Advertisement

ಇನ್ನೂ 3 ವರ್ಷ ಬಿಜೆಪಿ ಸರಕಾರ ಸ್ಥಿರ

05:53 PM Jun 04, 2020 | Team Udayavani |

ಚಳ್ಳಕೆರೆ: ಕರ್ನಾಟಕದಲ್ಲಿ ಕೋಟಿ -ಕೋಟಿ ಮತದಾರರ ಅಭಿಲಾಷೆ, ಲಕ್ಷಾಂತರ ಕಾರ್ಯಕರ್ತರ ನಿರಂತರ ಪರಿಶ್ರಮದಿಂದ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದಿದೆ. ಮುಖ್ಯಮಂತ್ರಿ ಬಿ.ಎಸ್‌ .ಯಡಿಯೂರಪ್ಪನವರ ಸರ್ಕಾರ ಇನ್ನೂ ಮೂರು ವರ್ಷಗಳ ಕಾಲ ಸ್ಥಿರವಾಗಿರಲಿದ್ದು, ಜನತೆಗೆ ಉತ್ತಮ ಆಡಳಿತ ನೀಡಲಿದೆ ಎಂದು ಸಚಿವ ಬಿ.ಶ್ರೀರಾಮುಲು ತಿಳಿಸಿದರು.

Advertisement

ಪರಶುರಾಮಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ನ ಅನೇಕ ಮುಖಂಡರು ಭಾರತೀಯ ಜನತಾ ಪಕ್ಷದಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಶೀಘ್ರದಲ್ಲೇ ಸರ್ಕಾರ ಪತನವಾಗಲಿದೆ ಎಂದು ಹೇಳುತ್ತಿದ್ದಾರೆ. ಆದರೆ ಇವೆಲ್ಲ ಶುದ್ಧ ಸುಳ್ಳು ಎಂದರು. ಭಾರತೀಯ ಜನತಾ ಪಕ್ಷದ ಆಡಳಿತದ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೋವಿಡ್ ಸಂಕಷ್ಟದಲ್ಲೂ ಸಾರ್ವಜನಿಕವಾಗಿ ಎಲ್ಲಾ ವಲಯದ ಕಡುಬಡರಿಗೆ ಸರ್ಕಾರ ಆರ್ಥಿಕ ಶಕ್ತಿ ನೀಡಿದೆ. ಕೋವಿಡ್ ನಿಯಂತ್ರಣದಲ್ಲಿ ಸರ್ಕಾರದ ಸಾಧನೆ ಹಾಗೂ ಮುಖ್ಯಮಂತ್ರಿಗಳ ಕಾರ್ಯಕ್ಕೆ ಪ್ರಧಾನಿಯವರೇ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಕೆಲಸ ಕಾರ್ಯಗಳಿಲ್ಲದ ಕಾಂಗ್ರೆಸ್‌ನವರಿಗೆ ಇದನ್ನೆಲ್ಲ ಸಹಿಸಲಾಗದೆ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದರು.

ಬಿಜೆಪಿಯಲ್ಲಿ ಬೆಂಕಿ ಹೊತ್ತಿಕೊಂಡರೆ ಪಕ್ಷದ ಹಿರಿಯ ಮುಖಂಡರು ಅದನ್ನು ತಣ್ಣಗಾಗಿಸುತ್ತಾರೆ. ಆ ಬಗ್ಗೆ ಕಾಂಗ್ರೆಸ್‌ಗೆ ಚಿಂತೆ ಬೇಡ. ಕಾಂಗ್ರೆಸ್‌ ಅಧಿಕಾರದಿಂದ ದೂರವಿರಬೇಕೆಂಬುದು ಜನರ ಇಚ್ಛೆಯಾಗಿದೆ. ಕಳೆದ 40 ವರ್ಷಗಳಿಂದ ರಾಜ್ಯ ರಾಜಕೀಯದಲ್ಲಿ ಪ್ರಬಲ ಹೋರಾಟಗಾರನಾಗಿ ಹೊರಹೊಮ್ಮಿದ ಮುಖ್ಯಮಂತ್ರಿ ಯಡಿಯೂರಪ್ಪ ಎಲ್ಲವನ್ನೂ ನಿಭಾಯಿಸುವ ಶಕ್ತಿ ಸಾಮರ್ಥ್ಯ ಹೊಂದಿದ್ದಾರೆ. ಕಾಂಗ್ರೆಸ್‌ನವರು ಅನಗತ್ಯ ಟೀಕೆಗಳನ್ನು ಕೈಬಿಟ್ಟು ಜನಪರ ಕಾರ್ಯಕ್ರಮ ಬಗ್ಗೆ ಯೋಚಿಸಲಿ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next