Advertisement

ಬುದ್ಧಂ “ಚಾರಣಂ’ಗಚ್ಛಾಮಿ

08:59 AM Dec 01, 2019 | Lakshmi GovindaRaj |

“ವಿಷಗಳ ರಾಣಿ’ ಅಂತಲೇ ಕರೆಯಲ್ಪಡುವ ಅಕೊನಿಟಂ ಸಸ್ಯಗಳೇ ತುಂಬಿಕೊಂಡ ಬೆಟ್ಟ ಸಂದಾಕ್ಫು. ನಮ್ಮ ಗೈಡ್‌, ಚಾರಣಕ್ಕೂ ಮೊದಲೇ ದಾರಿಯಲ್ಲಿರುವ ಯಾವುದೇ ಗಿಡಕ್ಕೆ ಕೈ ಹಾಕದಂತೆ ಎಚ್ಚರಿಸಿದ್ದ…

Advertisement

ನಾವು ಗೆಳೆಯರೆಲ್ಲ ಪಶ್ಚಿಮ ಬಂಗಾಳ ಮತ್ತು ನೇಪಾಳದ ಗಡಿಯಲ್ಲಿರುವ “ಸಂದಾಕ್ಫು’ ಬೆಟ್ಟ ಏರಲು ಹೋಗಿದ್ದೆವು. ಸಮುದ್ರ ಮಟ್ಟದಿಂದ 11930 ಅಡಿ ಎತ್ತರದಲ್ಲಿರುವ ಪುಟ್ಟ ಗ್ರಾಮ. “ಸಂದಾಕ್ಫು’ ಎಂದರೆ ಅಲ್ಲಿನ ಸ್ಥಳೀಯ ಭಾಷೆಯಲ್ಲಿ “ವಿಷಕಾರಿ ಸಸ್ಯಗಳ ನಾಡು’ ಎಂದರ್ಥ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಈ ಪ್ರದೇಶದಲ್ಲಿ ದಟ್ಟವಾಗಿ ಬೆಳೆಯುವ “ಅಕೊನಿಟಂ’ (Aconitum) ಎಂಬ ಸಸ್ಯ ಅತ್ಯಂತ ವಿಷಕಾರಿ. ಅದರಿಂದಲೇ ಊರಿಗೆ ಹೆಸರು ಬಂತು. ಇಲ್ಲಿ ಪ್ರತಿ ಹೆಜ್ಜೆ ಇಡುವಾಗಲೂ, ಇದೇ ಕೊನೆಯ ಹೆಜ್ಜೆಯೇನೋ ಎನ್ನುವ ಆತಂಕ ಆಗಾಗ್ಗೆ ಕಂಪಿಸುವಂತೆ ಮಾಡುತ್ತದೆ.

ಅಕೊನಿಟಂ! ನೋಡಲು ಸುಂದರ ನೇರಳೆ ಬಣ್ಣದ ಹೂ ಬಿಡುವ ಸಸ್ಯ. ಇದರ ಹಸನ್ಮುಖದ ಹಿಂದೆ ಅಡಗಿಸಿಕೊಂಡಿರುವ ಹಾಲಾಹಲವೇ ಭಯಂಕರ. ಆದ್ದರಿಂದಲೇ ನಮ್ಮ ಗೈಡ್‌, ಚಾರಣಕ್ಕೂ ಮೊದಲೇ ದಾರಿಯಲ್ಲಿರುವ ಯಾವುದೇ ಗಿಡಕ್ಕೆ ಕೈ ಹಾಕದಂತೆ ಎಚ್ಚರಿಸಿದ್ದ. ಸುಮಾರು 250 ಪ್ರಭೇದಗಳನ್ನು ಹೊಂದಿರುವ ಅಕೊನಿಟಂ, ಅಲ್ಲಲ್ಲಿ ಗಾಳಿಗೆ ತೊನೆದಾಡುತ್ತಲೇ ಇತ್ತು. ಒಂದು ಮೀಟರ್‌ ಎತ್ತರದ “ವಿಷಗಳ ರಾಣಿ’ ಇದು. ಹಿಂದೆಯೆಲ್ಲ, ಗಿಡದ ರಸವನ್ನು ಭರ್ಜಿಯ ತುದಿಗೆ ಲೇಪಿಸಿ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದರಂತೆ.

ಗ್ರೀಕ್‌ನ ಕಾಲ್ಪನಿಕ ಜಗತ್ತಿನಲ್ಲಿ, ನಮ್ಮ ಬೆಂಗಾಳಿ ಕತೆಗಳಲ್ಲಿ, ಶೇಕ್ಸ್‌ಪಿಯರ್‌ನ ನಾಟಕಗಳಲ್ಲಿ, ಜಪಾನ್‌ ಮತ್ತು ಚೀನಾದ ಪುರಾಣ ಕಥನಗಳಲ್ಲಿ ಈ ಸಸ್ಯ ತನ್ನದೇ ಕಿತಾಪತಿ ಮಾಡುವ ದೃಶ್ಯಗಳೇಕೋ ಹೆಜ್ಜೆ ಹೆಜ್ಜೆಗೂ ಕಾಡಿದ್ದವು. ಇದು ಮನುಷ್ಯನ ನರಮಂಡಲಕ್ಕೆ ನೇರವಾದ ಪರಿಣಾಮ ಬೀರಿ, ಕೆಲವೇ ಗಂಟೆಗಳಲ್ಲಿ ಸಾವು ತಂದೊಡ್ಡುತ್ತದೆ. ಸ್ಪರ್ಶದಿಂದ ಸಾವು ಸಂಭವಿಸದಿದ್ದರೂ ತಲೆನೋವು, ವಾಕರಿಕೆ, ಎದೆಬಡಿತ ಜೋರಾಗುವ ಇತ್ಯಾದಿ ಪರಿಣಾಮಗಳಂತೂ ಕೆಲವು ಗಂಟೆಗಳ ಕಾಲ ಆಗುತ್ತದೆ ಎನ್ನುತ್ತಾರೆ ಸ್ಥಳೀಯರು.

ಅಮೆರಿಕದ ಅಲಾಸ್ಕಾದ ಮೂಲನಿವಾಸಿಗಳು ಬೃಹದಾಕಾರದ ತಿಮಿಂಗಲಗಳನ್ನು ಬೇಟೆಯಾಡಲು ಬಾಣಗಳ ತುದಿಗೆ ಅಕೊನಿಟಂನ ರಸವನ್ನು ಲೇಪಿಸಿ, ಪ್ರಯೋಗಿಸುತ್ತಿದ್ದರು. ಆ ತುಣುಕು ವಿಷದ ಆರ್ಭಟಕ್ಕೆ, ಬೃಹತ್‌ ತಿಮಿಂಗಿಲಗಳು ಪಾರ್ಶ್ವವಾಯುವಿಗೆ ತುತ್ತಾಗಿ, ಈಜಲಾಗದೆ, ಮುಳುಗಿ ಸಾಯುತ್ತಿದ್ದವು. ಲಡಾಖ್‌ನಲ್ಲಿ ಪರ್ವತಾರೋಹಿ ಮೇಕೆಗಳನ್ನೂ, ಜಪಾನ್‌ನಲ್ಲಿ ಕರಡಿಗಳನ್ನೂ ಬೇಟೆಯಾಡಲು ಬಳಕೆ ಆಗುವುದು, ಇದೇ “ಅಕೊನಿಟಂ’ ವಿಷವೇ. ಅಕೋನಿಟಂ ಸಾಮ್ರಾಜ್ಯದಂತಿದ್ದ “ಸಂದಾಕ್ಫು’ ಶಿಖರದ ತುದಿಯಲ್ಲಿ ನಿಂತಾಗ, ಕಂಡ ಸ್ವರ್ಗವೇ ಬೇರೆಯಾಗಿತ್ತು.

Advertisement

ಆ ತುದಿಯಿಂದ, ಅರುಣೋದಯವನ್ನು ನೋಡಲು, ಇಡೀ ರಾತ್ರಿ ಅಲ್ಲಿಯೇ ಕಳೆದೆವು. ಬೆಳಗ್ಗೆ 4.30ಕ್ಕೇ ಸೂರ್ಯ, ಹೊಂಬಣ್ಣದ ಆಗಸದ ಬಟ್ಟಲನ್ನು ಹೊತ್ತುಕೊಂಡು ಬಂದ. ಮಂಜಿನ ಮಹಾಸಾಗರದಿಂದ, ಸೂರ್ಯ ಮಜ್ಜಿಗೆಯೊಳಗಿನ ಬೆಣ್ಣೆಯಂತೆ ಮೊದ ಮೊದಲು ತೋರಿದ್ದ. ಅದನ್ನು ನೋಡಿದ್ದೇ, ನಾಲ್ಕು ದಿನಗಳ ನಮ್ಮ ಚಾರಣದ ನೋವೆಲ್ಲ ಕರಗಿತು. ಅಪರೂಪದ ಅರುಣೋದಯದ ಜತೆಜತೆಗೇ ಆ ಬೆಳಕು, ಬುದ್ಧನನ್ನೂ ಎದುರು ತೋರಿಸಿತ್ತು. “ಸಂದಾಕ್ಫು’ವಿನ ತುದಿಯಲ್ಲಿ ನಿಂತಾಗ, ಮೌಂಟ್‌ ಎವರೆಸ್ಟ್‌ ಸೇರಿದಂತೆ ಜಗತ್ತಿನ 5 ಅತಿ ಎತ್ತರದ ಪರ್ವತಶ್ರೇಣಿಗಳಲ್ಲಿ ನಾಲ್ಕು ಪರ್ವತಗಳು ಒಟ್ಟಿಗೆ ಕಾಣಿಸುತ್ತವೆ.

ಮೌಂಟ್‌ ಎವರೆಸ್ಟ್‌, ಕಾಂಚನಜುಂಗಾ, ಲ್ಹೋತ್ಸೆ ಮತ್ತು ಮಕಾಲು ಪರ್ವತಶ್ರೇಣಿಗಳು ಮಲಗಿದ ಬುದ್ಧನಂತೆ ಗೋಚರವಾಗುತ್ತವೆ. ಸ್ಥಳೀಯರು ಈ ದೃಶ್ಯಕ್ಕೆ “ಸ್ಲಿಪಿಂಗ್‌ ಬುದ್ಧ’ ಎಂದೇ ಕರೆಯುತ್ತಾರೆ. ನೀವು ಚಿತ್ರವನ್ನು ಗಮನಿಸಿದರೆ, ಎಡತುದಿಗೆ ತಲೆ, ಮಧ್ಯದಲ್ಲಿ ಹೊಟ್ಟೆ ಮತ್ತು ಬಲತುದಿಯಲ್ಲಿ ಕಾಲಿನ ಆಕಾರ ಇರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಬುದ್ಧನ ನಿದಿರೆಯ ಸೊಬಗನ್ನು ತೃಪ್ತಿಯಾಗುವಷ್ಟು ನೋಡಿ, ಅಲ್ಲಿಂದ ಹೊರಟೆವು.

* ಸುಚಿತ್‌ ರಾಜು, ದಾವಣಗೆರೆ

Advertisement

Udayavani is now on Telegram. Click here to join our channel and stay updated with the latest news.

Next