Advertisement

ಬಂಟರ ಕ್ರೀಡೆ ಒಲಿಂಪಿಕ್‌ಗೆ ಪ್ರೇರಣೆಯಾಗಲಿ: ಗೋಪಾಲ ಸಿ. ಶೆಟ್ಟಿ

11:33 AM Apr 04, 2022 | Team Udayavani |

ಮುಂಬಯಿ: ಕೊರೊನಾ ಮಹಾಮಾರಿಯ ಎರಡು ವರ್ಷಗಳ ನಂತರ ಬಳಿಕ ಕ್ರೀಡೋತ್ಸವ ವೈಭವೋಪೇತವಾಗಿ ನಡೆಯುತ್ತಿರುವುದು ಅಭಿನಂದನೀಯ. ಪ್ರಧಾನಿ ಮೋದಿ ನೇತೃತ್ವ ಹಾಗೂ ಪರಿಕಲ್ಪನೆಯ ಖೇಲೋ ಇಂಡಿಯಾ ಇಂದು ಜಾಗತಿಕವಾಗಿ ದೊಡ್ಡಸ್ಥಾನ ಪಡೆದಿದೆ. ಆದ್ದರಿಂದ ಕ್ರೀಡೆಯಲ್ಲಿ  ವಿದ್ಯಾರ್ಥಿಗಳು, ಮಕ್ಕಳ ಸಹಭಾಗಿತ್ವ ಮಹತ್ತರದ್ದಾಗಬೇಕು. ನಮ್ಮವರ ಈ ಕ್ರೀಡೆಯು ನಮ್ಮ ದೇಶಕ್ಕೆ ಮಾತ್ರವಲ್ಲ ಒಲಿಂಪಿಕ್‌ ಗೇಮ್ಸ್‌ಗೆ ಸ್ಫೂರ್ತಿ ಆಗಬೇಕು. ಮುಂಬಯಿಯಲ್ಲಿ  ಬಂಟರ ಕ್ರೀಡೆ ಮೊದಲ ಸ್ಥಾನದಲ್ಲಿದ್ದು, ಇಲ್ಲಿನ ಶಿಸ್ತುಬದ್ಧ ಪ್ರದರ್ಶನ ನೋಡುವಾಗ ಗೌರವ, ಅಭಿಮಾನ ಎನಿಸುತ್ತದೆ. ನ್ಪೋರ್ಟ್ಸ್ ಯೂನಿವರ್ಸಿಟಿ ಮಾಡುವಂತೆ ಸಂಸತ್ತಿನಲ್ಲಿ ಧ್ವನಿ ಎತ್ತಿರುವೆ. ಕ್ರೀಡಾ ವಿವಿ ಇಲ್ಲಿ ಸ್ಥಾಪಿತವಾದರೆ ತಮ್ಮೆಲ್ಲರ ಭಾಗವಹಿಸುವಿಕೆ ಅವಶ್ಯವಾಗಿರಲಿ ಎಂದು ಉತ್ತರ ಮುಂಬಯಿ ಸಂಸದ ಗೋಪಾಲ ಸಿ. ಶೆಟ್ಟಿ  ತಿಳಿಸಿದರು.

Advertisement

ಕ್ರೀಡೆಗಳ ಮೂಲಕ ಏಕತೆ ಮತ್ತು ಸಮಗ್ರತೆ ಧ್ಯೇಯವನ್ನಿರಿಸಿ ಬಂಟ್ಸ್‌ ಸಂಘ ಮುಂಬಯಿ ಇದರ ಕ್ರೀಡಾ ಸಮಿತಿ

ನೇತೃತ್ವದಲ್ಲಿ ಕಾಂದಿವಲಿ ಪಶ್ಚಿಮದ ಪೋಯಿಸರ್‌ ಜಿಮ್ಖಾನದ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 2022ನೇ ವಾರ್ಷಿಕ ಕ್ರೀಡೋತ್ಸವ ಉದ್ಘಾಟಿಸಿ ಪಾಲ್ಗೊಂಡ ಎಲ್ಲ ಸ್ಪರ್ಧಿಗಳಿಗೆ ಅಭಿನಂದಿಸಿ  ಅವರು ಮಾತನಾಡಿದರು.

ಸಂಘದ ವಸಾಯಿ ಡಹಾಣು ಪ್ರಾದೇಶಿಕ ಸಮಿತಿಯ ಪ್ರಧಾನ ಪ್ರಾಯೋಜಕತ್ವದೊಂದಿಗೆ ದಿ| ರಮಾನಾಥ ಎಸ್‌. ಪಯ್ಯಡೆ ವೇದಿಕೆಯಲ್ಲಿ  ಬಂಟ್ಸ್‌ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ ಅಧ್ಯಕ್ಷತೆಯಲ್ಲಿ  ದಿನಪೂರ್ತಿ ನಡೆದ 34ನೇ ವಾರ್ಷಿಕ ಕ್ರೀಡೋತ್ಸವದಲ್ಲಿ ಜಾಗತಿಕ ಬಂಟರ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅವರು ಪಥಸಂಚಲನವನ್ನು ಉದ್ಘಾಟಿಸಿದರು. ವಿಶೇಷ ಆಕರ್ಷಣೆಯಾಗಿ ಸ್ಯಾಂಡಲ್‌ವುಡ್‌ ನಟ, ನಿರ್ದೇಶಕ, ನಿರ್ಮಾಪಕ ಕಿಚ್ಚ ಸುದೀಪ್‌ ಅವರು ಸಂಘದ ನಾಮಧೇಯ ಬಲೂನ್‌ಗುತ್ಛ ಆಗಸಕ್ಕೆ ಹಾರಿಸಿ ವಿಧ್ಯುಕ್ತವಾಗಿ ಕ್ರೀಡೋತ್ಸವವನ್ನು  ಉದ್ಘಾಟಿಸಿದರು. ಆಯುಷ್‌ ಸಚ್ಚಿದಾನಂದ ಶೆಟ್ಟಿ  ಕ್ರೀಡಾಜ್ಯೋತಿಯನ್ನು ಕ್ರೀಡಾಂಗಣಕ್ಕೆR ತಂದರು. ಪ್ರಥಮೇಶ್‌ ಶೆಟ್ಟಿ  ಕ್ರೀಡಾ ಪ್ರತಿಜ್ಞಾ ವಿಧಿ ಬೋಧಿಸಿದ್ದು, ಸರ್ವ ಕ್ರೀಡಾಳುಗಳ ಪರವಾಗಿ ಸ್ಪರ್ಧಾಳುಗಳು ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಪ್ರಧಾನ ಅಭ್ಯಾಗತರಾಗಿ ಹೆರಾಂಬ ಇಂಡಸ್ಟ್ರೀಸ್‌ ಸಂಸ್ಥೆಯ ಕಾರ್ಯಾಧ್ಯಕ್ಷ ಸದಾಶಿವ ಕೆ. ಶೆಟ್ಟಿ ಕನ್ಯಾನ, ತುಳು ಕೂಟ ಬರೋಡ ಅಧ್ಯಕ್ಷ ಶಶಿಧರ ಬಿ. ಶೆಟ್ಟಿ (ಗುರುವಾಯನಕೆರೆ) ಹಾಗೂ ಗೌರವ ಅತಿಥಿಗಳಾಗಿ ನಟಿ ತಾಪ್ಸಿ ಪನ್ನು, ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ, ಧ್ಯಾನ್‌ಚಂದ್‌ ಪ್ರಶಸ್ತಿ ಪುರಸ್ಕೃತ ಮನ್‌ಪ್ರೀತ್‌ ಸಿಂಗ್‌, ನಿರ್ಮಾಪಕ ಜಾಕ್‌ ಮಂಜು, ಬೊರಿವಲಿ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಡಾ| ಪದ್ಮನಾಭ ವಿ. ಶೆಟ್ಟಿ, ಶಿಕ್ಷಣ ಮತ್ತು ಸಾಮಾಜಿಕ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಶಾಂತಾರಾಮ ಬಿ. ಶೆಟ್ಟಿ, ಪೊವಾಯಿ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಬಿ. ಆರ್‌. ಶೆಟ್ಟಿ, ಉನ್ನತ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಸಿಎ ಐ.ಆರ್‌. ಶೆಟ್ಟಿ, ಮಾಜಿ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಸಹಿತ ಮತ್ತಿತರರು ಉಪಸ್ಥಿತರಿದ್ದರು.

Advertisement

ಉದ್ಯಮಿ ಸದಾಶಿವ ಶೆಟ್ಟಿ ಮಾತನಾಡಿ, ಸಮಾಜದ ಕ್ರೀಡೋತ್ಸವ ಎಲ್ಲರಲ್ಲೂ ಬಂಧುತ್ವ ಮೂಡಿಸುವಂತಿದೆ ಹಾಗೂ ಸ್ಪರ್ಧಿಗಳಲ್ಲಿ  ಆತ್ಮಶಕ್ತಿ ಉಂಟು ಮಾಡುತ್ತದೆ. ಯುವಜನತೆ ಒಲಿಂಪಿಕ್‌ನಲ್ಲಿ ಪದಕ ಗಳಿಸುವ ಪ್ರಯತ್ನಕ್ಕೆ ಪ್ರಮಾಣ ತೆಗೆದುಕೊಳ್ಳಬೇಕು. ಭಾರತವು ಕ್ರೀಡೆಯಲ್ಲಿ  ತುಂಬಾ ಬಲಿಷ್ಠವಾಗಿದ್ದು, ಇದಕ್ಕೆ ಬಂಟರು ಇನ್ನಷ್ಟು ಗರಿ ಮೂಡಿಸಬೇಕು ಎಂದು ಹಾರೈಸಿದರು.

ತುಳು ಕೂಟ ಬರೋಡ ಅಧ್ಯಕ್ಷ ಶಶಿಧರ ಬಿ. ಶೆಟ್ಟಿ  ಮಾತನಾಡಿ, ಎರಡು ವರ್ಷಗಳ ಬಳಿಕ ಮತ್ತೆ ಜನರಲ್ಲಿ ವಿಶ್ವಾಸ ಮೂಡಿದ್ದು, ಈ ಕ್ರೀಡೋತ್ಸವದಿಂದ ಕಳೆ ತುಂಬಿದೆ ಎಂದು ತಿಳಿಸಿ, ಈ ಕ್ರೀಡೆಯ ದೂರದೃಷ್ಟಿ, ಉದ್ದೇಶ ಹಾಗೂ ಕ್ರೀಡಾ ಪ್ರೇರಕರನ್ನು ಸ್ಮರಿಸಿದರು.

ನಟ ಅಭಿಮನ್ಯು ಸಿಂಗ್‌ ಮಾತನಾಡಿ, ಇದೇ ಮೊದಲ ಬಾರಿ ಶೆಟ್ಟಿ ಸಮಾಜದ ಕಾರ್ಯಕ್ರಮದಲ್ಲಿ ಪಾಲ್ಗೊಂಡೆ. ಒಗ್ಗಟ್ಟಿನಿಂದ ಪರಸ್ಪರ ಅನ್ಯೋನ್ಯ ಸಂಬಂಧಗಳು ಬೆಳೆಯುವುದು. ಇದನ್ನು ತಾವೆಲ್ಲರೂ ಏಕತೆಯಿಂದ ಪ್ರದರ್ಶಿಸಬೇಕು ಎಂದರು.

ತಾಪ್ಸಿ ಪನ್ನು  ಮಾತನಾಡಿ, ಶಾಲಾ ದಿನಗಳನ್ನು ಬಿಟ್ಟ ಬಳಿಕ ಇದೇ ಮೊದಲ ಬಾರಿ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಹಳೆ ನೆನಪು ಮರುಕಳಿಸುವಂತಾಯಿತು. ಕ್ರೀಡೆ ಮನಸ್ಸಿಗೆ ಹಾಗೂ ಶರೀರಕ್ಕೆ ಉತ್ಸಾಹದಾಯಕವಾಗಿದೆ. ಕ್ರೀಡೆಯಲ್ಲಿ ಭಾಗವಹಿಸುವ ಎಲ್ಲ ಸ್ಪರ್ಧಾಳುಗಳಿಗೆ ನನ್ನ ಅಭಿನಂದನೆ ಎಂದು ಸ್ಪರ್ಧಾಳುಗಳನ್ನು ಹುರಿದುಂಬಿಸಿದರು.

ಬಂಟ್ಸ್‌ ಸಂಘದ ಉಪಾಧ್ಯಕ್ಷ ಉಳೂ¤ರು ಮೋಹನ್‌ದಾಸ್‌ ಶೆಟ್ಟಿ, ಗೌರವ ಪ್ರ. ಕಾರ್ಯದರ್ಶಿ ಡಾ| ಆರ್‌.ಕೆ. ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ ಹರೀಶ್‌ ಡಿ. ಶೆಟ್ಟಿ, ಜತೆ ಕಾರ್ಯದರ್ಶಿ ದಿವಾಕರ್‌ ಶೆಟ್ಟಿ ಇಂದ್ರಾಳಿ, ಜತೆ ಕೋಶಾಧಿಕಾರಿ ಮುಂಡಪ್ಪ ಎಸ್‌. ಪಯ್ಯಡೆ‌, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸಾಗರ್‌ ದಿವಾಕರ ಶೆಟ್ಟಿ, ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷ ಗಿರೀಶ್‌ ಆರ್‌. ಶೆಟ್ಟಿ ತೆಳ್ಳಾರ್‌, ವಸಾಯಿ ಡ‌ಹಾಣು ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಹರೀಶ್‌ ಪಿ. ಶೆಟ್ಟಿ, ಆದರ್ಶ್‌ ಶೆಟ್ಟಿ ಹಾಲಾಡಿ, ಬಂಟರ ಭವನದ ವ್ಯವಸ್ಥಾಪಕ ಪ್ರವೀಣ್‌ ಶೆಟ್ಟಿ  ವಾರಂಗ ಉಪಸ್ಥಿತರಿದ್ದರು.

ಕ್ರೀಡಾಂಗಣದಲ್ಲಿ ನಿರ್ಮಿಸಲಾದ ಪೂಜಾಸ್ಥಳದಲ್ಲಿ ಶ್ರೀಮಹಾವಿಷ್ಣು, ಶ್ರೀ ಮಹಾಗಣಪತಿ ದೇವರನ್ನು ಸ್ತುತಿಸಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ಅಮ್ಮನಿಗೆ ಆರತಿ ಬೆಳಗಿಸಿ ಧಾರ್ಮಿಕ ವಿಧಿಯನುಸಾರವಾಗಿ ಕ್ರೀಡೋತ್ಸವವನ್ನು ಉದ್ಘಾಟಿಸಲಾಯಿತು. ಸಂಘದ ಜ್ಞಾನ ಮಂದಿರದ ಪ್ರಧಾನ ಆರ್ಚಕ ವಿದ್ವಾನ್‌ ಅರವಿಂದ ಬನ್ನಿಂತ್ತಾಯ ಅರ್ಚನೆಗೈದು ಕ್ರೀಡೋತ್ಸವ ನಿರ್ವಿಘ್ನವಾಗಿ ನೆರವೇರುವಂತೆ ಪ್ರಾರ್ಥಿಸಿ ತೀರ್ಥಪ್ರಸಾದವನ್ನಿತ್ತು ಅನುಗ್ರಹಿಸಿದರು.

ಕ್ರೀಡೋತ್ಸವದಲ್ಲಿ ವಿವಿಧ ಸೇವೆಗಳ ಪ್ರಾಯೋಜಕರು, ಸಹ ಪ್ರವರ್ತಕರು, ಬಂಟರ ವಿವಿಧ ಸಂಸ್ಥೆಗಳ ಮುಖ್ಯಸ್ಥರು, ಸಂಘದ ಒಂಬತ್ತು ಪ್ರಾದೇಶಿಕ ಸಮಿತಿಗಳ ಕಾರ್ಯಾ

ಧ್ಯಕ್ಷರು, ಸಮನ್ವಯಕರು, ಉಪ ಸಮಿತಿಗಳ ಕಾರ್ಯಾಧ್ಯಕ್ಷರು, ಮಹಿಳಾ ಮತ್ತು ಯುವ ವಿಭಾಗದ ಪದಾಧಿಕಾರಿಗಳು ಸಹಿತ ಅಪಾರ ಸಂಖ್ಯೆಯ ಬಂಟರು ಮತ್ತು ಬಂಟರೇತರ ಹಿತೈಷಿಗಳು ಭಾಗವಹಿಸಿದ್ದರು.

ಲೀಲಾವತಿ ಆಳ್ವ ಪ್ರಾರ್ಥಿಸಿದರು. ಗಿರೀಶ್‌ ಆರ್‌. ಶೆಟ್ಟಿ ತೆಳ್ಳಾರ್‌ ಸ್ವಾಗತಿಸಿದರು. ಪ್ರಸನ್ನ ಸಂತ್‌ ಅತಿಥಿಗಳನ್ನು ಪರಿಚಯಿಸಿದರು. ಅಶೋಕ್‌ ಪಕ್ಕಳ, ಕರ್ನೂರು ಮೋಹನ್‌ ರೈ ಮತ್ತು ಹರೀಶ್‌ ವಾಸು ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಡಾ| ಆರ್‌.ಕೆ. ಶೆಟ್ಟಿ ವಂದಿಸಿದರು.

ಜಯ ಎ. ಶೆಟ್ಟಿ, ವಿಟ್ಠಲ್‌ ಎಸ್‌. ಆಳ್ವ, ಗೌತಮ್‌ ಶೆಟ್ಟಿ, ಶರತ್‌ ಶೆಟ್ಟಿ ಅವರ ಕ್ರೀಡಾ ಮೇಲ್ವಿಚಾರಕತ್ವದಲ್ಲಿ ನಡೆದ ಕ್ರೀಡೋತ್ಸವದಲ್ಲಿ ಆತ್ಲೆಟಿಕ್‌ ಮೇಲ್ವಿಚಾರಕರಾಗಿ ವಿಜಯ್‌ ಶೆಟ್ಟಿ, ಭರತ್‌ ಶೆಟ್ಟಿ, ಥ್ರೋಬಾಲ್‌ ಮೇಲ್ವಿಚಾರಕರಾಗಿ ಕರ್ನಾಟಕ ನ್ಪೋರ್ಟ್‌ ಡಿಪ್ಯುಟಿ ಡೆರೆಕ್ಟರ್‌ ರೋಶನ್‌ ಶೆಟ್ಟಿ, ವಾಲಿಬಾಲ್‌ ಮೇಲ್ವಿಚಾರಕರಾಗಿ ರಾಮಚಂದ್ರ ಪಾಟ್ಕರ್‌ (ಪಿ. ಡಿ. ಉಡುಪಿ), ರವೀಂದ್ರ ಶೆಟ್ಟಿ ಕೊಟ್ರಪಾಡಿ, ಹಗ್ಗಜಗ್ಗಾಟ ಮೇಲ್ವಿಚಾರಕರಾಗಿ ಜಯ ಎ. ಶೆಟ್ಟಿ  ಮತ್ತು ಸಾಗರ್‌ ಡಿ. ಶೆಟ್ಟಿ, ತೀರ್ಪುಗಾರರಾಗಿ ಜಯ ಎ. ಶೆಟ್ಟಿ, ವಿಟuಲ್‌ ಎಸ್‌. ಆಳ್ವ , ಎರ್ಮಾಳ್‌ ಹರೀಶ್‌ ಶೆಟ್ಟಿ, ಗುಣಪಾಲ್‌ ಶೆಟ್ಟಿ ಐಕಳ, ಮಹೇಶ್‌ ಎಸ್‌. ಶೆಟ್ಟಿ, ರತ್ನಾಕರ್‌ ಶೆಟ್ಟಿ ಮುಂಡ್ಕೂರು, ವಿಜಯ್‌ ಶೆಟ್ಟಿ ಸಹಕರಿಸಿದರು.

ವರ್ಣರಂಜಿತ ಪಥಸಂಚಲನ :

ಎಸ್‌.ಎಂ. ಶೆಟ್ಟಿ ಶಿಕ್ಷಣ ಸಂಸ್ಥೆ ಪೊವಾಯಿ, ಉನ್ನತ ಶಿಕ್ಷಣ ಸಂಸ್ಥೆ, ಬಂಟ್ಸ್‌ ಸಂಘ ಮಹಿಳಾ ವಿಭಾಗ, ಬಾಂಬೆ ಬಂಟ್ಸ್‌ ಅಸೋಸಿಯೇಶನ್‌, ಜವಾಬ್‌, ಮುಲುಂಡ್‌ ಬಂಟ್ಸ್‌, ಥಾಣೆ ಬಂಟ್ಸ್‌ ಅಸೋಸಿಯೇಶನ್‌, ನವಿಮುಂಬಯಿ, ಭಿವಂಡಿ ಬದ್ಲಾಪುರ್‌, ಸಿಟಿ ರೀಜನ್‌, ಅಂಧೇರಿ ಬಾಂದ್ರಾ, ಡೊಂಬಿವಲಿ, ಜೋಗೇಶ್ವರಿ ದಹಿಸರ್‌, ಮೀರಾ-ಭಾಯಂದ‌ರ್‌, ಕುರ್ಲಾ-ಭಾಂಡೂಪ್‌, ವಸಾಯಿ-ಡಹಾಣು ಪ್ರಾದೇಶಿಕ ಸಮಿತಿಗಳ ತಂಡಗಳು ವರ್ಣರಂಜಿತ ಕ್ರೀಡಾ ಪಥಸಂಚಲನದಲ್ಲಿ ಭಾಗವಹಿಸಿದವು. ಬಳಿಕ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಿತು. ಪುರುಷರು ಮತ್ತು ಮಹಿಳೆಯರಿಗಾಗಿ ವಿಶೇಷವಾಗಿ ಹಗ್ಗ ಜಗ್ಗಾಟ ಸ್ಪರ್ಧೆ, ಮಹಿಳೆಯರಿಗಾಗಿ ಥ್ರೋಬಾಲ್‌ ಹಾಗೂ ಪುರುಷರಿಗಾಗಿ ವಾಲಿಬಾಲ್‌ ಪಂದ್ಯಾಟ ನಡೆಯಿತು.

ಬಂಟರ ಕ್ರೀಡಾಕೂಟ ಅಂದರೆ ವೈಭವ. ಗಿರೀಶ್‌ ಶೆಟ್ಟಿ ತೆಳ್ಳಾರ್‌ ಸಾರಥ್ಯದಲ್ಲಿ  ಬಂಟರ ಕ್ರೀಡೋತ್ಸವ ವೈಶಿಷ್ಟ್ಯಮಯ ಹಾಗೂ ಭಿನ್ನವಾಗಿ ನಡೆಯುತ್ತಿರುವುದು ಪ್ರಶಂಸನೀಯ. ಇದು ಇನ್ನಷ್ಟು ಚೆನ್ನಾಗಿ ಮುನ್ನಡೆಯಲಿ.ಐಕಳ ಹರೀಶ್‌ ಶೆಟ್ಟಿ ಅಧ್ಯಕ್ಷರು,  ಜಾಗತಿಕ ಬಂಟರ ಒಕ್ಕೂಟ

ಎರಡು ವರ್ಷಗಳ ಕೊರೋನಾ ಪರಿಸ್ಥಿತಿಯಲ್ಲಿ ನಮ್ಮ ಕ್ರೀಡೋತ್ಸವ ಅಸಾಧ್ಯವಾಗಿದ್ದು, ಈ ಬಾರಿ ಬಿಸಿಲ ತಾಪದ ತಿಂಗಳಲ್ಲಿ ಮಾಡುವ ಅನಿವಾರ್ಯ ಬಂತು. ಆದರೂ ಬಂಟರು ಒಂದಾಗಿ ಸಾಮರಸ್ಯದಿಂದ ತಮ್ಮ ಸಾಂಘಿಕತೆ ಬಲಪಡಿಸುವುದೇ ಕ್ರೀಡೋತ್ಸವದ ಉದ್ದೇಶವಾಗಿದೆ. ಬಂಟರೆಲ್ಲರನ್ನೂ ಒಗ್ಗೂಡಿಸಲು ಕ್ರೀಡಾ ಮಾಧ್ಯಮ ಅನುಕೂಲಕರವಾಗಿದೆ.ಚಂದ್ರಹಾಸ ಕೆ. ಶೆಟ್ಟಿ ಅಧ್ಯಕ್ಷರು,  ಬಂಟರ ಸಂಘ ಮುಂಬಯಿ

ಕ್ರೀಡಾಸ್ಫೂರ್ತಿ ಸಮಾಜವನ್ನು ಒಗ್ಗೂಡಿಸುತ್ತದೆ. ನಮ್ಮ ಉದ್ದೇಶಗಳು ಉತ್ತಮವಾಗಿದ್ದಾಗ ಕುಟುಂಬ, ಸಮುದಾಯ, ಸಂಸ್ಥೆಗಳೂ ಚೆನ್ನಾಗಿರುತ್ತವೆ. ನಾವು ಇಲ್ಲಿಗೆ ಆಗಮಿಸಿದ ಕಾರಣ ನಮ್ಮವರನ್ನು ಕಾಣುವ ಅವಕಾಶ ಒದಗಿದೆ. ನನ್ನ ಮಡದಿ ಉಡುಪಿ ಮೂಲದವರು. ಮುಂದೊಂದು ದಿನ ನಾನೂ ನಿಮ್ಮೊಂದಿಗೆ ತುಳು ಭಾಷೆಯಲ್ಲೇ ಮಾತನಾಡುವೆ. ಕಿಚ್ಚ  ಸುದೀಪ್‌  ಸ್ಯಾಂಡಲ್‌ವುಡ್‌ ನಟ, ನಿರ್ದೇಶಕ, ನಿರ್ಮಾಪಕ

 

-ಚಿತ್ರ –ವರದಿ: ರೋನ್ಸ್‌  ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next