Advertisement

ರಸ್ತೆಗಳ ಅಭಿವೃದ್ಧಿ, ನಿರ್ವಹಣೆಗೆ ವ್ಯವಸ್ಥಿತ ಮಾದರಿ ರೂಪುಗೊಳ್ಳಲಿ

06:19 AM Feb 10, 2019 | Team Udayavani |

ಮಂಗಳೂರು ನಗರದ ಮೂಲಸೌಕರ್ಯಗಳು ಪ್ರಸ್ತುತ ಹೈಟೆಕ್‌ ಸ್ವರ್ಶ ಪಡೆದುಕೊಳ್ಳುತ್ತಿವೆ. ರಸ್ತೆಗಳ ಅಭಿವೃದ್ಧಿ ಇದರಲ್ಲೊಂದು. ಪ್ರಸ್ತುತ ಮತ್ತು ಭವಿಷ್ಯದ ಬೆಳವಣಿಗೆ ಹಾಗೂ ಆವಶ್ಯಕತೆಗಳನ್ನು ಗಮನದಲ್ಲಿಟುಕೊಂಡು ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆ ಯೋಜನೆ ರೂಪಿಸುವುದರಿಂದ ಮುಂದಕ್ಕೆ ತಲೆದೋರುವ ಸಮಸ್ಯೆಗಳನ್ನು ನಿವಾರಿಸಬಹುದಾಗಿದೆ. ಈ ನಿಟ್ಟಿನಲಿ ಟೆಂಡರ್‌ಶ್ಯೂರ್‌ ಹಾಗೂ ಆನ್‌ಲೈನ್‌ ಅಪ್‌ಡೇಟ್‌ ವ್ಯವಸ್ಥೆ ಸಹಕಾರಿಯಾಗಿದೆ. 

Advertisement

ಮಂಗಳೂರಿನಲ್ಲೂ ಸ್ಮಾರ್ಟ್‌ ಸಿಟಿಯಲ್ಲಿ ರಸ್ತೆಗಳ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗುತ್ತಿದೆ. ಇವುಗಳ ನಿರ್ಮಾಣ ಮತ್ತು ನಿರ್ವಹಣೆಯಲ್ಲಿ ಒಂದಷ್ಟು ಸುಧಾರಿತ ಮಾದರಿಗಳನ್ನು ಅನುಸರಿಸಲಾಗುತ್ತಿದೆ. ಆದರೆ ಇದು ಕೇವಲ ಕಲವು ರಸ್ತೆಗಳಿಗೆ ಮಾತ್ರ ಸೀಮಿತವಾಗಿದೆ. ಆನೇಕ ಪ್ರಮುಖ ರಸ್ತೆಗಳು ಇದರಿಂದ ಹೊರಗುಳಿದಿವೆ. ಈ ರಸ್ತೆಗಳನ್ನು ಟೆಂಡರ್‌ಶ್ಯೂರ್‌ ಮಾದರಿಯಲ್ಲಿ ಅಭಿವೃದ್ಧಿ ಹಾಗೂ ನಿರ್ವಹಣೆಯಲ್ಲಿ ಆನ್‌ಲೈನ್‌ ಅಪ್‌ಡೇಟ್‌ ವ್ಯವಸ್ಥೆ ಅನುಸರಣೆಯಿಂದ ರಸ್ತೆಗಳು ಸುವ್ಯವಸ್ಥಿತವಾಗಿರುತ್ತವೆ ಮತ್ತು ನಗರ ಸೌಂದರ್ಯವೂ ವೃದ್ಧಿಸುತ್ತದೆ.

ಬೆಂಗಳೂರಿನಲ್ಲಿ ರಸ್ತೆಗಳ ನಿರ್ಮಾಣ, ಅಭಿವೃದ್ಧಿ ನಿರ್ವಹಣೆಯಲ್ಲಿ ಎರಡು ವರ್ಷಗಳ ಹಿಂದೆಯೇ ಟೆಂಡರ್‌ಶ್ಯೂರ್‌ ಹಾಗೂ ಆನ್‌ಲೈನ್‌ ಅಪ್‌ಡೇಟ್‌ ವ್ಯವಸ್ಥೆ ಅನುಸರಿಸಲಾಗುತ್ತಿದೆ.

ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಮುಖ್ಯಮಂತ್ರಿಯವರ ನಗರೋತ್ಥಾನ ಅನುದಾನದಡಿಯಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಟೆಂಡರ್‌ಶ್ಯೂರ್‌ ಯೋಜನೆಯಲ್ಲಿ ಸುಮಾರು 700 ಕೋಟಿ ರೂ. ವೆಚ್ಚದಲ್ಲಿ 50 ರಸ್ತೆಗಳನ್ನು ಕೈಗೆತ್ತಿಕೊಂಡಿತ್ತು. ಇದರಲ್ಲಿ ಸಿಬಿಡಿ- ಹಂತ 1ರ ಮತ್ತು ಹಂತ- 2ರ ನೃಪತುಂಗ ರಸ್ತೆ ಲೋಕಾರ್ಪಣೆಗೊಂಡಿತ್ತು. ಈಗ ಎರಡನೇ ಹಂತದಲ್ಲಿ ಮೆಜೆಸ್ಟಿಕ್‌ ಸುತ್ತಮುತ್ತಲಿದ ಭಾಗದಲ್ಲಿ ಟೆಂಡರ್‌ ಶ್ಯೂರ್‌ ರಸ್ತೆಗಳನ್ನು ಜ. 28ರಂದು ಉಪಮುಖ್ಯಮಂತ್ರಿ ಡಾ| ಜಿ. ಪರಮೇಶ್ವರ್‌ ಉದ್ಘಾಟಿಸಿದ್ದಾರೆ. ಮೂಲಸೌಕರ್ಯಗಳ ಅಭಿವೃದ್ಧಿ ಸ್ವರೂಪ ಮತ್ತು ಅವುಗಳಿಗೆ ವ್ಯವಸ್ಥಿತ ಸ್ಪರ್ಶ ನೀಡುವ ನಿಟ್ಟಿನಲ್ಲಿ ಈ ಯೋಜನೆಗಳು ವೇಗವಾಗಿ ಬೆಳೆಯುತ್ತಿರುವ ಮಂಗಳೂರು ನಗರವೂ ಇದೇ ಮಾದರಿಯಲ್ಲಿ ರಸ್ತೆಗಳ ಅಭಿವೃದ್ಧಿ ಯೋಜನೆಯನ್ನು ನಿರೀಕ್ಷಿಸುತ್ತಿದೆ.

ಆನ್‌ಲೈನ್‌ ಅಪಡೇಟ್‌ ವ್ಯವಸ್ಥೆ
ಕೇಬಲ್‌, ಕೊಳವೆ, ಒಎಫ್‌ಸಿ ಮುಂತಾದ ಜಾಲಗಳನ್ನು ಅಳವಡಿಸಲು ರಸ್ತೆಗಳನ್ನು ಆಗೆಯುವ ಮುಂಚಿತವಾಗಿ ಸಂಬಂಧಪಟ್ಟ ಸಂಸ್ಥೆಗಳು ಪಾಲಿಕೆಗೆ ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ರಸ್ತೆ ಅಗೆಯುವ ಉದ್ದೇಶ, ಸ್ಥಳ ಹಾಗೂ ಅಳತೆ ಬಗ್ಗೆ ಮಾಹಿತಿ ನೀಡಿ ಗೂಗಲ್‌ ಮ್ಯಾಪಿಂಗ್‌ ಸ್ಥಳ ಪಿನ್‌ ಮಾಡಬೇಕು. ರಸ್ತೆ ಅಗೆತಕ್ಕೆ ಬಂದ ಅರ್ಜಿಗಳನ್ನು ಆಯಾಯ ವಾರ್ಡ್‌ಗಳ ಸಹಾಯಕ ಎಂಜಿನಿಯರ್‌ಗೆ ರವಾನಿಸಲಾಗುತ್ತದೆ. ಅವರು ಸ್ಥಳ ಪರಿಶೀಲನೆ ಮಾಡಿ ಅನುಮತಿ ಅಥವಾ ನಿರಾಕರಣೆಯ ಬಗ್ಗೆ ನಿರ್ಧರಿಸಿ ಕೇಂದ್ರ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳಿಗೆ ರವಾನಿಸುತ್ತಾರೆ. ಅದರ ಮೇಲೆ ಅಲ್ಲಿ ಅವರು ನಿರ್ಧಾರ ಕೈಗೊಳ್ಳುತ್ತಾರೆ.

Advertisement

ಸ್ಥಳೀಯ ಸಹಾಯಕ ಎಂಜಿನಿಯರ್‌ ಹಾಗೂ ಹಿರಿಯ ಅಧಿಕಾರಿಗಳು ಒಪ್ಪಿಗೆ ನೀಡಿದರೆ ಸ್ವಯಂಚಾಲಿತವಾಗಿ ಡಿಮಾಂಡ್‌ ನೋಟೀಸ್‌ ಸೃಷ್ಟಿಯಾಗಲಿದೆ. ನಿಗದಿತ ಶುಲ್ಕ ಪಾವತಿಸಿದ ಬಳಿಕ ಅನುಮತಿ ದೊರೆಯಲಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ ಸ್ಥಳೀಯ ಅಧಿಕಾರಿಗಳು ಪ್ರಮಾಣ ಪತ್ರ ನೀಡುತ್ತಾರೆ. ಅಗೆದ ರಸ್ತೆಯನ್ನು ಸಮರ್ಪಕವಾಗಿ ದುರಸ್ತಿಪಡಿಸದಿದ್ದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಜರಗಿಸಲಾಗುತ್ತದೆ. ಬಿಬಿಎಂಪಿ ಜಾರಿಗೆ ತಂದಿರುವ ವ್ಯವಸ್ಥೆಯ ಬಗ್ಗೆ ದೇಶದ ಇತರ ರಾಜ್ಯಗಳು ಒಲವು ತೋರ್ಪಡಿಸಿವೆ.

ಮಂಗಳೂರಿನ ಸಮಸ್ಯೆ
ಮಂಗಳೂರು ನಗರದಲ್ಲಿ ಹೆಚ್ಚಿನ ರಸ್ತೆಗಳಿಗೆ ಕಾಂಕ್ರೀಟ್‌ ಹಾಕಲಾಗಿದೆ. ಇನ್ನೂ ಕೆಲವು ರಸ್ತೆಗಳು ಕಾಂಕ್ರೀಟ್‌ ಗೊಳಿ ಸುವ ಪಟ್ಟಿಯಲ್ಲಿವೆ. ಆದರೆ ಒಂದು ವ್ಯವಸ್ಥಿತ ಕಾರ್ಯಯೋಜನೆ ಇಲ್ಲದೆ ತರಾತುರಿಯಲ್ಲಿ ಸರಕಾರದ ಅನುದಾನವನ್ನು ವಿನಿಯೋಗಿಸುವ ಧಾವಂತದ ಪರಿಣಾಮಗಳು ಈಗ ಗೋಚರಿಸತೊಡಗಿವೆ.

 ಈಗಾಗಲೇ ಕಾಂಕ್ರೀಟ್‌ ನಡೆಸಿರುವ ರಸ್ತೆಗಳನ್ನು ಅಲ್ಲಲ್ಲಿ ತುಂಡರಿಸುವ ಕಾರ್ಯ ಅವ್ಯಾಹತವಾಗಿ ನಡೆಯುತ್ತಿದೆ. ಇದಕ್ಕೆ ಮುಖ್ಯ ಕಾರಣ ಕಾಂಕ್ರೀಟೀಕರಣ ಮಾಡುವಾಗ ಯುಟಿಲಿಟಿಗಳನ್ನು ನಿರ್ಲಕ್ಷಿಸಿರುವುದು.

ಮುಖ್ಯವಾಗಿ ನೀರು ಸರಬರಾಜು ಕೊಳವೆಗಳು, ಟೆಲಿಪೋನ್‌ ಕಂಪೆನಿಗಳ ಕಂಬಗಳು, ತಂತಿಗಳು, ಒಳಚರಂಡಿ ಮುಂತಾದುವುಗಳನ್ನು ರಸ್ತೆ ಮಧ್ಯದಲ್ಲೇ ಉಳಿಸಿಕೊಂಡು ಕಾಮಗಾರಿ ನಡೆಸಲಾಗಿದೆ.

ಈಗ ಇವುಗಳಲ್ಲಿ ಸಮಸ್ಯೆ ಕಾಣಿಸಿಕೊಂಡಾಗ ಕಾಂಕ್ರೀಟ್‌ಗಳನ್ನು ತುಂಡರಿಸುವುದು ಅನಿವಾರ್ಯವಾಗಿದೆ. ಪರಿಣಾಮ ಸಂಚಾರಕ್ಕೆ ಅಡಚಣೆ. ರಸ್ತೆಗಳ ಬಾಳಿಕೆಯೂ ಕ್ಷೀಣಿಸಿದೆ.

ಮಂಗಳೂರಿಗೂ ಆವಶ್ಯ
ಟೆಂಡರ್‌ ಶ್ಯೂರ್‌ನಲ್ಲಿ ಒಳಗೊಂಡಿರುವ ಎಲ್ಲ ಅಂಶಗಳು ಮಂಗಳೂರಿಗೆ ಅವಶ್ಯವಾಗಿ ಬೇಕಾಗಿರುವಂತದ್ದು.. ಸ್ಮಾರ್ಟ್‌ಸಿಟಿ ಯೋಜನೆಯಡಿ ಈ ಮಾದರಿಯಲ್ಲಿ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಯೋಜನೆ ಇದೆಯಾದರೂ ಇದು ಕೆಲವು ರಸ್ತೆಗಳಿಗೆ ಮಾತ್ರ ಸೀಮಿತವಾಗಿವೆ. ನಗರದ ಎಲ್ಲ ಪ್ರಮುಖ ರಸ್ತೆಗಳನ್ನು ಕೂಡ ಟೆಂಡರ್‌ಶ್ಯೂರ್‌ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಕಾರ್ಯ ಅಗತ್ಯವಾಗಿದೆ. ಈಗಾಗಲೇ ನಗರ ಸಂಚಾರದಟ್ಟನೆಯಿಂದ ಬಳಲುತ್ತಿದ್ದು, ಇದರ ನಿವಾರಣೆಗೆ ಏಕರೀತಿಯ ಸಂಚಾರ ಮಾರ್ಗಗಳನ್ನು ಗುರುತಿಸಿ ಕಾರ್ಯೋನ್ಮುಖವಾಗುವುದು ಅನಿವಾರ್ಯ. ನಗರದಲ್ಲಿ ವಾಯುಮಾಲಿನ್ಯ ದಿನದಿಂದ ದಿನಕ್ಕೆ
ಏರಿಕೆಯಾಗುತ್ತಿದೆ.

ವಾಹನಗಳ ಬಳಕೆ ಅದಷ್ಟು ಕಡಿಮೆ ಮಾಡುವ ನಿಟ್ಟಿನಲ್ಲಿ ಬೈಸಿಕಲ್‌ ಬಳಕೆ ಪರಿಕಲ್ಪನೆ ಬೆಳೆಯುತ್ತಿದ್ದು, ಈ ನಿಟ್ಟಿನಲ್ಲಿ ಬೈಸಿಕಲ್‌ ಪಥಗಳು ಅವಶ್ಯವಿದೆ.

ಸುರಕ್ಷಿತ ಅಡಚಣೆ ರಹಿತ ನಡಿಗೆಯ ಪಾದಚಾರಿ ಮಾರ್ಗ ಇನ್ನೂ ವ್ಯವಸ್ಥಿತ ರೀತಿಯಲ್ಲಿ ಆಗಿಲ್ಲ. ಬಸ್‌ ನಿಲ್ದಾಣಗಳು, ಬಸ್‌ ತಂಗುದಾಣಗಳಿಗಾಗಿ ಬಸ್‌ ಬೇಗಳು, ಕಾರುಗಳ ಮೋಟಾರು ಬೈಕ್‌ಗಳು ಹಾಗೂ ಬೈಸಿಕಲ್‌ಗ‌ಳ ವ್ಯವಸ್ಥಿತ ನಿಲ್ದಾಣ ಮುಂತಾದ ವ್ಯವಸ್ಥೆಗಳು ಸಮರ್ಪಕವಾಗಿ ರೂಪುಗೊಂಡಿಲ್ಲ. ರಸ್ತೆ ಬದಿಯ ವ್ಯಾಪಾರಿಗಳಿಗೆ ನಿಗದಿಪಡಿಸಿದ ಸ್ಥಳಾವಕಾಶ, ವ್ಯವಸ್ಥಿತತವಾದ ನಲೆದಡಿಯ ಉಪುಯುಕ್ತತೆಗಳ ಸಂಪರ್ಕ ಜಾಲ ಮತ್ತು ಒಳಚರಂಡಿ, ಸುರಕ್ಷಿತ ಬೀದಿಬದಿಯ ಪ್ರದರ್ಶನ ಫಲಕಗಳು, ಹಳೆ ಮರಗಳ ಸಂರಕ್ಷಣೆ , ಹೊಸದಾಗಿ ಗಿಡಗಳನ್ನು ಬೆಳೆಸುವುದು, ಆಕರ್ಷಕ ವೃತ್ತಗಳು ಇವೆಲ್ಲವೂ ಅಗತ್ಯವಿದೆ. ಇನ್ನೂ ಮುಂದಕ್ಕೆ ಕೈಗೊಳ್ಳುವ ಕಾಮಗಾರಿಗಳಲ್ಲಾದರೂ ಟೆಂಡರ್‌ ಶ್ಯೂರ್‌ ಮಾದರಿ ಅನುಷ್ಠಾನಗೊಳ್ಳಲಿ.

ಟೆಂಡರ್‌ಶ್ಯೂರ್‌ ಪರಿಕಲ್ಪನೆ
ಟೆಂಡರ್‌ ಶ್ಯೂರ್‌ ನಗರದಲ್ಲಿ ಸುಗಮ ಸಂಚಾರ ವ್ಯವಸ್ಥೆಗೆ ವಿಶೇಷ ವ್ಯವಸ್ಥೆಗಳನ್ನು ಒಳಗೊಂಡಿರುವ ವಿಶಿಷ್ಟ ಪರಿಕಲ್ಪನೆ. ಇದರ ಮುಖ್ಯ ಉದ್ದೇಶ ಸೂಕ್ತ ಮಾರ್ಗದರ್ಶನವಿಲ್ಲದೆ ಯರ್ರಾಬಿರ್ರಿ ಯಾಗಿರುವ ನಗರದ ರಸ್ತೆಗಳನ್ನು ಪರಿಕಲ್ಪಿತ ರೂಪದಲ್ಲಿ ಸುಂದರವಾಗಿ ನಿರ್ಮಿಸುವುದು. ನಾಗರಿಕ ಏಜೆನ್ಸಿಗಳು ಒಂದೇ ರಸ್ತೆಯಲ್ಲಿ ಸಮನ್ವಯತೆ ಇಲ್ಲದೆ ಮನಬಂದಂತೆ ಪದೇ ಪ ದೇ ಆಗೆದು ಹಾಳುಗೆಡವುದನ್ನು ನಿವಾರಿಸುವುದು. ಬೆಂಗಳೂರಿನಲ್ಲಿ ಅಭಿವೃದ್ಧಿಪಡಿಸಿರುವ ಟೆಂಡರ್‌ ಶ್ಯೂರ್‌ ರಸ್ತೆಗಳಲ್ಲಿ ಸ್ಮಾರ್ಟ್‌ ಕಾರ್ಡ್‌ ಬಳಸುವ ಸೈಕಲ್‌ ನಿಲುಗಡೆ ತಾಣ, ಇ- ಆಟೋ ನಿಲುಗಡೆ, ಇ- ಶೌಚಾಲಯ, ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಎಟಿಎಂ. ಸೆನ್ಸಾರ್‌ ಆಧಾರಿತ ಡಸ್ಟ್‌ಬಿನ್‌, ಸುಸಜ್ಜಿತ ಪಾದಚಾರಿ ಮಾರ್ಗ, ಪಾದಚಾರಿ ಮಾರ್ಗದಡಿ ಒಎಫ್‌ಸಿ ಕೇಬಲ್‌ಗ‌ಳು, ನೀರಿನ ಪೈಪ್‌ ಗಳು, ವಿದ್ಯುತ್‌ ತಂತಿಗಳ ಅಳವಡಿಕೆಗೆ ವ್ಯವಸ್ಥೆ, ಎಲ್‌ಇಡಿ ಬೀದಿ ದೀಪಗಳ ಅಳವಡಿಕೆ, ಮಳೆ ನೀರು ಸರಿಯಾಗಿ ಹರಿದು ಹೋಗಲು ರಸ್ತೆಯ ಎರಡೂ ಕಡೆಗಳಲ್ಲಿ ಸುವ್ಯವಸ್ಥಿತ ಚರಂಡಿ ವ್ಯವಸ್ಥೆಗಳನ್ನು ಹೊಂದಿದೆ. ಸುರಕ್ಷಿತ ಬೀದಿಬದಿಯ ಪ್ರದರ್ಶನ ಫಲಕಗಳು, ಹಳೆಯ ಮರಗಳ ಸಂರಕ್ಷಣೆ ಹಾಗೂ ಹೊಸ ಗಿಡಗಳನ್ನು ಬೆಳೆಸುವುದು, ಆಕರ್ಷಕ ವೃತ್ತಗಳ ನಿರ್ಮಾಣ, ವ್ಯಾಪಾರ ಸ್ಥಳಗಳು ಮುಂತಾದವುಗಳು ಟೆಂಡರ್‌ ಶ್ಯೂರ್‌ ಯೋಜನೆಯ ವಿಶೇಷತೆಗಳು.

 ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next