Advertisement

ಹಬ್ಬದ ಸೀಸನ್‌ನ ಹಗಲು ದರೋಡೆಗೆ ಕೊನೆಯೇ ಇಲ್ಲವಲ್ಲ…

09:20 PM Sep 10, 2018 | Team Udayavani |

ಏಕಾಏಕಿ ಏರುವ ಬಸ್‌ ದರದ ವಿರುದ್ಧ ಈ ಹಿಂದೆಯೂ ಹೋರಾಟಗಳು ನಡೆದಿವೆ. ಮಂಗಳೂರಿನಲ್ಲಿ ಆರ್‌ಟಿಓ ದಾಳಿ ನಡೆದು ಬಸ್‌ಗಳನ್ನು ವಶಪಡಿಸಿಕೊಳ್ಳುವ ಪರಂಪರೆ ಬಹುಶಃ ವರ್ಷಕ್ಕೊಮ್ಮೆ ವ್ರತಾಚರಣೆಯ ರೀತಿಯಲ್ಲಿ “ಒಮ್ಮೆ’ ನಡೆಯುತ್ತಿದೆ. ಚಿಕ್ಕಮಗಳೂರಿನಲ್ಲಿ ಏಕ ವ್ಯಕ್ತಿ ಹೋರಾಟ ಪ್ರಬಲವಾಗಿ ನಡೆದ ಇತಿಹಾಸವಿದೆ. ಇದೀಗ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಉಪವಿಭಾಗದ ಸಹಾಯಕ ಆಯುಕ್ತರು ಸಾರ್ವಜನಿಕ ದೂರಿನ ಸಂಬಂಧ ಸಿಆರ್‌ಪಿಸಿ ಕಲಂ 133ರ ಪ್ರಕಾರ ಎಂಟು ಬಸ್‌ ಕಂಪನಿ ಮಾಲೀಕರಿಗೆ ನೋಟೀಸ್‌ ಜಾರಿ ಮಾಡಿ ದುಬಾರಿ ದರವನ್ನು ಪ್ರಶ್ನಿಸಿರುವ ಘಟನೆ ನಡೆದಿದೆ.

Advertisement

ಈಗಷ್ಟೇ ಶುರುವಾಗಿದೆ ಹಬ್ಬದ ಸೀಸನ್‌. ಊರಿನಿಂದ ವಲಸೆ ಹೋಗಿ ಬೆಂಗಳೂರಿನಲ್ಲೋ, ಮೈಸೂರಿನಲ್ಲೋ ಉದ್ಯೋಗದಲ್ಲಿರುವವರು ಚೌತಿ, ದೀಪಾವಳಿ ಎಂದು ಊರಿಗೊಮ್ಮೆ ಹೋಗಲು ತವಕಿಸುತ್ತಾರೆ. ಇದರ ವಾಸನೆ ಹಿಡಿಯುವ ಬಸ್‌ ಮಾಲೀಕರು ಟಿಕೆಟ್‌ ದರವನ್ನು ಇಮ್ಮಡಿ, ಮುಮ್ಮಡಿ ಪ್ರಮಾಣದಲ್ಲಿ ಏರಿಸಿರುತ್ತಾರೆ. ಉದಾಹರಣೆಗೆ, ಶಿವಮೊಗ್ಗ ಜಿಲ್ಲೆಯ ಸಾಗರಕ್ಕೆ ಸಾಮಾನ್ಯ ದಿನಗಳಲ್ಲಿ ಸ್ಲಿàಪಿಂಗ್‌ ಕೋಚ್‌ ಟಿಕೆಟ್‌ ದರ 350ರಿಂದ 400 ರೂ. ಇದ್ದರೆ ಹಬ್ಬದ ಸಂದರ್ಭಗಳಲ್ಲಿ ಅದು 1200 ಅಥವಾ 1400ಕ್ಕೆ ಏರಿರುತ್ತದೆ. ವಾರಾಂತ್ಯದ ದಿನಗಳಾದ ಶುಕ್ರವಾರ, ಶನಿವಾರ, ಭಾನುವಾರಗಳ ಟಿಕೆಟ್‌ ದರವೂ ಇತರ ದಿನಗಳಿಗಿಂತ 100 ರೂ. ಹೆಚ್ಚಾಗುವ ವಿದ್ಯಮಾನ ಆರಂಭವಾಗಿ ಎರಡು ವರ್ಷಗಳೇ ಕಳೆದಿವೆ. ಆದರೂ ಜನ ಸುಮ್ಮನಿದ್ದಾರೆ.  ಈ ಹಗಲು ದರೋಡೆಯನ್ನು ಗಮನಿಸಬೇಕಾದ ಸರ್ಕಾರ, ಸರ್ಕಾರದ ಸಾರಿಗೆ ಇಲಾಖೆ ತಣ್ಣಗಿವೆ. ದರ ಏರಿಕೆ ಹಾಗೂ ಸರ್ಕಾರದ ಮೌನ ಸಮ್ಮತವೇ? ಯಾವುದೇ ಸ್ಥಳಕ್ಕೆ ಹೋಗಬೇಕೆಂದರೂ, ಮಾರ್ಗ ಪರವಾನಗಿ ಪಡೆದು ಬಸ್‌ಗಳು ಸಂಚರಿಸಬೇಕಾದುದು ನಿಯಮ. ಇದಕ್ಕಿಂತ ಸುಲಭದ ಗುತ್ತಿಗೆ ಪ್ರಯಾಣ ಅರ್ಥಾತ್‌ ಕಾಂಟ್ರಾಕ್ಟ್ ಕ್ಯಾರಿಯೇಜ್‌ ನಿಯಮದ ಅಡಿಯಲ್ಲಿ ಈ ಬಸ್‌ಗಳು ಸಂಚಾರ ಅನುಮತಿಯನ್ನು ಪಡೆಯುತ್ತವೆ. 1988ರ ಮೋಟಾರು ವಾಹನಗಳ ಕಾಯ್ದೆಯಲ್ಲಿ ಇಂಥದೊಂದು ಅವಕಾಶ ಕಲ್ಪಿಸಲಾಗಿದೆ.

ಏನಿದು ಗುತ್ತಿಗೆ ಪಯಣ?
ಮದುವೆ, ಪ್ರವಾಸ, ಚುನಾವಣಾ ರ್ಯಾಲಿ ಮೊದಲಾದ ವಿಶೇಷ ಸಂದರ್ಭಗಳಲ್ಲಿ ಬಸ್‌ಗಳನ್ನು ಗುತ್ತಿಗೆ ಪಡೆಯುವ ರೀತಿಯಲ್ಲಿ ಈ ಬಸ್‌ಗಳು ಸಂಚಾರಕ್ಕೆ ಪರವಾನಗಿ ಪಡೆಯುತ್ತವೆ. ನಿರ್ದಿಷ್ಟ ಸ್ಥಳದಿಂದ ಮತ್ತೂಂದು ನಿರ್ದಿಷ್ಟ ಸ್ಥಳಕ್ಕೆ ಎಂಬುದು ಪರವಾನಗಿಯಲ್ಲಿ ಸೇರಿರುತ್ತದೆ. ಯಾರಧ್ದೋ ಹೆಸರಿನಲ್ಲಿ 30 ದಿನ, 60 ದಿನ ಮಾದರಿಯ ಲೆಕ್ಕದಲ್ಲಿ ಪರವಾನಗಿಯನ್ನು ಪಡೆಯಲಾಗುತ್ತದೆ. ಇದನ್ನು ಪ್ರಶ್ನಿಸಬೇಕಾದ ಸಾರಿಗೆ ಇಲಾಖೆ ಅಧಿಕಾರಿಗಳು ಎಂಜಲು ಕಾಸಿನ ಆಸೆಗೆ ಬಲಿಯಾಗಿ ಕಣ್ಣುಮುಚ್ಚಿಕೊಂಡು ಸಹಿ ಹಾಕುತ್ತಾರೆ.

ಈ ಪರವಾನಗಿಯಿಂದ ಹಲವು ಫಾಯಿದೆಗಳಿವೆ. ಮುಖ್ಯವಾಗಿ, ಈ ಒಪ್ಪಂದದಲ್ಲಿ ವೈಯುಕ್ತಿಕ ಪ್ರಯಾಣಿಕರ ಪ್ರಶ್ನೆ ಬರುವುದಿಲ್ಲ. ತುಂಬುವ ಸರಕಿಗೆ ಪ್ರತ್ಯೇಕ ಸಾಗಾಟದ ರಸೀದಿಯ ಅಗತ್ಯವಿಲ್ಲ. ಇದರಿಂದ ಸೇವಾ ತೆರಿಗೆಗಳನ್ನು ಉಳಿಸಿಕೊಳ್ಳಬಹುದು. ಮಾರ್ಗ ಪರವಾನಗಿಯಲ್ಲಿದ್ದಂತೆ ಸಮಯವನ್ನು ಸಾರಿಗೆ ಇಲಾಖೆ ನಿಗದಿಪಡಿಸುವುದಿಲ್ಲ. ಅದು ಬಸ್‌ ಮಾಲೀಕ ಹಾಗೂ ಒಪ್ಪಂದಗಾರನ ನಡುವಿನ ನಿಶ್ಚಯವಾಗುತ್ತದೆ. 

ಪ್ರಯಾಣಿಕರಿಗೆ ವಿಧಿಸುವ ದರ ನಿಯಂತ್ರಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂಬುದು ಅರ್ಧ ಸತ್ಯ ಮಾತ್ರ. ಈ ರೀತಿಯ ವ್ಯವಸ್ಥೆಯಲ್ಲಿ ಪ್ರಯಾಣಿಕರಿಗೆ ವೈಯುಕ್ತಿಕವಾಗಿ ಟಿಕೆಟ್‌ ವಿತರಿಸಲು ಬರುವುದಿಲ್ಲ. ಆದರೆ ರಾಜಾರೋಷವಾಗಿ ಬಸ್‌ ಕಂಪನಿಗಳು ಆನ್‌ಲೈನ್‌ನಲ್ಲಿ ಟಿಕೆಟ್‌ ಮಾರುತ್ತವೆ. ಆನ್‌ಲೈನ್‌ ಬುಕ್ಕಿಂಗ್‌ ವೆಬ್‌ಗಳ ಜೊತೆ ಕೂಡ ಇವುಗಳ ಸಹಯೋಗವಿರುತ್ತದೆ. ಇತ್ತೀಚೆಗಂತೂ ನಿರ್ದಿಷ್ಟ ದಿನಗಳ ಬಸ್‌ ಟಿಕೆಟ್‌ ದರವನ್ನು ಮುಂಚಿತವಾಗಿಯೇ ಏರಿಸಿಬಿಡುವುದರಿಂದ ಆನ್‌ಲೈನ್‌ನಲ್ಲಿ ಕೂಡ ದುಬಾರಿ ಬೆಲೆಯ ಟಿಕೆಟ್‌ ವ್ಯವಹಾರ ನಿಸೂರವಾಗಿ ಕಾಣುತ್ತದೆ. ಒಂದು ಇಲಾಖೆ, ಒಂದು ಜನಪರ ಸರ್ಕಾರಕ್ಕೆ ಇಂತಹ ಪ್ರಕರಣಗಳಲ್ಲಿ ದೂರಿನ ಅವಶ್ಯಕತೆ ಇಲ್ಲದೆಯೇ ಕ್ರಮಕ್ಕೆ ಮುಂದಾಗಬಹುದು. ಕುಲಗೆಟ್ಟು ಹೋಗಿರುವ ಸಾರಿಗೆ ಇಲಾಖೆಯಿಂದ ಅದನ್ನು ನಿರೀಕ್ಷಿಸುವುದೇ ದೊಡ್ಡ ತಪ್ಪು.

Advertisement

ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಿಂದ ಮಂಗಳೂರು, ಚಿಕ್ಕಮಗಳೂರು, ಕಾರವಾರ, ಶಿವಮೊಗ್ಗ….. ಹೀಗೆ ಬಹುಪಾಲು ಖಾಸಗಿ ಬಸ್‌ ಸಂಚಾರ ಇದೇ ಕಾಂಟ್ರಾಕ್ಟ್ ಕ್ಯಾರಿಯೇಜ್‌ ಅನುಮತಿ ಆಧಾರದಲ್ಲಿ ಕೆಲಸ ಮಾಡುತ್ತದೆ. ಇದು ತಮಿಳುನಾಡಿನಲ್ಲಿಯೂ ನಡೆಯುತ್ತಿದೆ. ಮಂಗಳೂರಿನಲ್ಲಂತೂ ಅಲ್ಲಿಂದ ಪುತ್ತೂರು, ಉಪ್ಪಿನಂಗಡಿ, ಬೆಳ್ತಂಗಡಿ, ವಿಟ್ಲ ಮೊದಲಾದ ಸುತ್ತಮುತ್ತ ಸಂಚರಿಸುವ ಬಸ್‌ಗಳು ಕೂಡ ಇದೇ ಸಿಸಿ ಬಳಸುತ್ತವೆ!

ಪ್ರಯಾಣಿಕರ ಹಕ್ಕು ಚ್ಯುತಿ?
ಈ ರೀತಿಯ ಸಂಚಾರ ವ್ಯವಸ್ಥೆಯಲ್ಲಿ ಆಗುವ ಅನಾಹುತಗಳ ಸಂದರ್ಭದಲ್ಲಿ ಪ್ರಯಾಣಿಕರ ಹಕ್ಕುಗಳಿಗೆ, ಕಾನೂನು ಸಾಧ್ಯತೆಗಳಿಗೆ ಚ್ಯುತಿ ಬರುವ ಸಾಧ್ಯತೆ ಇದೆ.  ಅಥವಾ ಇದನ್ನು ಉಲ್ಲೇಖೀಸಿ ಪರಿಹಾರವನ್ನು ನಿರಾಕರಿಸುವ ತಂತ್ರ ಇನ್ನೂ ಬಂದಿಲ್ಲ ಎನ್ನಬಹುದೇನೋ. ಗುತ್ತಿಗೆ ಒಪ್ಪಂದದಲ್ಲಿ ವೈಯುಕ್ತಿಕ ಪ್ರಯಾಣಿಕ ಯಾವುದೋ ಒಂದು ಕಾರಣಕ್ಕೆ ಪರಿಹಾರ ಕೇಳುವುದು ಕಾನೂನಿನಲ್ಲಿ ಸಮ್ಮತವಲ್ಲ. ಇಲ್ಲಿ ಬಸ್‌ ಮಾಲೀಕ ಹಾಗೂ ಸದರಿ ಗುತ್ತಿಗೆಯನ್ನು ಪಡೆದವ ಅವರವರೇ ಆಗಿರುವಾಗ ಪ್ರಯಾಣಿಕನ ಹಕ್ಕುಗಳಿಗೆ ಚ್ಯುತಿ ಬರುತ್ತದೆ. ವೈಯುಕ್ತಿಕವಾಗಿ ತರಿಸಿರುವ ಟಿಕೆಟ್‌ಗಳೇ ಕಾನೂನುಬಾಹಿರ ಎನ್ನಿಸಿಕೊಳ್ಳುವಾಗ ಅವರಿಗೆ ವಿಮಾ ಕಂಪನಿಗಳು ಆರಾಮವಾಗಿ ವಿಮಾ ಪರಿಹಾರ ನಿರಾಕರಿಸಬಹುದು.

ಕಾನೂನು ಮಾಡುವುದರಿಂದಷ್ಟೇ ವಂಚನೆ, ತಪ್ಪು ಮಾರ್ಗಗಳನ್ನು ಸ್ಥಗಿತಗೊಳಿಸಬಹುದು ಎಂಬ ಮೂಢನಂಬಿಕೆಯಿಂದ ಕಾನೂನುಗಳ ರಚನೆಯಾಗುತ್ತಲೇ ಇವೆ. ಸರಳ ಕಾನೂನು ಹಾಗೂ ಅವುಗಳ ಕಡ್ಡಾಯ ಆಚರಣೆ ಜಾರಿಯಲ್ಲಿದ್ದರೆ ದೇಶದಲ್ಲಿ ಈ ಪ್ರಮಾಣದ ಕಾನೂನುಗಳೇ ಬೇಕಾಗುತ್ತಿರಲಿಲ್ಲ. ಕಾನೂನಿನ ಒಳಸುಳಿಗಳನ್ನು ಬಳಸಿ ಬದುಕು ಕಂಡುಕೊಳ್ಳುವವರು ಇರುವುದು ಇನ್ನೊಂದು ಸಮಸ್ಯೆ. ಈ ಕಾಂಟ್ರಾಕ್ಟ್ ಕ್ಯಾರಿಯೇಜ್‌ ಬಗ್ಗೆಯೂ ಸಾರಿಗೆ ಇಲಾಖೆಯ ಚಾಣಾಕ್ಷ ಅಧಿಕಾರಿಗಳೇ ಖಾಸಗಿ ಬಸ್‌ ಕಂಪನಿಗಳವರಿಗೆ ಹೇಳಿರುತ್ತಾರೆ! ಮಾರ್ಗ ಪರವಾನಗಿಯ ನಿಯಮಗಳನ್ನು ಸರಳವಾಗಿಸಿ ಅನುಮತಿಗಳನ್ನು ಕೊಡುವಂತಾದರೆ ಈ ಸಮಸ್ಯೆಗೂ ಪರಿಹಾರ ಸಿಕ್ಕುತ್ತದೆ. 

ವಾರಾಂತ್ಯದ ಅಥವಾ ವಿಶೇಷ ಸಂದರ್ಭಗಳಲ್ಲಿ ಬಸ್‌ ದರವನ್ನು ಹೆಚ್ಚಿಸುವುದು ನ್ಯಾಯಸಮ್ಮತ ಅಲ್ಲ ಎನ್ನುವುದು ಕಷ್ಟ. ಬೇಡಿಕೆಯ ಸಂದರ್ಭದಲ್ಲಿನ ದರ ಹೆಚ್ಚಳದ ಇಂತಹ ಬೆಳವಣಿಗೆ ಅರ್ಥಶಾಸ್ತ್ರದಲ್ಲೂ ನಮೂದಾಗಿದೆ. ಪ್ರಶ್ನೆ ಇರುವುದು ಗರಿಷ್ಠ ಯಾವ ಪ್ರಮಾಣದಲ್ಲಿ ಹೆಚ್ಚಿಸಬೇಕು ಎಂಬುದರ ಬಗ್ಗೆ. ಈ ಹಿನ್ನೆಲೆಯಲ್ಲಿಯೇ ಸಾರಿಗೆ ಇಲಾಖೆಯ ಪಾತ್ರ ಪ್ರಮುಖವಾಗುತ್ತದೆ. ದುರಂತ ಎಂದರೆ, ಆದರ್ಶಗಳು ಈಗ ಕೇವಲ ಈ ರೀತಿಯ ಬರಹಗಳಿಗೆ ಸೀಮಿತವಾಗಿವೆ!

ಸಿಆರ್‌ಪಿಸಿ ಕಲಂ 133 ಸಹಾಯ?
ಏಕಾಏಕಿ ಏರುವ ಬಸ್‌ ದರದ ವಿರುದ್ಧ ಈ ಹಿಂದೆಯೂ ಹೋರಾಟಗಳು ನಡೆದಿವೆ. ಮಂಗಳೂರಿನಲ್ಲಿ ಆರ್‌ಟಿಓ ದಾಳಿ ನಡೆದು ಬಸ್‌ಗಳನ್ನು ವಶಪಡಿಸಿಕೊಳ್ಳುವ ಪರಂಪರೆ ಬಹುಶಃ ವರ್ಷಕ್ಕೊಮ್ಮೆ ವ್ರತಾಚರಣೆಯ ರೀತಿಯಲ್ಲಿ “ಒಮ್ಮೆ’ ನಡೆಯುತ್ತಿದೆ. ಚಿಕ್ಕಮಗಳೂರಿನಲ್ಲಿ ಏಕ ವ್ಯಕ್ತಿ ಹೋರಾಟ ಪ್ರಬಲವಾಗಿ ನಡೆದ ಇತಿಹಾಸವಿದೆ. ಇದೀಗ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಉಪವಿಭಾಗದ ಸಹಾಯಕ ಆಯುಕ್ತರು ಸಾರ್ವಜನಿಕ ದೂರಿನ ಸಂಬಂಧ ಸಿಆರ್‌ಪಿಸಿ ಕಲಂ 133ರ ಪ್ರಕಾರ ಎಂಟು ಬಸ್‌ ಕಂಪನಿ ಮಾಲೀಕರಿಗೆ ನೋಟೀಸ್‌ ಜಾರಿ ಮಾಡಿ ದುಬಾರಿ ದರವನ್ನು ಪ್ರಶ್ನಿಸಿರುವ ಘಟನೆ ನಡೆದಿದೆ.

133 ಕಲಂ ಪ್ರಕಾರ, ಯಾವುದೇ ವ್ಯಕ್ತಿ ತನ್ನ ವೃತ್ತಿ, ನಡತೆ, ನಿಯಮಗಳನ್ನು ಉಲ್ಲಂ ಸಿ ಸಾರ್ವಜನಿಕರಿಗೆ ಉಪದ್ರವ ಉಂಟಾಗುವ ರೀತಿಯಲ್ಲಿ ವರ್ತಿಸಿದರೆ ಅದನ್ನು ನಿಯಂತ್ರಿಸುವ ಅಧಿಕಾರ ದಂಡಾಧಿಕಾರಿಗಳಾಗಿರುವ ಉಪಭಾಗಾಧಿಕಾರಿಗಳಿಗೆ ಇದೆ. ಬಸ್‌ ಅನ್ನು ಅವರು ಮುಟ್ಟುಗೋಲು ಕೂಡ ಹಾಕಿಕೊಳ್ಳಬಹುದು. ಆದರೆ ಉಪದ್ರವ ಉಂಟಾಗಿದೆ ಎಂಬುದನ್ನು ರುಜುವಾತುಪಡಿಸುವುದು ಕಷ್ಟ ಕಷ್ಟ. ತೀರಾ ತಲೆ ಮೇಲೆ ಕೂರುತ್ತಾರೆಂದರೆ ವಾರ ಕಾಲ ಬಸ್‌ ಬಿಡದಿದ್ದರೂ ನಿಯಮಗಳ ಅನುಸಾರ ಬಸ್‌ ಮಾಲೀಕರಿಗೆ ಸಮಸ್ಯೆಇಲ್ಲ. ಗುತ್ತಿಗೆ ಒಪ್ಪಂದ ಅವರೊಳಗೇ ಆಗಿರುವುದರಿಂದ ನಿಲುಗಡೆ ವಿರುದ್ಧ ದೂರು ಕೂಡ ದಾಖಲಾಗುವುದಿಲ್ಲವಲ್ಲ?!

ನ್ಯಾಯವಾಗಿ ಬದುಕಲು ಬಿಡಿ!
ವರ್ಷದ 365 ದಿನ ಪ್ರಯಾಣಿಕರು ಇರಲಿ; ಇಲ್ಲದಿರಲಿ ಬಸ್‌ ಬಿಡಬೇಕಾದುದು ಖಾಸಗಿ ಬಸ್‌ ಮಾಲೀಕರ ಕರ್ತವ್ಯ. ಈ ರೀತಿಯ ಸಂಚಾರದಲ್ಲಿ ನಷ್ಟವನ್ನು ಭರಿಸಿಕೊಳ್ಳಲು ಬಸ್‌ನಲ್ಲಿನ ಸ್ಥಳಾವಕಾಶದಲ್ಲಿ ಲಗೇಜ್‌ ಸಾಗಿಸುವುದು ಒಂದು ತಂತ್ರ. ಇದನ್ನು ನಿಯಮಬದ್ಧಗೊಳಿಸಬೇಕು. ದೂರ ಪ್ರಯಾಣದ ಪರವಾನಗಿಯಲ್ಲಿಯೇ ಇಂಥವಕ್ಕೆ ಅವಕಾಶ ಕಲ್ಪಿಸಬೇಕು. ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಲಗೇಜ್‌ ತುಂಬುವುದರ ವಿರುದ್ಧ ಮಾತ್ರ ಕಠಿಣ ಕ್ರಮ ಎಂದರೆ ಯಾರೂ ನಿರಾಕರಿಸುವುದಿಲ್ಲ. ಉಳಿದಂತೆ, ಕಾನೂನಿನ ಅನ್ವಯ ದಂಡ ವಿಧಿಸಲಾಗುತ್ತದೆ ಎಂಬ ಭಯ ಮೂಡಿದರೆ ಪರಿಸ್ಥಿತಿ ಸುಧಾರಿಸುತ್ತದೆ. ಅಂತದೊಂದು ದಿನ ಬರಲಿ….

ಮಾ.ವೆಂ.ಸ.ಪ್ರಸಾದ್‌, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ

Advertisement

Udayavani is now on Telegram. Click here to join our channel and stay updated with the latest news.

Next