Advertisement

ಸಿಎಎ: ಆನ್‌ಲೈನ್‌ ಮಾರ್ಗ

10:17 AM Jan 02, 2020 | Team Udayavani |

ಹೊಸದಿಲ್ಲಿ/ತಿರುವನಂತಪುರ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿ ಮಾಡುವುದಿಲ್ಲ ಎಂದು ಹೇಳುತ್ತಿರುವ ರಾಜ್ಯ ಸರಕಾರಗಳ ಅಧಿಕಾರ ಮೊಟಕುಗೊಳಿಸಲು ಮುಂದಾಗಿರುವ ಕೇಂದ್ರ ಸರಕಾರವು ಇಡೀ ಪೌರತ್ವ ತಿದ್ದುಪಡಿ ಕಾಯ್ದೆ ಪ್ರಕ್ರಿಯೆಯನ್ನೇ ಆನ್‌ಲೈನ್‌ನಲ್ಲಿ ನಡೆಸಲು ಮುಂದಾಗಿದೆ.
ಪೌರತ್ವ ತಿದ್ದುಪಡಿ ಕಾಯ್ದೆಯನ್ನು ರದ್ದು ಮಾಡಬೇಕು ಎಂದು ಕೇರಳದ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿರು ವಂತೆಯೇ ಇಂಥದ್ದೊಂದು ನಿರ್ಧಾರಕ್ಕೆ ಕೇಂದ್ರ ಮುಂದಾಗಿದೆ.

Advertisement

ಸದ್ಯ ಜಿಲ್ಲಾಧಿಕಾರಿಗಳ ಮೂಲಕ ಪೌರತ್ವ ದೃಢೀಕರಣ ಪ್ರಕ್ರಿಯೆ ನಡೆಸಲು ಚಿಂತನೆ ನಡೆಸಲಾಗುತ್ತಿತ್ತು. ಇದರ ಬದಲಾಗಿ ಹೊಸ ಪ್ರಾಧಿಕಾರ ರಚನೆಯಾಗಲಿದೆ. ಪ್ರಕ್ರಿಯೆ ಆನ್‌ಲೈನ್‌ನಲ್ಲಿ ನಡೆದರೆ ರಾಜ್ಯ ಸರಕಾರಗಳು ಅದಕ್ಕೆ ಆಕ್ಷೇಪ ಮಾಡುವ ಪ್ರಶ್ನೆಯೇ ಬರುವುದಿಲ್ಲ ಎನ್ನುವುದು ಕೇಂದ್ರದ ಲೆಕ್ಕಾಚಾರ. ಗೃಹ ಸಚಿವಾಲಯದ ಅಧಿ ಕಾರಿ ಗಳು ಹೇಳುವ ಪ್ರಕಾರ ರಾಜ್ಯಗಳು ಸಿಎಎಯನ್ನು ಜಾರಿ ಮಾಡುವಂತಿಲ್ಲ ಎಂದು ಹೇಳುವ ಹಾಗೆ ಇಲ್ಲ. ಏಕೆಂದರೆ ಅದು ಸಂವಿಧಾನದ ಏಳನೇ ಶೆಡ್ನೂಲ್‌ನಲ್ಲಿ ಪ್ರಸ್ತಾವವಾಗಿರುವ ಅಂಶ. ಅದರಲ್ಲಿ ರಕ್ಷಣೆ, ಸೇನೆ, ಪೌರತ್ವ ಸಹಿತ 97 ಅಂಶಗಳು ಇದ್ದು, ಈ ಬಗ್ಗೆ ಸಂಸತ್‌ ಮತ್ತು ಕೇಂದ್ರ ಸರಕಾರ ಮಾತ್ರ ನಿರ್ಣಯ ಕೈಗೊಳ್ಳಬಹುದಾಗಿದೆ.

ಜ.22ಕ್ಕಿಂತ ಮೊದಲು
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ಹಲವು ಮೊಕದ್ದಮೆಗಳು ಸಲ್ಲಿಕೆಯಾಗಿವೆ. ಅದನ್ನು ಜ.22ರಂದು ವಿಚಾರಣೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆಗಳು ಇವೆ. ಹೀಗಾಗಿ ಕೇಂದ್ರ ಸರಕಾರ ಅದಕ್ಕಿಂತ ಮೊದಲು ಹೊಸ ಕಾಯ್ದೆಗೆ ಸಂಬಂಧಿಸಿದ ನಿಯಮಗಳನ್ನು ಪ್ರಕಟಿಸುವ ಸಾಧ್ಯತೆ ಇದೆ.

ಸರಳ ವ್ಯವಸ್ಥೆ
ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಈಗಾಗಲೇ ಅಪ ಪ್ರಚಾರ ನಡೆಸಲಾಗಿದೆ ಎಂದು ವಾದಿ ಸು ತ್ತಿರುವ ಕೇಂದ್ರ ಸರಕಾರವು ಪ್ರಕ್ರಿಯೆ ಸರಳಗೊಳಿಸಲು ಮುಂದಾಗಿದೆ. ಅದಕ್ಕಾಗಿ ಗೃಹ ಮತ್ತು ಕಾನೂನು ಸಚಿವಾಲಯಗಳು ಯಾವ ರೀತಿಯ ದಾಖಲೆಗಳನ್ನು ನೀಡಿದರೆ ಅನುಕೂಲ ಎಂಬ ಬಗ್ಗೆ ಈಗಾಗಲೇ ಪರಾಮರ್ಶೆ ನಡೆಸಿವೆ. ಮೂಲಗಳ ಪ್ರಕಾರ ಅಪ್ರಾಪ್ತ ವಯಸ್ಕರ ವಿಚಾರಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ಐದು ವರ್ಷಗಳ ಕಾಲ ವಾಸ್ತವ್ಯ ಹೂಡಿದರೆ ಸಾಕು ಎಂಬ ನಿಯಮ ಘೋಷಣೆಯಾಗಬಹುದು. ಹಾಲಿ ನಿಯಮ ಪ್ರಕಾರ ಅಪ್ರಾಪ್ತ ವಯಸ್ಕರ ಹೆತ್ತವರು ಭಾರತದ ಪ್ರಜೆಗಳಾಗಿದ್ದರೆ ಮಾತ್ರ ಪೌರತ್ವ ನೀಡಲಾಗುತ್ತದೆ.

ಸಿಎಎಯಲ್ಲಿ ಉಲ್ಲೇಖ ಮಾಡಿರುವಂತೆ ಬಾಂಗ್ಲಾದೇಶ, ಅಫ್ಘಾನಿ ಸ್ಥಾನ, ಪಾಕಿಸ್ಥಾನದ ಗ್ರಾಮ ಪಂಚಾಯತ್‌ ಅಥವಾ ಸ್ಥಳೀಯ ಮಟ್ಟದ ಆಡಳಿತ ವ್ಯವಸ್ಥೆ, ನಗರ ಪ್ರದೇಶದ ಆಡಳಿತ ವ್ಯವಸ್ಥೆ ನೀಡುವ ವಿವಾಹ ಪ್ರಮಾಣ ಪತ್ರ ವನ್ನು ಪೌರತ್ವದ ದಾಖಲೆ ಎಂದು ಪರಿಗಣಿಸಲು ಚಿಂತನೆ ನಡೆದಿದೆ. ಇದರ ಜತೆಗೆ ಇಂಟೆಲಿಜೆನ್ಸ್‌ ಬ್ಯೂರೋ ಅಥವಾ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್ಆರ್‌ಆರ್‌ಒ) ನೀಡುವ ವರದಿಯೂ ಪ್ರಾಮುಖ್ಯತೆ ಪಡೆಯಲಿದೆ. ಅದರ ಆಧಾರದಲ್ಲಿ ತೀರ್ಮಾನವಾಗುವ ಸಾಧ್ಯತೆಗಳಿವೆ.

Advertisement

ರಾಜ್ಯಗಳಿಗೆ ಅಧಿಕಾರವೇ ಇಲ್ಲ
ಪೌರತ್ವ ತಿದ್ದುಪಡಿ ಕಾಯ್ದೆ ದೇಶಕ್ಕೆ ಅನ್ವಯವಾಗುವಂಥದ್ದು. ಅದು ಕಾನೂನುಬದ್ಧ ಮತ್ತು ಸಾಂವಿಧಾನಿಕವಾಗಿಯೇ ಇದೆ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್‌ ಹೇಳಿದ್ದಾರೆ. ತಿರುವನಂತಪುರದಲ್ಲಿ ಮಾತನಾಡಿದ ಅವರು, ಸಂವಿಧಾನದ ಏಳನೇ ಶೆಡ್ನೂಲ್‌ನಲ್ಲಿ ಉಲ್ಲೇಖವಾಗಿರುವ ಅಂಶಗಳ ಬಗ್ಗೆ ಸಂಸತ್‌ಗೆ ಮಾತ್ರ ಕಾನೂನು ರೂಪಿಸಲು ಅವಕಾಶವಿದೆ. ಅಂಥ ಅಧಿಕಾರ ರಾಜ್ಯ ಸರಕಾರಗಳಿಗೆ ಇಲ್ಲ ಎಂದು ಕೇರಳ ವಿಧಾನಸಭೆ ನಿರ್ಣಯಕ್ಕೆ ತಿರುಗೇಟು ನೀಡಿದ್ದಾರೆ. ಕೇರಳ ಮುಖ್ಯಮಂತ್ರಿ ಈ ನಿಟ್ಟಿನಲ್ಲಿ ಕಾನೂನು ಸಲಹೆ ಪಡೆದುಕೊಳ್ಳಲಿ ಎಂದು ವ್ಯಂಗ್ಯ ಮಾಡಿದರು.

ಪಿಎಫ್ಐ ನಿಷೇಧಿಸಿ
ಉತ್ತರ ಪ್ರದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆಸಲಾಗಿರುವ ಹಿಂಸಾ ಚಾರದಲ್ಲಿ ಪಾಪ್ಯುಲರ್‌ ಫ್ರಂಟ್‌ ಆಫ್ ಇಂಡಿಯಾ (ಪಿಎಫ್ಐ) ಕೈವಾಡ ಇದೆ. ಹೀಗಾಗಿ ಅದನ್ನು ನಿಷೇಧಿಸಬೇಕು ಎಂದು ಉತ್ತರ ಪ್ರದೇಶ ಡಿಜಿಪಿ ಒ.ಪಿ.ಸಿಂಗ್‌ ಹೇಳಿದ್ದಾರೆ. ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿರುವುದಾಗಿ ಅವರು ಹೇಳಿದ್ದಾರೆ. ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ದಂತೆ ಪಿಎಫ್ಐಯ ಉತ್ತರ ಪ್ರದೇಶ ಘಟಕ ಮುಖ್ಯಸ್ಥ ವಾಸಿಂ ಮತ್ತು ಇತರ 16 ಮಂದಿಯನ್ನು ಈಗಾಗಲೇ ಬಂಧಿಸ ಲಾಗಿದೆ. ಇದೇ ವೇಳೆ ಉ.ಪ್ರ. ಡಿಸಿಎಂ ದಿನೇಶ್‌ ಮೌರ್ಯ ಕೂಡ ಪಿಎಫ್ಐ ನಿಷೇಧಿಸಬೇಕು. ಅದು ಸ್ಟೂಡೆಂಟ್ಸ್‌ ಇಸ್ಲಾಮಿಕ್‌ ಮೂವ್‌ಮೆಂಟ್‌ ಆಫ್ ಇಂಡಿಯಾ (ಸಿಮಿ)ದ ಪ್ರತಿರೂಪ ಎಂದಿದ್ದಾರೆ.

ಕಾಯ್ದೆ ಖಂಡಿಸಿ ನಿರ್ಣಯ
ಪೌರತ್ವ ತಿದ್ದುಪಡಿ ಕಾಯ್ದೆ ಖಂಡಿಸಿ ಕೇರಳ ವಿಧಾನಸಭೆ ನಿರ್ಣಯ ಅಂಗೀ ಕರಿಸಿದೆ. ಈ ಮೂಲಕ ಇಂಥ ಕ್ರಮ ಕೈಗೊಂಡ ದೇಶದ ಮೊದಲ ರಾಜ್ಯ ಎಂಬ ಅಪಕೀರ್ತಿಗೆ ಪಾತ್ರವಾಗಿದೆ. ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ಆಳ್ವಿಕೆಯಲ್ಲಿರುವ ರಾಜ್ಯಗಳಲ್ಲಿ ಪ್ರತಿ ಭಟನೆಗಳು ನಡೆದಿವೆ ಯಾದರೂ ಈ ರೀತಿಯ ಕ್ರಮ ಕೈಗೊಂಡಿಲ್ಲ ಎನ್ನುವುದು ಗಮನಾರ್ಹ. ಮುಖ್ಯ ಮಂತ್ರಿ ಪಿಣರಾಯಿ ವಿಜಯನ್‌ ಮಂಡಿಸಿದ ಗೊತ್ತುವಳಿಗೆ ಕಾಂಗ್ರೆಸ್‌ ನೇತೃತ್ವದ ಯುಡಿಎಫ್ ಬೆಂಬಲ ಸೂಚಿಸಿದೆ. ಇತ್ತೀಚೆಗಷ್ಟೇ ತಿರುವನಂತಪುರದಲ್ಲಿ ಕಾಯ್ದೆ ವಿರುದ್ಧ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಎಲ್‌ಡಿಎಫ್ ಮತ್ತು ಯುಡಿಎಫ್ ಜಂಟಿಯಾಗಿ ಭಾಗವಹಿಸಿದ್ದವು. ಬಿಜೆಪಿ ಶಾಸಕ ಒ.ರಾಜಗೋಪಾಲ್‌ ನಿರ್ಣಯ ವಿರೋಧಿಸಿ ಮತ ಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next