Advertisement

ಸಂಪುಟ ಪೀಕಲಾಟ: “ನಾಳೆ ಬಾ’ಕಥೆಯಂತಾದ ಸಚಿವ ಸಂಪುಟ ಕಸರತ್ತು

07:29 AM Nov 30, 2020 | keerthan |

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಒಂದು ರೀತಿಯಲ್ಲಿ “ನಾಳೆ ಬಾ’ ಎಂಬಂತಾಗಿದ್ದು, ಬಿಜೆಪಿ ವರಿಷ್ಠರ ಮನದಾಳ ಬಿಡಿಸಲಾಗದ ಗುಟ್ಟಾಗಿದೆ.

Advertisement

ಸಿಎಂ ಯಡಿಯೂರಪ್ಪ ಅವರು ಸಂಪುಟ ಪುನಾರಚನೆ ಅಥವಾ ವಿಸ್ತರಣೆ ಪ್ರಕ್ರಿಯೆ ಒಂದೆರಡು ದಿನಗಳಲ್ಲಿ ಮುಗಿಯಲಿದೆ. ದಿಲ್ಲಿ ವರಿಷ್ಠರ ಜತೆ ಮಾತನಾಡುತ್ತೇನೆ ಎಂದು ರವಿವಾರವೂ ಪುನರುಚ್ಚರಿಸಿದ್ದಾರೆ. ಆದರೆ ಸದ್ಯಕ್ಕೆ ಮುಹೂರ್ತ ನಿಗದಿಯಾಗುವ  ಲಕ್ಷಣ ಮಾತ್ರ ಕಂಡುಬರುತ್ತಿಲ್ಲ. ಈ ವಾರ ಹಸುರು ನಿಶಾನೆ ದೊರೆಯದಿದ್ದರೆ ತಿಂಗಳ ಕಾಲ ಕಾಯಬೇಕಾಗಬಹುದು.

ಸಂಪುಟ ವಿಸ್ತರಣೆ ವಿಳಂಬ ಸಂಬಂಧ ರವಿವಾರ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದ ಸಿಎಂ ಯಡಿ ಯೂರಪ್ಪ, “ಕಾಯೋಣ, ನಾವು-ನೀವು ಇಬ್ರೂ ಕಾಯಲೇಬೇಕು’ ಎಂದು ಹೇಳಿರುವುದು ಸಚಿವಾಕಾಂಕ್ಷಿಗಳ ಕಾಯುವಿಕೆ ಇನ್ನೂ ಮುಂದೂ ಡಿಕೆಯಾಗುವ ಸೂಚನೆ ಎನ್ನಲಾಗಿದೆ. ಆದರೆ ಚಿತ್ರದುರ್ಗದಲ್ಲಿ ಇನ್ನೊಂದು ಹೇಳಿಕೆ ನೀಡಿರುವ ಮುಖ್ಯಮಂತ್ರಿ, “ಯಾರಿಗೆ ಸ್ಥಾನ ನೀಡಬೇಕು ಎಂಬುದನ್ನು ವರಿಷ್ಠರು ನಿರ್ಧರಿಸಲಿದ್ದಾರೆ. ಶಿವಮೊಗ್ಗ ಪ್ರವಾಸ ಮುಗಿಸಿ ಸಂಜೆ ಬೆಂಗಳೂರಿಗೆ ಮರಳಿದ ಬಳಿಕ ಸಂಪುಟ ವಿಸ್ತರಣೆ ಕಾರ್ಯದಲ್ಲಿ ಮಗ್ನನಾಗಲಿದ್ದೇನೆ’ ಎಂದಿದ್ದಾರೆ.

ಈ ಮಧ್ಯೆ ಯಡಿಯೂರಪ್ಪ ಅವರೇ ನಮ್ಮ ನಾಯಕರು, ಅವರಲ್ಲೇ ನಮ್ಮ ವಿಶ್ವಾಸ ಎಂದು ಕಾಂಗ್ರೆಸ್‌ನಿಂದ ವಲಸೆ ಬಂದು ಸಚಿವರಾಗಿರುವವರು ವರಸೆ ಆರಂಭಿಸಿದ್ದಾರೆ. ಯಡಿಯೂರಪ್ಪ ಅವರ ಆಪ್ತರು ಅದಕ್ಕೆ ಧ್ವನಿಗೂಡಿಸಿದ್ದಾರೆ. ಈ ನಡುವೆ ಸೋತವರಿಗೆ ಸಚಿವ ಸ್ಥಾನ ನೀಡಬಾರದು ಎಂಬ ಅಭಿಯಾನ ನಿಂತಿಲ್ಲ. ಸೋತವರಿಗೆ ಸಚಿವ ಪಟ್ಟ ಕೊಡಿಸಲು ಆಸಕ್ತಿ ಹೊಂದಿರುವವರು ತಮ್ಮ ಸಚಿವ ಸ್ಥಾನ ತ್ಯಾಗ ಮಾಡಲಿ ಎಂದು ಹೇಳುವ ಮಟ್ಟಕ್ಕೂ ಹೋಗಿದೆ. ಈ ತಿಕ್ಕಾಟವೇ ಯಡಿಯೂರಪ್ಪ ಅವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಮೊದಲಿಗೆ ಯೋಗೇಶ್ವರ್‌ಗೆ ಸಚಿವ ಸ್ಥಾನ ನೀಡು ವುದನ್ನು ವಿರೋಧಿಸುತ್ತಿದ್ದ ರೇಣುಕಾಚಾರ್ಯ ತಂಡ ಈಗ ಉಪ ಚುನಾವಣೆಯಲ್ಲಿ ಸೋತು ಪರಿಷತ್‌ ಸದಸ್ಯರಾಗಿ ಸಚಿವರಾಗಲು ಬಯಸುತ್ತಿರುವವರ ಬಗ್ಗೆಯೂ ವಿರೋಧ ವ್ಯಕ್ತಪಡಿಸುತ್ತಿದೆ. ಈ ವಿಚಾರ ತೀರಾ ವಿಕೋಪಕ್ಕೆ ಹೋದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಒತ್ತಡ ತಂತ್ರ ಹೇರಲು ಈ ತಂಡ ಮುಂದಾಗಿದೆ.

Advertisement

ಇದೇ ಕಾರಣಕ್ಕೆ ಸೋತವರಿಗೆ ಸಚಿವ ಸ್ಥಾನ ನೀಡುವುದಾದರೆ ಮಾಲೀಕಯ್ಯ ಗುತ್ತೆದಾರ್‌, ಬಾಬುರಾವ್‌ ಚಿಂಚನಸೂರ್‌ ಅವರಿಗೂ ಪರಿಷತ್‌ ಸದಸ್ಯತ್ವ ನೀಡಿ ಸಚಿವರನ್ನಾಗಿಸಿ ಎಂಬ ಬೇಡಿಕೆ ಇರಿಸಿದೆ. ಇದೆಲ್ಲವೂ ಸೋತವರಿಗೆ ಸ್ಥಾನ ತಪ್ಪಿಸುವ ಕಾರ್ಯತಂತ್ರ ಎನ್ನಲಾಗಿದೆ.

ಬಿಎಸ್‌ವೈ ನಮ್ಮ ನಾಯಕ

ಪೊನ್ನಂಪೇಟೆಯಲ್ಲಿ ಮಾತನಾಡಿದ ಸಚಿವ ಎಸ್‌.ಟಿ. ಸೋಮಶೇಖರ್‌, ಯಡಿಯೂರಪ್ಪ ಅವರೇ ನಮ್ಮ ನಾಯಕರು. ಅವರ ಮೇಲೆಯೇ ನಮ್ಮ ವಿಶ್ವಾಸ. ಅವರು ನುಡಿದಂತೆ ನಡೆಯಲಿದ್ದಾರೆ ಎಂದು ಹೇಳಿದ್ದಾರೆ. ಬಳ್ಳಾರಿಯಲ್ಲಿ ಮಾತನಾಡಿದ ಸಚಿವ ಶ್ರೀರಾಮುಲು, ಮುಂದಿನ ಎರಡೂವರೆ ವರ್ಷ ಯಡಿಯೂರಪ್ಪ ಅವರೇ ಸಿಎಂ. ನಮ್ಮಲ್ಲಿ ಮೂಲ – ವಲಸಿಗರು ಎಂಬುದಿಲ್ಲ. 27 ಮಂದಿ ಸಭೆ ಮಾಡಿದರೆ ತಪ್ಪಿಲ್ಲ ಎಂದಿದ್ದಾರೆ. ಗದಗದಲ್ಲಿ ಬಿ.ಸಿ. ಪಾಟೀಲ್‌ ಕೂಡ ಯಡಿಯೂರಪ್ಪ ಅವರೇ ನಾಯಕರು ಎಂದಿದ್ದಾರೆ.

ಸಂಕ್ರಾಂತಿ  ಬಳಿಕ ?

ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮುಂದಿನ ವಾರ ಆಗುತ್ತದೆಯೇ, ಅಧಿವೇಶನದ ಬಳಿಕವೇ ಅಥವಾ ಮುಂದಿನ ವರ್ಷದಲ್ಲೇ ಎಂಬುದು ಪ್ರಶ್ನೆ. ಗ್ರಾಮ ಪಂಚಾಯತ್‌ ಹಾಗೂ ಮಸ್ಕಿ, ಬಸವ ಕಲ್ಯಾಣ ವಿಧಾನಸಭೆ ಮತ್ತು ಬೆಳಗಾವಿ ಲೋಕಸಭೆ ಉಪ ಚುನಾವಣೆ ಅಧಿಸೂಚನೆ ಹೊರಬಿದ್ದರೆ ಸಂಕ್ರಾಂತಿಯ ವರೆಗೂ ಮುಂದೂಡಿಕೆ ಆಗಬಹುದು ಎಂಬ ಆತಂಕ ಆಕಾಂಕ್ಷಿಗಳದು. ಸದ್ಯದ ಸ್ಥಿತಿಯಲ್ಲಿ ಸಮಸ್ಯೆಯಿಂದ ಪಾರಾಗಲು ಚುನಾವಣೆ ಅಧಿಸೂಚನೆಯೇ ಮದ್ದಾಗಬಹುದು ಎಂಬ ಮಾತು ಕೇಳಿಬರುತ್ತಿದೆ. ಒಟ್ಟಾರೆ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಸಿಎಂ ಯಡಿಯೂರಪ್ಪ ಅವರಿಗೂ ಪೀಕಲಾಟವಾಗಿ ಬೆಳೆದಿದೆ. ವರಿಷ್ಠರು ಹಸುರು ನಿಶಾನೆ ನೀಡದ ವಿನಾ ಯಾರೂ ಏನೂ ಮಾಡಲು ಆಗದಂಥ ಪರಿಸ್ಥಿತಿ ಇದೆ.

ಮುಂದಿನ 2-3 ದಿನಗಳಲ್ಲಿ ಸಂಪುಟ ವಿಸ್ತರಣೆ ಯಾಗುವ ವಿಶ್ವಾಸವಿದೆ. ಈ ಬಗ್ಗೆ ವರಿಷ್ಠರ ಜತೆ ಮಾತನಾಡುತ್ತೇನೆ. ವಿಸ್ತರಣೆಯಲ್ಲಿ ಗೊಂದಲ ಇಲ್ಲ. ಅಗತ್ಯ ಸಿದ್ಧತೆಗಳು ನಡೆಯುತ್ತಿವೆ. ಯಾರಿಗೆ ಸ್ಥಾನ ನೀಡಬೇಕು ಎಂಬುದನ್ನು ವರಿಷ್ಠರು ನಿರ್ಧರಿಸಲಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ 17 ಜನರಲ್ಲಿ ಒಡಕು ಸೃಷ್ಟಿಯಾಗಿ ರುವ ಬಗ್ಗೆ ನನಗೆ ಮಾಹಿತಿ ಇಲ್ಲ.

– ಯಡಿಯೂರಪ್ಪ, ಸಿಎಂ

ಮೂಲ ಮತ್ತು ವಲಸೆ ಎಂಬ ಗೊಂದಲವಿಲ್ಲ. ಒಮ್ಮೆ ಬಿಜೆಪಿಯ ಬಿ ಫಾರಂ ಪಡೆದು ಶಾಸಕರಾದ ಎಲ್ಲರೂ ಬಿಜೆಪಿಗರೇ. ರಾಜ್ಯದಲ್ಲಿ  ಬಿಜೆಪಿ ಅಧಿಕಾರಕ್ಕೆ ಬರಲು ಸಹಕಾರ ನೀಡಿದವರಿಗೆ ವರಿಷ್ಠರು ಸೂಕ್ತ ಸ್ಥಾನ ನೀಡುವ ಬಗ್ಗೆ ವಾಗ್ಧಾನ ಮಾಡಿದ್ದು, ಅದರಂತೆ ನಡೆದುಕೊಳ್ಳುತ್ತಾರೆ.

-ನಳಿನ್‌ ಕುಮಾರ್‌ ಕಟೀಲು, ಬಿಜೆಪಿ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next