ಬ್ಯಾಡಗಿ: ಪದೇ ಪದೇ ಮೀಟಿಂಗ್ ನೆಪ ಹೇಳಿ ಕರ್ತವ್ಯಕ್ಕೆ ಹಾಜರಾಗದೇ ಬೇಜವಾಬ್ದಾರಿತನ ತೋರಿಸುತ್ತಿರುವ ಅಂಗನವಾಡಿ ಶಿಕ್ಷಕಿಯರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ರಾಮಗೊಂಡನಹಳ್ಳಿ ಗ್ರಾಮಸ್ಥರು ಆಗ್ರಹಿಸಿದ ಘಟನೆ ಬನ್ನಿಹಟ್ಟಿ ಗ್ರಾಮ ಸಭೆಯಲ್ಲಿ ನಡೆಯಿತು.
ಮಂಗಳವಾರ ನಡೆದ ಸಭೆಯಲ್ಲಿ ಈ ಕುರಿತು ಮಾತನಾಡಿದ ಗ್ರಾಮಸ್ಥರು, ಶಿಶು ಅಭಿವೃದ್ಧಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಭಾರಿ ಅವ್ಯವಹಾರ ನಡೆಯುತ್ತಿದೆ. ರಾಮಗೊಂಡನಹಳ್ಳಿಯ ಅಂಗನವಾಡಿಯಲ್ಲಿ ಶಿಕ್ಷಕಿಯರು ಡಿ. 17ರ ವರೆಗೂ ಈಗಾಗಲೇ ಮಕ್ಕಳ ದಾಖಲಾತಿ ನಮೂದಿಸಿದ್ದಾರೆ. ಅಲ್ಲದೇ ಸರಿಯಾಗಿ ಕಾರ್ಯ ನಿರ್ವಹಿಸದೆ ಕರ್ತವ್ಯ ಲೋಪವೆಸಗಿದ್ದಾರೆ ಎಂದು ದೂರಿದರು.
ಮಕ್ಕಳಿಗೆ ನೀಡುವ ಆಹಾರ ಪದಾರ್ಥಗಳು ಇನ್ನೆಲ್ಲಿಗೋ ಸೇರುತ್ತಿದ್ದು, ಈ ಕುರಿತಂತೆ ಸಿಡಿಪಿಒಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇಷ್ಟೆಲ್ಲ ಅವ್ಯಹಾರ ಹಾಗೂ ಹಗಲು ದರೋಡೆ ನಡೆಯುತ್ತಿದ್ದರೂ ಯಾವೊಬ್ಬ ಅಧಿಕಾರಿ ಸಹ ಇತ್ತ ತಲೆ ಹಾಕಿಲ್ಲ. ಈ ಕುರಿತಂತೆ ಪ್ರಶ್ನೆ ಮಾಡಿದರವ ಮೇಲೆಯೇ ಇಲ್ಲ ಸಲ್ಲದ ಆರೋಪ ಹೋರಿಸಿಲಾಗುತ್ತಿದೆ ಎಂದರು. ಅಂಗನವಾಡಿಯಲ್ಲಿ ನಡೆಯುತ್ತಿರುವ ಅವ್ಯಹವಾರ ಬಗ್ಗೆ ಮತ್ತು ಡಿ. 17ರ ವರೆಗೆ ಹಾಕಲಾಗಿರುವ ಮಕ್ಕಳ ಹಾಜರಾತಿ ದಾಖಲೆಗಳನ್ನು ಸಭೆಗೆ ತೋರಿಸಿದರು.
ನೋಟಿಸ್ ಜಾರಿ: ಶಿಶು ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಎಸ್.ಬಿ. ಕುರಡಮ್ಮನವರ ಮಾತನಾಡಿ, ಅಂಗನಾಡಿ ಶಿಕ್ಷಕಿಯರು ಮುಂಚಿತವಾಗಿಯೇ ಹಾಜರಾತಿ ನಮೂದಿಸಿದ್ದು ತಪ್ಪು, ಈ ಕುರಿತಂತೆ ಗ್ರಾಮಸ್ಥರ ಆರೋಪಕ್ಕೆ ಸಹಮತಿ ಸೂಚಿಸಿದ ಅವರು, ಅಂಗನವಾಡಿ ಶಿಕ್ಷಕಿಯನ್ನು ತರಾಟೆ ತೆಗದುಕೊಂಡರು. ಸಭೆಯಲ್ಲಿಯೇ ನೋಟಿಸ್ ಜಾರಿ ಮಾಡಿ ಮುಂದೆ ಹೀಗಾಗದಂತೆ ಎಚ್ಚರ ವಹಿಸಲು ಎಚ್ಚರಿಕೆ ನೀಡಿದರು.
ರಾಮಗೊಂಡನಹಳ್ಳಿ, ಅಂದಾನಿಕೊಪ್ಪ ಗ್ರಾಮದಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿದ್ದು, ಗ್ರಾಮಸ್ಥರು ಹನಿ ನೀರಿಗೂ ಪರದಾಡುವಂತಾಗಿದೆ. ರಾಮಗೊಂಡನಹಳ್ಳಿಯಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡಿದೆ. ಕುಡಿಯಲು ನೀರಿಲ್ಲದಂತಾಗಿದ್ದು ಕೂಡಲೇ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಪಿಡಿಒ ಈ ಕುರಿತಂತೆ ಶೀಘ್ರದಲ್ಲೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಅಕ್ಷರದಾಸೋಹಾಧಿಕಾರಿ ತಿಮ್ಮಾರೆಡ್ಡಿ, ಗ್ರಾಮಂ ಅಧ್ಯಕ್ಷೆ ಮಂಜುಳಾ ರಂಗಾರಿ ಉಪಾಧ್ಯಕ್ಷೆ ಮಂಜುಳಾ ಹೊಸೂರ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.