Advertisement

525 ಮೀಟರ್‌ವರೆಗೂ ಕಟ್ಟಡಗಳ ಸ್ವಾಧೀನ

04:19 PM Sep 05, 2020 | Suhan S |

ಬಾಗಲಕೋಟೆ: ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಮುಳುಗಡೆ ಆಗುವ 525 ಮೀಟರ್‌ ವ್ಯಾಪ್ತಿಯ ಕಟ್ಟಡಗಳ ಸ್ವಾಧೀನಕ್ಕೆ ಬಿಟಿಡಿಎ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಬಿಟಿಡಿಎ ಅಧ್ಯಕ್ಷರೂ ಆಗಿರುವ ಶಾಸಕ ಡಾ|ವೀರಣ್ಣ ಚರಂತಿಮಠ ಹೇಳಿದರು.

Advertisement

ಗುರುವಾರ ಬಿಟಿಡಿಎ 136ನೇ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‌.ಎಲ್‌ 523 ರಿಂದ 525 ಮೀಟರ್‌ವರೆಗಿನ ಕಟ್ಟಡ ಸ್ವಾಧೀನಪಡಿಸಿಕೊಂಡು ಪರಿಹಾರ ನೀಡಲಾಗುವುದು. ಈ ವ್ಯಾಪ್ತಿಯ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಯೂನಿಟ್‌-3ರ ನಿರ್ಮಾಣದ ನೀಲನಕ್ಷೆಗೆಶೀಘ್ರವೇ ಸರ್ಕಾರ ಅನುಮೋದನೆ ನೀಡಲಿದೆ ಎಂದು ತಿಳಿಸಿದರು.

ಯೂನಿಟ್‌-3ರ ವ್ಯಾಪ್ತಿಯಲ್ಲಿ ಕೈಗೊಂಡ ಸಮೀಕ್ಷೆಯನ್ವಯ 2421 ಮಾಲೀಕರು ಹಾಗೂ 1163 ಬಾಡಿಗೆದಾರು ಸಂತ್ರಸ್ತರಾಗಿದ್ದು, ಈ ವ್ಯಾಪ್ತಿಯ ಸಂತ್ರಸ್ತರಿಗೆ ನವನಗರದ ಯೂನಿಟ್‌-3ರಲ್ಲಿ ಪುನರ್ವಸತಿ ಕಲ್ಪಿಸಲಾಗುವುದು. ಇದಕ್ಕಾಗಿ 1640 ಎಕರೆ ಜಮೀನು ಬಾಗಲಕೋಟೆ ಮುಚಖಂಡಿ ತಾಂಡಾ ಹಾಗೂ ಸಿಗಿಕೇರಿ ಗ್ರಾಮಗಳ ಜಮೀನು ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದ್ದು, ಅದರಲ್ಲಿ 1224.05 ಎಕರೆ ಭೂಮಿ ಈಗಾಗಲೇ ಸ್ವಾಧೀನಪಡಿಸಿಕೊಳ್ಳಲಾಗಿದೆ. 278 ಎಕರೆ ಭೂ ಮಾಲೀಕರು ಕೋರ್ಟ್‌ ಮೊರೆ ಹೋಗಿದ್ದು, ಅದೂ ಶೀಘ್ರವೇ ಇತ್ಯರ್ಥಗೊಳ್ಳಲಿದೆ. ಆ ಭೂಮಿಯೂ ಸೇರಿ 1640 ಎಕರೆ ಪ್ರದೇಶದಲ್ಲಿ ಯೂನಿಟ್‌-3 ನಿರ್ಮಾಣಕ್ಕೆ ನೀಲನಕ್ಷೆ ತಯಾರಿಸಲಾಗಿದೆ ಎಂದು ಹೇಳಿದರು.

ಯೂನಿಟ್‌-3ರನ್ನು 300 ರಿಂದ 500 ಎಕರೆಗೆ 1 ಬ್ಲಾಕ್‌ದಂತೆ ಆಧುನಿಕ ಮಾದರಿಯ 5 ಬ್ಲಾಕ್‌ಗಳನ್ನೊಳಗೊಂಡ ಲೇಔಟ್‌ ಪ್ಲಾ Âಲ್‌ ತಯಾರಿಸಿದ್ದು, ನಗರ ಯೋಜನಾ ಇಲಾಖೆಗೆ ಅನುಮೋದನೆಗೆಸಲ್ಲಿಸಲಾಗಿದೆ. ಅದು ಅನುಮೋದನೆ ಹಂತದಲ್ಲಿದ್ದು, 12.27 ಕೋಟಿ ರೂ. ಶುಲ್ಕ ಪಾವತಿಸಲು ನಗರ ಯೋಜನಾ ಪ್ರಾಧಿಕಾರವು ತಿಳಿಸಿದ್ದು, ಈ ಶುಲ್ಕಕ್ಕೆ ವಿನಾಯಿತಿ ಕೋರಿ ಜಲಸಂಪನ್ಮೂಲ ಇಲಾಖೆ ಮುಖಾಂತರ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಶುಲ್ಕ ವಿನಾಯಿತಿ ನೀಡಿದ್ದು, ಈಗ 9.45 ಕೋಟಿ ರೂ. ಪಾವತಿಸಲಾಗಿದ್ದು, ಯೂನಿಟ್‌-3ರ ನೀಲನಕ್ಷೆಗೆ ಶೀಘ್ರವೇ ಅನುಮೋದನೆ ದೊರೆಯಲಿದೆ ಎಂದರು.

ಯೂನಿಟ್‌-1ರ ಆರ್‌.ಎಲ್‌. 521 ಮೀಟರ್‌ ವ್ಯಾಪ್ತಿಯಲ್ಲಿ ಬರುವ 4585 ಯೋಜನಾ ಸಂತ್ರಸ್ತರನ್ನು ಸ್ಥಳಾಂತರಿಸಿ ನವನಗರದ ಯೂನಿಟ್‌-1ರಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ಯೂನಿಟ್‌ -1ರ ನವೀಕರಣ ಮತ್ತು ದುರಸ್ತಿ ಕಾಮಗಾರಿ ಕೈಗೊಳ್ಳಲು 133 ಕೋಟಿ ರೂ.ಗಳೊಂದಿಗೆ ನಗರಸಭೆಗೆ ಹಸ್ತಾಂತರಿಸಲಾಗಿತ್ತು. ಸರಕಾರದ ಆದೇಶದನ್ವಯ ಆ ಹಣವನ್ನು ಮರಳಿ ಅದರ ಮೇಲಿನ ಆಕರಿಸಿದ ಬಡ್ಡಿಯ ಸಮೇತ ಪ್ರಾಧಿಕಾರಕ್ಕೆ ಪಡೆದುಕೊಳ್ಳಲಾಗಿದೆ. ಸರಕಾರದ ಆದೇಶದನ್ವಯ 150 ಕೋಟಿ ರೂ.ಗಳಿಗೆ ಮೀರದಂತೆ ನವನಗರದ ಯುನಿಟ್‌ -1ರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ. ಶೀಘ್ರವೇ ಕಾಮಗಾರಿ ಕೈಗೊಳ್ಳಲಾಗುವುದು ಎಂದು ವಿವರಿಸಿದರು.

Advertisement

ಯೂನಿಟ್‌-2ರ ವ್ಯಾಪ್ತಿಯ ಸಂತ್ರಸ್ತರ ಕುಟುಂಬಗಳನ್ನು ನವನಗರದ ಯೂನಿಟ್‌-2ರಲ್ಲಿ ಪುನರ್ವಸತಿ ಕಲ್ಪಿಸಲು ಉದ್ದೇಶಿಸಿದ್ದು, ಬಿಟಿಡಿಎ ವ್ಯಾಪ್ತಿಯಲ್ಲಿ ಬರುವ 1333 ಎಕರೆ ಪ್ರದೇಶದಲ್ಲಿ ಈಗಾಗಲೇ 53 ಸೆಕ್ಟರ್‌ ಗಳನ್ನು ಗುರುತಿಸಿದ್ದು, ಅದರಲ್ಲಿ 42 ಸೆಕ್ಟರ್‌ ವಸತಿಗಾಗಿ, 6 ಸೆಕ್ಟರ್‌ಗಳನ್ನು ಸರಕಾರಿ, ಅರೆ ಸರಕಾರಿ, ಸಂಸ್ಥೆಗಳು ಇತ್ಯಾದಿಗಳಿಗೆ ಮೀಸಲಿಡಲಾಗಿದೆ. 36 ವಸತಿ ಸೆಕ್ಟರ್‌ ಗಳಲ್ಲಿ ಮೂಲ ಸೌಕರ್ಯಗಳಾದ ರಸ್ತೆ, ಮಳೆ ನೀರು ಚರಂಡಿ, ನೀರು ಸರಬರಾಜು, ಒಳಚರಂಡಿ, ವಿದ್ಯುತ್ತೀಕರಣ ಅಭಿವೃದ್ಧಿ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿವೆ ಎಂದು ತಿಳಿಸಿದರು.

ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಕುಮಾರ ಯಳ್ಳಿಗುತ್ತಿ, ಮೋಹನ ನಾಡಗೌಡ, ಶಿವಾನಂದ ಟವಳಿ, ಮಾಜಿ ಸಭಾಪತಿಗಳಾದಪ್ರಕಾಶ ತಪಶೆಟ್ಟಿ, ಜಿ.ಎನ್‌. ಪಾಟೀಲ, ಮುಖ್ಯ ಎಂಜಿನಿಯರ್‌ ಅಶೋಕ ವಾಸನದ ಮುಂತಾದವರು ಹಾಜರಿದ್ದರು.

ಬಿಟಿಡಿಎ ವಾಣಿಜ್ಯ ಮಳಿಗೆ ಬಾಡಿಗೆ ವಸೂಲಿ, ಸರ್ಕಾರಿ ಶಾಲೆ ಕಟ್ಟಡಗಳಿಗೆ ಜಾಗೆ ಹಂಚಿಕೆ ಕುರಿತ ಪರಿಶೀಲನೆ ಸಹಿತ ವಿವಿಧ ಉದ್ದೇಶಕ್ಕಾಗಿ ಮೂರು ಸಮಿತಿ ರಚಿಸಲಾಗಿದೆ. ಹಿಂದಿನ ಆರು ವರ್ಷಗಳ ಅವಧಿಯಲ್ಲಿ ಬಿಟಿಡಿಎನಲ್ಲಿ ಬಹಳಷ್ಟು ಅವ್ಯವಹಾರ, ಗೊಂದಲಗಳಾಗಿದ್ದು, ಅವುಗಳನ್ನು ಸರಿಪಡಿಸುವ ದೊಡ್ಡ ಸವಾಲು ನಮ್ಮ ಮುಂದಿದೆ. ನಮ್ಮ ಅವಧಿಯಲ್ಲಿ ಯಾವುದೇ ಮಧ್ಯವರ್ತಿಗಳಿಗೆ ಅವಕಾಶ ಕೊಡುವುದಿಲ್ಲ. ನಿವೇಶನ ಬದಲಾವಣೆ ಎಂಬುದೇ ದೊಡ್ಡ ಹಗರಣ ನಡೆಯುತ್ತಿದ್ದು, ಅದಕ್ಕೆ ಬ್ರೇಕ್‌ ಹಾಕಲಾಗಿದೆ.  -ಡಾ|ವೀರಣ್ಣ ಚರಂತಿಮಠ, ಶಾಸಕರು ಹಾಗೂ ಅಧ್ಯಕ್ಷರು ಬಿಟಿಡಿಎ

Advertisement

Udayavani is now on Telegram. Click here to join our channel and stay updated with the latest news.

Next