Advertisement

ಮಂಗಳೂರು ಚಿಟ್ಟೆ ಪಾರ್ಕ್‌; ಪ್ರವಾಸೋದ್ಯಮಕ್ಕೆ ಹೊಸ ಲುಕ್‌ –ಕಪ್ಪೆಗಳಿಗೂ ಪ್ರತ್ಯೇಕ ತಾಣ

10:32 AM Dec 17, 2022 | Team Udayavani |

ಮಂಗಳೂರು: ಪಿಲಿಕುಳ ಡಾ| ಶಿವರಾಮ ಕಾರಂತ ನಿಸರ್ಗ ಧಾಮದಲ್ಲಿರುವ ಮೃಗಾಲಯ, ಗುತ್ತಿನ ಮನೆ, ಕುಶಲಕರ್ಮಿಗಳ ಗ್ರಾಮ, ಸಸ್ಯಕಾಶಿ, ಬೊಟಾನಿಕಲ್‌ ಮ್ಯೂಸಿಯಂ, ಔಷಧವನ ಇವುಗಳ ಸಾಲಿಗೆ ಹೊಸ ಸೇರ್ಪಡೆಯಾಗಲಿದೆ ಚಿಟ್ಟೆ ಪಾರ್ಕ್‌ !

Advertisement

ಸುಮಾರು 150 ಎಕರೆ ಪ್ರದೇಶದಲ್ಲಿ ವ್ಯಾಪಿಸಿಕೊಂಡಿರುವ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಚಿಟ್ಟೆ ಪಾರ್ಕ್‌ ಯೋಜನೆ ಅನುಷ್ಠಾನಗೊಳ್ಳಲಿದ್ದು, ಇದಕ್ಕಾಗಿ ಸುಮಾರು 20 ಎಕರೆ ಪ್ರದೇಶವನ್ನು ಮೀಸಲಿರಿಸಲು ಉದ್ದೇಶಿಸಲಾಗಿದೆ. ಪಾರ್ಕ್‌ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈಗಾಗಲೇ ವಿವಿಧ ಹಂತಗಳಲ್ಲಿ ಕೆಲಸಗಳು ಆರಂಭವಾಗಿವೆ. ಈ ಮೂಲಕ ಕರಾವಳಿ ಪ್ರವಾಸೋದ್ಯಮಕ್ಕೆ ಹೊಸ ಆಯಾಮ ದೊರೆಯಲಿದೆ.

ಗಾಜಿನ ಡೂಮ್‌: ಪ್ರತಿ ಚಿಟ್ಟೆ ಪ್ರಬೇಧಕ್ಕೂ ಅದರದ್ದೇ ಮರ ಅಥವಾ ಗಿಡಗಳಿವೆ. ಇವುಗಳನ್ನು ಹೋಸ್ಟ್‌ ಪ್ಲ್ಯಾಂಟ್‌ ಎನ್ನುತ್ತಾರೆ. ಅದರಲ್ಲೇ ಅವುಗಳು ತಮ್ಮ ಸಂತಾನೋತ್ಪತ್ತಿ ಪ್ರಕ್ರಿಯೆ ನಡೆಸುತ್ತವೆ. ಸಾಮಾನ್ಯವಾಗಿ ಇಂತಹ ಮರ ಗಿಡಗಳನ್ನು ನೆಟ್ಟು ಚಿಟ್ಟೆ ಪಾರ್ಕ್‌ ಗಳನ್ನು ಮಾಡುತ್ತಾರೆ. ಆದರೆ ಪಿಲಿಕುಳದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವುದು ಗಾಜಿನ ಡೂಮ್‌ ಮಾದರಿಯ ಚಿಟ್ಟೆ ಪಾರ್ಕ್‌.

ಸುಮಾರು 2- 3 ಎಕರೆ ಪ್ರದೇಶ ವ್ಯಾಪ್ತಿಯಲ್ಲಿ ಗಾಜಿನ ಡೂಮ್‌ ನಿರ್ಮಿಸಿ ಹೋಸ್ಟ್‌ ಪ್ಲ್ಯಾಂಟ್‌ಗಳನ್ನು ಬೆಳೆಸಿ ಚಿಟ್ಟೆಗಳು ಬಂದು ಮೊಟ್ಟೆ ಇಡುವಂತೆ ಮಾಡಲಾಗುತ್ತದೆ. ಇದರಿಂದ ಯಾವಾಗ ಬಂದರೂ ಪ್ರವಾಸಿಗರಿಗೆ ಚಿಟ್ಟೆಗಳು ಕಾಣಲು ಸಿಗುತ್ತವೆ. ಉಳಿದ ಪ್ರದೇಶಗಳಲ್ಲಿ ಚಿಟ್ಟೆಗಳನ್ನು ಆಕರ್ಷಿಸುವ ಗಿಡಗಳನ್ನು ನೆಟ್ಟು ಬೆಳೆಸಲಾಗುತ್ತದೆ.

1 ಕೋಟಿ ರೂ. ವೆಚ್ಚ
ಪಾರ್ಕ್‌ ನಿರ್ಮಾಣಕ್ಕೆ ಸುಮಾರು 1 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. ಚಿಟ್ಟೆಗಳು ಜೀವ ವೈವಿಧ್ಯದಡಿ ಬರುವುದರಿಂದ ಈಗಾಗಲೇ ಕರ್ನಾಟಕ ಜೀವ ವೈವಿಧ್ಯ ಮಂಡಳಿಯಿಂದ ಅನುದಾನ ಒದಗಿಸುವಂತೆ ಪ್ರಸ್ತಾವನೆ ಸಲ್ಲಿಸಿದ್ದು, ಮಂಡಳಿ ಅಧ್ಯಕ್ಷ ರವಿ ಕಾಳಪ್ಪ ಅವರು ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ. ಇತರ ಮೂಲಗಳಿಂದಲೂ ಅನುದಾನ ಹೊಂದಿಸುವ ಯೋಜನೆ ಹಾಕಿಕೊಳ್ಳಲಾಗಿದೆ.

Advertisement

ಬೆಳುವಾಯಿ, ಮಂಗಳೂರಿನಲ್ಲಿದೆ ಪಾರ್ಕ್‌
ಮೂಡುಬಿದಿರೆಯ ಬೆಳುವಾಯಿಯಲ್ಲಿ ಸಮ್ಮಿಲನ್‌ ಶೆಟ್ಟಿ ಅವರು ಚಿಟ್ಟೆ ಪಾರ್ಕ್‌ ಪರಿಕಲ್ಪನೆಯನ್ನು ಜಿಲ್ಲೆಯಲ್ಲಿ ಮೊದಲ ಬಾರಿಗೆ ಪರಿಚಯಿಸಿದ್ದರು. ಇದು ಕರಾವಳಿಯಲ್ಲೇ ಹೆಚ್ಚು ಪ್ರಸಿದ್ಧಿ ಪಡೆದಿದ್ದು, ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಮಂಗಳೂರು ನಗರದಲ್ಲೂ ಮಂಗಳಾ ಕ್ರೀಡಾಂಗಣದ ಪಕ್ಕದಲ್ಲಿಯೂ ಚಿಟ್ಟೆ ಪಾರ್ಕ್‌ ನಿರ್ಮಾಣ ಹಂತದಲ್ಲಿದ್ದು, ಗಿಡಗಳನ್ನು ಬೆಳೆಸಿ ಚಿಟ್ಟೆಗಳನ್ನು ಆಕರ್ಷಿಸಲಾಗುತ್ತಿದೆ.

ಕಪ್ಪೆಗಳಿಗೂ ಪ್ರತ್ಯೇಕ ತಾಣ
ರೈತ ಮಿತ್ರನಾಗಿರುವ ಕಪ್ಪೆಗಳ ಸಂತತಿಯೂ ನಶಿಸುತ್ತಿರುವ ಹಿನ್ನೆಲೆಯಲ್ಲಿ ಪಿಲಿಕುಳದಲ್ಲಿ ವಿವಿಧ ಜಾತಿಯ ಕಪ್ಪೆಗಳನ್ನು ಸಾಕಿ ಸಂತಾನೋತ್ಪತ್ತಿ ಮಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ. ಕೇಂದ್ರ ಮೃಗಾಲಯ ಪ್ರಾಧಿಕಾರಕ್ಕೆ ಈ ಕುರಿತ ವರದಿ ಸಲ್ಲಿಸಲಾಗಿದೆ. ಇದೊಂದು ವಿಶೇಷ ಯೋಜನೆಯಾಗಿದೆ. ಇದಕ್ಕೂ ದೊಡ್ಡ ಮೊತ್ತದ ಅನುದಾನದ ಅಗತ್ಯವಿದೆ. ಈ ಯೋಜನೆ ಅತ್ಯಂತ ವಿರಳ ಎನ್ನುತ್ತಾರೆ ನಿರ್ದೇಶಕ ಜಯಪ್ರಕಾಶ್‌ ಭಂಡಾರಿ.

ಪಿಲಿಕುಳದಲ್ಲಿ ಚಿಟ್ಟೆ ಪಾರ್ಕ್‌ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಬೇರೆಬೇರೆ ಜಾತಿಯ ಚಿಟ್ಟೆಗಳಿಗೆ ಅವುಗಳದ್ದೇ ಆದ ಮರ-ಗಿಡಗಳಿವೆ. ಪಶ್ಚಿಮಘಟ್ಟದಲ್ಲಿ ಬೆಳೆಯುವ ಇಂತಹ ಇನ್ನಷ್ಟು ಗಿಡಗಳನ್ನು ನೆಡಲಾಗುವುದು. ಉದ್ಯಾನವನದಲ್ಲಿ ಈಗಾಗಲೇ ಚಿಟ್ಟೆಗಳು ಕಂಡು ಬರುತ್ತಿವೆ. ಈ ಮೂಲಕ ಪ್ರವಾಸಿಗರು ಬಂದಾಗ ಹೆಚ್ಚು ಚಿಟ್ಟೆಗಳು ನೋಡಲು ಸಿಗುವಂತಾಗಲಿದೆ.
-ಎಚ್‌. ಜಯಪ್ರಕಾಶ್‌
ಭಂಡಾರಿ,ನಿರ್ದೇಶಕರು, ಪಿಲಿಕುಳ ಜೈವಿಕ ಉದ್ಯಾನವನ

ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next