Advertisement

ಉಡುಪಿ ಜಿಲ್ಲೆ: ಬಹುತೇಕ ಅಭ್ಯರ್ಥಿಗಳು ಖಚಿತ

05:10 AM Jul 30, 2017 | Team Udayavani |

ಚುನಾವಣೆಗೆ ಕಾಂಗ್ರೆಸ್‌, ಬಿಜೆಪಿ  ಪಕ್ಷಗಳ ತಯಾರಿ

Advertisement

ಉಡುಪಿ: ಮುಂದಿನ ಮೇ ತಿಂಗಳಲ್ಲಿ ರಾಜ್ಯ ಸರಕಾರದ ಅವಧಿ ಐದು ವರ್ಷ ಪೂರ್ತಿಗೊಳ್ಳುತ್ತದೆ. ಹೀಗಾಗಿ ಮಾರ್ಚ್‌ – ಎಪ್ರಿಲ್‌ನಲ್ಲಿ ಚುನಾವಣೆ ನಡೆಯುವ ಸಾಧ್ಯತೆಗಳು ಹೆಚ್ಚು. ಇದಕ್ಕೆ ಪೂರಕವಾಗಿ ಪ್ರಮುಖ ಎರಡು ಪಕ್ಷಗಳಾದ ಕಾಂಗ್ರೆಸ್‌ ಮತ್ತು ಬಿಜೆಪಿ ತಮ್ಮ ತಯಾರಿಗಳನ್ನು ನಡೆಸುತ್ತಿವೆ. ಎರಡೂ ಪಕ್ಷಗಳು ಬಹುತೇಕ ಕ್ಷೇತ್ರಗಳಲ್ಲಿ ಯಾವ ಅಭ್ಯರ್ಥಿಗಳನ್ನು ಕಣಕ್ಕಿಳಿಸಬಹುದು ಎಂದು ಚಿಂತನೆ ನಡೆಸಿವೆ. ಪಕ್ಷದ ಮೂಲಗಳ ಪ್ರಕಾರ ಕಾಂಗ್ರೆಸ್‌ನಿಂದ ಉಡುಪಿ ಕ್ಷೇತ್ರದಲ್ಲಿ ಸಚಿವ ಪ್ರಮೋದ್‌ ಮಧ್ವರಾಜ್‌, ಕಾಪುವಿನಲ್ಲಿ ಶಾಸಕ ವಿನಯಕುಮಾರ ಸೊರಕೆ, ಬೈಂದೂರಿನಿಂದ ಶಾಸಕ ಗೋಪಾಲ ಪೂಜಾರಿ ಮತ್ತು ಬಿಜೆಪಿಯಿಂದ ಉಡುಪಿಯಿಂದ ಮಾಜಿ ಶಾಸಕ ಕೆ. ರಘುಪತಿ ಭಟ್‌, ಕಾರ್ಕಳದಿಂದ ಶಾಸಕ ವಿ. ಸುನಿಲ್‌ ಕುಮಾರ್‌, ಬೈಂದೂರಿನಿಂದ ಬಿ.ಎಂ. ಸುಕುಮಾರ ಶೆಟ್ಟಿ ಅವರನ್ನು ಕಣಕ್ಕಿಳಿಸಲು ಚಿಂತನೆ ನಡೆಸಲಾಗಿದೆ.

ಕುಂದಾಪುರದಿಂದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರನ್ನು ಬಿಜೆಪಿ ಮತ್ತೆ ಕಣಕ್ಕಿಳಿಸುವ ಸಾಧ್ಯತೆಗಳೇ ಹೆಚ್ಚಿಗೆ ಇರುವುದರಿಂದ ಕಾಂಗ್ರೆಸ್‌ಗೆ ಅಭ್ಯರ್ಥಿಯನ್ನು ಹುಡುಕುವುದೇ ಕಷ್ಟವಾಗಿದೆ. ಕಾರ್ಕಳದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಮಾಜಿ ಶಾಸಕ ಗೋಪಾಲ ಭಂಡಾರಿ ಹೆಸರಿನೊಂದಿಗೆ ನಾಯಕ ಮುನಿಯಾಲು ಉದಯ ಶೆಟ್ಟಿ ಹೆಸರು, ಕಾಪುವಿನಿಂದ ಬಿಜೆಪಿ ಟಿಕೆಟ್‌ ಪಡೆಯಲು ಮಾಜಿ ಶಾಸಕ ಲಾಲಾಜಿ ಮೆಂಡನ್‌, ನಾಯಕರಾದ ಗುರ್ಮೆ ಸುರೇಶ ಶೆಟ್ಟಿ, ಯಶಪಾಲ್‌ ಸುವರ್ಣ ಹೆಸರು ಕೇಳಿಬರುತ್ತಿದೆ. ಜಾತಿ ಸಮತೋಲನ ಕಾಪಾಡಿಕೊಂಡು ಬರುವ ಮಾನದಂಡದಂತೆ ಅಭ್ಯರ್ಥಿ ಆಯ್ಕೆ ನಡೆಯಬೇಕಾಗುತ್ತದೆ. ಹಾಲಿ ಶಾಸಕರನ್ನು ಬದಲಾಯಿಸಲು ಯಾವ ಪಕ್ಷಗಳೂ ಮುಂದಾಗುವುದಿಲ್ಲ. ಮುಂದಿನ ಸ್ವಲ್ಪ ಸುಲಭದ ಆಯ್ಕೆ ಮಾಜಿ ಶಾಸಕರದ್ದು. ಇವೆರಡು ವರ್ಗವನ್ನು ಕೈಬಿಟ್ಟರೆ ಟಿಕೆಟ್‌ ಹಂಚುವಾಗ ಜೇನುಗೂಡಿಗೆ ಕೈಹಾಕಿದಂತಾಗುತ್ತದೆ.

ಬಿಜೆಪಿ: ಖಾಸಗಿ ಏಜೆನ್ಸಿ ಸಮೀಕ್ಷೆ
ಬಿಜೆಪಿಯಲ್ಲಿ ಖಾಸಗಿ ಸಂಸ್ಥೆಯೊಂದರ ಮೂಲಕ ಗೆಲುವು ಸಾಧಿಸಬಹುದಾದ ಅಭ್ಯರ್ಥಿಗಳ ಹೆಸರುಗಳನ್ನು ಸಂಗ್ರಹಿಸಿದೆ. ಆದರೆ ಇದರ ಬಗ್ಗೆ ಪಕ್ಷದ ಸ್ಥಳೀಯ ಅಥವಾ ರಾಜ್ಯ ನಾಯಕರಿಗೂ ಸ್ಪಷ್ಟವಾಗಿ ಗೊತ್ತಿಲ್ಲ. ಒಂದೆರಡು ತಿಂಗಳ ಹಿಂದೆ ಹಿಂದಿಯಲ್ಲಿ ಮಾತನಾಡುವವರು ಬಸ್‌ ನಿಲ್ದಾಣದಲ್ಲಿ, ರಿಕ್ಷಾ ನಿಲ್ದಾಣಗಳಲ್ಲಿ ಹರಟೆ ಹೊಡೆದು ಹೋಗಿದ್ದಾರೆಂದು ಹೇಳುವವರಿದ್ದಾರೆ.

ಇವರು ರಾಷ್ಟ್ರೀಯ ಸಮಿತಿ ಕಡೆಯಿಂದ ನೇಮಕಗೊಂಡು ಬಂದ ಕಾರಣ ವರದಿಯನ್ನು ರಾಷ್ಟ್ರೀಯ ಅಧ್ಯಕ್ಷರಿಗೇ ಕೊಟ್ಟಿದ್ದಾರಂತೆ. ಪಕ್ಷದ ಮೊದಲ ಮಾನದಂಡವೆಂದರೆ ಅಭ್ಯರ್ಥಿಗೆ ಗೆಲುವು ಸಾಧಿಸುವ ಸಾಮರ್ಥ್ಯಬೇಕು, ಇನ್ನೊಂದು ಮಾನದಂಡ ಸಾಮಾಜಿಕ ನ್ಯಾಯ ಜಾರಿಯಾಗುವಂತಿರಬೇಕು. ಸಾಮಾಜಿಕ ನ್ಯಾಯವೆಂದರೆ ಒಂದು ಜಿಲ್ಲೆಯಲ್ಲಿ ಪ್ರಮುಖ ಜಾತಿಗಳಿಗೆ ಒಂದೊಂದು ಸ್ಥಾನ ದೊರಕುವಂತಹ ಸಮತೋಲನ ನಿರ್ಮಾಣವಾಗಬೇಕು.

Advertisement

ಕಾಂಗ್ರೆಸ್‌: ಸಕ್ರಿಯ ಉಸ್ತುವಾರಿ
ಕಾಂಗ್ರೆಸ್‌ನಲ್ಲಿ ದಿಗ್ವಿಜಯ ಸಿಂಗ್‌ ಉಸ್ತುವಾರಿತನ ಬದಲಾಯಿಸಿ ವೇಣುಗೋಪಾಲ್‌ ಅವರಿಗೆ ಕೊಟ್ಟ ಬಳಿಕ ಅವರ ಪಾತ್ರ ಹಿಂದಿಗಿಂತ ಹೆಚ್ಚು ಸಕ್ರಿಯವಾದಂತೆ ಕಂಡುಬರುತ್ತಿದೆ. ವೇಣುಗೋಪಾಲ್‌ ಕೇವಲ ರಾಜ್ಯ ರಾಜಧಾನಿಗೆ ಭೇಟಿ ಕೊಡುತ್ತಿರುವುದಲ್ಲದೆ ಜಿಲ್ಲಾ ಕೇಂದ್ರಗಳಿಗೂ ಬಂದು ನಾಯಕರೊಂದಿಗೆ ಚರ್ಚೆ ನಡೆಸಿದ್ದಾರೆ. ಅವರ ನೇಮಕವಾದ ಅನಂತರ ಸರಕಾರ, ಪಕ್ಷದ ಮಟ್ಟದಲ್ಲಿ ಕೆಲವು ನಿರ್ಧಾರಗಳು ಕ್ರಿಯಾಶೀಲವಾಗುತ್ತಿವೆ ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಪಕ್ಷಗಳ ನಿರ್ಣಯಗಳನ್ನು ಜೀರ್ಣಿಸಿಕೊಳ್ಳಲು ಪಕ್ಷಗಳ ಕಾರ್ಯಕರ್ತರ ಪಡೆ ಸಮರ್ಥವಾಗಿ ಸಜ್ಜಾಗಬೇಕು. ಇದು ಸಾಧ್ಯವಾಗದಿದ್ದರೆ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಕಷ್ಟ. ಎರಡೂ ಪಕ್ಷಗಳಲ್ಲಿ ಕಾರ್ಯಕರ್ತರನ್ನು ಹುರಿದುಂಬಿಸುವ ಕೆಲಸ ಒಂದಿಷ್ಟು ಪ್ರಮಾಣದಲ್ಲಿ ನಡೆಯುತ್ತಿದೆ. ಏತನ್ಮಧ್ಯೆ ಜೆಡಿಎಸ್‌ ಕೂಡ ಸದ್ದು ಮಾಡುತ್ತಿದೆ.

ವಿಸ್ತಾರಕರಿಂದ ವಿಸ್ತರಣೆ
‘ನಾವು ಚುನಾವಣೆಗೆ ಪೂರ್ಣಪ್ರಮಾಣದಲ್ಲಿ ಸಜ್ಜಾಗಿದ್ದೇವೆ. ವಾರ್ಡ್‌, ಬೂತ್‌, ಸ್ಥಾನೀಯ ಸಮಿತಿಗಳನ್ನು ರಚಿಸಿದ್ದೇವೆ. ವಿಸ್ತಾರಕರ ಯೋಜನೆಯಿಂದ ಬಹಳಷ್ಟು ಕೆಲಸ ಸಾಧ್ಯವಾಗಿದೆ. ಗ್ರಾಮ ವಾಸ್ತವ್ಯ ಮಾಡಿ ಶೇ. 60 ಮನೆಗಳನ್ನು ಈ ಯೋಜನೆಯಂತೆ ಭೇಟಿ ಮಾಡಲು ಸಾಧ್ಯವಾಗಿದೆ. ಹೀಗೆ ಗ್ರಾಮ ಮಟ್ಟದಿಂದ ಜಿಲ್ಲಾ ಮಟ್ಟದವರೆಗೂ ಚುನಾವಣೆಗೆ ಸಜ್ಜಾಗಿ ನಿಂತಿದ್ದೇವೆ’ ಎನ್ನುತ್ತಾರೆ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರ್‌ ರತ್ನಾಕರ ಹೆಗ್ಡೆಯವರು.

ಜನರಿಗೆ ಜನಪರ ಯೋಜನೆ
‘ಎನ್‌ಎಸ್‌ಯುಐ, ಮಹಿಳಾ ಕಾಂಗ್ರೆಸ್‌, ವಿವಿಧ ವಿಭಾಗಗಳ ಪ್ರತಿನಿಧಿಗಳನ್ನು ಒಳಗೊಂಡ ಗ್ರಾಮೀಣ ಕಾಂಗ್ರೆಸ್‌ ಪುನಾರಚನೆಗೆ ಮುಂದಾಗಿದ್ದೇವೆ. ಬೂತ್‌ ಸಮಿತಿ, ಪ್ರಚಾರ ಸಮಿತಿಗಳಿಗೆ ನೇಮಕ ಮಾಡಿದ್ದೇವೆ. ಸರಕಾರದ ಜನಪರ ಯೋಜನೆಗಳನ್ನು ಜನಸ್ಪಂದನ ಕಾರ್ಯಕ್ರಮದ ಮೂಲಕ ಜನರಿಗೆ ತಲುಪಿಸುತ್ತಿದ್ದೇವೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯಕರ್ತರ ಸಮಾವೇಶವನ್ನು ಆಯೋಜಿಸಲಿದ್ದೇವೆ’ ಎನ್ನುತ್ತಾರೆ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಗೋಪಾಲ ಪೂಜಾರಿಯವರು.

ವಾರದಲ್ಲಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷರ ನೇಮಕ?
ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹುದ್ದೆಗೆ ಗೋಪಾಲ ಪೂಜಾರಿ ಅವರು ರಾಜೀನಾಮೆ ನೀಡಿ ಬಹಳ ದಿನಗಳಾಗಿವೆ. ಆದರೆ ಹೊಸ ನೇಮಕವಾಗುವವರೆಗೆ ಗೋಪಾಲ ಪೂಜಾರಿಯವರನ್ನೇ ಮುಂದುವರಿಯಲು ಹೈಕಮಾಂಡ್‌ ತಿಳಿಸಿದೆ. ಇನ್ನೊಂದು ವಾರದಲ್ಲಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷರ ನೇಮಕವಾಗುವ ಸಾಧ್ಯತೆ ಇದೆ. ಗೋಪಾಲ ಪೂಜಾರಿಯವರು ತಿಳಿಸುವಂತೆ ‘ಜಿಲ್ಲಾಧ್ಯಕ್ಷರ ಹುದ್ದೆಗೆ ಚುನಾವಣೆ ನಡೆಸುವುದಿಲ್ಲ. ನೇಮಕ ಮಾಡುತ್ತಾರೆ. ಜನಾರ್ದನ ತೋನ್ಸೆ, ಅಶೋಕ ಕುಮಾರ್‌ ಕೊಡವೂರು, ದಿನೇಶ್‌ ಪುತ್ರನ್‌, ಬಂಟ ಸಮುದಾಯದ ಇಬ್ಬರು ಆಸಕ್ತರಿದ್ದು ಇವರೊಳಗೆ ಒಬ್ಬರನ್ನು ನೇಮಕ ಮಾಡಬಹುದು’. ಮೂಲಗಳ ಪ್ರಕಾರ ಮುನಿಯಾಲು ಉದಯ ಶೆಟ್ಟಿ, ಮುರಳಿ ಶೆಟ್ಟಿ, ಬೆಳಪು ದೇವಿಪ್ರಸಾದ್‌ ಶೆಟ್ಟಿ, ರಾಜು ಪೂಜಾರಿ ಪೈಪೋಟಿಯಲ್ಲಿದ್ದಾರೆ. 

ಪಕ್ಷ ಗೆಲ್ಲಿಸುವುದೋ? ಪಕ್ಷವನ್ನು ಗೆಲ್ಲಿಸುವುದೋ?
ಪ್ರಜಾಪ್ರಭುತ್ವದಲ್ಲಿ ಪಕ್ಷದ ನಾಯಕರು, ಕಾರ್ಯಕರ್ತರು ಜನಪ್ರತಿನಿಧಿಯನ್ನು ಆರಿಸುವಂತಾಗಬೇಕು. ಇದರ ಅರ್ಥ ಪಕ್ಷ ಜನಪ್ರತಿನಿಧಿಯನ್ನು ಆರಿಸುತ್ತದೆ. ಆದರೆ ಈಗ ಕಾರ್ಯಕರ್ತರು ಜನಪ್ರತಿನಿಧಿಯನ್ನು ಆರಿಸುವುದಲ್ಲ, ಜನಪ್ರತಿನಿಧಿಯಾಗುವವರು ತಾವು ಗೆದ್ದು ಪಕ್ಷಕ್ಕೆ ಗೆಲುವು ತಂದು ಕೊಡುವಂತಿದ್ದಾರೆ.

– ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next