Advertisement

ಜಟ್ಟಿಗಳ ಅಖಾಡ ಸಿದ್ಧ: ಅಭ್ಯರ್ಥಿಗಳ ಪಟ್ಟಿ ಬಹುತೇಕ ಅಂತಿಮ

06:32 AM Oct 15, 2018 | |

ಬೆಂಗಳೂರು: ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನ.3ರಂದು ನಡೆಯುವ ಉಪ ಚುನಾವಣೆಗೆ ಮೂರೂ ಪಕ್ಷಗಳ ಅಭ್ಯರ್ಥಿಗಳ ಹೆಸರು ಬಹು ತೇಕ ಅಂತಿಮಗೊಂಡಿದ್ದು, ಅಧಿಕೃತ ಪ್ರಕಟನೆಯಷ್ಟೇ ಬಾಕಿ ಇದೆ. ಅ.16ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಬಹುತೇಕ ಅಭ್ಯರ್ಥಿಗಳು ಸೋಮವಾರ ನಾಮಪತ್ರ ಸಲ್ಲಿ ಸುವ ತಯಾರಿ ನಡೆಸಿದ್ದಾರೆ.

Advertisement

ವಿಧಾನಸಭೆಯ ಎರಡು ಸ್ಥಾನಗಳನ್ನು ದೋಸ್ತಿ ಪಕ್ಷಗಳು ಹಂಚಿಕೊಂಡಿದ್ದವು. ಆದರೆ ಎರಡು ಲೋಕಸಭೆ ಸ್ಥಾನಗಳಿಗೆ ಸ್ಪರ್ಧೆ ಮಾಡಬೇಕೆಂದು ಕೊಂಡಿದ್ದ ಕಾಂಗ್ರೆಸ್‌ ಕೊನೇ ಗಳಿಗೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿ ದೊರೆಯದ ಕಾರಣ ಜೆಡಿಎಸ್‌ಗೆ ಬಿಟ್ಟುಕೊಟ್ಟಿರು ವುದರಿಂದ ಮೈತ್ರಿ ಸರಕಾರದಲ್ಲಿ ಜೆಡಿಎಸ್‌ ಕೈ ಮೇಲಾದಂತಾಗಿದೆ. ಉಪ ಚುನಾವಣೆಯಲ್ಲೂ ಮೂರೂ ಪಕ್ಷಗಳಿಗೆ ಸ್ಥಳೀಯವಾಗಿ ಬಂಡಾಯದ ಬಿಸಿ ತಟ್ಟಿದ್ದು, ಬಂಡಾಯ ಶಮನಕ್ಕೆ ರಾಜ್ಯ ನಾಯಕರು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ.

ಜೆಡಿಎಸ್‌ ಈಗಾಗಲೇ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಮಾಜಿ ಸಂಸದ ಎಲ್‌.ಆರ್‌. ಶಿವರಾಮೇಗೌಡ, ಶಿವಮೊಗ್ಗಕ್ಕೆ ಮಾಜಿ ಶಾಸಕ ಮಧು ಬಂಗಾರಪ್ಪ ಹಾಗೂ ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ.

ಕಾಂಗ್ರೆಸ್‌ನಲ್ಲಿ ಜಮಖಂಡಿ ವಿಧಾನಸಭಾ ಕ್ಷೇತ್ರಕ್ಕೆ ನಿರೀಕ್ಷೆಯಂತೆ ಸಿದ್ದು ನ್ಯಾಮಗೌಡ ಪುತ್ರ ಆನಂದ ನ್ಯಾಮಗೌಡ ಅವರಿಗೆ ಟಿಕೆಟ್‌ ನೀಡಲಾಗಿದ್ದು, ಬಳ್ಳಾರಿಯಲ್ಲಿ ಸಾಕಷ್ಟು ವಿರೋಧದ ನಡುವೆಯೇ ಬಳ್ಳಾರಿ ಗ್ರಾಮಾಂತರ ಶಾಸಕ ಬಿ. ನಾಗೇಂದ್ರರ ಸಹೋದರ ವೆಂಕಟೇಶ್‌ ಪ್ರಸಾದ್‌ಗೆ ರಾಜ್ಯ ಕಾಂಗ್ರೆಸ್‌ ನಾಯಕರು ಮಣೆ ಹಾಕಿದ್ದಾರೆ. ಇಲ್ಲಿ ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯ ದೇವೇಂದ್ರಪ್ಪ ಹಾಗೂ ವಿಧಾನ ಪರಿಷತ್‌ ಸದಸ್ಯ ವಿ.ಎಸ್‌.ಉಗ್ರಪ್ಪ ಹೆಸರು ಕೊನೆ ಗಳಿಗೆ ಯವರೆಗೂ ಪೈಪೋಟಿಯಲ್ಲಿತ್ತು. 

ಬಿಜೆಪಿಯಲ್ಲೂ ಸ್ಥಳೀಯ ನಾಯಕರ ವಿರೋಧದ ನಡುವೆ ಮಂಡ್ಯ ಹಾಗೂ ರಾಮನಗರ ಕ್ಷೇತ್ರಗಳಲ್ಲಿ ವಲಸಿಗರಿಗೆ ಮಣೆ ಹಾಕಲಾಗಿದ್ದು, ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ನಿವೃತ್ತ ಅಧಿಕಾರಿ ಸಿದ್ದರಾಮಯ್ಯ, ರಾಮನಗರಕ್ಕೆ ವಿಧಾನ ಪರಿಷತ್‌ ಸದಸ್ಯ ಸಿ.ಎಂ. ಲಿಂಗಪ್ಪ ಪುತ್ರ ಚಂದ್ರಶೇಖರ್‌ಗೆ ಟಿಕೆಟ್‌ ನೀಡಲಾಗಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ನಿರೀಕ್ಷೆಯಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಪುತ್ರ ಬಿ.ವೈ ರಾಘವೇಂದ್ರ ಸ್ಪರ್ಧಿಸುವರು. ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಶಾಸಕ ಶ್ರೀರಾಮುಲು ಸಹೋದರಿ ಹಾಗೂ ಮಾಜಿ ಸಂಸದೆ ಶಾಂತಾ ಅವರಿಗೆ ಟಿಕೆಟ್‌ ನೀಡಲಾಗಿದೆ. ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕ ಶ್ರೀಕಾಂತ್‌ ಕುಲಕರ್ಣಿ ಕಣಕ್ಕಿಳಿದಿದ್ದಾರೆ. 

Advertisement

ಆಂತರಿಕ ಬಂಡಾಯದ ಬಿಸಿ
ಉಪ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಹೋಲಿಸಿದರೆ ಜೆಡಿಎಸ್‌ ಆಂತರಿಕವಾಗಿ ಹೆಚ್ಚು ಗೊಂದಲಗಳಿಲ್ಲದೇ ಚುನಾವಣೆ ಎದುರಿಸುತ್ತಿದೆ. ಜೆಡಿಎಸ್‌ ಹಿಡಿತದಲ್ಲೇ ಇದ್ದ ರಾಮ ನಗರ ಹಾಗೂ ಮಂಡ್ಯ ಕ್ಷೇತ್ರಗಳಲ್ಲಿ ಜೆಡಿಎಸ್‌ಗೆ ಸ್ವಪಕ್ಷೀಯ ರಿಂದ ಹೇಳಿಕೊಳ್ಳುವಷ್ಟು ವಿರೋಧ ವಿಲ್ಲ. ಆದರೆ ಕಾಂಗ್ರೆಸ್‌ ಎರಡೂ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹಾಕದಿರುವುದಕ್ಕೆ ಸ್ಥಳೀಯ ನಾಯಕರು ಬಂಡಾಯದ ಬಾವುಟ ಹಾರಿಸಲು ಮುಂದಾಗಿದ್ದಾರೆ. ಅಲ್ಲದೆ, ತಮ್ಮ ಅಸ್ಥಿತ್ವ ಉಳಿಸಿ ಕೊಳ್ಳಲು ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ಧಿ ಸಲು ಮುಂದಾಗಿದ್ದಾರೆ.

ರಾಮನಗರದಲ್ಲಿ 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಇಕ್ಬಾಲ್‌ ಹುಸೇನ್‌ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮುಂದಾಗಿರುವುದು ಕಾಂಗ್ರೆಸ್‌ಗಿಂತ ಜೆಡಿಎಸ್‌ಗೆ ಹೆಚ್ಚು ಆತಂಕ ಸೃಷ್ಟಿಸಿದೆ. ಮಂಡ್ಯದಲ್ಲಿಯೂ ಜೆಡಿಎಸ್‌ನಿಂದ ಹೊರ ಬಂದು ಕಾಂಗ್ರೆಸ್‌ ಸೇರಿರುವ ಮಾಜಿ ಸಚಿವ ಚೆಲುವರಾಯಸ್ವಾಮಿ ಜೆಡಿಎಸ್‌ಗೆ ಒಳ ಏಟು ನೀಡಲು ಪ್ರಯತ್ನ ನಡೆಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಮಾಜಿ ಶಾಸಕ ಪುಟ್ಟಣ್ಣಯ್ಯ ಪತ್ನಿ ಸುನೀತಾ ಅವರನ್ನು ಸ್ವರಾಜ್‌ ಪಕ್ಷದಿಂದ ಕಣಕ್ಕಿಳಿಸಿ ಪರೋಕ್ಷವಾಗಿ ಬೆಂಬಲಿಸಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಬಿಜೆಪಿಯಲ್ಲಿ ರಾಮನಗರ ಮತ್ತು ಮಂಡ್ಯದಲ್ಲಿ ಮೂಲ ಕಾರ್ಯಕರ್ತರನ್ನು ಅವಗಣಿಸಿ ವಲಸಿಗರಿಗೆ ಮಣೆ ಹಾಕಿರುವುದರಿಂದ ಬಹಿರಂಗವಾಗಿ ಬಂಡಾಯ ಸಾರದಿದ್ದರೂ ಚುನಾವಣೆಯಲ್ಲಿ ಸಕ್ರಿಯರಾಗಿ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡುವುದು ಅನುಮಾನ ಎನ್ನಲಾಗುತ್ತಿದೆ. ಜಮಖಂಡಿಯಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿಗೆ ಆರಂಭದಲ್ಲಿ ಬಂಡಾಯದ ಬಿಸಿ ಕಾಣುತ್ತಿದೆ. 
 

ಸಿದ್ದು ಹಿಡಿತದಲ್ಲೇ ಕಾಂಗ್ರೆಸ್‌

ಐದು ಕ್ಷೇತ್ರಗಳ ಉಪಚುನಾವಣೆಯ ಮೇಲುಸ್ತು ವಾರಿ ವಹಿಸಿಕೊಳ್ಳುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ರಾಜ್ಯ ಕಾಂಗ್ರೆಸ್‌ನಲ್ಲಿ ಅಂತಿಮ ಎನ್ನುವುದು ಮತ್ತೂಮ್ಮೆ ಸಾಬೀತಾಗಿದೆ.

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರಾಗಿದ್ದರೂ ಅವರನ್ನು ತೆರೆಗೆ ಸರಿಸಿ ಪಕ್ಷ ಹಾಗೂ ಸರಕಾರದಲ್ಲಿ ಹಿಡಿತ ಸಾಧಿಸಲು ಡಿಸಿಎಂ ಪರಮೇಶ್ವರ್‌ ಹಾಗೂ ಸಚಿವ ಡಿ.ಕೆ. ಶಿವಕುಮಾರ್‌ ಕಸರತ್ತು ನಡೆಸಿದ್ದಾರೆ. ಆದರೆ ಉಪ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆಯ ಗೊಂದಲ ನಿವಾರಿಸಲು ಕೊನೆಗೆ ಸಿದ್ದರಾಮಯ್ಯ ಅವರೇ ಬೇಕಾಯಿತು. ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕುರಿತಾದ ಗೊಂದಲ ನಿವಾರಣೆಯ ಜವಾಬ್ದಾರಿಯನ್ನು ಆರಂಭದಲ್ಲಿ ಡಿ.ಕೆ. ಶಿವಕುಮಾರ್‌ಗೆ ನೀಡಲಾಗಿತ್ತು.  ಆದರೆ ಬಳ್ಳಾರಿಯ ಕೆಲವು ಶಾಸಕರು ಸಿದ್ದರಾಮಯ್ಯ ಸಮ್ಮುಖದಲ್ಲಿಯೇ ಚರ್ಚಿಸಲು ನಿರ್ಧರಿಸಿದ್ದರಿಂದ ಅವರ ಮಾತೇ ಅಂತಿಮ ಎನ್ನುವ ಸಂದೇಶ ರವಾನಿಸಿದಂತಾಗಿದೆ. 

ಜಮಖಂಡಿಯಲ್ಲಿ ಪರಮೇಶ್ವರ್‌ ಅವರನ್ನು ಉಸ್ತುವಾರಿಯನ್ನಾಗಿ ನೇಮಿಸಿದ್ದರೂ ಸಿದ್ದರಾಮಯ್ಯ ಪಕ್ಷದ ಅಭ್ಯರ್ಥಿ ಆನಂದ ನ್ಯಾಮಗೌಡ ಪರ ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತಾರೆ ಎನ್ನುವುದು ಅವರ ಭವಿಷ್ಯ ನಿರ್ಧರಿಸಲಿದೆ. ಇಲ್ಲಿ ಪಂಚಮಸಾಲಿ ಮತ್ತು ಕುರುಬ ಮತದಾರರು ನಿರ್ಣಾಯಕರಾಗಿದ್ದು, ಸಿದ್ದರಾಮಯ್ಯ ನಿಲುವು ಫ‌ಲಿತಾಂಶದ ಮೇಲೆ ಪರಿಣಾಮ ಬೀರಲಿದೆ.

ಹಾಲಿ ಸಿಎಂ ಪತ್ನಿ , ಮಾಜಿ ಸಿಎಂ ಪುತ್ರರ ಸವಾಲು
ಈ ಉಪ ಚುನಾವಣೆಯಲ್ಲಿ ಮಾಜಿ ಹಾಗೂ ಹಾಲಿ ಮುಖ್ಯಮಂತ್ರಿಗಳ ಕುಟುಂಬಸ್ಥರೇ ಮೂರು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿರುವುದು ವಿಶೇಷವಾಗಿದೆ. ರಾಮನಗರದಲ್ಲಿ ಹಾಲಿ ಸಿಎಂ ಪತ್ನಿ ಅನಿತಾ ಕುಮಾರಸ್ವಾಮಿ, ಶಿವಮೊಗ್ಗದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ. ರಾಘವೇಂದ್ರ, ಎಸ್‌. ಬಂಗಾರಪ್ಪ ಪುತ್ರ ಮಧು ಬಂಗಾರಪ್ಪ ಹಾಗೂ ಜೆ.ಎಚ್‌. ಪಟೇಲ್‌ ಪುತ್ರ ಮಹಿಮಾ ಪಟೇಲ್‌ ಕಣದಲ್ಲಿದ್ದಾರೆ.

ಎಲ್ಲೆಲ್ಲಿ.. ಯಾರ್ಯಾರು?
ರಾಮನಗರ
ಚಂದ್ರಶೇಖರ್‌ (ಬಿಜೆಪಿ) ಅನಿತಾ ಕುಮಾರಸ್ವಾಮಿ (ಜೆಡಿಎಸ್‌)
ಜಮಖಂಡಿ
ಆನಂದ ನ್ಯಾಮಗೌಡ (ಕಾಂಗ್ರೆಸ್‌) ಶ್ರೀಕಾಂತ್‌ ಕುಲಕರ್ಣಿ (ಬಿಜೆಪಿ)
ಮಂಡ್ಯ
ಸಿದ್ದರಾಮಯ್ಯ (ಬಿಜೆಪಿ) ಎಲ್‌.ಆರ್‌. ಶಿವರಾಮೇಗೌಡ (ಜೆಡಿಎಸ್‌)
ಶಿವಮೊಗ್ಗ
ಬಿ.ವೈ. ರಾಘವೇಂದ್ರ (ಬಿಜೆಪಿ) ಮಧು ಬಂಗಾರಪ್ಪ (ಜೆಡಿಎಸ್‌)
ಬಳ್ಳಾರಿ
ವೆಂಕಟೇಶ್‌ ಪ್ರಸಾದ್‌/ಉಗ್ರಪ್ಪ (ಕಾಂಗ್ರೆಸ್‌) ಜೆ. ಶಾಂತಾ (ಬಿಜೆಪಿ)

Advertisement

Udayavani is now on Telegram. Click here to join our channel and stay updated with the latest news.

Next