Advertisement

ಬುರ್ಖಾ ಧರಿಸಿ ಪರೀಕ್ಷೆ ಬರೆಯಲು ನಿರಾಕರಣೆ: ವಿವಾದಕ್ಕೆ ತುಪ್ಪ ಸುರಿದ ತೆಲಂಗಾಣ ಗೃಹ ಸಚಿವ

11:53 AM Jun 17, 2023 | Team Udayavani |

ಹೈದರಾಬಾದ್: ಬುರ್ಖಾ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ಪರೀಕ್ಷಾ ಕೊಠಡಿಗೆ ಪ್ರವೇಶ ನಿರಾಕರಿಸಿದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಕೆವಿ ರಂಗಾರೆಡ್ಡಿ ಪದವಿ ಕಾಲೇಜಿನಲ್ಲಿ ಈ ಘಟನೆ ನಡೆದಿದೆ.

Advertisement

ಸುಮಾರು ಅರ್ಧ ಗಂಟೆ ಕಾದ ಬಳಿಕ ವಿದ್ಯಾರ್ಥಿನಿಯರು ಬುರ್ಖಾ ತೆಗೆದು ಪರೀಕ್ಷೆ ಬರೆದಿದ್ದಾರೆ.

ಘಟನೆ ಬಗ್ಗೆ ತೆಲಂಗಾಣ ಗೃಹ ಸಚಿವ ಮೊಹಮ್ಮದ್ ಮಹಮೂದ್ ಅಲಿ ವಿವಾದಾತ್ಮಕ ಹೇಳಿಕೆ ನೀಡಿದ್ದು, ‘ಮಹಿಳೆಯರು ಸಾಧ್ಯವಾದಷ್ಟು ದೇಹವನ್ನು ಮುಚ್ಚಿಕೊಂಡು ಬರಬೇಕು’ ಎಂದಿದ್ದಾರೆ. ಕೆವಿ ರಂಗಾ ರೆಡ್ಡಿ ಕಾಲೇಜಿನ ಘಟನೆಯ ಬಗ್ಗೆ ಮಾತನಾಡಿದ ಅವರು, ‘ಮಹಿಳೆಯರು ಸಣ್ಣ ಉಡುಪುಗಳನ್ನು ಧರಿಸಿದರೆ ಮಾತ್ರ ಸಮಸ್ಯೆ’ ಎಂದಿದ್ದಾರೆ.

“ನಮ್ಮ ನೀತಿಯು ಸಂಪೂರ್ಣ ಜಾತ್ಯತೀತ ನೀತಿಯಾಗಿದೆ. ಪ್ರತಿಯೊಬ್ಬರಿಗೂ ಅವರು ಏನು ಬೇಕಾದರೂ ಧರಿಸುವ ಹಕ್ಕಿದೆ. ಹಿಂದೂ ಅಥವಾ ಇಸ್ಲಾಮಿಕ್ ಪದ್ಧತಿಗಳ ಪ್ರಕಾರ ಉಡುಗೆ ತೊಡಬೇಕು. ಆದರೆ ಯುರೋಪಿಯನ್ ಸಂಸ್ಕೃತಿಯನ್ನು ಅನುಸರಿಸಬಾರದು. ನಾವು ನಮ್ಮ ಡ್ರೆಸ್ಸಿಂಗ್ ಸಂಸ್ಕೃತಿಯನ್ನು ಗೌರವಿಸಬೇಕು. ವಿಶೇಷವಾಗಿ ಮಹಿಳೆಯರು ಚಿಕ್ಕ ಉಡುಪುಗಳನ್ನು ಧರಿಸಬಾರದು ಮತ್ತು ಅವರು ಸಾಧ್ಯವಾದಷ್ಟು ತಮ್ಮನ್ನು ತಾವು ಮುಚ್ಚಿಕೊಳ್ಳಬೇಕು” ಎಂದು ಇಲ್ಲಿನ ಅಜ್ಜಂಪುರದಲ್ಲಿ ವಾರ್ಡ್ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಮಹಮೂದ್ ಅಲಿ ಹೇಳಿದರು.

ಕಾಲೇಜಿನಲ್ಲಿ ಆಗಿದ್ದೇನು?

Advertisement

ಶುಕ್ರವಾರ ಉರ್ದು ಮಾಧ್ಯಮ ಪದವಿ ಪರೀಕ್ಷೆ ಬರೆಯಲು ರಂಗಾ ರೆಡ್ಡಿ ಮಹಿಳಾ ಪದವಿ ಕಾಲೇಜಿನ ಕೆಲವು ವಿದ್ಯಾರ್ಥಿಗಳು ಬುರ್ಖಾ ಧರಿಸಿ ಪರೀಕ್ಷಾ ಕೇಂದ್ರ ಪ್ರವೇಶಿಸಿದ್ದರು. ಪರೀಕ್ಷಾ ಕೇಂದ್ರದ ಸಿಬ್ಬಂದಿಯು ಪರೀಕ್ಷಾ ಕೊಠಡಿ ಪ್ರವೇಶಿಸುವ ಮುನ್ನ ಬುರ್ಖಾ ತೆಗೆಯುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿದರು. ಸುಮಾರು ಅರ್ಧ ಗಂಟೆ ಕಾಲ ಅವರನ್ನು ಪರೀಕ್ಷಾ ಕೊಠಡಿಯಿಂದ ಹೊರಗೆ ನಿಲ್ಲಿಸಲಾಗಿತ್ತು. ಕೊನೆಗೆ ಪರೀಕ್ಷೆಗೆ ಹಾಜರಾಗಲು ಬುರ್ಖಾ ತೆಗೆಯಬೇಕಾಯಿತು ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.

ನಾಳೆಯಿಂದ ಬುರ್ಖಾ ಧರಿಸದಂತೆ ಕಾಲೇಜು ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಆದರೆ, ಇದು ಪರೀಕ್ಷಾ ನಿಯಮಗಳಿಗೆ ವಿರುದ್ಧವಾಗಿದೆ. ಈ ಬಗ್ಗೆ ನಮ್ಮ ಪೋಷಕರು ಗೃಹ ಸಚಿವ ಮಹಮೂದ್ ಅಲಿ ಅವರಿಗೆ ದೂರು ನೀಡಿದ್ದಾರೆ. ಬುರ್ಖಾ ಧರಿಸಿದ ವಿದ್ಯಾರ್ಥಿನಿಯರನ್ನು ಕೇಂದ್ರದೊಳಗೆ ಬಿಡದಿರುವುದು ಸರಿಯಲ್ಲ ಎಂದು ವಿದ್ಯಾರ್ಥಿಯೊಬ್ಬರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next