Advertisement

ಬೆಳಗಾವಿಗೆ ಬಂಪರ್‌; ಅಪಸ್ವರ ಭರಪೂರ

10:14 AM Feb 08, 2020 | Lakshmi GovindaRaj |

ಬೆಳಗಾವಿ: ಬೆಂಗಳೂರು ಬಿಟ್ಟರೆ ಹದಿಮೂರು ಬಿಜೆಪಿ ಶಾಸಕರನ್ನು ಹೊಂದಿರುವ ಗಡಿನಾಡು ಬೆಳಗಾವಿ ಜಿಲ್ಲೆಗೆ ನಾಲ್ಕು ಸಚಿವ ಸ್ಥಾನ ಸಿಕ್ಕಿದೆ. ನಿರಂತರ ರಾಜಕೀಯ ಚಟುವಟಿಕೆ, ಭಿನ್ನಮತ, ನಾಯಕರ ನಡುವಿನ ಅಪಸ್ವರದ ಮಧ್ಯೆ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಬೆಳಗಾವಿ ಹೊಸ ದಾಖಲೆ ಬರೆದಿದೆ.

Advertisement

ಇದುವರೆಗೆ ಬಂದ ಸರ್ಕಾರಗಳಲ್ಲಿ ಬೆಳಗಾವಿ ಜಿಲ್ಲೆಗೆ ಮೂರು ಸಚಿವ ಸ್ಥಾನಗಳು ಸಿಕ್ಕಿದ್ದವು. ಜನತಾದಳ ಸರ್ಕಾರದಲ್ಲಿ ಎ.ಬಿ.ಪಾಟೀಲ, ಉಮೇಶ ಕತ್ತಿ ಹಾಗೂ ಲೀಲಾದೇವಿ ಆರ್‌.ಪ್ರಸಾದ ಸಚಿವರಾಗಿದ್ದರು. ಅದರ ನಂತರ ಅತೀ ಹೆಚ್ಚು ಸಚಿವ ಸ್ಥಾನ ಸಿಕ್ಕಿದ್ದು ಈಗಲೇ. ನಾಲ್ವರು ಸಚಿವರಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲೇ ಮೂವರು ಕುತೂಹಲದ ಸಂಗತಿ.

ಒಂದೇ ಕ್ಷೇತ್ರದಲ್ಲಿ ಇಬ್ಬರಿಗೆ ಸಚಿವ ಸ್ಥಾನ ನೀಡಿದರೆ ತಪ್ಪು ಸಂದೇಶ ಹೋಗುತ್ತದೆ ಎಂಬ ಕಾರಣದಿಂದ ಹೈಕಮಾಂಡ್‌ ಕುಮಟಳ್ಳಿ ಅವರ ಹೆಸರನ್ನು ಕೈಬಿಟ್ಟಿತು ಎಂಬ ಮಾತುಗಳು ಕೇಳಿಬಂದಿವೆ. ಅಥಣಿ ಕ್ಷೇತ್ರದಿಂದ ಈಗಾಗಲೇ ಲಕ್ಷ್ಮಣ ಸವದಿ ಸಚಿವಸ್ಥಾನದ ಜತೆಗೆ ಡಿಸಿಎಂ ಆಗಿರುವುದರಿಂದ ಮಹೇಶ ಕುಮಟಳ್ಳಿ ಅನಿವಾರ್ಯವಾಗಿ ಸಚಿವರಾಗುವ ಅವಕಾಶ ಕಳೆದುಕೊಳ್ಳಬೇಕಾಯಿತು. ಆದರೆ ಪ್ರಭಾವಿ ಸಕ್ಕರೆ ಕಾರ್ಖಾನೆಗಳ ಮಾಲೀಕರಾಗಿರುವ ಶ್ರೀಮಂತ ಪಾಟೀಲ್‌ಗೆ ಲಕ್ಷ್ಮಣ ಸವದಿ ಹಾಗೂ ಜಾರಕಿಹೊಳಿ ಸಹೋದರರ ಉತ್ತಮ ಬಾಂಧವ್ಯ ಸಚಿವ ಸ್ಥಾನಕ್ಕೆ ದಾರಿ ಮಾಡಿಕೊಟ್ಟಿತು.

ಸಚಿವ ಸಂಪುಟದಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಪ್ರಾಬಲ್ಯ ಹೆಚ್ಚಿದರೆ ಇನ್ನೊಂದೆಡೆ ಜಾರಕಿಹೊಳಿ ಸಹೋದರರು ಬಿಜೆಪಿ ಹೈಕಮಾಂಡ್‌ ಬಿಗಿ ಹಿಡಿತದ ನಡುವೆಯೂ ಯಡಿಯೂರಪ್ಪ ಸರ್ಕಾರದಲ್ಲಿ ಎರಡು ಮಹತ್ವದ ಹುದ್ದೆ ಅಲಂಕರಿಸಿದ್ದಾರೆ. ರಮೇಶ ಜಾರಕಿಹೊಳಿ ಸಚಿವರಾದರೆ ಬಾಲಚಂದ್ರ ಜಾರಕಿಹೊಳಿ ಹೆಚ್ಚಿನ ಹಣಕಾಸು ಸಂಪನ್ಮೂಲ ಸ್ಥಾನ ಹೊಂದಿ ಪ್ರಭಾವ ತೋರಿಸಿದ್ದಾರೆ. ಮೊದಲ ಹಂತದಲ್ಲಿ ಲಕ್ಷಣ ಸವದಿ ಹಾಗೂ ಶಶಿಕಲಾ ಜೊಲ್ಲೆ ಸಚಿವರಾದ ನಂತರ ಸಂಪುಟ ಸೇರಲು ಮೂಲ ಬಿಜೆಪಿಗರು ಸೇರಿದಂತೆ ಬೆಳಗಾವಿ ಜಿಲ್ಲೆಯ ಉಳಿದ 12 ಶಾಸಕರಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿತ್ತು.

ಆದರೆ ವಲಸಿಗರ ಲಾಬಿ ಮುಂದೆ ಮೂಲ ಬಿಜೆಪಿಗರ ಪ್ರಯತ್ನ ನಡೆಯಲಿಲ್ಲ. ನಿರೀಕ್ಷೆಯಂತೆ ಮೂವರು ಶಾಸಕರಲ್ಲಿ ರಮೇಶ ಜಾರಕಿಹೊಳಿ ಹಾಗೂ ಶ್ರೀಮಂತ ಪಾಟೀಲ ಸಚಿವರಾಗಿದ್ದಾರೆ. ಆದರೆ ನೂತನ ಸಚಿವರ ಅಧಿಕಾರ ಸ್ವೀಕಾರದ ಬೆನ್ನಲ್ಲೆ ಆಂತರಿಕ ಭಿನ್ನಮತ ಹೊಗೆಯಾಡುತ್ತಿದೆ. ಉಮೇಶ ಕತ್ತಿಗೆ ಹಿನ್ನಡೆಯಾಗಿರುವುದು ಸಾಕಷ್ಟು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಸರ್ಕಾರ ಉಳಿಸಿಕೊಳ್ಳಲು ವಲಸಿಗರಿಗೆ ಮಾತುಕೊಟ್ಟಿದ್ದು, ಅದರಂತೆ ತೀರ್ಮಾನ ತೆಗೆದುಕೊಂಡಿರುವುದು ಮೂಲ ವಲಸಿಗರಲ್ಲಿ ಬೇಸರ ಮೂಡಿಸಿದೆ.

Advertisement

ಉಸ್ತುವಾರಿ ಯಾರ ಹೆಗಲಿಗೆ: ಸಚಿವರ ನೇಮಕವಾಗುತ್ತಿದ್ದಂತೆ ಬೆಳಗಾವಿ ಜಿಲ್ಲೆಯ ಉಸ್ತುವಾರಿ ಯಾರು ಎಂಬ ಚರ್ಚೆ ಆರಂಭವಾಗಿದೆ. ಉಸ್ತುವಾರಿಗೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ರಮೇಶ ಜಾರಕಿಹೊಳಿ ಮಧ್ಯೆ ಪೈಪೋಟಿ ಇದೆ. ಆದರೆ ಈಗ ಲಭ್ಯವಾಗಿರುವ ಮಾಹಿತಿ ಪ್ರಕಾರ ರಮೇಶ ಜಾರಕಿಹೊಳಿ ಜಿಲ್ಲಾ ಉಸ್ತುವಾರಿ ಪಟ್ಟ ಹಿಡಿಯುವುದು ಬಹುತೇಕ ಖಚಿತ ಎನ್ನುತ್ತಾರೆ ಜಿಲ್ಲಾ ಮುಖಂಡರು.

ಉಮೇಶ ಕತ್ತಿ ಮುಂದಿನ ನಡೆ ಏನು?: ಎಲ್ಲರಿಗಿಂತ ದೊಡ್ಡ ಹಿನ್ನಡೆಯಾಗಿದ್ದು ಹುಕ್ಕೇರಿಯ ಶಾಸಕ ಉಮೇಶ ಕತ್ತಿ ಅವರಿಗೆ. ಅತ್ಯಂತ ಹಿರಿಯ ಹಾಗೂ ಎಂಟು ಬಾರಿ ಗೆದ್ದುಬಂದಿರುವ ಉಮೇಶ ಕತ್ತಿ ಎರಡನೇ ಹಂತದಲ್ಲೂ ಅವಕಾಶ ಕಳೆದುಕೊಂಡರು. ಈ ಬಾರಿ ಸಚಿವ ಸ್ಥಾನ ಪಡೆಯುತ್ತಾರೆ ಎಂದೇ ಎಲ್ಲರೂ ಭಾವಿಸಿದ್ದರು. ಬಹುತೇಕ ದಿನಗಳ ಕಾಲ ಮುಖ್ಯಮಂತ್ರಿಗಳ ಮನೆಗೆ ಎಡ ತಾಕಿದ್ದ ಉಮೇಶ ಕತ್ತಿ ಸಚಿವ ಸ್ಥಾನ ಗಟ್ಟಿಮಾಡಿಕೊಂಡಿದ್ದರು.

ಮೊದಲ ಹಂತದಲ್ಲಿ ಸ್ಥಾನ ಸಿಗದಿದ್ದಾಗಲೂ ನಿಷ್ಠೆ ಕುಂದಿರಲಿಲ್ಲ. ಆದರೆ ಅದೇ ನಿಷ್ಠೆ ಅವರಿಗೆ ಮುಳುವಾಗಿದೆ. ಕತ್ತಿಗೆ ಸಚಿವ ಸ್ಥಾನ ಕೊಟ್ಟರೆ ಅವರ ಪ್ರಾಬಲ್ಯ ಹೆಚ್ಚುತ್ತದೆ. ಆಗ ಅವರ ಮೇಲೆ ನಿಯಂತ್ರಣ ಸಾಧಿಸುವುದು ಕಷ್ಟ ಹೀಗಾಗಿ ಹೆಸರು ಕೈಬಿಸಲು ವರಿಷ್ಠರು ಸೂಚಿಸಿದರು ಎನ್ನುತ್ತಿವೆ ಮೂಲಗಳು. ಆದರೆ, ಯಾವತ್ತೂ ತಮ್ಮ ರಕ್ಷಣೆಗೆ ನಿಂತಿರುವ ಕತ್ತಿ ಅವರನ್ನು ಹೇಗಾದರೂ ಮಾಡಿ ಮಂತ್ರಿ ಮಾಡಲೇಬೇಕು

ಎಂದು ಪಟ್ಟು ಹಿಡಿದಿದ್ದ ಯಡಿಯೂರಪ್ಪ ಅವರಿಗೆ ಲಕ್ಷಣ ಸವದಿ ಅವರ ಬೆನ್ನಿಗೆ ನಿಂತಿರುವ ಬಿಜೆಪಿ ನಾಯಕರ ಒಂದು ಗುಂಪು ಹಿನ್ನಡೆ ಉಂಟುಮಾಡಿದೆ ಎಂಬ ಮಾತುಗಳೂ ಹರಿದಾಡುತ್ತಿವೆ. ಒಂದೆಡೆ ಯಡಿಯೂರಪ್ಪ ನಿಷ್ಠರು ಎಂಬ ಕಾರಣದಿಂದ ಉಮೇಶ ಕತ್ತಿಗೆ ಸಚಿವ ಸ್ಥಾನ ತಪ್ಪಿಸಿದರೆ ಇನ್ನೊಂದು ಕಡೆ ಸಿ.ಪಿ.ಯೋಗೀಶ್ವರ ಅವರ ಸೇರ್ಪಡೆಗೆ ಅವಕಾಶ ಸಿಗದಂತೆ ಮಾಡಿತು. ಎರಡನೇ ಪ್ರಯತ್ನದಲ್ಲೂ ಸಚಿವ ಸ್ಥಾನದ ಅವಕಾಶ ಕಳೆದುಕೊಂಡ ಕತ್ತಿ ಅವರ ಮುಂದಿನ ನಡೆ ಈಗ ಕುತೂಹಲ ಮೂಡಿಸಿದೆ.

* ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next