Advertisement

ಸಂಪುಟ ಪುನಾರಚನೆ ಅಸಮಾಧಾನ ಆಡಳಿತಕ್ಕೆ ಹಿನ್ನಡೆಯಾಗದಿರಲಿ

06:00 AM Dec 25, 2018 | |

ಸಂಪುಟ ಪುನಾರಚನೆಯಿಂದ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಅಸಮಾಧಾನ ತಕ್ಷಣಕ್ಕೆ ತಣ್ಣಗಾಗುವ ಲಕ್ಷಣಗಳು ಕಂಡುಬರುತ್ತಿಲ್ಲ. ಸಚಿವ ಸ್ಥಾನ ಸಿಗದವರು, ತೆಗೆದು ಹಾಕಲ್ಪಟ್ಟವರು ತಾಕತ್ತು ಪ್ರದರ್ಶಿಸುವ ಮಾತು ಆಡುತ್ತಿದ್ದಾರೆ. ಅವರಲ್ಲಿನ ಅಸಮಾಧಾನ ಮುಂದುವರಿದರೆ ಅದು ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರಿದರೂ ಆಶ್ಚರ್ಯವಿಲ್ಲ.

Advertisement

ಜೆಡಿಎಸ್‌-ಕಾಂಗ್ರೆಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರದ ಸಂಪುಟ ಪುನಾರಚನೆ ನಂತರ ಉಂಟಾಗಿರುವ ಅಸಮಾಧಾನ ಇನ್ನೂ ತಣ್ಣಗಾಗಿಲ್ಲ. ಇದರ ಜತೆಗೆ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಿ ಮೂರು ದಿನ ಕಳೆದರೂ ಖಾತೆಗಳ ಹಂಚಿಕೆಯಾಗಿಲ್ಲ. ಮೊದಲಿಗೆ ಸಚಿವರಾಗಲು ಪೈಪೋಟಿ ನಡೆಸಿದ್ದವರು ಇದೀಗ ಇಂತಹುದೇ ಖಾತೆ ಬೇಕೆಂದು ಪಟ್ಟು ಹಿಡಿದಿರುವುದು ಇದಕ್ಕೆ ಕಾರಣ.

ಗಮನಿಸಬೇಕಾದ ಅಂಶವೆಂದರೆ, ಉತ್ತರ ಕರ್ನಾಟಕಕ್ಕೆ ಅನ್ಯಾಯ ಎಂದು ಆಕ್ರೋಶ ಹೊರ ಹಾಕಿ ಸಂಪುಟ ಪುನಾರಚನೆ ಹಾಗೂ ಇತರೆ ನೇಮಕಾತಿಗಳಲ್ಲಿ ಸಿಂಹಪಾಲು ಪಡೆಯುವಲ್ಲಿ ಆ ಭಾಗದವರು ಯಶಸ್ವಿಯಾಗಿದ್ದಾರೆ. ಇದೀಗ ಪ್ರಮುಖ ಖಾತೆಗಳಿಗೂ ಪಟ್ಟು ಹಿಡಿದಿದ್ದಾರೆ. ಸಹಜವಾಗಿ ಸಂಪುಟ ವಿಸ್ತರಣೆ ಹಾಗೂ ಪುನಾರಚನೆ ಸಂದರ್ಭದಲ್ಲಿ ಹಿಂದೆ ಇದ್ದ ಸಚಿವರ ಖಾತೆಗಳನ್ನು ಹೊಸ ಸಚಿವರಿಗೆ ನೀಡುವುದರ ಜತೆಗೆ ಯಾರ ಬಳಿಯಾದರೂ ಹೆಚ್ಚುವರಿ ಖಾತೆಗಳಿದ್ದರೆ ಅದನ್ನು ನೂತನ ಸಚಿವರಿಗೆ ನೀಡಲಾಗುತ್ತಿದೆ.

ಆದರೆ, ಸಮ್ಮಿಶ್ರ ಸರ್ಕಾರ ರಚನೆಯಾದ ನಂತರ ಹೆಚ್ಚುವರಿ ಖಾತೆ ಹೊಂದಿದ್ದ  ಸಚಿವರು ಇದೀಗ ತಮ್ಮ ಬಳಿ ಇರುವ ಖಾತೆ ಬಿಟ್ಟುಕೊಡಲು ಒಪ್ಪುತ್ತಿಲ್ಲ. ಇದು ಸಹ ಸರ್ಕಾರಕ್ಕೆ ತಲೆನೋವಾಗಿದೆ. ಖಾತೆ ಹಂಚಿಕೆ ಮೇಲೆ ಮುಖ್ಯ ಮಂತ್ರಿಯವರ ಪರಮಾಧಿಕಾರ ವಿದೆ. ಆದರೆ, ಖಾತೆ ಹಂಚಿಕೆಯ ಕಗ್ಗಂಟು ಸರಿಪಡಿಸಲು ಎಐಸಿಸಿ ರಾಜ್ಯ ಉಸ್ತುವಾರಿ ಬರುವಂತೆ ಆಗಿದೆ.

ಇನ್ನು, ಸಂಪುಟ ಪುನಾರಚನೆಯಿಂದ ಕಾಂಗ್ರೆಸಿನಲ್ಲಿ ಉಂಟಾಗಿರುವ ಅಸಮಾಧಾನ ತಕ್ಷಣಕ್ಕೆ ತಣ್ಣಗಾಗುವ ಲಕ್ಷಣಗಳು ಕಂಡುಬರುತ್ತಿಲ್ಲ. ಸಚಿವ ಸ್ಥಾನ ಸಿಗದವರು, ಸಚಿವ ಸ್ಥಾನದಿಂದ ತೆಗೆದು ಹಾಕಲ್ಪಟ್ಟಿರುವವರು ತಮ್ಮ ಆಕ್ರೋಶ ಹೊರ ಹಾಕಿ, ತಮ್ಮ ತಾಕತ್ತು ಪ್ರದರ್ಶಿಸುವ ಮಾತು ಆಡುತ್ತಿದ್ದಾರೆ. ಅವರಲ್ಲಿನ ಅಸಮಾಧಾನ ಮುಂದುವರಿದರೆ ಅದು ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರಿದರೂ ಆಶ್ಚರ್ಯವಿಲ್ಲ.

Advertisement

ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡೇ ಜಾತಿವಾರು, ಪ್ರಾದೇಶಿಕವಾರು ಲೆಕ್ಕಾಚಾರದೊಂದಿಗೆ ಕಾಂಗ್ರೆಸ್‌ ಸಂಪುಟದಲ್ಲಿ ಪ್ರಾತಿನಿಧ್ಯ, ಸಂಸದೀಯ ಕಾರ್ಯದರ್ಶಿ, ರಾಜಕೀಯ ಕಾರ್ಯದರ್ಶಿ, ನಿಗಮ ಮಂಡಳಿ ನೇಮಕ ಮಾಡಿದೆಯಾದರೂ ಇನ್ನೂ ಒಂದು ಡಜನ್‌ಗೂ ಹೆಚ್ಚು ಮಂದಿ ಸಚಿವ ಸ್ಥಾನದ ಆಕಾಂಕ್ಷಿಗಳು ಇರುವುದು ತಲೆನೋವು ತಂದಿದೆ. ಸಂಪುಟ ಪುನಾರಚಣೆ ಅಥವಾ ವಿಸ್ತರಣೆ ಸಂದರ್ಭದಲ್ಲಿ ಅಸಮಾಧಾನ, ಅತೃಪ್ತಿ ಸಹಜ. ಇದಕ್ಕಿಂತ ದೊಡ್ಡ ಅಸಮಾಧಾನವನ್ನೂ ಕಾಂಗ್ರೆಸ್‌ ಜೀರ್ಣಸಿಕೊಂಡಿದೆ. ಹೀಗಾಗಿ, ಪಕ್ಷಕ್ಕೆ ಡ್ಯಾಮೇಜ್‌ ಕಂಟ್ರೋಲ್‌ ಮಾಡುವ ಶಕ್ತಿಯಿದೆಯಾದರೂ ತಕ್ಷಣಕ್ಕೆ ಸ್ವಲ್ಪ ದಿನ ಮುಜುಗರ ತಪ್ಪದು. ಹೀಗಾಗಿಯೇ ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿರುವ ಜೆಡಿಎಸ್‌ ತಮ್ಮ ಕೋಟಾದ ಎರಡು ಸ್ಥಾನ ಭರ್ತಿ ಹಾಗೂ ಇತರೆ ನೇಮಕಾತಿಗಳಿಗೆ ತಮ್ಮ ಪಕ್ಷದ ಪಟ್ಟಿ ಸಿದ್ಧಪಡಿಸದೆ ಜಾಣ್ಮೆ ವಹಿಸಿತು. ಪಕ್ಷದಲ್ಲಿ ಸಚಿವ ಸ್ಥಾನ ಸೇರಿ ಇತರೆ ಹುದ್ದೆಗಳಿಗೆ ನೇಮಕ ಮಾಡಲೇಬೇಕು ಎಂದು ಪಟ್ಟು ಹಿಡಿಯುವವರು, ಒಂದೊಮ್ಮೆ ಮಾಡದಿದ್ದರೆ ಪಕ್ಷ ಬಿಡುವ ಧಮ್ಕಿ ಹಾಕುವವರು ಯಾರೂ ಇಲ್ಲ. ಇದನ್ನು ಅರಿತ ನಾಯಕರು ಸ್ವಲ್ಪ ದಿನ ಕಾದು ನೋಡಿ ಆಮೇಲೆ ತೀರ್ಮಾನ ಕೈಗೊಳ್ಳಲು ನಿರ್ಧರಿಸಿದ್ದಾರೆ.

ಸಮ್ಮಿಶ್ರ ಸರ್ಕಾರಕ್ಕೆ ಆಪರೇಷನ್‌ ಕಮಲ ಕಾರ್ಯಾಚರಣೆ ಗುಮ್ಮನಂತೆ ಕಾಡುತ್ತಿರುವುದರಿಂದ ರಕ್ಷಣಾತ್ಮಕ ಆಟ ಆಡುತ್ತಿರುವ ಜೆಡಿಎಸ್‌, ಎರಡು ಸಚಿವ ಸ್ಥಾನ ಖಾಲಿ ಉಳಿಸಿಕೊಂಡು ರಾಜಕೀಯ ತಂತ್ರಗಾರಿಕೆ ತೋರಿದೆ. ಆದರೆ, ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಅಸಮಾಧಾನ ಸಮ್ಮಿಶ್ರ ಸರ್ಕಾರದ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರಲಿ ದೆಯೋ ತಿಳಿಯದು. ಆದರೆ ಈ ವಿದ್ಯಮಾನಗಳು ರಾಜ್ಯದ ಹಿತ ದೃಷ್ಟಿಯಿಂದ ಒಳ್ಳೆಯದಲ್ಲ. ಜನ ಸರ್ಕಾರದಿಂದ ಉತ್ತಮ ಆಡಳಿತವನ್ನು ನಿರೀಕ್ಷಿಸುತ್ತಿದ್ದಾರೆಯೇ, ಹೊರತು ಇದನ್ನೆಲ್ಲ ಅಲ್ಲ. ಇನ್ನಾದರೂ ಜೆಡಿಎಸ್‌ ಮತ್ತು ಕಾಂಗ್ರೆಸ್‌ ತಮ್ಮ ನಡುವಿನ ಬಿಕ್ಕಟ್ಟನ್ನು ಬಗೆಹರಿಸಿಕೊಂಡು ರಾಜ್ಯದ ಸಮಸ್ಯೆಗಳನ್ನು ಕಣ್ಣೆತ್ತಿ ನೋಡುವಂತಾಗಲಿ.

Advertisement

Udayavani is now on Telegram. Click here to join our channel and stay updated with the latest news.

Next