Advertisement

ಕೇಂದ್ರ ಸಂಪುಟದಲ್ಲಿ ಜಾತಿ, ಪ್ರಾದೇಶಿಕತೆಗೆ ಪ್ರಾತಿನಿಧ್ಯ

01:45 AM Jul 08, 2021 | Team Udayavani |

ಬೆಂಗಳೂರು: ಕೇಂದ್ರ ಸಚಿವ ಸಂಪುಟದಲ್ಲಿ ರಾಜ್ಯದ ನಾಲ್ವರು ಸಂಸದರಿಗೆ ಸ್ಥಾನ ಕಲ್ಪಿಸಿರುವ ಪ್ರಧಾನಿ ನರೇಂದ್ರ ಮೋದಿ ಜಾತಿ ಮತ್ತು ಪ್ರಾದೇಶಿಕತೆಯ ಲೆಕ್ಕಾಚಾರದಲ್ಲಿ ಪ್ರಾತಿನಿಧ್ಯ ನೀಡಿ ಪಕ್ಷಕ್ಕೆ ಎಲ್ಲ ಕಡೆಯೂ ಬಲ ತುಂಬುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.

Advertisement

ಪ್ರಧಾನಿ ಎಲ್ಲರ ನಿರೀಕ್ಷೆಗಳನ್ನು ಮೀರಿ ರಾಜ್ಯಕ್ಕೆ ಹೆಚ್ಚು ಪ್ರಾತಿನಿಧ್ಯ ನೀಡಿದ್ದು, ವಿಶೇಷವಾಗಿ ಜಾತಿ ಮತ್ತು ಪ್ರಾದೇಶಿಕ ಸಮಾನತೆಗೆ ಆದ್ಯತೆ ನೀಡಿರುವುದು ಭವಿಷ್ಯದಲ್ಲಿ ಎಲ್ಲ ಸಮುದಾಯದವರನ್ನು ಸೆಳೆಯಬೇಕೆಂಬ ಮುಂದಾಲೋಚನೆ ಬಿಜೆಪಿ ಹಾಕಿಕೊಂಡಂತಿದೆ.

ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳಲ್ಲಿ ಬಿಜೆಪಿಯ 6 ಸಂಸದರಿದ್ದರೂ ವಿಧಾನಸಭೆ ಹಾಗೂ ಸ್ಥಳೀಯ ಮಟ್ಟದಲ್ಲಿ ಬಿಜೆಪಿ ಅಷ್ಟೊಂದು ಬಲಿಷ್ಠವಾಗಿಲ್ಲ. ಅದೇ ಕಾರಣಕ್ಕೆ ಆ ಭಾಗದ ಸಂಸದರು ವಿಶೇಷವಾಗಿ ರಾಜ್ಯದ ಪ್ರಮುಖ ಸಮುದಾಯವಾಗಿರುವ ಲಿಂಗಾಯತ ಸಮುದಾಯಕ್ಕೆ ಸೇರಿರುವ ಭಗವಂತ ಖೂಬಾ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಆ ಭಾಗದಲ್ಲಿ ಪಕ್ಷವನ್ನು ಬಲಗೊಳಿಸುವ ಲೆಕ್ಕಾಚಾರ ಅಡಗಿರುವಂತೆ ಕಾಣಿಸುತ್ತದೆ.

ಸಿಎಂ ಪುತ್ರನಿಗೆ ತಪ್ಪಿದ ಅವಕಾಶ
ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಪುತ್ರ ಬಿ.ವೈ. ರಾಘವೇಂದ್ರ ಅವರಿಗೆ ಆದ್ಯತೆ ದೊರೆಯುತ್ತದೆ ಎಂಬ ಬಹುತೇಕರ ಲೆಕ್ಕಾಚಾರ ಸುಳ್ಳಾಗಿದೆ. ಈ ಬೆಳವಣಿಗೆ ರಾಜ್ಯ ರಾಜಕೀಯದ ಮೇಲೂ ಪರಿಣಾಮ ಬೀರಿದ್ದು, ರಾಘವೇಂದ್ರ ಕೇಂದ್ರ ಸಂಪುಟ ಸೇರಿದರೆ, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಖಚಿತ ಎಂಬ ನಿರೀಕ್ಷೆಯಲ್ಲಿದ್ದವರಿಗೆ ಸ್ವಲ್ಪ ಮಟ್ಟಿನ ನಿರಾಸೆಯಾದಂತಾಗಿದೆ.
ವಿಶೇಷವಾಗಿ ಮಧ್ಯ ಕರ್ನಾಟಕ ವನ್ನೂ ಅವಗಣಿಸದ ಪ್ರಧಾನಿ, ಚಿತ್ರದುರ್ಗ ಸಂಸದ ಆನೇಕಲ್‌ ಮೂಲದ ಎ. ನಾರಾಯಣ ಸ್ವಾಮಿಗೆ ಅವಕಾಶ ಕಲ್ಪಿಸುವ ಮೂಲಕ ಬೆಂಗಳೂರು ಸಹಿತ ಹಳೆ ಮೈಸೂರು ಭಾಗದಲ್ಲಿ ದಲಿತ ಎಡಗೈ ಸಮುದಾಯವನ್ನು ಪಕ್ಷದ ಕಡೆಗೆ ಸೆಳೆಯುವ ತಂತ್ರ ಅಡಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಶೋಭಾಗೆ ಒಲಿದ ಅದೃಷ್ಟ
ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಗೆ ಅದೃಷ್ಟ ಒಲಿದಿದೆ. ಕೇಂದ್ರ ರಸಗೊಬ್ಬರ ಸಚಿವರಾಗಿದ್ದ ಡಿ.ವಿ. ಸದಾನಂದ ಗೌಡ ಅವರನ್ನು ಸಂಪುಟದಿಂದ ಕೈ ಬಿಟ್ಟು, ಕರಾವಳಿ ಮೂಲದ ಹಾಗೂ (ಸದಾನಂದ ಗೌಡರದೇ ಸಮುದಾಯದ) ಒಕ್ಕಲಿಗ ಸಮುದಾಯಕ್ಕೆ ಸೇರಿದ ಶೋಭಾ ಕರಂದ್ಲಾಜೆ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಮೂಲಕ ಪ್ರಾದೇಶಿಕತೆ ಹಾಗೂ ಜಾತಿ ಎರಡನ್ನೂ ಪರಿಗಣಿಸಿ ನ್ಯಾಯ ಒದಗಿಸುವ ಪ್ರಯತ್ನ ಮಾಡಲಾಗಿದೆ. ಈ ಮೂಲಕ ಕರಾವಳಿ, ಮಲೆನಾಡು ಹಾಗೂ ಒಕ್ಕಲಿಗ ಸಮುದಾಯ ಎಲ್ಲವನ್ನೂ ತಮ್ಮತ್ತ ಸೆಳೆಯುವ ಕೆಲಸವನ್ನು ಪ್ರಧಾನಿ ಮಾಡಿದ್ದಾರೆ.

Advertisement

ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ಅವರಿಗೆ ರಾಜ್ಯದ ಕೋಟಾದಡಿ ಸಚಿವ ಸ್ಥಾನ ನೀಡಲಾಗಿದೆ. ಮೋದಿಯವರ ಆಪ್ತ ತಂಡದಲ್ಲಿ ರಾಜೀವ್‌ ಚಂದ್ರಶೇಖರ್‌ ಗುರುತಿಸಿಕೊಂಡಿದ್ದು, ಭವಿಷ್ಯದಲ್ಲಿ ಕೇರಳದಲ್ಲಿ ಪಕ್ಷವನ್ನು ಬಲಪಡಿಸುವ ಲೆಕ್ಕಾಚಾರ ಇವರ ಹಿಂದಿದೆ ಎನ್ನಲಾಗುತ್ತಿದೆ.

ಚುನಾವಣೆಗೆ ಅನುಕೂಲ
ಸಮತೋಲಿತ ಪುನಾರಚನೆಯಿಂದ ಮುಂಬರುವ ಜಿಲ್ಲೆ, ತಾಲೂಕು ಹಾಗೂ ಮುಂದಿನ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಆಯಾ ಭಾಗದಲ್ಲಿ ಸಂಘಟಿಸಲು ಹೆಚ್ಚಿನ ಅನುಕೂಲವಾಗಲಿದೆ ಎನ್ನಲಾಗುತ್ತಿದೆ. ಅಲ್ಲದೇ ರಾಜ್ಯದಲ್ಲಿ ದಲಿತ ಸಿಎಂ ವಿಷಯವನ್ನು ಕಾಂಗ್ರೆಸ್‌ ಆಗಾಗ ಪ್ರಸ್ತಾವಿಸುತ್ತಿದ್ದು, ಅದಕ್ಕೆ ಉತ್ತರ ಎನ್ನುವಂತೆ ದಲಿತ ಸಮುದಾಯದ ಥಾವರ್‌ಚಂದ್‌ ಗೆಹೊÉàಟ್‌ ಅವರನ್ನು ರಾಜ್ಯದ ರಾಜ್ಯಪಾಲರನ್ನಾಗಿ ಮಾಡಿರುವುದು ಹಾಗೂ ಎ. ನಾರಾಯಣಸ್ವಾಮಿಗೆ ಸಚಿವ ಸ್ಥಾನ ನೀಡುವ ಮೂಲಕ ಬಿಜೆಪಿ ಬಗ್ಗೆ ಇರುವ ದಲಿತ ವಿರೋಧಿ ಎಂಬ ಹಣೆಪಟ್ಟಿಯಿಂದ ಹೊರ ಬರಲು ಅನುಕೂಲವಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ.

– ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next