Advertisement

ಕಾಸರಗೋಡಿಗೆ ಕನ್ನಡಿಗ ಪ್ರತಿನಿಧಿ ದೊರೆಯಬಹುದೇ?

01:00 AM Mar 14, 2019 | Harsha Rao |

ಕಾಸರಗೋಡು: ಲೋಕಸಭಾ ಚುನಾವಣೆ ಸಮೀಪಿಸುತ್ತಿ¤ದೆ. ಕೇರಳದಲ್ಲಿ ಎಡರಂಗ ತನ್ನ ಅಭ್ಯರ್ಥಿಗಳನ್ನು ಈಗಾಗಲೇ ಘೋಷಿಸಿದೆ. ಐಕ್ಯರಂಗ ಮತ್ತು ಎನ್‌.ಡಿ.ಎ. ತಮ್ಮ ಅಭ್ಯರ್ಥಿಗಳನ್ನು ಇನ್ನೂ ಪ್ರಕಟಿಸಿಲ್ಲ. ಈ ಬಾರಿಯಾದರೂ ಭಾಷಾ ಅಲ್ಪಸಂಖ್ಯಾಕ ಪ್ರದೇಶವಾದ ಕಾಸರಗೋಡಿಗೆ ಕನ್ನಡಿಗ ಅಭ್ಯರ್ಥಿ ದೊರೆಯಬಹುದೆ ಎಂದು ಕನ್ನಡಿಗರು ಎದುರು ನೋಡುತ್ತಿದ್ದಾರೆ.

Advertisement

ಎಡರಂಗದಿಂದ ´ೋಷಣೆಯಾದ ಅಭ್ಯರ್ಥಿ ಕೆ.ಪಿ.ಸತೀಶ್ಚಂದ್ರನ್‌ ಅವರು ಕನ್ನಡಿಗರಲ್ಲ. ಆದುದರಿಂದ ಕಾಂಗ್ರೆಸ್‌ ಮತ್ತು ಬಿ.ಜೆ.ಪಿ ಪಕ್ಷಗಳಾದರೂ ಕನ್ನಡಿಗರಿಗೆ ಅವಕಾಶ ನೀಡಬಹುದೆ ಎಂಬ ನಿರೀಕ್ಷೆ ಮಾತ್ರ ಬಾಕಿಯುಳಿದಿದೆ. ಕನ್ನಡಿಗ ಅಭ್ಯರ್ಥಿ ಕನ್ನಡಪರ ನಿಲುವನ್ನು ಹೊಂದಿರಬೇಕಾದುದು ಕೂಡ ಮುಖ್ಯವಾಗುತ್ತದೆ. ಅವರು ಗೆಲ್ಲುವ ಸಾಮರ್ಥ್ಯವುಳ್ಳವರೂ ಆಗಿರಬೇಕು. ಹೀಗೆ ಗೆದ್ದರೆ ಮಾತ್ರ ಲೋಕಸಭೆಯಲ್ಲಿ ಕನ್ನಡಿಗರ ಧ್ವನಿಯನ್ನೆತ್ತುವ ಪ್ರತಿನಿಧಿಯೊಬ್ಬರು ಇರುತ್ತಾರೆ.

ಹಿಂದೆ ಕಾಸರಗೋಡು ತಾಲೂಕು ದ.ಕ. ಜಿಲ್ಲೆಯಲ್ಲಿದ್ದು  ಮದ್ರಾಸ್‌ ರಾಜ್ಯಕ್ಕೆ ಸೇರಿದ್ದಾಗ 1952 ರಲ್ಲಿ ನಡೆದ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಬಿ.ಶಿವ ರಾವ್‌ ಅವರು ದ.ಕ. ದ ಮೊದಲ ಜನಪ್ರತಿನಿಧಿಯಾಗಿದ್ದರು. ಕೇರಳ ರಾಜ್ಯಕ್ಕೆ ಸೇರಿದ ಕಾಸರಗೋಡು ಲೋಕಸಭಾ ಕ್ಷೇತ್ರದಿಂದ 1957ರಲ್ಲಿ ಎ.ಕೆ. ಗೋಪಾಲನ್‌ ಭಾರತೀಯ ಕಮ್ಯುನಿಷ್ಟ್ ಪಾರ್ಟಿಯ ಮೂಲಕ ಮೊದಲ ಎಂ.ಪಿ.ಯಾದರು. 1962 ಹಾಗೂ 1967ರಲ್ಲಿ ಎ.ಕೆ.ಗೋಪಾಲನ್‌ ಅವರೇ ಜನಪ್ರತಿನಿಧಿಯಾಗಿದ್ದರು. 1971 ಹಾಗೂ 1977ರಲ್ಲಿ  ಕಾಂಗ್ರೆಸ್‌ನಿಂದ ಕಡನ್ನಪ್ಪಳ್ಳಿ ರಾಮಚಂದ್ರನ್‌, 1980 ರಲ್ಲಿ ಸಿ.ಪಿ.ಎಂ. ನಿಂದ ಎಂ. ರಾಮಣ್ಣ ರೈ 1984 ರಲ್ಲಿ ಕಾಂಗ್ರಸ್‌ನಿಂದ ಐ.ರಾಮ ರೈ, 1989 ರಲ್ಲಿ ಹಾಗೂ 1991 ರಲ್ಲಿ ಸಿ.ಪಿ.ಎಂ. ನಿಂದ ಮತ್ತೆ ರಾಮಣ್ಣ ರೈ  ಅವರು ಆಯ್ಕೆಯಾದರು. ತದನಂತರ 1996, 1998ರಲ್ಲಿ  ಸಿ.ಪಿ.ಎಂ. ನಿಂದ ಟಿ.ಗೋವಿಂದನ್‌, 2004, 2009, 2014ರಲ್ಲಿ ಸಿ.ಪಿ.ಎಂ. ನಿಂದ ಪಿ.ಕರುಣಾಕರನ್‌ ಕಾಸರಗೋಡಿನ ಪ್ರತಿನಿಧಿಯಾಗಿದ್ದಾರೆ. ಹೀಗೆ ಎರಡು ಬಾರಿ ಎಂ. ರಾಮಣ್ಣ ರೈ ಹಾಗೂ ಒಮ್ಮೆ ರಾಮ ರೈ ಅವರನ್ನು ಬಿಟ್ಟರೆ ಕನ್ನಡ, ತುಳು ಮನೆಮಾತಿನವರು ಯಾರೂ ಕಾಸರಗೋಡಿನಿಂದ ಆಯ್ಕೆಗೊಂಡಿಲ್ಲ. 1991ರಲ್ಲಿ ಜಯಗಳಿಸಿದ ರಾಮಣ್ಣ ರೈ ಅವರೇ ಕೊನೆಯ ಕನ್ನಡಿಗ ಪ್ರತಿನಿಧಿ.

2004ರಿಂದ ಕಾಸರಗೋಡಿನ ಸಂಸದರಾಗಿದ್ದ ಪಿ.ಕರುಣಾಕರನ್‌ ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಪ್ರಯತ್ನಿಸಿದ್ದೇನೆ ಎಂದು ಹೇಳುತ್ತಾರೆ. ಆದರೆ ಲೋಕಸಭೆಯಲ್ಲಿ ಮಹಾಜನ ವರದಿ ಹಾಗೂ ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸುವುದರ ವಿರುದ್ಧ ಅವರು ಮಾತನಾಡಿದ್ದರು. 

ಹೀಗೆ ಕಾಸರಗೋಡಿನ ಜನಪ್ರತಿನಿಧಿಯೇ ಕರ್ನಾಟಕದೊಂದಿಗಿನ ವಿಲೀನದ ವಿರುದ್ಧ ಮಾತನಾಡಿದ ಬಳಿಕ ಮಹಾಜನ ವರದಿಯ ಪ್ರಸ್ತಾಪವೇ ಲೋಕಸಭೆ ಯಲ್ಲಿ ಆಗಲಿಲ್ಲ. ಈಗ ಯಾರು ಎಂ.ಪಿ.ಯಾದರೂ ಮಹಾಜನ ವರದಿಯ ಜಾರಿಗಾಗಿ ಪ್ರಯತ್ನಿಸ ಬಹುದೆಂಬುದು ಕನಸಿನ ಮಾತು. ಕನಿಷ್ಠಪಕ್ಷ ಆಡಳಿತ ವ್ಯವಹಾರ, ಶಿಕ್ಷಣ, ಉದ್ಯೋಗ  ಮೊದಲಾದ ರಂಗಗಳಲ್ಲಿ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿಯಾದರೂ ಪ್ರಯತ್ನಿಸುವರೇ ಎಂಬುದನ್ನು ಕಾದುನೋಡಬೇಕಿದೆ.

Advertisement

ಕೇಂದ್ರ ಸರಕಾರಕ್ಕೆ ಸಂಬಂಧಿಸಿದ ಇಲಾಖೆಗಳಾದ ರೈಲ್ವೇ, ಭಾರತೀಯ ಅಂಚೆ, ರಾಷ್ಟ್ರೀಕೃತ ಬ್ಯಾಂಕ್‌, ಜೀವವಿಮಾ ನಿಗಮ, ಬಿ.ಎಸ್‌.ಎನ್‌.ಎಲ್‌. ಮೊದಲಾದವುಗಳಲ್ಲಿ ಕಾಸರಗೋಡಿನ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಇವುಗಳ ಸ್ಥಳೀಯ ಕಚೇರಿಗಳಲ್ಲಿ ಕನ್ನಡವನ್ನು ನಿರ್ಲಕ್ಷಿಸಲಾಗುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮಲಯಾಳದಲ್ಲಿ ಪ್ರಶ್ನೆಗಳನ್ನು ಕೇಳುವುದರಿಂದ ಕನ್ನಡಿಗ ಉದ್ಯೋಗಾರ್ಥಿಗಳಿಗೆ ತೊಂದರೆ ಯಾಗುತ್ತಿದೆ. ಇಂತಹ ಸಮಸ್ಯೆಗಳನ್ನು ಬಗೆಹರಿಸುವುದಲ್ಲದೆ ಕಾಸರಗೋಡು ಕ್ಷೇತ್ರದ ಅದರಲ್ಲೂ ನಿರ್ಲಕ್ಷಿತವಾದ ಕನ್ನಡ ಪ್ರದೇಶದ ಅಭಿವೃದ್ಧಿಯೂ ಮುಖ್ಯ.

ಕಾಸರಗೋಡಿನ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯು ವಂತಾಗಬೇಕು. ಇಲ್ಲಿನ ಪರಿಸರಕ್ಕೆ ಧಕ್ಕೆಯಾಗ ದಂತೆ ಕೈಗಾರಿಕೆ, ಪ್ರವಾಸೋದ್ಯಮ  ಮೊದಲಾದ ರಂಗಗಳಲ್ಲಿ ಅಭಿವೃದ್ಧಿ ನಡೆಯಬೇಕು. ರೈಲು ನಿಲ್ದಾಣಗಳು  ಅಭಿವೃದ್ಧಿ ಗೊಳ್ಳಬೇಕು. ತುಳುಭಾಷೆಗೆ ಮಾನ್ಯತೆ ದೊರೆಯಬೇಕು. ಕನ್ನಡಕ್ಕೆ ಸ್ಥಾನ ದೊರೆಯಬೇಕು. 
ಕಾಸರಗೋಡಿಗೆ ಕನ್ನಡ ಮತ್ತು ತುಳು ಅರಿತ ಜನಪ್ರತಿನಿಧಿಯಿದ್ದರೆ ಇವುಗಳನ್ನು ಸಾಧಿಸುವುದು ಸುಲಭ ಎಂಬುದು ಜನರ ಗ್ರಹಿಕೆ.

ಆಶಾವಾದ
ಈಚೆಗಿನ ದಿನಗಳಲ್ಲಿ ಕಾಸರಗೋಡು ಲೋಕಸಭಾ ಕ್ಷೇತ್ರವಿರಲಿ, ಕಾಸರಗೋಡು ಮತ್ತು ಮಂಜೇಶ್ವರ ವಿಧಾನಸಭಾ ಕ್ಷೇತ್ರಗಳಿಂದ ಕೂಡ  ಕನ್ನಡಿಗರಿಗೆ ಸ್ಪರ್ಧೆಯ ಅವಕಾಶ ದೊರೆಯುತ್ತಿಲ್ಲ. ಪ್ರಮುಖ ಮೂರು ರಾಜಕೀಯ ಪಕ್ಷಗಳೂ ಕಾಸರಗೋಡಿನಲ್ಲಿ ಕನ್ನಡಿಗರಿಗೆ ಅವಕಾಶ ನೀಡಬೇಕು, ಕನ್ನಡಿಗರು ಗೆದ್ದು ಬಂದರೆ ಮಾತ್ರ ಸ್ಥಳೀಯರ ಸಮಸ್ಯೆಗಳು ಪರಿಹಾರಗೊಳ್ಳಬಹುದು ಎಂಬುದು ಕನ್ನಡಿಗರ ಹಕ್ಕೊತ್ತಾಯ, ಆಶಾವಾದ.

Advertisement

Udayavani is now on Telegram. Click here to join our channel and stay updated with the latest news.

Next