Advertisement

“ಬುದ್ಧಿವಂತ-2′ನಿರ್ದೇಶಕ ಬದಲು

09:37 AM Sep 11, 2019 | Lakshmi GovindaRaju |

ಸಿನಿಮಾ ಅಂದಮೇಲೆ ಬದಲಾವಣೆಗಳು ಸಹಜ. ಆಗಾಗ ಏನಾದರೊಂದು ಬದಲಾವಣೆ ಆಗುತ್ತಲೇ ಇರುತ್ತೆ. ಒಂದು ಚಿತ್ರಕ್ಕೆ ಹೀರೋ ಫಿಕ್ಸ್‌ ಆಗಿದ್ದರೆ, ಆ ಚಿತ್ರ ಶುರುವಾಗುವ ಹೊತ್ತಿಗೆ, ಆ ಹೀರೋ ಬದಲಾಗಿ ಮತ್ತೊಬ್ಬ ಹೀರೋ ಬಂದಿರುತ್ತಾನೆ. ಆ ಬದಲಾವಣೆ ನಾಯಕಿಗೂ ಹೊರತಲ್ಲ. ಇನ್ನು, ನಿರ್ದೇಶಕರ ವಿಷಯಕ್ಕೆ ಬಂದರೆ, ಅದೂ ಕೂಡ ಅದೇ ಹಾದಿಯಲ್ಲಿರುತ್ತೆ. ಹೌದು, ಅದೆಷ್ಟೋ ಚಿತ್ರಗಳ ಆರಂಭದಲ್ಲಿ ಇದ್ದ ನಿರ್ದೇಶಕ, ಸಿನಿಮಾ ಇನ್ನೇನು ಶುರುವಾಗುವ ಹೊತ್ತಿಗೆ ಬದಲಾಗಿರುತ್ತಾರೆ.

Advertisement

ಈ ಬದಲಾವಣೆ ಹೊಸದೇನಲ್ಲ. ಆ ಸಾಲಿಗೆ ಈಗ “ಬುದ್ಧಿವಂತ 2′ ಚಿತ್ರದ ನಿರ್ದೇಶಕರು ಸೇರಿದ್ದಾರೆ. ಉಪೇಂದ್ರ ಅಭಿನಯಿಸಲಿರುವ “ಬುದ್ಧಿವಂತ 2′ ಚಿತ್ರವನ್ನು ಡಿ.ಎನ್‌.ಮೌರ್ಯ ನಿರ್ದೇಶಕರು ಎಂಬುದು ಎಲ್ಲರಿಗೂ ಗೊತ್ತಿತ್ತು. ಆದರೆ, ಈಗ ಮೌರ್ಯ “ಬುದ್ಧಿವಂತ 2′ ಚಿತ್ರದಿಂದ ಹೊರಬಂದಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಕೂಡ ನಡೆಯುತ್ತಿದ್ದು, ಈಗ ದಿಢೀರನೆ ನಿರ್ದೇಶಕ ಮೌರ್ಯ ಅವರು ಯಾಕೆ ಹೊರನಡೆದಿದ್ದಾರೆ ಎಂಬುದಕ್ಕೆ ಸ್ಪಷ್ಟ ಉತ್ತರವಿಲ್ಲ.

ಆದರೆ, ಅವರ ಜಾಗಕ್ಕೆ ಹೊಸ ನಿರ್ದೇಶಕ ಜಯರಾಂ ಅವರು ಎಂಟ್ರಿಯಾಗಿದ್ದಾರೆ. ನಿರ್ದೇಶಕ ಮೌರ್ಯ ಹೊರಬಂದಿದ್ದರೂ, ಆ ಚಿತ್ರದ ಕಥೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬ ಮಾತುಗಳೂ ಕೇಳಿಬರುತ್ತಿವೆ. ಜಯರಾಂ ಅವರು ಉಪೇಂದ್ರ ಅಭಿನಯದ “ಐ ಲವ್‌ ಯು’ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಅವರಿಗೆ ಈಗ “ಬುದ್ಧಿವಂತ 2′ ಚಿತ್ರ ನಿರ್ದೇಶನದ ಜವಾಬ್ದಾರಿ ಹೊರಿಸಲಾಗಿದೆ. “ಬುದ್ಧಿವಂತ-2′ ಚಿತ್ರದ ನಿರ್ದೇಶಕ ಬದಲಾಗಿರುವ ಬಗ್ಗೆ ಪ್ರತಿಕ್ರಿಯಿಸುವ ನಿರ್ಮಾಪಕ ಟಿ.ಆರ್‌.ಚಂದ್ರಶೇಖರ್‌, “ಬದಲಾಗಿದ್ದಲ್ಲ.

ಮೌರ್ಯ ಅವರು ವೈಯಕ್ತಿಕ ಕಾರಣಗಳಿಂದ ಹೋಗಿದ್ದಾರೆ. ಹಾಗಾಗಿ, ಚಿತ್ರೀಕರಣ ನಿಲ್ಲಬಾರದೆಂಬ ಕಾರಣಕ್ಕೆ ಆ ಜಾಗಕ್ಕೆ ಜಯರಾಂ ಬಂದಿದ್ದಾರೆ. ಈಗಾಗಲೇ ಮೌರ್ಯ ಅವರು ಒಂದಷ್ಟು ದಿನಗಳ ಚಿತ್ರೀಕರಣ ಮಾಡಿದ್ದಾರೆ. ಮಿಕ್ಕಂತೆ ಸಣ್ಣಪುಟ್ಟ ಬದಲಾವಣೆಯೊಂದಿಗೆ ಚಿತ್ರೀಕರಣ ಮುಂದುವರೆಯುತ್ತದೆ. ಟೈಟಲ್‌ ಕಾರ್ಡ್‌ನಲ್ಲಿ ಮೌರ್ಯ ಅವರ ಹೆಸರು ಕೂಡಾ ಇರುತ್ತದೆ’ ಎನ್ನುತ್ತಾರೆ. ಈ ಚಿತ್ರದಲ್ಲಿ ಉಪೇಂದ್ರ ಅವರು ದ್ವಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರಿಗೆ ಇಬ್ಬರು ನಾಯಕಿಯರಿದ್ದು, ಮೇಘನಾರಾಜ್‌, ಸೋನಾಲ್‌ ಮೊಂತೆರೊ ನಾಯಕಿಯರು.

Advertisement

Udayavani is now on Telegram. Click here to join our channel and stay updated with the latest news.

Next