Advertisement

ಉಪಚುನಾವಣೆ ಫ‌ಲಿತಾಂಶ: ರಾಷ್ಟ್ರ ರಾಜಕಾರಣಕ್ಕೂ ಸಂದೇಶ 

06:00 AM Nov 08, 2018 | |

ರಾಜ್ಯದಲ್ಲಿ ಮೂರು ವಿಧಾನಸಭೆ ಮತ್ತು ಎರಡು ಲೋಕಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫ‌ಲಿತಾಂಶ ವಿಶೇಷ ಅಚ್ಚರಿಗೇ ಕಾರಣವಾಗದಿದ್ದರೂ ಸ್ಪಷ್ಟ ಸಂದೇಶವನ್ನು ನೀಡಿದೆ. ಸಾಮಾನ್ಯವಾಗಿ ಉಪಚುನಾವಣೆ ನಡೆದಾಗ ಆಡಳಿತ ಪಕ್ಷದ ಅಭ್ಯರ್ಥಿಗಳೇ ಗೆಲ್ಲುವುದು ಮಾಮೂಲು ವಿಚಾರ. ಹೀಗಾಗಿ ಈ ಫ‌ಲಿತಾಂಶ ಅಚ್ಚರಿ ಎನ್ನುವಂತಿಲ್ಲ. ಆದರೆ ರಾಜ್ಯ ಮತ್ತು ರಾಷ್ಟ್ರ ರಾಜಕೀಯಕ್ಕೆ ಫ‌ಲಿತಾಂಶದಿಂದ ಹೋಗಿರುವ ಸಂದೇಶ ಮಾತ್ರ ಬಹಳ ಸ್ಪಷ್ಟವಾಗಿದೆ. 

Advertisement

ಅದೆಂದರೆ ಬಿಜೆಪಿಯನ್ನು ಮಣಿಸಬೇಕಾದರೆ ಮೈತ್ರಿ ಮಾಡಿಕೊಳ್ಳಬೇಕು ಎನ್ನುವುದು. ಫ‌ಲಿತಾಂಶದಿಂದ ರಾಜ್ಯದ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರಕಾರ ಇನ್ನಷ್ಟು ಗಟ್ಟಿಯಾಗಿದೆ. ಕನಿಷ್ಠ 2019ರ ಮಹಾಚುನಾವಣೆ ತನಕ ಸರಕಾರದ ಸ್ಥಿರತೆಗೆ ಯಾವುದೇ ತೊಂದರೆಯಾಗಲಾರದು. ಅಂತೆಯೇ ಲೋಕಸಭೆ ಚುನಾವಣೆಗೆ ಮೈತ್ರಿ ಮುಂದುವರಿಸಲು ಜನಾದೇಶ ಸಿಕ್ಕಿದೆ ಎಂದು ಭಾವಿಸಬಹುದು. 

ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿರುವುದು ನಿಜ. ಆದರೆ ಅದಕ್ಕೆ ಮುಖ್ಯ ಕಾರಣ ರಾಜ್ಯದ ನಾಯಕರ ಬೇಜವಾಬ್ದಾರಿ ಮತ್ತು ತಂತ್ರಗಾರಿಕೆಯಿ ಲ್ಲದ ರಾಜಕಾರಣ. ಮಹಾಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿಯಿರುವಾಗ ಯಾರಿಗೂ ಈ ಉಪಚುನಾವಣೆ ಬೇಕಾಗಿರಲಿಲ್ಲ. ಹಾಗೆಂದು ಅನಿವಾರ್ಯವಾಗಿ ಬಂದ ಚುನಾವಣೆಯನ್ನು ಎದುರಿಸದೆ ಸುಮ್ಮನಿರು ವಂತೆಯೂ ಇರಲಿಲ್ಲ. ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿಕೂಟ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದರೆ ಬಿಜೆಪಿ ನಾಯಕರು ಮಾತ್ರ ತಮ್ಮ ಗುಂಪುಗಾರಿಕೆಯನ್ನು ಬಿಡದೆ ಕೊನೆಯ ತನಕವೂ ಗೊಂದಲದಲ್ಲಿಯೇ ಕಳೆದರು. ರಾಜ್ಯಾಧ್ಯಕ್ಷ ಯಡಿಯೂರಪ್ಪ ಮಗ ಸ್ಪರ್ಧಿಸಿದ ಶಿವಮೊಗ್ಗಕ್ಕೆ ಹೆಚ್ಚಿನ ಗಮನ ಹರಿಸಿದರು. ಬಳ್ಳಾರಿಯಲ್ಲಿ ಶ್ರೀರಾಮುಲು ಒಬ್ಬರೇ ಕಾದಾಡಬೇಕಾಯಿತು. ಒಟ್ಟಾರೆ ಸಮನ್ವಯತೆಯ ಕೊರತೆ ಬಿಜೆಪಿಯ ಹಿನ್ನಡೆಗೆ ಕಾರಣವಾಯಿತು. 

ಆಪರೇಶನ್‌ ಕಮಲ ಎಲ್ಲ ಸಂದರ್ಭಗಳಲ್ಲಿ ನಡೆಯುವುದಿಲ್ಲ ಎನ್ನುವ ಪಾಠವನ್ನು ಬಿಜೆಪಿಗೆ ಈ ಚುನಾವಣೆ ಕಲಿಸಿರಬಹುದು. ಬೇರೆ ಪಕ್ಷಗಳಿಂದ ಕರೆತಂದ ಎರವಲು ಅಭ್ಯರ್ಥಿಗಳು ಮತ್ತು ನಾಯಕರು ನಂಬಿಕಾರ್ಹರಲ್ಲ ಎನ್ನುವುದನ್ನು ರಾಮನಗರ ಕ್ಷೇತ್ರದಲ್ಲಾದ ಬೆಳವಣಿಗೆಯಿಂದ ಬಿಜೆಪಿ ಕಲಿತುಕೊಳ್ಳಬೇಕು.ಇದೇ ವೇಳೆ ಜೆಡಿಎಸ್‌ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಬಿಜೆಪಿ ತಳಮಟ್ಟದಿಂದ ಬಲವರ್ಧಿಸಿಕೊಳ್ಳುತ್ತಿದೆ ಎನ್ನುವುದು ಅದು ಗಳಿಸಿರುವ ಮತದಿಂದ ಅರಿವಾಗುತ್ತದೆ. ಇನ್ನಷ್ಟು ಪ್ರಯತ್ನ ಪಟ್ಟಿದ್ದರೆ ಈ ಕ್ಷೇತ್ರಗಳಲ್ಲಿ ಪ್ರಬಲ ಸ್ಪರ್ಧೆ ನೀಡಲು ಸಾಧ್ಯವಿದೆ. ರಾಷ್ಟ್ರಮಟ್ಟದ ಮಹಾಘಟಬಂಧನ್‌ ರಚನೆಗೆ ಕುಮಾರಸ್ವಾಮಿ ಪದಗ್ರಹಣ ಸಮಾರಂಭವೇ ವೇದಿಕೆಯಾಗಿತ್ತು. ಇದೀಗ ಕರ್ನಾಟಕದ ಉಪಚುನಾವಣೆ ಮಹಾಘಟಬಂಧನ್‌ಗೆ ಉತ್ತೇಜನಕಾರಿಯಾದ ಫ‌ಲಿತಾಂಶ ನೀಡಿರುವುದು ಕಾಕತಾಳೀಯ ಎನ್ನಬಹುದೇನೋ. ಇನ್ನುಳಿದ ರಾಜ್ಯಗಳಲ್ಲೂ ಪ್ರಾದೇಶಿಕ ಪಕ್ಷಗಳಲ್ಲಿ ಕರ್ನಾಟಕ ಮಾದರಿಯ ಮೈತ್ರಿ ಮಾಡಿಕೊಳ್ಳಲು ಈ ಫ‌ಲಿತಾಂಶ ಪ್ರೇರಕದಂತೆ ಕೆಲಸ ಮಾಡಬಹುದು. 

ಈ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ, ಶ್ರೀರಾಮುಲು ಸೇರಿದಂತೆ ಕೆಲವು ನಾಯಕರ ನೈಜ ಸಾಮರ್ಥ್ಯವೂ ಅನಾವರಣಗೊಂಡಿದೆ. ಬಳ್ಳಾರಿಯಲ್ಲಿ ಹೊರಗಿನವರಾದ ಉಗ್ರಪ್ಪ ಅವರನ್ನು ನಿಲ್ಲಿಸಿಯೂ 2 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸಿರುವುದು ಶಿವಕುಮಾರ್‌ ಮತ್ತು ಸಿದ್ದರಾಮಯ್ಯನವರ ರಾಜಕೀಯ ತಂತ್ರಗಾರಿಕೆಗೆ ಸಂದ ಗೆಲುವು. ಇಲ್ಲಿ ಬಿಜೆಪಿ ಮತ್ತು ವೈಯಕ್ತಿಕವಾಗಿ ರಾಮುಲು ದಯನೀಯ ವೈಫ‌ಲ್ಯ ಕಂಡಿದ್ದಾರೆ. ಅಂತೆಯೇ ಶಿವಮೊಗ್ಗದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಒಟ್ಟಾದರೂ ಗೆಲುವು ದಕ್ಕಲಿಲ್ಲ. ಇದು ಈಗಲೂ ಬಿಜೆಪಿ ಕೋಟೆಯಾಗಿಯೇ ಉಳಿದಿದೆ ಎನ್ನುವುದು ಸ್ಪಷ್ಟವಾಗಿದೆ. ವಿಧಾನಸಭೆ ಕ್ಷೇತ್ರಗಳ ಪೈಕಿ ರಾಮನಗರ ಮತ್ತು ಜಮಖಂಡಿಯ ಫ‌ಲಿತಾಂಶ ನಿರೀಕ್ಷತವೇ ಆಗಿತ್ತು. ಗೆಲುವಿನ ಅಂತರ ಎಷ್ಟು ಎನ್ನುವುದಷ್ಟೇ ಉಳಿದಿದ್ದ ಕುತೂಹಲ. 

Advertisement

ಗೆಲುವಿನ ಅಂತರ ಸಾಕಷ್ಟು ಹೆಚ್ಚಿರುವುದರಿಂದ ಸಮ್ಮಿಶ್ರ ಸರಕಾರಕ್ಕೆ ಜನರ ಸಮ್ಮತಿಯಿದೆ ಎಂದು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಹೇಳಿಕೊಳ್ಳಬಹುದು. ವಿಧಾನಸಭೆ ಚುನಾವಣೆಯಲ್ಲಿ 100ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಮೂಡಿಬಂದಿದ್ದ ಬಿಜೆಪಿ ಇದೀಗ ಮುಂದಿನ ಚುನಾವಣೆಯನ್ನು ಎದುರಿಸಲು ತನ್ನ ಕಾರ್ಯತಂತ್ರವನ್ನು ಆಮೂಲಾಗ್ರವಾಗಿ ಬದಲಿಸುವ ಅಗತ್ಯವನ್ನು ಈ ಫ‌ಲಿತಾಂಶ ಒತ್ತಿ ಹೇಳಿದೆ. ಮೋದಿ ಮತ್ತು ಅಮಿತ್‌ ಶಾ ಬಂದರೆ ಮಾತ್ರ ಚುನಾವಣೆ ಗೆಲ್ಲಬಹುದು ಎಂಬ ಮನಸ್ಥಿತಿಯಿಂದ ಬಿಜೆಪಿ ಹೊರಬರಬೇಕಾದ ಅಗತ್ಯವಿದೆ.
 
ವಿಧಾನಸಭೆ ಚುನಾವಣೆಗೆ ಮುನ್ನ ನಡೆಸಿದ ಸಮೀಕ್ಷೆಯೊಂದರಲ್ಲಿ ಒಂದು ವೇಳೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಜತೆಯಾಗಿ ಸ್ಪರ್ಧಿಸಿದರೆ ಯಾವ ರೀತಿಯ ಫ‌ಲಿತಾಂಶ ಬರಬಹುದು ಎನ್ನುವುದನ್ನು ತಿಳಿದುಕೊಳ್ಳುವ ಪ್ರಯತ್ನ ನಡೆಸಲಾಗಿತ್ತು. ಈ ಸಮೀಕ್ಷೆ ಪ್ರಕಾರ ಮೈತ್ರಿಕೂಟ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿತ್ತು. ಆ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆಯಿತ್ತು. ಹೀಗಾಗಿ ಮತ ವಿಭಜನೆಯಾಗಿ ಬಿಜೆಪಿ ದೊಡ್ಡ ಪಕ್ಷವಾಯಿತು. ಆದರೆ ಮುಂಬರುವ ಚುನಾವಣೆಯಲ್ಲಿ ದ್ವಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಯೇ ಹೆಚ್ಚು. ಹೀಗಾಗಿ, ಬದಲಾಗುತ್ತಿರುವ ರಾಜಕೀಯ ಸಮೀಕರಣಕ್ಕೆ ತಕ್ಕಂತೆ ತಂತ್ರ ರಚನೆಯೂ ಅಗತ್ಯ ಎನ್ನುವುದು ಫ‌ಲಿತಾಂಶ ಕಲಿಸಿದ ಪಾಠ.

Advertisement

Udayavani is now on Telegram. Click here to join our channel and stay updated with the latest news.

Next