Advertisement

ದೇಶಕ್ಕೊಬ್ಬ ಲೆಕ್ಕಪತ್ರ ಕಾವಲುಗಾರ ಅದುವೇ ಸಿಎಜಿ

01:41 PM Jul 10, 2017 | Team Udayavani |

ಇಂದು ಕೇಂದ್ರ ಸರ್ಕಾರ ಹಾಗೂ ಹಲವು ರಾಜ್ಯ ಸರ್ಕಾರಗಳ ಭ್ರಷ್ಟಾಚಾರದ ಹಗರಣಗಳನ್ನು ಬಯಲಿಗೆ ತರುತ್ತಿರುವುದರಲ್ಲಿ ಪ್ರಮುಖವಾದ ಪಾತ್ರ ಪತ್ರಿಕೆಗಳಲ್ಲ, ಟಿವಿ ಮಾಧ್ಯಮಗಳಲ್ಲ. ಶಾಂತಂ ಪಾಪಂ, ವಿರೋಧ ಪಕ್ಷಗಳೂ ಅಲ್ಲ. ಅಂಥದ್ದೊಂದು ಮಹಾನ್‌ ಕೆಲಸ ಮಾಡಿದಾತ ಕೇಂದ್ರ ಸರ್ಕಾರವೇ ನೇಮಕ ಮಾಡಿದ ಕಂಟ್ರೋಲರ್‌ ಅಂಡ್‌ ಆಡಿಟರ್‌ ಜನರಲ್‌.

Advertisement

ಒಮ್ಮೆ ಫ್ಲ್ಯಾಶ್‌ಬ್ಯಾಕ್‌ಗೆ ಹೋಗಿ- 1995ರ ಬಿಹಾರದ ಬೃಹತ್‌ ಮೇವು ಹಗರಣ, 2011ರಲ್ಲಿ ಕಂಪನ ಮೂಡಿಸಿದ 2ಜಿ ಸ್ಪೆಕ್ಟ ಅವ್ಯವಹಾರ, 2012ರ ಕಲ್ಲಿದ್ದಲು ವಿತರಣೆಯಲ್ಲಿ ನಡೆದ  ಭ್ರಷ್ಟಾಚಾರ, ಮನಮೋಹನ್‌ ಸಿಂಗ್‌ ಕಾಲದಲ್ಲಿ ಪ್ರಧಾನಮಂತ್ರಿಗಳದೂ ಪಾತ್ರವಿದೆ ಎನ್ನಲಾದ ಸಂಶಯಾಸ್ಪದ ವಹಿವಾಟು, ರೈಲ್ವೆ ಹಗರಣಗಳನ್ನು ಬೆಳಕಿಗೆ ತಂದಿದ್ದೂ ಸಿಎಜಿ. 

ಸಿಎಜಿ ಎಂಬ ಸರ್ಕಾರದೊಳಗಿನ ಅಲಗು!
ಸಾಮಾನ್ಯವಾಗಿ ಸಿಎಜಿ ಎಂದು ಪರಿಚಿತವಾಗಿರುವ ಈ ಹುದ್ದೆ ಹಾಗೂ ವ್ಯವಸ್ಥೆ ನಮ್ಮ ದೇಶದ ಸಂವಿಧಾನವೇ ರೂಪಿಸಿದ ಪ್ರಾಧಾನ. ಕೇಂದ್ರ ಸರ್ಕಾರದ ಎಲ್ಲ ಜಮಾ ಖರ್ಚುಗಳನ್ನು ಆಡಿಟ್‌ ಮಾಡುವುದು ಸಿಎಜಿ ಜವಾಬ್ದಾರಿ. ಭಾರತ ಸಂವಿಧಾನದ 148ರಿಂದ 151ನೇ ಉಲ್ಲೇಖಗಳಲ್ಲಿ ಸಿಎಜಿ ಇದ್ದು, ಅದು ಸಂವಿಧಾನದ ಅಡಿ ಸರ್ವಶಕ್ತ. ಸಂವಿಧಾನದ 5ನೇ ಅಧ್ಯಾಯದ ಐದನೇ ಭಾಗದ 7ಬಿ ಉಪಶೀರ್ಷಿಕೆಯಲ್ಲಿ ಸಿಎಜಿ ಎಂಬ ದೈತ್ಯ ಶಕ್ತಿಯ ಸೃಷ್ಟಿಯಾಗಿದೆ. ಸಿಎಜಿ ಅಡಿ ದೇಶದಾದ್ಯಂತ ಬರೋಬ್ಬರಿ 58 ಸಾವಿರಕ್ಕೂ ಹೆಚ್ಚಿನ ಉದ್ಯೋಗಿಗಳು ಕೆಲಸ ಮಾಡುತ್ತಾರೆ. ಅಷ್ಟಕ್ಕೂ ಸಿಎಜಿಗೆ ಕೇವಲ ಕೇಂದ್ರದ ಲೆಕ್ಕ ಪತ್ರ ನೋಡುವುದಷ್ಟೇ ಕೆಲಸವಲ್ಲ. ರಾಜ್ಯ ಸರ್ಕಾರಗಳ ಆಡಿಟ್‌, ಹಾಗೆಯೇ ಕೇಂದ್ರ ಹಾಗೂ ರಾಜ್ಯಗಳ ಅಡಿಯಲ್ಲಿ ನೇರವಾಗಿ ಬರುವ ಪ್ರಾಧಿಕಾರಗಳ ವ್ಯವಹಾರಕ್ಕೂ ಇದು ಮಸೂರ ಹಿಡಿಯುತ್ತದೆ. ಅಷ್ಟೇಕೆ, ಕೇಂದ್ರದ ಶೇ. 51ರಷ್ಟು ಪಾಲುದಾರಿಕೆಯ ಬ್ಯಾಂಕ್‌, ವಿಮಾ ಸಂಸ್ಥೆ ಹೊರತಾದ ಕಾರ್ಪೊರೇಷನ್‌ ಕಂಪನಿಗಳ ಲೆಕ್ಕಪತ್ರದ ವಿಚಾರದಲ್ಲೂ ಸಿಎಜಿಯದ್ದೇ ಅಂತಿಮ ಷರಾ!

ಈಗ ದೇಶದ ಪ್ರಧಾನಿ ಶಿಫಾರಸಿನ ಮೇಲೆ ರಾಷ್ಟ್ರಪತಿಗಳು ಸಿಎಜಿಯನ್ನು ಆಯ್ಕೆ ಮಾಡುತ್ತಾರೆ. ಅವರನ್ನು ಆ ನಂತರ ಪದವಿಯಿಂದ ಕೆಳಗಿಳಿಸುವುದು ದೊಡ್ಡ ತಾಂತ್ರಿಕ ಸರ್ಕಸ್‌ನ ಕೆಲಸ. ಪಾರ್ಲಿಮೆಂಟ್‌ನ ಎರಡೂ ಸದನಗಳು ಸಿಎಜಿ ಅವರ ವ್ಯವಹಾರ, ಭ್ರಷ್ಟಾಚಾರದ ಗಂಭೀರತೆಯ ಅನುಸಾರ ಕ್ರಮಕ್ಕೆ ಮುಂದಾಗಬಹುದು. ಒಮ್ಮೆ ಆರಿಸಲ್ಪಟ್ಟರೆ ಸಿಎಜಿಯ ಅವಧಿ ಆರು ವರ್ಷ. 

ಒಂದೊಮ್ಮೆ ಆತನ ವಯಸ್ಸು ಈ ಅವಧಿಯೊಳಗೆ 65 ದಾಟಿದರೆ ಆಗ ಮಾತ್ರ ಆರು ವರ್ಷದೊಳಗೆ ನಿವೃತ್ತರಾಗಬೇಕು. ದೇಶದ 12ನೇ ಸಿಎಜಿ ಶಶಿಕಾಂತ್‌ ಶರ್ಮ 2013ರ ಮೇ 23ರಂದು ಅಧಿಕಾರ ಸ್ವೀಕರಿಸಿದ್ದಾರೆ. ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಾಧೀಶರ ಎಲ್ಲ ಶಕ್ತಿಗಳನ್ನು ಈ ಹುದ್ದೆಗೆ ನೀಡಲಾಗಿದ್ದು ವಜಾಗೊಳಿಸಲು ಕೂಡ ಅವರಿಗೆ ಅನ್ವಯಿಸುವ ನಿಯಮವನ್ನೇ ಅನುಸರಿಸಬೇಕಾಗುತ್ತದೆ. ದೇಶ ಈವರೆಗೆ 12 ಸಿಎಜಿಗಳನ್ನು ಕಂಡಿದ್ದು ವಿನೋದ್‌ ರೈ ಕಾಲದಲ್ಲಿ ಪ್ರಕಟವಾದ ಕಾಮನ್‌ವೆಲ್ತ್‌ ಗೇಮ್ಸ್‌ನ ಕರ್ಮಕಾಂಡ ಸೇರಿದಂತೆ ಸಿಎಜಿ ಕಾರಣಕ್ಕೆ ಹಗರಣಗಳು ಹೊರಬರುತ್ತಲೇ ಇವೆ.

Advertisement

ಆಯ್ಕೆ ಪದ್ಧತಿ ಬದಲಾವಣೆ?
ಒಂದು ರೀತಿಯಲ್ಲಿ ಸಿಎಜಿ ಆಯ್ಕೆಯ ಹಿಂದಿನ ಪ್ರಕ್ರಿಯೆ ಗುಪ್ತಗುಪ್ತ. ಪ್ರಧಾನಮಂತ್ರಿ ಶಿಫಾರಸು ಮಾಡಿದ ವ್ಯಕ್ತಿಯನ್ನು ಸಿಎಜಿಯಾಗಿ ರಾಷ್ಟ್ರಪತಿಗಳು ನೇಮಕ ಮಾಡಿ ಆದೇಶ ಹೊರಡಿಸುತ್ತಾರೆ ಎಂಬುದು ಒಂದು ವಾಕ್ಯದ ವಿವರಣೆ. ಆದರೆ ಈ ಮುನ್ನ ಈ ಅಪರೂಪದ ಹುದ್ದೆಗೆ ಹೆಸರುಗಳನ್ನು ಸೂಚಿಸುವ ಮಾದರಿಯನ್ನು ಯಾವಾಗಲೂ ಸಾರ್ವಜನಿಕ ಗೊಳಿಸುವುದಿಲ್ಲ. ಆದರೆ ಒಮ್ಮೆ ಇಲ್ಲಿನ ಅವಧಿ ಪೂರೈಸಿದ ನಂತರ ಅಂತಹ ಮಾಜಿ ಸಿಎಜಿ ಸದರಿ ಹುದ್ದೆಯಲ್ಲಿ ಮುಂದುವರೆಯುವ ಅವಕಾಶ ಕೊಡಲಾಗುವುದಿಲ್ಲ. ಇದರ ಜೊತೆಗೆ ದೇಶದ ಅಥವಾ ರಾಜ್ಯದ ಯಾವುದೇ ಹುದ್ದೆಯನ್ನು ಅಲಂಕರಿಸುವುದರಿಂದ ಅವರನ್ನು ನಿರ್ಬಂಧಿಸಲಾಗಿದೆ. ಆ ಮಟ್ಟಿಗೆ ನಮ್ಮ ಸಂವಿಧಾನ ರಚನೆಕಾರರು ಸಿಎಜಿ ಹುದ್ದೆಯ  ಪಾವಿತ್ರ್ಯತೆಯನ್ನು ಕಾಪಾಡಲು ಶಿಷ್ಟ ಸೂತ್ರವನ್ನು ಅನುಸರಿಸಿದಂತಾಗಿದೆ.

ಅದೃಷ್ಟಕ್ಕೆ ಈವರೆಗೆ ಸಿಎಜಿ ಹುದ್ದೆಗೆ ಆಯ್ಕೆಯಾದವರ ಹೆಸರು ರಾಜಕೀಯಕರಣಗೊಂಡಿಲ್ಲ. ಆದರೆ ಆಯ್ಕೆ ವಿಧಾನವನ್ನು ಬದಲಿಸುವಂತೆ ವಿವಿಧ ರಾಜಕೀಯ ಪಕ್ಷಗಳ ಪ್ರಮುಖರು ಒತ್ತಾಯಿಸುತ್ತಲೇ ಬಂದಿದ್ದಾರೆ. ಹಾಗಂತ ಹಲವು ವರ್ಷಗಳ ಹಿಂದೆಯೇ ದೇಶದ ಉಪಪ್ರಧಾನಿಯಾಗಿ ಲಾಲ್‌ಕೃಷ್ಣ ಅಡ್ವಾಣಿ ಪ್ರತಿಪಾದಿಸಿದ್ದರು. ಪ್ರಧಾನಿ, ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಾಧೀಶರು, ಕಾನೂನು ಮಂತ್ರಿ, ಲೋಕಸಭೆ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರನ್ನು ಒಳಗೊಂಡಂತೆ ಕೊಲಿಜಿಯಂ ರೂಪಿಸಿ ಅದರ ನಿರ್ಧಾರದ ಮೇಲೆ ಸಿಎಜಿ ನೇಮಕವಾಗಬೇಕು ಎಂಬುದು ಅಡ್ವಾಣಿ ಪ್ರತಿಪಾದನೆಯಾಗಿತ್ತು. ಅವತ್ತು ತಮಿಳುನಾಡಿನ ಎಂ.ಕರುಣಾನಿಧಿ ಅದನ್ನು ಬೆಂಬಲಿಸಿದ್ದರು. ಅಷ್ಟೇಕೆ, ಹಲವು ಪ್ರತ್ಯೇಕ ಸಂದ‌ರ್ಭಗಳಲ್ಲಿ ಸಿಪಿಐನ ಗುರುದಾಸ್‌ ದಾಸ್‌ಗುಪ್ತ, ಮಾಜಿ ಸಿಎಜಿಗಳಾದ ಬಿ.ಬಿ.ಟಂಡನ್‌, ಎನ್‌.ಗೋಪಾಲಸ್ವಾಮಿ, ಎಸ್‌.ವೈ ಕುರೇ ಅಭಿಪ್ರಾಯವೂ ಅದೇ ಆಗಿತ್ತು. ಮಾಜಿ ಸಿಎಜಿ .ಕೆ.ಶುಂಗು, ಈ ವ್ಯವಸ್ಥೆಯನ್ನು ಏಕ ವ್ಯಕ್ತಿ ಸಿಎಜಿಗಿಂತ ಹೆಚ್ಚು ಸದಸ್ಯರ ಮಾದರಿಗೆ ಬದಲಾಗಬೇಕು ಎಂದು ಒತ್ತಾಯಿಸುತ್ತಾರೆ.

ಈ ಚರ್ಚೆ ನಡೆಯುತ್ತಲೇ ಇದ್ದರೂ ಅಧಿಕಾರದಲ್ಲಿರುವ ಯಾವ ಪಕ್ಷವೂ ಜೇನುಗೂಡಿಗೆ ಕೈಹಾಕುವುದಿಲ್ಲ. ಒಂದು ಮಟ್ಟಿಗಾದರೂ ಈಗ ಸಿಎಜಿ ಸರ್ಕಾರದ ಮರ್ಜಿಯನ್ವಯ ಆಯ್ಕೆಯಾಗುವುದರಿಂದ ಸರ್ಕಾರ ಮಾಡುವ ಅಪರಾತಪರಗಳನ್ನು ಮುಚ್ಚಿಹಾಕಲು ಅನುಕೂಲವಾಗುತ್ತದೆ. ಎದುರಾಳಿಗಳನ್ನು ಗಾಳದಲ್ಲಿ ಸಿಕ್ಕಿಸಲು ಕೂಡ ಇದೇ ಅಸ್ತ್ರ ಬಳಕೆಯಾಗುತ್ತದೆ.

ಇಷ್ಟಿದ್ದೂ ಸಿಎಜಿ ಬಹಿರಂಗಪಡಿಸುತ್ತಿರುವುದು ನಮ್ಮ ದೇಶದ ಸೂಜಿ ಮೊನೆಯಷ್ಟರ  ಭ್ರಷ್ಟಾಚಾರವನ್ನು ಮಾತ್ರ. ಈಗಲೂ ಅದಕ್ಕೆ ದೇಶದ ಲೆಕ್ಕಪತ್ರದ ಶೇ. 65ರಷ್ಟನ್ನು ಪರಿಶೀಲಿಸುವ ಅಧಿಕಾರ ಸಿಕ್ಕಿಲ್ಲ. 2009ರಲ್ಲಿ ಅಂದಿನ ಸಿಎಜಿ ನೋದ್‌ ರೈ, 1971ರ ಆಡಿಟ್‌ ಕಾಯ್ದೆಗೆ ತಿದ್ದುಪಡಿಯಾಗಬೇಕು. ಎಲ್ಲ ಖಾಸಗಿ-ಸಾರ್ವಜನಿಕ ಸಹಭಾಗಿತ್ವದ(ಪಿಪಿಪಿ) ಯೋಜನೆಗಳು ಸಿಎಜಿ ವ್ಯಾಪ್ತಿಗೆ ಬರಬೇಕು. ಪಂಚಾಯತ್‌ ರಾಜ್‌ ವ್ಯವಸ್ಥೆ ಹಾಗೂ ಸರ್ಕಾರದ ಧನಸಹಾಯ ಪಡೆಯುವ ಸಂಸ್ಥೆಗಳೂ ಸಿಎಜಿ ಪರಿಶೀಲನೆಗೆ ಒಳಪಡಬೇಕು ಎಂದು ಒತ್ತಾಯಿಸಿದ್ದರು. ಕೊಡಬೇಕಾದ ದಾಖಲೆಗಳಲ್ಲಿಯೂ ಶೇ. 30ರಷ್ಟನ್ನು ಕೊಡದೆ ಸತಾಯಿಸುವ ಸರ್ಕಾರ ಇನ್ನಷ್ಟು ಅಧಿಕಾರವನ್ನು ಕೊಟ್ಟು ತಪ್ಪು ಮಾಡುತ್ತದೆಯೇ?

ಬಣ್ಣದ ಚಿತ್ರ ಕಟ್ಟುವ ಬಜೆಟ್‌ಗೂ ವಾಸ್ತವಕ್ಕೂ “ಸಿಎಜಿ’ ಅಂತರ!
ನಮ್ಮ ದೇಶದಲ್ಲಿ ಸಾಮಾನ್ಯ ನಾಗರಿಕರಿಂದ ಹಿಡಿದು ಮಾಧ್ಯಮಗಳವರೆಗೆ ಪ್ರತಿಯೊಬ್ಬರೂ ಬಜೆಟ್‌ಅನ್ನು ಸಂಭ್ರಮಿಸುತ್ತಾರೆ. ಹಲವು ಸಂದರ್ಭಗಳಲ್ಲಿ ಬಜೆಟ್‌ ಒಂದು ಸರ್ಕಾರದ ನೀತಿನಿಲುವುಗಳನ್ನು ಪ್ರತಿಫ‌ಲಿಸುತ್ತವೆ ಎಂಬುದು ನಿಜ. ಆದರೆ ಈಗ ಅದಕ್ಕೆ ಕೊಡುತ್ತಿರುವ  48 ಘಂಟೆಗಳ ನೇರ ಪ್ರಸಾರ, ನಾಲ್ಕಾರು ಪುಟಗಳ ಸುದ್ದಿ ಪ್ರಚಾರ ಅತಿ ಎಂದು ಸಿಎಜಿ ವರದಿಗಳನ್ನು ಓದಿದಾಗ ಮನದಟ್ಟಾಗುತ್ತದೆ. ಒಂದು ಸರ್ಕಾರದ ಬಜೆಟ್‌ ಗಾತ್ರ ಎಂಬುದರಿಂದ ಆರಂಭವಾಗುವ ಮಿಥ್ಯೆ ಆ ಸರ್ಕಾರ ವಿವಿಧ ಇಲಾಖೆಗಳಿಗೆ ಮೀಸಲಿರಿಸಿದ್ದೇನೆ ಎಂದು ಹೇಳುವ ಮೊತ್ತಕ್ಕೂ ಮಾರ್ಚ್‌ 31ರ ಗಡಿ ತೇದಿಗೆ ವಾಸ್ತವವಾಗಿ ಖರ್ಚಾದ ಹಣವನ್ನು ಗಮನಿಸಿದರೆ ಒಂದು ಶಾಕ್‌ ಗ್ಯಾರಂಟಿ. 

ಇಂದು ಈ ದಾಖಲೆಗಳು ಜನಸಾಮಾನ್ಯರಿಗೂ ಸುಲಭ ಲಭ್ಯ. ಸಿಎಜಿಯ ಆಡಿಟ್‌ ವರದಿಗಳನ್ನು //saiindia.gov.in/  ವೆಬ್‌ ಪುಟದಲ್ಲಿ ನೋಡಬಹುದು. 1352 ಆಡಿಟ್‌ ದಾಖಲೆಗಳನ್ನು ಇಲ್ಲಿ ಪೋಣಿಸಲಾಗಿದೆ ಎಂದು ಹೇಳಲಾಗಿದೆ. ಅದಕ್ಕಿಂತ ಮುಖ್ಯವಾಗಿ  ಪ್ರತಿಯೊಂದು ರಾಜ್ಯದ ವಾರ್ಷಿಕ ಲೆಕ್ಕಪತ್ರಗಳ ಅಸಲಿಯತ್ತಾದ ಮಾಹಿತಿ ಪಿಡಿಎಫ್ ದಾಖಲೆಗಳ ರೂಪದಲ್ಲಿ ಇಲ್ಲಿ ಸಿಗುತ್ತದೆ. ಡೌನ್‌ಲೋಡ್‌ ಮಾಡಿಕೊಳ್ಳಲು ಕೂಡ ಅವಕಾಶ ಕಲ್ಪಿಸಲಾಗಿದೆ. ಇದನ್ನು ತೆರೆದು ಇಲಾಖಾವಾರು ಖರ್ಚು ವೆಚ್ಚಗಳ ಪಟ್ಟಿ ನೋಡಿದರೆ ನಮಗೆ ನಮ್ಮ ಸರ್ಕಾರದ ಆಡಳಿತದ ಪೂರ್ಣ ಚಿತ್ರಣ ಸಿಗುತ್ತದೆ. ಜನ ಇದನ್ನು ಬಳಸಿಕೊಳ್ಳಬೇಕು. ಬಹುಶಃ ಮಾಧ್ಯಮಗಳು ಕೂಡ ರಾಜಕಾರಣಿಗಳ ಹೇಳಿಕೆಗಳನ್ನು ಹೆಚ್ಚು ವಿಜೃಂಭಿಸುವುದಕ್ಕಿಂತ ಇಂತಹ ಮಾಹಿತಿಯನ್ನು ಕೂಡ “ರಂಜನೀಯ’ವಾಗಿ ಹೇಳಲು ಸಾಧ್ಯ.

ಎಲ್ಲವೂ ಸರಿ ಇಲ್ಲ… ಜನಪ್ರತಿನಿಧಿಗಳು ಬೇಳೆ ಬೇಯಿಸುತ್ತಾರೆ!
ಸಿಎಜಿ ವರದಿಗಳ ಕುರಿತಾಗಿಯೂ ಆಡಳಿತದಾರರಿಂದ ಆಕ್ಷೇಪ ವ್ಯಕ್ತವಾಗುತ್ತಲೇ ಇವೆ. ನಿನ್ನೆ ಮೊನ್ನೆ ವಿಐಪಿ ಹೆಲಿಕಾಫ್ಟರ್‌ ಖರೀದಿ ಒಪ್ಪಂದದಲ್ಲಿ ಲೋಪ, ಉದ್ಯೋಗ ಖಾತ್ರಿಯ ಎನ್‌ಆರ್‌ಇಜಿ ಯೋಜನೆಯಲ್ಲಿ ನಿಯಮ ಉಲ್ಲಂಘನೆ, 20 ಸಾವಿರ ಕಾಂಡೂಮ್‌ ಮಿಷನ್‌ಗಳೇ ಕಾಣೆಯಾದದ್ದು ಸೇರಿದಂತೆ ವಿವಿಧ ಹಗರಣಗಳ‌ನ್ನು ಸಿಎಜಿ ತನ್ನ ವರದಿಯಲ್ಲಿ ಹೇಳುತ್ತಿದೆ. ತನಿಖೆಯ ಮಾತುಗಳನ್ನು ಆಡಿ ಕೇಂದ್ರ ಸರ್ಕಾರ ತಿಪ್ಪೆಸಾರಿಸುತ್ತಿದೆ. 

ಇದರ ನಡುವೆ ಸಿಎಜಿ ವರದಿಗಳ ವಾಸ್ತವತೆಯನ್ನೂ ಪ್ರಶ್ನಿಸಲಾಗುತ್ತಿದೆ. ಉದಾಹರಣೆಗೆ, 1.76 ಲಕ್ಷ ಕೋಟಿ ರೂ.ಗಳೆಂದು ಹೇಳಲಾದ 2ಜಿ ಸ್ಪೆಕ್ಟ್ರಮ್‌ ಹಗರಣವನ್ನು ಸಿಎಜಿ ಅತಿರಂಜಿತ ಗೊಳಿಸಿದೆ ಎಂಬ ವಾದವಿದೆ. ಈ ಕುರಿತ ಲೆಕ್ಕಪತ್ರಗಳನ್ನು ಪರಿಶೋಧಿಸಿದ ಅಂದಿನ ಸಿಎಜಿ ಅಧಿಕಾರಿ ಆರ್‌.ಪಿ.ಸಿಂಗ್‌ ತಮ್ಮ ವರದಿಯಲ್ಲಿ, ಈ ಹರಾಜಿನಲ್ಲಿ 2,645 ಕೋಟಿ ರೂ.ಗಳಷ್ಟು ಹಣ ದೇಶದ ಬೊಕ್ಕಸಕ್ಕೆ ನಷ್ಟವಾಗಿದೆ ಎಂದು ತನ್ನ ಮೇಲಿನ ಅಧಿಕಾರಿಗಳಿಗೆ ಕರಡು ವರದಿ ಕೊಟ್ಟರೆ ಅವರು ಲಿಖೀತವಾಗಿ ಈ ನಷ್ಟ ಪ್ರಮಾಣವನ್ನು ಹೆಚ್ಚಿಸಲು ಸೂಚಿಸಿದರು ಎಂದು ಸ್ವತಃ ಆರ್‌.ಪಿ.ಸಿಂಗ್‌ ಪ್ರತಿಪಾದಿಸಿದ್ದಾರೆ. ಇದಕ್ಕೆ ಅಂದಿನ ಕೇಂದ್ರ ಸಚಿವ ಮುರುಳಿ ಮನೋಹರ ಜೋಶಿಯವರ  ಸೂಚನೆ ಕಾರಣ ಎಂಬ ಮಾತೂ ಇದೆ. 

ಮಾ.ವೆಂ.ಸ.ಪ್ರಸಾದ್‌,  ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ

Advertisement

Udayavani is now on Telegram. Click here to join our channel and stay updated with the latest news.

Next