Advertisement

Budget: ನವಭಾರತದ ಗರಿ ನಮೋ3.0 ಗುರಿ!- ದಶಮಾನದ ಸಾಧನೆ ಬಣ್ಣನೆ,ವಿಕಸಿತ ಅಮೃತಕಾಲಕ್ಕೆ ಮನ್ನಣೆ

01:37 AM Feb 02, 2024 | Team Udayavani |

ಹೊಸದಿಲ್ಲಿ: ಲೋಕಸಭಾ ಚುನಾವಣೆ ಸಮೀ­ಪಿಸುತ್ತಿರುವಾಗಲೇ, ವಿತ್ತಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿರುವ ಮಧ್ಯಾಂತರ ಬಜೆಟ್‌ನಲ್ಲಿ ಯಾವ ಆಮಿಷವೂ ಇಲ್ಲ, ಯಾವ ಹೊರೆಯೂ ಇಲ್ಲ. ನವಭಾರತದ ಭವಿಷ್ಯವನ್ನು ಮುಂದಿರಿಸಿ­ಕೊಂಡು ಸುಧಾ­ರಣಾವಾದಿ ಪಥವನ್ನು ಹಿಡಿಯಲಾಗಿದೆ.

Advertisement

ಇತಿಹಾಸದ ಅತ್ಯಂತ ಕಡಿಮೆ ಅವಧಿಯ ಭಾಷಣ ಮಾಡಿರುವ ನಿರ್ಮಲಾ, ಪ್ರತೀ ಹಂತ ದಲ್ಲೂ “ವಿಕಸಿತ ಭಾರತ’ದ ಕನಸನ್ನು ಬಿತ್ತುತ್ತಾ, ಮುಂದಿನ 25 ವರ್ಷಗಳಲ್ಲಿ ಭಾರತವನ್ನು ಕಟ್ಟುವ ಹಾದಿಯ ಒಳನೋಟ­ವನ್ನು ನೀಡಿದ್ದಾರೆ. ದೇಶದ ರಸ್ತೆ, ರೈಲ್ವೇ ಮಾರ್ಗ, ವಿಮಾನ ನಿಲ್ದಾಣದಂಥ ಮೂಲ­ಸೌಕರ್ಯ ಅಭಿವೃದ್ಧಿಗೆ ಐತಿಹಾಸಿಕ ಕೊಡುಗೆ ನೀಡಲಾಗಿದೆ. ಈ ವಲಯಕ್ಕೆ ಹಿಂದಿನ ಸಲಕ್ಕಿಂತ ಅನುದಾನವನ್ನು ಶೇ.11ರಷ್ಟು ಹೆಚ್ಚಿಸಲಾಗಿದೆ. ಅಂದರೆ, 11.11 ಲಕ್ಷ ಕೋಟಿ ರೂಪಾಯಿ ಅನುದಾನವನ್ನು ನಿಗದಿಪಡಿಸಲಾಗಿದೆ.

ದೇಶದಲ್ಲಿ ನಾಲ್ಕು ಜಾತಿಗಳಷ್ಟೇ ಇವೆ ಎಂಬ ಪ್ರಧಾನಿ ಮೋದಿ ಅವರ ಆಶಯವನ್ನು ಒತ್ತಿ ಹೇಳಿದ ನಿರ್ಮಲಾ, ಮಹಿಳೆಯರು, ರೈತರು, ಯುವಜನರು ಹಾಗೂ ಬಡವರು ಎಂಬ ನಾಲ್ಕು ವರ್ಗದ ಪ್ರಗ­ತಿಯೇ ನಮ್ಮ ಗುರಿ ಎಂದು ಬಜೆಟ್‌ನಲ್ಲಿ ಪ್ರತಿಪಾದಿ­ಸಿದ್ದಾರೆ. ಯುವಜನರನ್ನು ಉದ್ಯಮಿ­ಗಳನ್ನಾಗಿ ಪರಿ­ವರ್ತಿ­­ಸುವ ಮಹತ್ವಾಕಾಂಕ್ಷೆಯೊಂದಿಗೆ, 50 ವರ್ಷಗಳ ಕಾಲ ಬಡ್ಡಿರಹಿತವಾಗಿ ಸಾಲ ನೀಡುವ ಸಲುವಾಗಿ ಒಂದು ಲಕ್ಷ ಕೋಟಿ ರೂಪಾಯಿ ಮೊತ್ತವನ್ನು ಇಡುಗಂಟನ್ನಾಗಿ ನಿಗದಿಪಡಿಸಿದ್ದಾರೆ. ಸೂರುರಹಿತರಿಗೆ ಮನೆಯನ್ನು ಕಲ್ಪಿಸುವ ಯೋಜನೆಯನ್ನು ಮುಂದಿ­ಟ್ಟರಲ್ಲದೆ, ಪ್ರವಾಸೋ­ದ್ಯಮ, ಮತ್ತು ನವೀಕೃತ ಇಂಧನ ಕ್ಷೇತ್ರಕ್ಕೆ ಆದ್ಯತೆ ನೀಡಿರುವುದು ವಿಶೇಷ.

3ನೇ ಅವಧಿಗೆ ಕಣ್ಣಿಟ್ಟಿರುವ ಬಿಜೆಪಿ ಸರಕಾರದ ಮುಂದಿನ 5 ವರ್ಷಗಳ ನೀಲನಕ್ಷೆಯನ್ನು ಸೂಕ್ಷ್ಮ ವಾಗಿ ಹರವಿಡಲು ಹಣಕಾಸು ಸಚಿವರು ಮರೆತಿಲ್ಲ. “ಮುಂದಿನ ಐದು ವರ್ಷಗಳು, ಅಭೂತಪೂರ್ವ ಅಭಿವೃದ್ಧಿ ಹಾಗೂ 2047ರಲ್ಲಿ ಭಾರತವನ್ನು ವಿಕಸಿತಗೊಳಿ­ಸುವ ಕನಸನ್ನು ನನಸು ಮಾಡುವ ಸುವರ್ಣ­ಕಾಲ­ವಾಗಲಿದೆ’ ಎಂದು ಹೇಳಿದ್ದಾರೆ.
ಯಾವ ಹೊಸ ತೆರಿಗೆಯನ್ನೂ ಹೇರುವ ಗೋಜಿಗೆ ಹೋಗಲಿಲ್ಲ ಹಾಗೂ ವೇತನದಾರರ ಆದಾಯ ತೆರಿಗೆ ವ್ಯವಸ್ಥೆಯಲ್ಲೇನೂ ಬದಲಾವಣೆ ಮಾಡಲಿಲ್ಲ. ಈ ಮಧ್ಯಾಂತರ ಬಜೆಟ್‌, ಮುಂದಿನ 25 ವರ್ಷಗಳ ಕನಸನ್ನು ಭಾರತೀಯರ ಮುಂದೆ ಬಿತ್ತಲು ಯತ್ನಿಸಿದೆ.

ಆದಾಯ ತೆರಿಗೆ ದರಗಳು ಯಥಾಸ್ಥಿತಿ

Advertisement

ಹೊಸ ಬಜೆಟ್‌ನಲ್ಲಿ ಆದಾಯ ತೆರಿಗೆ ದರಗಳಲ್ಲಿ ಏನೂ ವ್ಯತ್ಯಾಸ­ವಾಗಿಲ್ಲ. 7 ಲಕ್ಷ ರೂ.ವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ಮುಂದುವರಿಯಲಿದೆ. ದೇಶೀಯ ಕಂಪೆನಿಗಳಿಗೆ ವಾಣಿಜ್ಯ ತೆರಿಗೆ ದರ ಶೇ.22ರಲ್ಲೇ ಇರಲಿದೆ.

ಪೆಟ್ರೋಲ್‌, ಡೀಸೆಲ್‌ ಏರಿಲ್ಲ-ಇಳಿದಿಲ್ಲ

ತೈಲಬೆಲೆಗಳ ಏರಿಸುವ-ಇಳಿಸುವ ಗೋಜಿಗೆ ಕೇಂದ್ರ ಸರಕಾರ ಕೈಹಾಕಿಲ್ಲ. ಬೆಲೆಗಳನ್ನು ಯಥಾಸ್ಥಿತಿಯಲ್ಲೇ ಮುಂದುವರಿಸಲಾಗಿದೆ. 2022 ಎಪ್ರಿಲ್‌ನಿಂದಲೂ ಬೆಲೆಗಳು ವ್ಯತ್ಯಾಸವಾಗದೇ ಯಥಾಸ್ಥಿತಿಯಲ್ಲೇ ಮುಂದುವರಿದಿವೆ.

5 ವರ್ಷದಲ್ಲಿ ಇನ್ನೂ 2 ಕೋಟಿ ಮನೆ
ಬಾಡಿಗೆದಾರರು, ಕೊಳಗೇರಿವಾಸಿಗಳು ಸ್ವಂತ ಮನೆಯನ್ನು ಹೊಂದುವುದು ಕೇಂದ್ರದ ಉದ್ದೇಶ. ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ಮುಂದಿನ ಐದು ವರ್ಷಗಳಲ್ಲಿ 2 ಕೋಟಿ ಮನೆ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ.

ಆಶಾ, ಅಂಗನವಾಡಿಗೆ “ಆಯುಷ್ಮಾನ್‌’
ಆಯುಷ್ಮಾನ್‌ ಭಾರತ್‌ ವಿಮೆಯ ವ್ಯಾಪ್ತಿಗೆ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕೆಲಸಗಾರರು, ಸಹಾಯಕಿಯರನ್ನು ತರಲಾ­ಗು­ತ್ತದೆ. ಸಕ್ಷಮ ಅಂಗನವಾಡಿ ಮತ್ತು ಪೋಷಣ್‌ 2.0 ಯೋಜನೆಯಡಿ ಗುಣಮಟ್ಟವನ್ನು ವೃದ್ಧಿಸಲಾಗುತ್ತದೆ.

ಯೂರಿಯಾ ಬಳಿಕ ನ್ಯಾನೋ-ಡಿಎಪಿ

2021ರ ಬಜೆಟ್‌ನಲ್ಲಿ ನ್ಯಾನೋ ಯೂರಿಯಾ ಗೊಬ್ಬರ ಬಳಕೆಗೆ ಪ್ರೋತ್ಸಾಹ ನೀಡಲಾಗಿತ್ತು. ಈ ಬಾರಿ ಕೃಷಿಕರು ನ್ಯಾನೋ ಡಿಎಪಿ ಗೊಬ್ಬರ ಬಳಕೆಗೆ ಒತ್ತು ನೀಡಲಾಗಿದೆ. ನ್ಯಾನೋ ತಂತ್ರಜ್ಞಾನ ಬಳಸಿ ತಯಾರಿಸುವುದೇ ನ್ಯಾನೋ ಡಿಎಪಿ.

ಏರ್‌ಪೋರ್ಟ್‌ ದ್ವಿಗುಣ, 149ಕ್ಕೆ ಏರಿಕೆ
ಕಳೆದ 10 ವರ್ಷಗಳಲ್ಲಿ ಭಾರತದ ವಿಮಾನ­ಯಾನ ಕ್ಷೇತ್ರದಲ್ಲಿ ಭಾರೀ ಪ್ರಗತಿಯಾಗಿದೆ. ವಿಮಾನನಿಲ್ದಾಣಗಳ ಸಂಖ್ಯೆ ದ್ವಿಗುಣ­ಗೊಂಡಿದ್ದು, 149ಕ್ಕೇರಿದೆ.

3 ಬೃಹತ್‌ ರೈಲ್ವೇ ಕಾರಿಡಾರ್‌ ನಿರ್ಮಾಣ
ಮೂರು ಪ್ರಮುಖ ಆರ್ಥಿಕ ರೈಲ್ವೇ ಕಾರಿಡಾರ್‌ ಯೋಜನೆಗಳನ್ನು ಈ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಪ್ರಧಾನಮಂತ್ರಿ ಗತಿಶಕ್ತಿಯಡಿ ಬರುವ ಇವು, ಸರಕು- ಸಾಮಗ್ರಿ ಸಾಗಣೆ ಸಾಮರ್ಥ್ಯವನ್ನು ಹೆಚ್ಚಿಸಲಿವೆ. ವೆಚ್ಚ ಕಡಿತವಾಗಲಿದೆ,

ಹೊಸ ತೆರಿಗೆ ಹೊರೆ ಇಲ್ಲದ ಬಜೆಟ್‌
ಲೇಖಾನುದಾನದಲ್ಲಿ ಯಾವುದೇ ಹೊಸ ತೆರಿಗೆಗಳನ್ನು ಪ್ರಕಟಿಸಿಲ್ಲ. ಹಳೆಯ ತೆರಿಗೆಗಳನ್ನೇ ಯಥಾಪ್ರಕಾರ ಮುಂದು ವರಿಸಲಾಗಿದೆ. ವಾಣಿಜ್ಯ ಹಾಗೂ ಚಿಲ್ಲರೆ ಉದ್ಯಮಗಳ ವಿವಿಧ ತೆರಿಗೆ ದರಗಳು ಹಾಗೆಯೇ ಇವೆ.

ಎಫ್ಡಿಐ, ಜಿಡಿಪಿಗೆ ಹೊಸ ವ್ಯಾಖ್ಯಾನ
ಆರ್ಥಿಕತೆಯಲ್ಲಿ ಸದಾ ಬಳಸುವ ಎಫ್ಡಿಐಯನ್ನು ಫ‌ಸ್ಟ್‌ ಡೆವಲಪ್‌ ಇಂಡಿಯಾ, ಜಿಡಿಪಿಯನ್ನು ಗವರ್ನೆನ್ಸ್‌, ಡೆಮಾಕ್ರಸಿ, ಪರ್ಪಾಮೆನ್ಸ್‌ ಎನ್ನುವ ಮೂಲಕ; ಈ ಪದಗಳಿಗೆ ನಿರ್ಮಲಾ ಹೊಸ ವ್ಯಾಖ್ಯಾನವನ್ನೇ ಮಾಡಿದ್ದಾರೆ.

1 ಕೋಟಿ ಮನೆಗಳಿಗೆ ಸೌರ ವಿದ್ಯುತ್‌
ಪ್ರಧಾನಿ ಮೋದಿ ಕನಸಿನ ಸೂರ್ಯೋದಯ ಯೋಜನೆಯಡಿ, 1 ಕೋಟಿ ಮನೆಗಳಿಗೆ ಸೌರ­ವಿದ್ಯುತ್‌ ಉತ್ಪಾದನಾ ಘಟಕ ಅಳವಡಿಸ­ಲಾಗುತ್ತದೆ. ಇದರಿಂದ ಮನೆಗಳು ತಿಂಗಳಿಗೆ 300 ಯುನಿಟ್‌ ಉಚಿತ ವಿದ್ಯುತ್‌ ಪಡೆಯಲು ಸಾಧ್ಯವಾಗುತ್ತದೆ.

ಹುಡುಗಿಯರಿಗೆ ಕ್ಯಾನ್ಸರ್‌ ವ್ಯಾಕ್ಸಿನ್‌
ಮಹಿಳೆಯರನ್ನು ಗರ್ಭಕೋಶದ ಕ್ಯಾನ್ಸರ್‌ನಿಂದ ರಕ್ಷಿಸಲು 9ರಿಂದ 14ರ ವಯಸ್ಸಿನ ಹೆಣ್ಣುಮಕ್ಕಳಿಗೆ ಉಚಿತ “ಕ್ಯಾನ್ಸರ್‌ ತಡೆ ಲಸಿಕೆ’ ನೀಡಲು ನಿರ್ಧರಿಸಲಾಗಿದೆ. ಸದ್ಯ ಗರ್ಭಕೋಶ ಕ್ಯಾನ್ಸರ್‌ ನಿರೋಧಕ ಲಸಿಕೆಗೆ ಸುಮಾರು 3 ಸಾವಿರ ರೂ. ಇದೆ.

ಅಡುಗೆ ಎಣ್ಣೆ ಬೀಜದಲ್ಲೂ ಆತ್ಮನಿರ್ಭರತೆ
ಭಾರತ ಅಡುಗೆ ಎಣ್ಣೆಗಾಗಿ ವಿದೇಶಗಳನ್ನು ಅವಲಂಬಿಸಿದೆ. ಇದನ್ನು ತಪ್ಪಿಸಿ, ಆತ್ಮ ನಿರ್ಭರತೆ ಸಾಧಿಸಲು ಸಾಸಿವೆ, ಶೇಂಗಾ, ಸೂರ್ಯಕಾಂತಿಯಂತಹ ಅಡುಗೆ ಎಣ್ಣೆ ಬೀಜಗಳ ದೇಶೀ ಯ ಉತ್ಪಾದನೆ ಹೆಚ್ಚಿಸಲು ಕ್ರಮ ತೆಗೆದುಕೊಳ್ಳಲಾಗುತ್ತದೆ.

ಮೆಟ್ರೋ ಇನ್ನಷ್ಟು ನಗರಗಳಲ್ಲಿ ಕಟ್ರೋ
ನಗರಗಳಲ್ಲಿ ಸಂಚಾರದಟ್ಟಣೆ ತಪ್ಪಿಸಲು ಇನ್ನಷ್ಟು ನಗರಗಳಲ್ಲಿ ಮೆಟ್ರೋ ರೈಲ್ವೆ ನಿರ್ಮಿಸ­ಲಾಗುತ್ತದೆ. ನಮೋ ಭಾರತ್‌ ಯೋಜನೆಯಡಿ ವಿದ್ಯುತ್‌ ಚಾಲಿತ ರೈಲು ಪ್ರಮಾಣ ಹೆಚ್ಚಿಸಲಾಗುತ್ತದೆ.

ಸ್ಟಾರ್ಟಪ್‌ಗೆ ವಿನಾಯಿತಿ ವಿಸ್ತರಣೆ
ಸ್ಟಾರ್ಟಪ್‌ ಇಂಡಿಯಾ ಯೋಜ­ನೆ­ಯಡಿ ಆರಂಭವಾಗಿ­ರುವ ಸ್ಟಾರ್ಟ­ಪ್‌ಗ್ಳಿಗೆ ಈ ವರ್ಷ ಮಾ.31ರವರೆಗೆ ತೆರಿಗೆ ವಿನಾಯಿತಿ ನೀಡ­ಲಾಗಿತ್ತು. ಇದನ್ನು 2025, ಮಾ.31ರವರೆಗೆ ವಿಸ್ತರಿಸಲಾಗಿದೆ.

ಸರಕಾರದ ಸಾಧನೆ ಕುರಿತು ಶ್ವೇತಪತ್ರ
ಕಳೆದ 10 ವರ್ಷಗಳಲ್ಲಿ ಕೇಂದ್ರ ಸರಕಾರ ಮಾಡಿರುವ ಸಾಧನೆಗಳ ಬಗ್ಗೆ ಅಧಿಕೃತ ಮಾಹಿತಿಯಿರುವ ಶ್ವೇತಪತ್ರವನ್ನು ಹೊರಡಿಸ­ಲಾಗುತ್ತದೆ. ಇದರಲ್ಲಿ ದೇಶದಲ್ಲಾಗಿರುವ ಆರ್ಥಿಕ ಪ್ರಗತಿ, ಹಣದುಬ್ಬರದ ಬಗ್ಗೆ ಮಾಹಿತಿಯಿರಲಿದೆ.

ಮಹಿಳೆಯರು “ಲಕ್ಷಾಧಿಪತಿ ದೀದಿ”
ಸ್ವಸಹಾಯ ಗುಂಪುಗಳ ಮೂಲಕ ಮಹಿಳೆ­ಯರಿಗೆ ತರಬೇತಿ ನೀಡಿ, ವಾರ್ಷಿಕ 1 ಲಕ್ಷ ರೂ. ಆದಾಯ ಗಳಿಸುವಂತೆ ಮಾಡುವ ಯೋಜ­ನೆಯೇ ಲಕ್ಷಾಧಿಪತಿ ದೀದಿ. ಇದರ ಫ‌ಲಾನು­ಭವಿಗಳ ಸಂಖ್ಯೆಯನ್ನು 2 ಕೋಟಿಯಿಂದ 3 ಕೋಟಿ ರೂ.ಗೇರಿಸಲಾಗುತ್ತದೆ.

ರಾಜ್ಯಗಳಿಗೆ ಬಡ್ಡಿರಹಿತ ಸಾಲ
ಮೈಲುಗಲ್ಲುಗಳನ್ನು ನಿರ್ಮಿಸುವ ಕಾಮಗಾರಿ ಕೈಗೆತ್ತಿಕೊಳ್ಳುವ ರಾಜ್ಯಗಳಿಗೆ, 50 ವರ್ಷಗಳ ಅವಧಿಗೆ ಬಡ್ಡಿರಹಿತವಾಗಿ ಸಾಲ ನೀಡಲಾ­ಗುತ್ತದೆ. ಎಲ್ಲ ರಾಜ್ಯಗಳಿಗೂ ಸೇರಿ ಒಟ್ಟು 75,000 ಕೋಟಿ ರೂ. ಹಣ ನೀಡಲಾಗುತ್ತದೆ.

ಯುವಜನರಿಗಾಗಿ ಬಡ್ಡಿರಹಿತ ಸಾಲ
ದೇಶದ ಯುವಜನರು ನವಶೋಧ, ಸಂಶೋ­ಧನೆಗಳನ್ನು ಮಾಡಲು ಕೇಂದ್ರ ಪ್ರೋತ್ಸಾ­ಹಿಸಲಿದೆ. 50 ವರ್ಷಗಳ ಅವಧಿಗೆ ಬಡ್ಡಿರಹಿತ ಸಾಲ ನೀಡಲು 1 ಲಕ್ಷ ಕೋಟಿ ರೂ.ಗಳನ್ನು ತೆಗೆದಿರಿಸಲಾಗಿದೆ. ಖಾಸಗಿ ವಲಯದತ್ತ ಇಲ್ಲಿ ಗಮನ ಕೇಂದ್ರೀಕರಿಸಲಾಗಿದೆ.

40 ಸಾವಿರ ಬೋಗಿ ವಂದೇ ಭಾರತ್‌ ಮಟ್ಟಕ್ಕೆ
40,000 ಮಾಮೂಲಿ ರೈಲು ಬೋಗಿಗಳನ್ನು ವಂದೇ ಭಾರತ್‌ ರೈಲು ಬೋಗಿಗಳ ಮಟ್ಟಕ್ಕೆ ಏರಿಸಲಾಗುತ್ತದೆ. ಇದರಿಂದ ಪ್ರಯಾಣಿಕರ ಸುರಕ್ಷಿತ ಪ್ರವಾಸಕ್ಕೆ ಅನುಕೂಲವಾಗಲಿದೆ. ಸುಗಮ ಸಂಚಾರ ಸಾಧ್ಯವಾಗುತ್ತದೆ.

ವಾಣಿಜ್ಯ, ಅಧ್ಯಾತ್ಮ ಪ್ರವಾಸೋದ್ಯಮ
ಮೋದಿ ಭೇಟಿ ಬಳಿಕ ಪ್ರಚಾರ ಪಡೆದಿರುವ ಲಕ್ಷದ್ವೀಪದಂತಹ ದ್ವೀಪಗಳಲ್ಲಿ, ಬಂದರು ಸಂಪರ್ಕ ಅಭಿವೃದ್ಧಿಗೆ ಹೊಸ ಯೋಜನೆ ಘೋಷಿಸಲಾಗುತ್ತದೆ. ಹಾಗೆಯೇ ಅಯೋಧ್ಯೆ­ಯಂತಹ ಆಧ್ಯಾತ್ಮಿಕ ಕೇಂದ್ರಗಳನ್ನೂ ಜಾಗತಿಕ ಪ್ರವಾಸಿ ಕೇಂದ್ರಗಳಾಗಿ ಪ್ರಚಾರ ಮಾಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next