Advertisement

KSRTC ಗೆ 350 ಎಲೆಕ್ಟ್ರಿಕ್‌ ಬಸ್‌ಗಳ ಸೇರ್ಪಡೆ: ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್‌ ಪಾಸ್‌

09:47 AM Oct 12, 2022 | Team Udayavani |

ಮಂಗಳೂರು : ಕರ್ನಾಟಕ ರಾಜ್ಯ ರಸ್ತೆ ನಿಗಮ (ಕೆಎಸ್ಸಾರ್ಟಿಸಿ)ವು 350 ಎಲೆಕ್ಟ್ರಿಕ್‌ ಬಸ್‌ (ಇ-ಬಸ್‌)ಗಳನ್ನು ಖರೀದಿಸಲು ನಿರ್ಧರಿಸಿದ್ದು ಮುಖ್ಯ ಮಂತ್ರಿ  ಯವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ನಿಗಮದ ಅಧ್ಯಕ್ಷ ಎಂ. ಚಂದ್ರಪ್ಪ ಮಂಗಳೂರಿನ ಪತ್ರಿಕಾಗೋಷ್ಠಿ ಯಲ್ಲಿ ಹೇಳಿದರು.

Advertisement

50 ಇ-ಬಸ್‌ಗಳು ಒಂದು ತಿಂಗಳೊಳಗೆ ಆಗಮಿಸಲಿವೆ. ಉಳಿದ 300 ಬಸ್‌ಗಳನ್ನು ಮುಂದಿನ ಹಂತದಲ್ಲಿ ಸೇರ್ಪಡೆಗೊಳಿಸಲಾಗುವುದು. ಅವು ಗಳನ್ನು 450 ಕಿ.ಮೀ. ವ್ಯಾಪ್ತಿಯ ರೂಟ್‌ಗಳಿಗೆ ಬಳಸಲಾಗುವುದು ಎಂದರು.

ಕೊರೊನಾ ಕಾರಣದಿಂದ 2 ವರ್ಷ ಹೊಸ ಬಸ್‌ಗಳ ಖರೀದಿ ಸಾಧ್ಯವಾಗಲಿಲ್ಲ. 9 ಲಕ್ಷ ಕಿ.ಮೀ. ಸಂಚರಿಸಿದ ಬಸ್‌ಗಳನ್ನು ಸುಸ್ಥಿತಿಗೆ ತಂದು ಮರು ಬಳಕೆ ಮಾಡ ಲಾಗುತ್ತಿದೆ. ಪ್ರಸ್ತುತ 650 ಹೊಸ ಬಸ್‌ಗಳ ಖರೀದಿಗೆ ಪ್ರಸ್ತಾವನೆ ಸಲ್ಲಿಸ   ಲಾಗಿದೆ. ಇದಲ್ಲದೆ ಆಧುನಿಕ ಸೌಲಭ್ಯ   ಗ ಳುಳ್ಳ 50 ವೊಲ್ವೊ ಬಸ್‌ಗಳನ್ನೂ ಖರೀದಿಸ ಲಾಗುವುದು ಎಂದು ವಿವರಿಸಿದರು.

9ರಲ್ಲಿ 8 ಬೇಡಿಕೆ ಈಡೇರಿಕೆ
ನಿಗಮದಲ್ಲಿ 30 ಸಾವಿರ ಬಸ್‌ಗಳಿದ್ದು, 1.30 ಲಕ್ಷ ನೌಕರರಿದ್ದಾರೆ. ನೌಕರರು ಉತ್ತಮ ಸೇವೆ ನೀಡುತ್ತಿದ್ದು ಕೆಎಸ್ಸಾರ್ಟಿಸಿಯ ಅಪಘಾತ ದರ ಕೇವಲ ಶೇ. 0.2 ಆಗಿದೆ. ಕಳೆದ ಬಾರಿ ಸಾರಿಗೆ ಮುಷ್ಕರ ವೇಳೆ ನೌಕರರು ಸಲ್ಲಿಸಿದ 9 ಬೇಡಿಕೆಗಳಲ್ಲಿ 8ನ್ನು ಈಡೇರಿಸಲಾಗಿದೆ. ಆರನೇ ವೇತನ ಆಯೋಗದ ಪ್ರಕಾರ ವೇತನ ಏರಿಕೆ ಮಾಡಬೇಕೆಂಬ ಬೇಡಿಕೆ ಸರಕಾರದ ಪರಿಶೀಲನೆಯಲ್ಲಿದೆ. ಪ್ರಸಕ್ತ ಡೀಸೆಲ್‌, ಬಿಡಿ ಭಾಗಗಳು, ಸಿಬಂದಿ ವೇತನ ಸೇರಿದಂತೆ ಒಟ್ಟು ನಿರ್ವಹಣೆ ವೆಚ್ಚದಲ್ಲಿ ಭಾರೀ ಏರಿಕೆಯಾಗಿದ್ದರೂ ಕಳೆದ ಮೂರು ವರ್ಷಗಳಿಂದ ಪ್ರಯಾಣ ದರದಲ್ಲಿ ಹೆಚ್ಚಳ ಮಾಡಿಲ್ಲ ಎಂದರು.

ವರ್ಗಾವಣೆ ಸದ್ಯಕ್ಕಿಲ್ಲ
ಮಂಗಳೂರು, ಪುತ್ತೂರು ವಿಭಾಗ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೇರೆ ಜಿಲ್ಲೆಗಳ ಚಾಲಕ-ನಿರ್ವಾಹಕರಿಂದ ವರ್ಗಾ ವಣೆಗೆ ಕೋರಿಕೆ ಬರುತ್ತಿದ್ದರೂ ಇಲ್ಲಿ ಪರ್ಯಾಯ ವ್ಯವಸ್ಥೆ ಇಲ್ಲದಿರುವುದರಿಂದ ಸದ್ಯಕ್ಕೆ ವರ್ಗಾವಣೆ ಮಾಡುತ್ತಿಲ್ಲ. ಮಂಗಳೂರು, ಪುತ್ತೂರು, ರಾಮನಗರ ಹಾಗೂ ಚಾಮರಾಜನಗರ ಸೇರಿ ಒಟ್ಟು 350 ಮಂದಿ ಚಾಲಕ-ನಿರ್ವಾಹಕರನ್ನು ಹೊರಗುತ್ತಿಗೆ ಆಧಾರದಲ್ಲಿ ನಿಗಮಕ್ಕೆ ಸೇರ್ಪಡೆಗೊಳಿಲಾಗುತ್ತಿದೆ. ಪ್ರಸ್ತುತ ಮಂಗಳೂರು ವಿಭಾಗದಲ್ಲಿ 476 ಹಾಗೂ ಪುತ್ತೂರು ವಿಭಾಗದಲ್ಲಿ 519 ಬಸ್‌ಗಳಿವೆ ಎಂದವರು ತಿಳಿಸಿದರು.

Advertisement

ಇ-ಟಿಕೆಟ್‌ ಚಿಂತನೆ
ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಇ-ಟಿಕೆಟ್‌ ಯೋಜನೆ ಜಾರಿಗೆ ತರುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ. ಇದರ ಬಗ್ಗೆ ಸಮಗ್ರವಾಗಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಬಿಎಂಟಿಸಿ ಹೊರತುಪಡಿಸಿ ಕೆಎಸ್ಸಾರ್ಟಿಸಿ 4 ವಿಭಾಗಗಳನ್ನು ವಿಲೀನಗೊಳಿಸಿ ಒಂದೇ ವಿಭಾಗ ರೂಪಿಸುವ ಬಗ್ಗೆ ಶ್ರೀನಿವಾಸ ಮೂರ್ತಿ ಸಮಿತಿ ವರದಿಯಲ್ಲಿ ಪ್ರಸ್ತಾವಿಸಲಾಗಿದೆ. ಇದರ ಸಾಧಕ- ಬಾಧಕಗಳ ಬಗ್ಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಮೈಸೂರಿನಲ್ಲಿ ನಗರ ಹಾಗೂ ಗ್ರಾಮೀಣ ಸಾರಿಗೆ ವಿಭಾಗವನ್ನು ವಿಲೀನಗೊಳಿಸಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ : ಡೆಮಾಕ್ರಟಿಕ್ ಪಕ್ಷ ತೊರೆದ ಅಮೆರಿಕದ ಮೊದಲ ಹಿಂದೂ ಸಂಸದೆ ತುಳಸಿ ಗಬ್ಬಾರ್ಡ್

ಒಂದೇ ದಿನ 22.56 ಕೋ.ರೂ. ಗಳಿಕೆ
ಕೆಎಸ್ಸಾರ್ಟಿಸಿ ಅ. 10ರಂದು ಒಂದೇ ದಿನದಲ್ಲಿ 22.56 ಕೋ.ರೂ. ಗರಿಷ್ಠ ಗಳಿಕೆ ಮಾಡಿದ್ದು ಇದು ದಾಖಲೆಯಾಗಿದೆ. ದಿನವೊಂದರ ಸರಾಸರಿ ಗಳಿಕೆ 12 ಕೋ.ರೂ. ಆಗಿದೆ. ಮಂಗಳೂರು ವಿಭಾಗದಲ್ಲಿ ದಿನಂಪ್ರತಿ 1 ಕೋ.ರೂ. ಸಂಗ್ರಹವಾಗುತ್ತಿದೆ ಎಂದು ಚಂದ್ರಪ್ಪ ತಿಳಿಸಿದರು.

ವಾರಾಂತ್ಯ ಪ್ಯಾಕೇಜ್‌ ಟೂರ್‌
ಕರಾವಳಿಯಲ್ಲಿ ವಾರಾಂತ್ಯ ಹಾಗೂ ಹಬ್ಬದ ದಿನಗಳಲ್ಲಿ ವಿಶೇಷ ಪ್ಯಾಕೇಜ್‌ ಟೂರ್‌ಗಳನ್ನು ಏರ್ಪಡಿಸಲು ಹಾಗೂ ಇದಕ್ಕಾಗಿ ಪ್ರತೀ ವಾರ 5ರಿಂದ 10 ಬಸ್‌ಗಳನ್ನು ವ್ಯವಸ್ಥೆಗೊಳಿಸುವಂತೆ ಮತ್ತು ಜನರ ಬೇಡಿಕೆಗಳನ್ನು ಪರಿಗಣಿಸಿ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ಕೆಎಸ್ಸಾ ರ್ಟಿಸಿ ವಿಭಾಗೀಯ ಅಧಿಕಾರಿಗಳಿಗೆ ಸೂಚಿಸ ಲಾಗಿದೆ ಎಂದು ಚಂದ್ರಪ್ಪ ತಿಳಿಸಿದರು.

ದೀಪಾವಳಿ ಟೂರ್‌ ಪ್ಯಾಕೇಜ್‌
ಈಗಾಗಲೇ ದಸರಾ ಟೂರ್‌ ಪ್ಯಾಕೇಜ್‌ ಯಶಸ್ವಿಯಾಗಿದೆ. ಇದೇ ರೀತಿ ಅ. 21ರಿಂದ 27ರ ವರೆಗೆ ದೀಪಾವಳಿ ಟೂರ್‌ ಪ್ಯಾಕೇಜ್‌ ವ್ಯವಸ್ಥೆ ಮಾಡಲಾಗು ತ್ತಿದೆ ಹಾಗೂ ಮಂಗಳೂರು, ಉಡುಪಿ ಹಾಗೂ ಕುಂದಾಪುರ ವಿಭಾಗದಲ್ಲಿರುವ ದೇವಸ್ಥಾನಗಳನ್ನು ಇದರಲ್ಲಿ ಸೇರ್ಪಡೆ ಗೊಳಿಸಲಾಗುವುದು ಎಂದು ವಿಭಾಗೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದರು.
ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗ ಅಧಿಕಾರಿ ರಾಜೇಶ್‌ ಶೆಟ್ಟಿ ಹಾಗೂ ಪುತ್ತೂರು ವಿಭಾಗ ಅಧಿಕಾರಿ ಜಯಕರ ಶೆಟ್ಟಿ ಉಪಸ್ಥಿತರಿದ್ದರು.

ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್‌ ಪಾಸ್‌
ರಾಜ್ಯಾದ್ಯಂತ ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್‌ ಪಾಸ್‌ ಯೋಜನೆಯನ್ನು ಜಾರಿಗೆ ತರಲಾಗಿದೆ. ಜತೆಗೆ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೂ ಉಚಿತ ಪಾಸ್‌ ನೀಡಲಾಗುತ್ತಿದೆ ಎಂದು ಚಂದ್ರಪ್ಪ ವಿವರಿಸಿದರು.

ಮಂಗಳೂರು ವಿಭಾಗದ ಮಂಗಳೂರಿನಲ್ಲಿ 370, ಉಡುಪಿಯಲ್ಲಿ 60 ಹಾಗೂ ಕುಂದಾಪುರದಲ್ಲಿ 242 ಸೇರಿದಂತೆ ಒಟ್ಟು 672 ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರು ಅರ್ಜಿ ಸಲ್ಲಿಸಿದ್ದು, ಇದರಲ್ಲಿ 296 ಪಾಸ್‌ ಸಿದ್ಧವಾಗಿವೆ. 376 ಪಾಸ್‌ ವಿತರಣೆಗೆ ಬಾಕಿ ಇವೆ. ಪುತ್ತೂರು ವಿಭಾಗದ ಪುತ್ತೂರಿನಲ್ಲಿ 647, ಮಡಿಕೇರಿಯಲ್ಲಿ 235, ಸುಳ್ಯದಲ್ಲಿ 71, ಬಿ.ಸಿ.ರೋಡ್‌ನ‌ಲ್ಲಿ 236 ಹಾಗೂ ಧರ್ಮಸ್ಥಳದಲ್ಲಿ 79 ಮಂದಿ ಸೇರಿ ಒಟ್ಟು 1,268 ಕಾರ್ಮಿಕರು ಅರ್ಜಿ ಸಲ್ಲಿಕೆಯಾಗಿದ್ದು 366ಪಾಸ್‌ಗಳು ಸಿದ್ಧವಾಗಿವೆ. 902 ಪಾಸ್‌ ವಿತರಣೆಗೆ ಬಾಕಿ ಇವೆ ಎಂದು ಚಂದ್ರಪ್ಪ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next