Advertisement

ಬಂಟರ ಸಂಘ : 1.66 ಕೋಟಿ ರೂಪಾಯಿ ನೆರವು ವಿತರಣೆ

05:00 PM Jun 11, 2019 | Team Udayavani |

ಮುಂಬಯಿ: ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯು ಕಳೆದ 15 ವರ್ಷಗಳಿಂದ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಸಮಾಜದ ವಿದ್ಯಾರ್ಥಿಗಳಿಗೆ, ವಿಧವೆಯರಿಗೆ ಹಾಗೂ ವಿಕಲ ಚೇತನರಿಗೆ ಸಹಾಯ ನೀಡುವ ದೃಷ್ಟಿಯಿಂದ ಕಾರ್ಯಕ್ರಮ ಆರಂಭದ ವರ್ಷದಲ್ಲಿ 25 ಲಕ್ಷ ರೂ. ಗಳಿಂದ ಪ್ರಾರಂಭಗೊಂಡಿತು. ಪ್ರಸ್ತುತ ಒಂದು ಕೋಟಿ ಅರುವತ್ತಾರು ಲಕ್ಷದವರೆಗೆ ಆರ್ಥಿಕ ಸಹಾಯ ಧನವನ್ನು ನೀಡುತ್ತಿರುವುದು ಸಂತೋಷದ ಸಂಗತಿ. ಸುಧಾಕರ ಎಸ್‌. ಹೆಗ್ಡೆ ಅವರು ಸಂಘದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅವರ ಮಾರ್ಗದರ್ಶನಂತೆ ಅಂದಿನ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಐಕಳ ಹರೀಶ್‌ ಶೆಟ್ಟಿ, ಬಳಿಕ ಕರ್ನಿರೆ ವಿಶ್ವನಾಥ ಶೆಟ್ಟಿ ಅವರ ನೇತೃತ್ವದಲ್ಲಿ ಆರಂಭಗೊಂಡ ಆರ್ಥಿಕ ಸಹಾಯ ಸೇವೆಯು ಬಳಿಕದ ವರ್ಷಗಳಲ್ಲಿ ಮಹೇಶ್‌ ಎಸ್‌. ಶೆಟ್ಟಿ, ಎನ್‌. ವಿವೇಕ್‌ ಶೆಟ್ಟಿ, ಪ್ರಸ್ತುತ ಉಳೂ¤ರು ಮೋಹನ್‌ದಾಸ್‌ ಶೆಟ್ಟಿ ಅವರ ಕಾರ್ಯಾಧ್ಯಕ್ಷತೆಯಲ್ಲಿ ಮುಂದುವರಿಯತ್ತಿದೆ. ದಾನಿಗಳ ನಿರಂತರ ಪ್ರೋತ್ಸಾಹ, ಸಹಕಾರದಿಂದ ಇದು ಸಾಧ್ಯವಾಗಿದೆ. ಹಾಗಾಗಿ ದಾನಿಗಳನ್ನು ಬಂಟರ ಸಂಘವು ಎಂದಿಗೂ ಮರೆಯುವಂತಿಲ್ಲ ಎಂದು ಬಂಟರ ಸಂಘ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಅವರು ನುಡಿದರು.
ಜೂ. 9ರಂದು ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ದಿ| ವಾಸು ಕೆ. ಶೆಟ್ಟಿ ಅವರ ಸ್ಮರಣಾರ್ಥ ಅವರ ಪುತ್ರ ಚರಿಷ್ಮಾ ಬಿಲ್ಡರ್ì ಲಿಮಿಟೆಡ್‌ನ‌ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಸುಧೀರ್‌ ವಿ. ಶೆಟ್ಟಿ ಅವರ ಪ್ರಾಯೋಜಕತ್ವದಲ್ಲಿ ಬಂಟರ ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಹದಿನೈದನೇ ಮೆಗಾ ಆರ್ಥಿಕ ಸಹಾಯ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಘವು ಸಮಾಜ ಬಾಂಧವರ ಮಕ್ಕಳ ಶಿಕ್ಷಣಕ್ಕಾಗಿ ಅತೀ ಹೆಚ್ಚು ಪ್ರಾಧಾನ್ಯತೆ ನೀಡುತ್ತಾ ಬಂದಿದ್ದು, ಸಂಘದ ಪೊವಾಯಿ ಶಿಕ್ಷಣ ಸಮಿತಿ ಹಾಗೂ ಸಂಘದ ಉನ್ನತ ಶಿಕ್ಷಣ ಯೋಜನಾ ಸಮಿತಿಗಳು ವಿವಿಧ ಕೋರ್ಸ್‌ಗಳನ್ನು ಉತ್ತಮವಾಗಿ ನಡೆಸಿಕೊಂಡು ಬರುತ್ತಿದ್ದು, ಸಮಾಜ ಬಾಂಧವರು ತಮ್ಮ ಮಕ್ಕಳನ್ನು ನಮ್ಮದೇ ಆದ ಶಿಕ್ಷಣ ಸಂಸ್ಥೆಗಳಿಗೆ ಸೇರಿಸುವ ಮೂಲಕ ಇದರ ಪ್ರಯೋಜನ ಪಡೆಯಬೇಕು. ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಆರಂಭದಲ್ಲಿ ಕಾರ್ಯಾಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅವರ ನೇತೃತ್ವದಲ್ಲಿ ರಂಜನಿ ಸುಧಾಕರ ಹೆಗ್ಡೆ ಸಮಾಜ ಕಲ್ಯಾಣ ಎನೆಕ್ಸ್‌ ಸಂಕೀರ್ಣವನ್ನು ಕಟ್ಟಿಸಿದ ಪರಿಣಾಮ ಇಂದು ಈ ಸಂಕೀರ್ಣದ ಸೌಲಭ್ಯಗಳಿಂದ ಸಂಘ ಪ್ರತೀ ವರ್ಷ ಸುಮಾರು 40 ಲಕ್ಷ ರೂ. ಲಾಭ ಗಳಿಸುತ್ತಿರುವುದು ಸಂತೋಷದ ಸಂಗತಿಯಾಗಿದೆ. ಮೇರು ವ್ಯಕ್ತಿತ್ವವನ್ನು ಹೊಂದಿರುವ ಸಂಸದ ಗೋಪಾಲ್‌ ಶೆಟ್ಟಿ ಅವರನ್ನು ಇಂದು ಸಮ್ಮಾನಿಸಿರುವುದು ಹೆಮ್ಮೆಯಾಗುತ್ತಿದೆ. ಎರಡನೇ ಬಾರಿ ಸಂಸದರಾಗಿ ಅವರು ಆಯ್ಕೆಯಾಗಿರುವುದು ಸಮುದಾಯಕ್ಕೆ, ಸಂಘಕ್ಕೆ ಹೆಮ್ಮೆಯ ವಿಷಯ. ಸಂಘವು ನೀಡುವ ಸವಲತ್ತುಗಳನ್ನು ಕೀಳರಿಮೆಯಿಲ್ಲದೆ ಪಡೆದುಕೊಂಡು ಮತ್ತೆ ಸಂಘಕ್ಕೆ ಸಹಾಯ ಮಾಡುವಂತೆ ಪಾಲಕರು ವಿದ್ಯಾರ್ಥಿಗಳನ್ನು ಪ್ರೇರೇಪಿಸಬೇಕು. ವಿದ್ಯಾರ್ಥಿಗಳ ದತ್ತು ಸ್ವೀಕಾರದ ನೂತನ ಯೋಜನೆಯು ಮುಂದಿನ ವರ್ಷಗಳಲ್ಲಿ ಇನ್ನಷ್ಟು ಬೆಳೆಯಲು ಸರ್ವ ರೀತಿಯಲ್ಲಿ ಪ್ರಯತ್ನಿಸೋಣ. ಇಂದು ಸಮ್ಮಾನ ಸ್ವೀಕರಿಸಿದ ನಿವ್ಯಾಳಂತೆ ವಿದ್ಯಾರ್ಥಿಗಳು ಬೆಳೆದು ಬರಬೇಕು ಎಂದು ಹಾರೈಸಿದರು.
ದೂರದೃಷ್ಟಿಯ ಜತೆಗೆ ಪ್ರಯತ್ನ ಜತೆಗಿದ್ದರೆ ಸಫಲತೆ
ಸಂಘದ ವಿನೂತನ ಯೋಜನೆ ವಿದ್ಯಾರ್ಥಿಗಳ ದತ್ತು ಸ್ವೀಕಾರ ಫಲಕವನ್ನು ಅನಾವರಣಗೊಳಿಸಿ ಎಂಆರ್‌ಜಿ ಹಾಸ್ಪಿಟಾಲಿಟಿ ಆ್ಯಂಡ್‌ ಇನ್‌ಫ್ರಾಸ್ಟ್ರಕ್ಚರ್‌ ಪ್ರೈವೇಟ್‌ ಲಿಮಿಟೆಡ್‌ನ‌ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಕೆ. ಪ್ರಕಾಶ್‌ ಶೆಟ್ಟಿ ಅವರು ಮಾತನಾಡಿ, ನನ್ನ ಜೀವನದಲ್ಲಿ ಸಾಕಷ್ಟು ವೇದಿಕೆಗಳನ್ನು ಹಂಚಿಕೊಂಡಿದ್ದೇನೆ. ಆದರೆ ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಔಚಿತ್ಯಪೂರ್ಣವಾಗಿದೆ. ಕಳೆದ 15 ವರ್ಷಗಳಿಂದ ತಪ್ಪದೇ ಭಾಗವಹಿಸುತ್ತಿರುವುದು ನನ್ನ ಭಾಗ್ಯ. ನಿಮ್ಮ ಜೊತೆ ನಾನು ಸದಾಯಿದ್ದೇನೆ. ಇಂದು ನಾನು ಐವರು ವಿದ್ಯಾರ್ಥಿಗಳನ್ನು ದತ್ತು ಸ್ವೀಕರಿಸಿದ್ದೇನೆ. ಈ ವಿದ್ಯಾರ್ಥಿಗಳಿಗೆ ಎಂಜಿನಿಯರ್‌, ಡಾಕ್ಟರ್‌ ಅದಕ್ಕಿಂತಲೂ ಮೀರಿ ಶಿಕ್ಷಣ ಪಡೆಯುವ ಅಪೇಕ್ಷೆಯಿದ್ದಲ್ಲಿ ನಾನು ಖಂಡಿತಾ ಪೂರೈಸುತ್ತೇನೆ. ನಾವೆಲ್ಲರು ಒಂದೇ ಸಮುದಾಯದವರು. ಆದ್ದರಿಂದ ಯಾವುದೇ ರೀತಿಯ ಸಂಕೋಚ ಬೇಡ. ದೂರದೃಷ್ಟಿಯ ಜತೆಗೆ ಪ್ರಯತ್ನ ಜತೆಗಿದ್ದರೆ ಸಫಲತೆ ನಮ್ಮದಾಗುತ್ತದೆ. ಸಮಿತಿಯ ಕಾರ್ಯಾಧ್ಯಕ್ಷ ಉಳೂ¤ರು ಮೋಹನ್‌ದಾಸ್‌ ಶೆಟ್ಟಿ ಅವರ ಆತ್ಮೀಯ ಸಂಬಂಧವಿದ್ದು, ಅವರ ಯೋಜನೆಗೆ ನಾನು ಸಹಾಯ ಮಾಡಲು ಸಿದ್ಧನಿದ್ದೇನೆ. ಸಮ್ಮಾನಿತರಾದ ಗೋಪಾಲ್‌ ಸಿ. ಶೆಟ್ಟಿ, ನಿವ್ಯಾ ಶೆಟ್ಟಿ ಅಭಿನಂದನಾರ್ಹರು ಎಂದರು.

Advertisement

ಮುಖ್ಯ ಅತಿಥಿಯಾಗಿ ಆಗಮಿಸಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅವರು, ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ ತಾನು ಕಾರ್ಯಾಧ್ಯಕ್ಷನಾಗಿದ್ದಾಗಿನಿಂದ ಇಂದಿನವರೆಗೆ ಬೆಳೆದು ಬಂದ ಬಗೆಯನ್ನು ವಿವರಿಸಿದರು. ಸುಧಾಕರ ಎಸ್‌. ಹೆಗ್ಡೆ ಅವರು ಸಂಘದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಎನೆಕ್ಸ್‌ ಸಂಕೀರ್ಣಕ್ಕೆ ಸುಮಾರು 1 ಕೋ. ರೂ. ದೇಣಿಗೆ ನೀಡಿರುವುದನ್ನು ಸ್ಮರಿಸಿದರು. ಕಳೆದ 15 ವರ್ಷಗಳಿಂದ ಆರ್ಥಿಕ ಸಹಾಯ ಮೇಳಕ್ಕೆ ಸಹಕರಿಸಿ, ತಪ್ಪದೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವ ಕೆ. ಪ್ರಕಾಶ್‌ ಶೆಟ್ಟಿ ಅವರು ಅಭಿನಂದನಾರ್ಹರು. ಮುಂದೊಮ್ಮೆ ಪ್ರಕಾಶ್‌ ಶೆಟ್ಟಿ ಅವರು ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಲೆಂದು ಹಾರೈಸಿ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ದತ್ತು ಸ್ವೀಕಾರ ಯೋಜನೆ ಯಶಸ್ವಿಯಾಗಲಿ. ಸಮಿತಿಯ ಕಾರ್ಯಾಧ್ಯಕ್ಷ ಉಳೂ¤ರು ಮೋಹನ್‌ದಾಸ್‌ ಶೆಟ್ಟಿ ಹಾಗೂ ಇತರ ಪದಾಧಿಕಾರಿಗಳ ಸತತ ಪರಿಶ್ರಮ ಫಲಶ್ರುತಿಯಿಂದಾಗಿ ಈ ವರ್ಷ ಅತೀ ಹೆಚ್ಚು ಸಹಾಯಧನ ವಿತರಿಸುವುದು ಸಾಧ್ಯವಾಗಿದೆ ಎಂದು ನುಡಿದು ಅವರನ್ನು ಅಭಿನಂದಿಸಿದ್ದರು.

ಈ ಸಂದರ್ಭದಲ್ಲಿ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ, ಮುಖ್ಯ ಅತಿಥಿ ಐಕಳ ಹರೀಶ್‌ ಶೆಟ್ಟಿ, ಕೆ. ಪ್ರಕಾಶ್‌ ಶೆಟ್ಟಿ, ಗೌರವ ಅತಿಥಿಗಳಾದ ಸುಧೀರ್‌ ವಿ. ಶೆಟ್ಟಿ, ಸುಧಾಕರ ಎಸ್‌. ಹೆಗ್ಡೆ, ಡಾ| ಸುರೇಂದ್ರ ವಿ. ಶೆಟ್ಟಿ ಅವರನ್ನು ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಪದಾಧಿಕಾರಿಗಳು ಶಾಲು ಹೊದೆಸಿ, ಪುಷ್ಪಗುತ್ಛ, ಸ್ಮರಣಿಕೆಯನ್ನಿತತ್ತು ಗೌರವಿಸಿದರು. ವಿಶೇಷ ಅತಿಥಿ ಕರ್ನಾಟಕ ಶಾಸಕ ಸಿ. ಟಿ. ರವಿ ಅವರನ್ನು ಬಂಟರವಾಣಿಯ ಗೌರವ ಸಂಪಾದಕ ಅಶೋಕ್‌ ಪಕ್ಕಳ ಪರಿಚಯಿಸಿದರು.
ಸುಮಾರು 10 ವಿದ್ಯಾರ್ಥಿಗಳಿಗೆ ಸಾಂಕೇತಿಕ ವಾಗಿ ಸ್ಕಾಲರ್‌ಶಿಪ್‌ ವಿತರಿಸಲಾಯಿತು. ಐವರು ವಿದ್ಯಾಥಿಗಳ ದತ್ತು ಸ್ವೀಕಾರವನ್ನು ವೇದಿಕೆಯಲ್ಲಿ ಸಾಂಕೇತಿಕವಾಗಿ ಕೈಗೊಳ್ಳಲಾಯಿತು. ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕೋಶಾಧಿಕಾರಿ ಸುರೇಶ್‌ ಶೆಟ್ಟಿ ಮರಾಠ ವಿದ್ಯಾರ್ಥಿಗಳ ಯಾದಿಯನ್ನು ಪ್ರಕಟಿಸಿದರು. ಸಮಾರಂಭದಲ್ಲಿ ಸಂಘದ ಮಾರ್ಗದರ್ಶಕ, ಉತ್ತರ ಮುಂಬಯಿ ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ್‌ ಸಿ. ಶೆಟ್ಟಿ ಮತ್ತು ಉಷಾ ಜಿ. ಶೆಟ್ಟಿ ದಂಪತಿ ಹಾಗೂ ಆದಾಯ ತೆರಿಗೆ ಇಲಾಖೆಯ ಉಪಾಯುಕ್ತೆ ಕು| ನಿವ್ಯಾ ಪಿ. ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು.

ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ ಅವರು ನಿವ್ಯಾರನ್ನು ಪರಿಚಯಿಸಿದರು. ಸಮಾರಂಭದಲ್ಲಿ ಪ್ರಶಸ್ತಿ ರೂಪದಲ್ಲಿ ದೊರೆತ ಒಂದು ಲಕ್ಷ ರೂ. ಗಳನ್ನು ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ ಯೋಜನೆಗೆ ಅರ್ಪಿಸಿದ ಹಿರಿಯ ಮುತ್ಸದ್ಧಿ, ಸಂಘದ ಮಾಜಿ ಅಧ್ಯಕ್ಷ ಎಂ. ಡಿ. ಶೆಟ್ಟಿ ಹಾಗೂ ಸಂಘದ ಮಾಜಿ ಅಧ್ಯಕ್ಷ ನ್ಯಾಯವಾದಿ ಆರ್‌. ಸಿ. ಶೆಟ್ಟಿ ಅವರನ್ನು ಗೌರವಿಸಲಾಯಿತು. ಆರ್ಥಿಕ ಸಹಾಯ ಮೇಳಕ್ಕೆ ಸಹಕರಿಸಿದ ದಾನಿಗಳನ್ನು ಸತ್ಕರಿಸಲಾಯಿತು. ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಉಪ ಕಾರ್ಯಾಧ್ಯಕ್ಷ ಸುಬ್ಬಯ್ಯ ಶೆಟ್ಟಿ, ಕೋಶಾಧಿಕಾರಿ ಸುರೇಶ್‌ ಶೆಟ್ಟಿ ಮರಾಠ ಅವರು ದಾನಿಗಳ ಯಾದಿಯನ್ನು ಓದಿದರು.

ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಉಳೂ¤ರು ಮೋಹನ್‌ದಾಸ್‌ ಶೆಟ್ಟಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಅಧ್ಯಕ್ಷರ ಇಚ್ಚೆಯಂತೆ ಈ ಬಾರಿ ಸುಮಾರು 100 ವಿದ್ಯಾರ್ಥಿಗಳನ್ನು ಪ್ರಾಥಮಿಕ ಶಿಕ್ಷಣದಿಂದ ಪದವಿಯವರೆಗೆ ದತ್ತು ಸ್ವೀಕರಿಸುವ ನೂತನ ಯೋಜನೆ ಆರಂಭಗೊಂಡಿದೆ. ಈ ಯೋಜನೆ ಪ್ರತಿ ವರ್ಷ ಮುಂದುವರಿಯಲಿದೆ. ದಾನಿಗಳ, ಪ್ರೋತ್ಸಾಹ, ಸಹಕಾರಕ್ಕೆ ಕೃತಜ್ಞತೆಗಳು. ದತ್ತು ಸ್ವೀಕಾರ ಯೋಜನೆ ಯಶಸ್ವಿಯಾಗಲು ಸಹಕರಿಸಿದ ಸಮಿತಿಯ ಉಪ ಕಾರ್ಯಾಧ್ಯಕ್ಷ ಸುಬ್ಬಯ್ಯ ಎ. ಶೆಟ್ಟಿ. ಕಾರ್ಯದರ್ಶಿ ಖಾಂದೇಶ್‌ ಭಾಸ್ಕರ್‌ ಶೆಟ್ಟಿ, ಕೋಶಾಧಿಕಾರಿ ಸುರೇಶ್‌ ಶೆಟ್ಟಿ ಮರಾಠ ಇವರ ಪರಿಶ್ರಮವನ್ನು ಅಭಿನಂದಿಸಿ, ಸಂಘದ ಪದಾಧಿಕಾರಿಗಳು, ಪ್ರಾದೇಶಿಕ ಸಮಿತಿಗಳ ಸಹಕಾರವನ್ನು ಸ್ಮರಿಸಿದರು.
ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯದರ್ಶಿ ಖಾಂದೇಶ್‌ ಭಾಸ್ಕರ್‌ ಶೆಟ್ಟಿ ಅವರು ವಾರ್ಷಿಕ ವರದಿ ಮಂಡಿಸಿ, ಈ ವರ್ಷದಿಂದ ಸಹಾಯಧನದ ಜೊತೆಗೆ ದೃಢೀಕರಣ ಪ್ರಮಾಣ ಪತ್ರವನ್ನು ವಿತರಿಸಲಾಗಿದ್ದು, ಅದನ್ನು ಜೋಪಾನವಾಗಿ ಇಡತಕ್ಕದ್ದು. ಈ ವರ್ಷ ಒಂದು ಕೋಟಿ, ಅರುವತ್ತಾರು ಲಕ್ಷದ ನಾಲ್ಕು ಸಾವಿರದ ಒಂಭೈನೂರರಷ್ಟು ಮೊತ್ತವನ್ನು ಆರ್ಥಿಕ ಸಹಾಯಕ್ಕಾಗಿ ವಿತರಿಸಲಾಗುತ್ತಿದೆ. ಸುಮಾರು 633 ವಿಧವೆಯರು, 109 ವಿಕಲ ಚೇತನರು ಹಾಗೂ 3104 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ. ಸುಮಾರು 100 ವಿದ್ಯಾರ್ಥಿಗಳನ್ನು ದತ್ತು ಸ್ವೀಕರಿಸಲಾಗಿದ್ದು, 5 ಲಕ್ಷ 33 ಸಾವಿರದ ನಾಲೂ°ರರಷ್ಟು ಮೊತ್ತವನ್ನು ವಿತರಿಸಲಾಗುತ್ತಿದೆ. ಆಯಾಯ ಪ್ರಾದೇಶಿಕ ಸಮಿತಿಗಳಿಗೆ ನಿಗಧಿಪಡಿಸಿದ ದಿನದಂದು ಸಹಾಯವನ್ನು ವಿತರಿಸಲಾಗುವುದು ಎಂದು ನುಡಿದು, ಸಂಘದ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಹಾಗೂ ಪದಾಧಿಕಾರಿಗಳ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.

Advertisement

ಬಂಟರು ಇನ್ನೊಬ್ಬರ ಆಪತ್ತಿನಲ್ಲಿ ರಕ್ಷಕರಾಗಿ ಸಹೃದಯತೆಯಿಂದ ಮೆರೆಯುವವರು. ಆಕಸ್ಮಿಕವಾಗಿ ಇಲ್ಲಿ ಬಂದು ನಿಮ್ಮೆಲ್ಲರನ್ನು ಕಂಡು ಸಂತೋಷವಾಗುತ್ತಿದೆ. ಕೆ. ಪ್ರಕಾಶ್‌ ಶೆಟ್ಟಿ ಅವರ ಸೌಜನ್ಯತೆ, ಪ್ರೀತಿ, ವಿಶ್ವಾಸದ ಗೆಳೆತನವೇ ನನ್ನನ್ನು ಇಲ್ಲಿಗೆ ಬರುವಂತೆ ಮಾಡಿದೆ. ನಿಮ್ಮ ಗೌರವಕ್ಕೆ ಋಣಿಯಾಗಿದ್ದೇನೆ. ಎಲ್ಲವನ್ನು ಬದಲಾಯಿಸುವ ತಾಕತ್ತು ವಿದ್ಯೆಗೆ ಮಾತ್ರವಿದೆ.ಆದ್ದರಿಂದ ವಿದ್ಯಾರ್ಥಿಗಳು ವಿದ್ಯೆಯಿಂದ ವಿಮುಖರಾಗದೆ ಸಾಧನೆಯ ಬೆನ್ನುಹತ್ತಬೇಕು.
– ಸಿ. ಟಿ. ರವಿ, ಕರ್ನಾಟಕ ಶಾಸಕರು

ಬಂಟರಲ್ಲಿಂದು ಹೆಚ್ಚಿನವರು ಶ್ರೀಮಂತರಾಗಿದ್ದಾರೆ. ಯಾವುದೇ ಯೋಜನೆಗೆ ಬೊಗಸೆ ತುಂಬ ನೀಡುವ ಸಹೃದಯಿಗಳು ನಮ್ಮಲ್ಲಿದ್ದಾರೆ. ಇದರ ಪ್ರಯೋಜನವನ್ನು ಸಂಘವು ಪಡೆಯಬೇಕು. ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ ತಮ್ಮ ಯೋಜನೆಗಳ ಮೂಲಕ ಸಮುದಾಯವನ್ನು ಸ್ಪಂದಿಸುವಲ್ಲಿ ಯಶಸ್ವಿಯಾಗಿದೆ. ದತ್ತು ಸ್ವೀಕಾರ ಯೋಜನೆಯನ್ನು ಇನ್ನಷ್ಟು ಬಲಗೊಳಿಸಿ.
– ಸುಧೀರ್‌ ವಿ. ಶೆಟ್ಟಿ
ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕರು- ಚರಿಷ್ಮಾ ಬಿಲ್ಡರ್ì ಲಿಮಿಟೆಡ್‌.

ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಯೋಜನೆಯ ಸಹಾಯ ಪಡೆದು ಎಷ್ಟೋ ಸಾವಿರ ಮಕ್ಕಳು ಉತ್ತಮ ಶಿಕ್ಷಣ ಪಡೆದು ಬದುಕಿಗೆ ದಾರಿ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸಂಘದಿಂದ ಸಹಾಯ ಪಡೆದ ವಿದ್ಯಾರ್ಥಿಗಳು ಮುಂದೊಂದು ದಿನ ಇತರರಿಗೂ ಈ ಸಹಾಯ
ನೀಡಲು ಸಂಕಲ್ಪ ಕೈಗೊಳ್ಳಬೇಕು. ಬಂಟರ ಸಂಘವನ್ನು ಸದಾ ನೆನಪಿನಲ್ಲಿಟ್ಟುಕೊಂಡು ಸಹಕರಿಸಬೇಕು .
– ಸುಧಾಕರ ಎಸ್‌. ಹೆಗ್ಡೆ
ಕಾರ್ಯಾಧ್ಯಕ್ಷರು, ಆಡಳಿತ ನಿರ್ದೇಶಕರು : ತುಂಗಾ ಗ್ರೂಪ್‌ ಆಫ್‌ ಹೊಟೇಲ್‌

ಬಂಟರ ಸಂಘವು ಸಮುದಾಯದ ವಿದ್ಯಾರ್ಥಿಗಳಿಗೆ, ವಿಧವೆಯರಿಗೆ, ವಿಕಲಚೇತನರಿಗೆ ಸಹಾಯ ಕಲ್ಪಿಸುವ ಉದ್ದೇಶದಿಂದ ಈ ಆರ್ಥಿಕ ಸಹಾಯ ಮೇಳವನ್ನು ಆಯೋಜಿಸುತ್ತಿರುವುದು ಶ್ಲಾಘನೀಯ. ರಾಜ್ಯದಲ್ಲಿ ಬರಗಾಲದ ಸ್ಥಿತಿ ಉಂಟಾಗಿದೆ. ಮರಾಠಿ ಮಣ್ಣಿನಲ್ಲಿರುವ ನಾವು ಸಂಘದ ಮೂಲಕ ಸಹಾಯ ನೀಡಿ, ಈ ಭೂಮಿಯ ಋಣ ತೀರಿಸುವ ಕಾಯಕಕ್ಕೆ ಮುಂದಾಗೋಣ .
– ಡಾ| ಸುರೇಂದ್ರ ವಿ. ಶೆಟ್ಟಿ
ವಿಶ್ವಸ್ತರು : ಎಸ್‌ವಿ ಇಂಗ್ಲಿಷ್‌ ಮೀಡಿಯಂ ಸ್ಕೂಲ್‌ ಮುರ್ಬಾಡ್‌

ಚಿತ್ರ-ವರದಿ : ಪ್ರೇಮನಾಥ್‌ ಶೆಟ್ಟಿ ಮುಂಡ್ಕೂರು

Advertisement

Udayavani is now on Telegram. Click here to join our channel and stay updated with the latest news.

Next