Advertisement

ನಾಯಕತ್ವಕ್ಕೆ ಸವಾಲಾದ ಉಪಚುನಾವಣೆ

10:27 PM Dec 03, 2019 | Lakshmi GovindaRaju |

ರಾಜ್ಯದಲ್ಲಿ ನಡೆಯುತ್ತಿರುವ ಹದಿನೈದು ಕ್ಷೇತ್ರಗಳ ಉಪ ಚುನಾವಣೆಗೆ ಮತದಾನಕ್ಕೆ ಒಂದು ದಿನ ಮಾತ್ರ ಬಾಕಿ ಉಳಿದಿದೆ. ಈ ಉಪ ಚುನಾವಣೆ ರಾಜ್ಯ ರಾಜಕಾರಣದ ದೃಷ್ಟಿಯಿಂದ ಅಷ್ಟೇ ಅಲ್ಲ ರಾಷ್ಟ್ರ ರಾಜಕಾರಣ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ದೇಶದ ಕಾನೂನುಗಳ ಬಗ್ಗೆಯೂ ಸಾಕಷ್ಟು ಗಂಭೀರವಾಗಿ ಆಲೋಚಿಸುವಂತೆ ಮಾಡಿದೆ.

Advertisement

ವಿಧಾನಸಭೆ ಸಭಾಧ್ಯಕ್ಷರಾಗಿದ್ದ ರಮೇಶ್‌ ಕುಮಾರ್‌ ಅವರು ಶಾಸಕರನ್ನು ಅನರ್ಹಗೊಳಿಸಿರುವುದನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದ್ದರೂ, ಆ ನಾಯಕರಿಗೆ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಯಿತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳ ತೀರ್ಪೆ ಅಂತಿಮ ಎನ್ನುವುದು ಈ ಚುನಾವಣೆ ಫ‌ಲಿತಾಂಶದಿಂದ ಹೊರಹೊಮ್ಮಲಿದೆ.

ಈ ಉಪ ಚುನಾವಣೆ ಫ‌ಲಿತಾಂಶ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಪಕ್ಷಾಂತರ ಪ್ರವೃತ್ತಿಗೆ ಎಷ್ಟರ ಮಟ್ಟಿಗೆ ರಕ್ಷಣೆ ಅಥವಾ ಏಟು ನೀಡುತ್ತದೆ ಎನ್ನುವುದೂ ಕೂಡ ಮಹತ್ವದ್ದಾಗಿದೆ. ಇದರ ಹೊರತಾಗಿ ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಮೂರೂ ಪಕ್ಷಗಳಿಗೆ ಪ್ರತಿಷ್ಠೆಯಾಗಿದೆ.

ಪ್ರಮುಖವಾಗಿ ಮೂರು ಪಕ್ಷಗಳ ನಾಯಕರಾದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರ ನಾಯಕತ್ವಕ್ಕೆ ಈ ಚುನಾ ವ ಣೆಯು ಪ್ರತಿ ಷ್ಠೆಯ ವಿಷ ಯವೂ ಆಗಿ ದೆ.  ಹದಿನೈದು ಕ್ಷೇತ್ರಗಳ ಉಪ ಚುನಾವಣೆ ಫ‌ಲಿತಾಂಶ ಅನರ್ಹರ ಭವಿಷ್ಯವಷ್ಟೇ ನಿರ್ಧರಿಸದೇ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಭವಿಷ್ಯವನ್ನೂ ನಿರ್ಧರಿಸುವ ಸಾಮರ್ಥ್ಯ ಹೊಂದಿದೆ. ಅದರೊಂದಿಗೆ ಬಿ.ಎಸ್‌.ಯಡಿಯೂರಪ್ಪ ಅವರ ನಾಯಕತ್ವದ ಭವಿಷ್ಯವನ್ನೂ ನಿರ್ಧರಿಸಲಿದೆ.

ಬಿಜೆಪಿ ರಾಷ್ಟ್ರೀಯ ನಾಯಕರ ವಿರೋಧ, ಪಕ್ಷದಲ್ಲಿನ ಸ್ಥಳೀಯ ಒಂದು ಗುಂಪಿನ ನಾಯಕರ ಅಸಹಕಾರದೊಂದಿಗೆ ಬಿ.ಎಸ್‌.ಯಡಿಯೂರಪ್ಪ ಸುಭದ್ರ ಸರ್ಕಾರ ನೀಡಬೇಕೆಂದರೆ ಕನಿಷ್ಠ ಎಂಟು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕು. ಒಂದು ವೇಳೆ ನಿರೀಕ್ಷಿತ ಫ‌ಲಿತಾಂಶ ದೊರೆಯದೇ ಹೋದರೆ, ಬಿಜೆಪಿಯಲ್ಲಿ ಅವರ ನಾಯಕತ್ವವನ್ನು ತೆರೆಗೆ ಸರಿಸುವ ಪ್ರಯತ್ನಗಳು ಆರಂಭವಾಗುವ ಸಾಧ್ಯತೆ ಇದೆ. ಈ ಚುನಾವಣಾ ಫ‌ಲಿತಾಂಶ ಯಡಿಯೂರಪ್ಪ ಅವರ ಸರ್ಕಾರಕ್ಕಿಂತ ಅವರ ನಾಯಕತ್ವ ಬಲಗೊಳಿಸುವ ಅಥವಾ ಕ್ಷೀಣಗೊಳಿಸುವ ಪರೀಕ್ಷೆಯೂ ಆಗಲಿದೆ.

Advertisement

ಅದೇ ರೀತಿ ಕಾಂಗ್ರೆಸ್‌ನಲ್ಲಿಯೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪಕ್ಷದ ಹಿರಿಯ ನಾಯಕರ ವಿರೋಧ ಕಟ್ಟಿಕೊಂಡು ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು, ಅವರನ್ನು ಗೆಲ್ಲಿಸಿಕೊಂಡು ಬರಲು ಕಾಲಿಗೆ ಚಕ್ರ ಕಟ್ಟಿಕೊಂಡು ಏಕಾಂಗಿಯಾಗಿ ತಿರುಗಾಡಿದ್ದಾರೆ. ಈ ಚುನಾವಣೆಯಲ್ಲಿ ಪಕ್ಷ ತೊರೆದು ಹೋಗಿರುವ ಅನರ್ಹ ಶಾಸಕರನ್ನು ಸೋಲಿಸುವುದಷ್ಟೇ ಅವರ ಹೋರಾಟವಾಗಿಲ್ಲ. ಹೆಚ್ಚಿನ ಸ್ಥಾನ ಗೆಲ್ಲಿಸಿಕೊಂಡು ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನವೂ ಅವರ ಉದ್ದೇಶವಾಗಿದೆ. ಸಿದ್ದರಾಮಯ್ಯ ಅವರ ಏಕಪಕ್ಷೀಯ ನಿರ್ಧಾರಗಳಿಂದ ಬೇಸರವಾಗಿದ್ದರೂ, ಚುನಾವಣೆ ಫ‌ಲಿತಾಂಶ ಬರದೇ ಏನೂ ಮಾಡಲಾಗದ ಸ್ಥಿತಿಯಲ್ಲಿ ಮೂಲ ಕಾಂಗ್ರೆಸ್‌ ನಾಯಕರು ಇದ್ದಾರೆ. ಸಿದ್ದರಾಮಯ್ಯ ಅವರ ವರ್ಚಸ್ಸು ಕಳೆಗುಂದಿಸುವ ಅಥವಾ ಪ್ರಜ್ವಲಿಸುವ ಸೂಚನೆಯನ್ನು ಈ ಚುನಾವಣಾ ಫ‌ಲಿತಾಂಶ ನೀಡಲಿದೆ.

ಎರಡೂ ರಾಷ್ಟ್ರೀಯ ಪಕ್ಷಗಳ ನಡುವೆ ಸಮಾನಾಂತರ ದ್ವೇಷ ಮತ್ತು ಪ್ರೀತಿಯನ್ನು ಉಳಿಸಿಕೊಂಡು ಪಕ್ಷವನ್ನು ಜೀವಂತವಾಗಿಡುವ ಕಸರತ್ತು ನಡೆಸುತ್ತಿರುವ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರ ಬದ್ಧತೆಯನ್ನು ಈ ಫ‌ಲಿತಾಂಶ ಎತ್ತಿ ತೋರಿಸುವ ಸಾಧ್ಯತೆ ಇದೆ. ದೇವೇಗೌಡರು ಕಾಂಗ್ರೆಸ್‌ನತ್ತ, ಕುಮಾರಸ್ವಾಮಿಯವರು ಬಿಜೆಪಿಯತ್ತ ಒಲವು ವ್ಯಕ್ತಪಡಿಸುವಂತೆ ಕಾಣುತ್ತಿದೆ. ಒಟ್ಟಿನಲ್ಲಿ ತಮ್ಮ ಪ್ರಾದೇಶಿಕ ಪಕ್ಷದ ಅಸ್ತಿತ್ವವನ್ನು ಉಳಿಸಿಕೊಳ್ಳುವುದು ಅವರಿಗೆ ಮುಖ್ಯವಾಗಿದೆ.

ಏಕೆಂದರೆ, ಬಿಜೆಪಿ ಸ್ಪಷ್ಟ ಬಹುಮತ ಪಡೆಯಲು ವಿಫ‌ಲವಾದರೆ, ಕುಮಾರಸ್ವಾಮಿ ನಡೆ ಮೇಲೆ ರಾಜ್ಯದಲ್ಲಿ ಯಾವ ಸರ್ಕಾರ ಅಧಿಕಾರಕ್ಕೆ ಬರಲಿದೆ ಎನ್ನುವ ಪ್ರಶ್ನೆ ಮೂಡುತ್ತದೆ. ಅದಕ್ಕೆ ಕುಮಾರಸ್ವಾಮಿ ತಮ್ಮ ನಿರ್ಧಾರದ ಮೂಲಕ ಉತ್ತರಿಸಬೇಕಾಗುತ್ತದೆ. ಅವರು ಯಾವ ಹೆಜ್ಜೆ ಇಡುತ್ತಾರೆ ಎನ್ನುವುದು ಸಾರ್ವಜನಿಕ ಜೀವನದಲ್ಲಿ ಅವರ ನಾಯಕತ್ವದ ನಿರ್ಧಾರವನ್ನು ಪ್ರತಿಫ‌ಲಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next