಾವಣೆ, ಕೊರೊನಾ ನೆಪವೊಡ್ಡಿ ರದ್ದುಪಡಿಸುತ್ತಲೇ ಬರಲಾಗಿದೆ. ಕಳೆದ ವರ್ಷ ಹಂಪಿ ಉತ್ಸವ ರದ್ದುಪಡಿಸಿದ ಕಾರಣ ಅಲ್ಲಿನ ಜನರ ಪ್ರತಿಭಟನೆಗೆ ಮಣಿದು ಕೊನೆಯ ಕ್ಷಣದಲ್ಲಿ ಹಂಪಿ ಉತ್ಸವ ನಡೆಸಲು ತೀರ್ಮಾನಿಸಲಾಯಿತು. ಪ್ರತಿ ವರ್ಷ ದಸರಾ, ಹಂಪಿ ನಡೆಸಲಾಗುತ್ತಿದೆ. ದಸರಾ ಮತ್ತು ಹಂಪಿ ಉತ್ಸವಕ್ಕಿಲ್ಲದ ಬರ ಚಾಲುಕ್ಯ ಉತ್ಸವ ಏಕೆ ಎಂಬುದು ಪ್ರಜ್ಞಾವಂತರ ಪ್ರಶ್ನೆಯಾಗಿದೆ.
ಈ ಬಾರಿ ಬಾದಾಮಿಯಲ್ಲಿ ಎರಡು ದಿನ ಚಾಲುಕ್ಯ ಉತ್ಸವ, ಪಟ್ಟದಕಲ್ಲನಲ್ಲಿ ಒಂದು ದಿನ ಪಟ್ಟದಕಲ್ಲ ಉತ್ಸವ, ಒಂದು ದಿನ ಐಹೊಳೆ ಉತ್ಸವವನ್ನು ಸರಕಾರದಿಂದ ಆಯೋಜಿಸಬೇಕೆಂಬ ಕೂಗು ಕೇಳಿ ಬಂದಿದೆ.
Related Articles
ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಾಂಸ್ಕೃತಿಕ ವಿಚಾರಧಾರೆಗಳು ಬೇರೆ ಬೇರೆಯಾಗಿರುವಾಗ ಚಾಲುಕ್ಯ ಉತ್ಸವದಂತಹ ಸಾಂಸ್ಕೃತಿಕ ಹಬ್ಬಗಳು ಆಕರ್ಷಣೆ ಕಳೆದುಕೊಂಡು ಜನರಿಂದ ದೂರವಾಗಿ ಸರಕಾರಿ ಪ್ರಾಯೋಜಿತ ಕಾರ್ಯಕ್ರಮಗಳಂತಾಗಿವೆ. ಇದರಿಂದ ಚಾಲುಕ್ಯ ಉತ್ಸವವನ್ನು ಹಮ್ಮಿಕೊಳ್ಳುವ ಯೋಜನೆ ಮೇಲಿಂದ ಮೇಲೆ ವಿಫಲವಾಗುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಇಷ್ಟಲಿಂಗ ಶಿರಶಿ, ಸಾಮಾಜಿಕ ಹೋರಾಟಗಾರರು ಬಾದಾಮಿ.
ಕಳೆದ ಹಲವಾರು ವರ್ಷಗಳಿಂದ ವಿವಿಧ ಕಾರಣಗಳಿಂದ ಚಾಲುಕ್ಯ ಉತ್ಸವ ನಡೆದಿಲ್ಲ. ಈ ಬಾರಿ ಸರಕಾರದ ವತಿಯಿಂದ ಚಾಲುಕ್ಯ ಉತ್ಸವ ಆಯೋಜಿಸಲು ಉಸ್ತುವಾರಿ ಸಚಿವರಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಸಿದ್ದರಾಮಯ್ಯ, ಮಾಜಿ ಸಿಎಂ, ಶಾಸಕರು ಬಾದಾಮಿ.
-ಶಶಿಧರ ವಸ್ತ್ರದ