Advertisement

ಕಾಂಗ್ರೆಸ್‌ ಮುಕ್ತ ಕರ್ನಾಟಕಕ್ಕೆ ಬಿಎಸ್‌ವೈ ಸಾರಥಿ

12:10 PM May 29, 2017 | |

ಬೆಂಗಳೂರು: ಹಳ್ಳಿಗಳಿಗೂ ಮೂಲಭೂತ ಸೌಕರ್ಯ ಒದಗಿಸುವುದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಮಹತ್ವಾಕಾಂಕ್ಷೆಯ ಪಥದಲ್ಲಿ ಸಾಗುತ್ತಿದ್ದು, ಕರ್ನಾಟಕವನ್ನು ಈ ಪಥದಲ್ಲಿ ಸೇರಿಸಿಕೊಳ್ಳಬೇಕಿದೆ. ಅದಕ್ಕಾಗಿ ಬಿ.ಎಸ್‌. ಯಡಿಯೂರಪ್ಪ ಅವರ ನಾಯಕತ್ವದೊಂದಿಗೆ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಮುಕ್ತ ಕರ್ನಾಟಕ ನಿರ್ಮಾಣ ಮಾಡಬೇಕೆಂದು ಕೇಂದ್ರ ಹಣಕಾಸು ಮತ್ತು ರಕ್ಷಣಾ ಸಚಿವ ಅರುಣ್‌ ಜೇಟ್ಲಿ ಹೇಳಿದರು.

Advertisement

ಕೇಂದ್ರ ಸರ್ಕಾರವು ಮೂರು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ವತಿಯಿಂದ ಭಾನುವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಬ್‌ ಕಾ ಸಾಥ್‌-ಸಬ್‌ ಕಾ ವಿಕಾಸ್‌ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಸದ್ಯ ಕಾಂಗ್ರೆಸ್‌ಗೆ ಕರ್ನಾಟಕವೊಂದೇ ಆಶಾಕಿರಣ. ಆದರೆ, ಕಾಂಗ್ರೆಸ್‌ನ ಈ ಪ್ರಯತ್ನಕ್ಕೆ ತಿರುಗೇಟು ನೀಡುವ ಸವಾಲು ರಾಜ್ಯ ಬಿಜೆಪಿ ಮುಂದಿದೆ. ಈ ಸವಾಲು ಎದುರಿಸಿ, ಕರ್ನಾಟಕವನ್ನು ಕಾಂಗ್ರೆಸ್‌ ಮುಕ್ತಗೊಳಿಸುವ ಮೂಲಕ ರಾಜ್ಯ ಮತ್ತು ದೇಶವನ್ನು ಇನ್ನಷ್ಟು ಸದೃಢಗೊಳಿಸಲು ಸಹಕರಿಸಿ ಎಂದು ಕರೆ ನೀಡಿದರು.

ಕೇಂದ್ರ ಸರ್ಕಾರವು ಜನರ ವಿಶ್ವಾಸಾರ್ಹತೆ ಮತ್ತು ನಂಬಿಕೆ ಉಳಿಸಿಕೊಂಡು ಸಾಗುತ್ತಿದೆ. ಸವಾಲುಗಳನ್ನು ಎದುರಿಸಿ, ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಪ್ರಧಾನ ಮಂತ್ರಿ ನಮ್ಮ ಜತೆಗಿದ್ದಾರೆ ಎಂದು ಹೇಳಿದರು.

500 ಮತ್ತು 1000 ಮುಖಬೆಲೆಯ ನೋಟು ರದ್ದು ಮಾಡಿದ ಸಂದರ್ಭದಲ್ಲಿ ಭಾರತ ಆರ್ಥಿಕತೆ ಸಂಪೂರ್ಣ ಕುಸಿಯುತ್ತದೆ. ಇದರಿಂದ ಜನ ಸಾಮಾನ್ಯರಿಗೆ ನೇರ ಪರಿಣಾಮ ಬೀರಲಿದೆ ಎಂದು ಆರ್ಥಿಕ ತಜ್ಞರು, ಮಾಧ್ಯಮದವರು ಹೀಗೆ ಎಲ್ಲರೂ ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡಿದರು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ.

Advertisement

ದೇಶದ ಆರ್ಥಿಕತೆ ಕ್ಷಿಪ್ರವಾಗಿ ಸಾಗುತ್ತಿದೆ. ಡಿಜಿಟಲ್‌ ಬ್ಯಾಂಕಿಂಗ್‌ ಸದೃಢಗೊಳ್ಳುತ್ತಿದೆ. ಭ್ರಷ್ಟಾಚಾರ
ಮುಕ್ತ ಭಾರತವಾಗುತ್ತಿದೆ. ತೆರಿಗೆ ಪಾವತಿಸುವವರ ಸಂಖ್ಯೆ ಹೆಚ್ಚಾಗಿದೆ. ನಗದು ಮೂಲಕ ಹೆಚ್ಚಿನ ವಹಿವಾಟು ಅಪಾಯ ಎನ್ನುವುದು ಎಲ್ಲರಿಗೂ ಮನವರಿಕೆಯಾಗುತ್ತಿದೆ. ನೋಟು ರದ್ದತಿಯಿಂದ ವೋಟು ಕಳೆದುಕೊಂಡಿಲ್ಲ. ಬದಲಾಗಿ
ಆರ್ಥಿಕತೆಯನ್ನು ಬಲ ಪಡಿಸಿದ್ದೇವೆಂದು ಕೇಂದ್ರದ ಸಾಧನೆಯನ್ನು ವಿವರಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತ್‌ ಕುಮಾರ್‌, ಡಿ.ವಿ.ಸದಾನಂದಗೌಡ, ರಾಜ್ಯ ಉಸ್ತುವಾರಿ ಮುರಳೀಧರ್‌ ರಾವ್‌ ಮೊದಲಾದವರು ಉಪಸ್ಥಿತರಿದ್ದರು
 
ಜು.1ರಿಂದ ಬಿಜೆಪಿ ರಣತಂತ್ರ ಸಭೆ
ಬೆಂಗಳೂರು
: ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ಗೆ ಸೆಡ್ಡು ಹೊಡೆಯಲು ಮುಂದಾಗಿರುವ ಪ್ರಮುಖ ಪ್ರತಿಪಕ್ಷ ಬಿಜೆಪಿ ಮುಂಬರುವ ವಿಧಾನಸಭೆ ಚುನಾವಣೆಗೆ ರಣತಂತ್ರ ರೂಪಿಸಲು ಜುಲೈ 1 ಮತ್ತು 2ರಂದು ಬೆಂಗಳೂರಿನಲ್ಲಿ ಚುನಾವಣಾ ನಿರ್ವಹಣಾ ಸಭೆ ನಡೆಸಲು ತೀರ್ಮಾನಿಸಿದೆ. ಮಲ್ಲೇಶ್ವರದಲ್ಲಿರುವ ಬಿಜೆಪಿ ರಾಜ್ಯ ಕಚೇರಿಯಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ಮುರಳೀಧರರಾವ್‌ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಕೋರ್‌ ಕಮಿಟಿ ಸಭೆಯಲ್ಲಿ ಈ ಕುರಿತು ತೀರ್ಮಾನ ತೆಗೆದುಕೊಳ್ಳಲಾಗಿದೆ.

ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ಬದಲಾಗಿ ವೇಣುಗೋಪಾಲ್‌ ಅಧಿಕಾರ ಸ್ವೀಕರಿಸಿದ ಮೇಲೆ ಕೆಪಿಸಿಸಿ ಚುನಾವಣಾ ಸಿದ್ಧತೆಗಳನ್ನು ಆರಂಭಿಸಿದೆ. ಇನ್ನೊಂದೆಡೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಪ್ರಕ್ರಿಯೆಯೂ ಆರಂಭವಾಗಿದೆ. ಈ ಎರಡೂ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಯಡಿಯೂರಪ್ಪ ಅವರ ರಾಜ್ಯ ಪ್ರವಾಸ ಮುಗಿದ ತಕ್ಷಣವೇ ಚುನಾವಣಾ ರಣತಂತ್ರ ಹೆಣೆಯಲು ಈ ಸಭೆ ಕರೆಯಲು ತೀರ್ಮಾನಿಸಲಾಗಿದೆ. ಇದರ ಜತೆಗೆ ಬಳ್ಳಾರಿಯಲ್ಲಿ ಜುಲೈ 22 ಮತ್ತು 23ರಂದು ನಡೆಯಬೇಕಿದ್ದ ರಾಜ್ಯ ಕಾರ್ಯಕಾರಿಣಿಯನ್ನು ಬೆಂಗಳೂರಿನಲ್ಲಿ ನಡೆಸುವ ಮೂಲಕ ತನ್ನ ಶಕ್ತಿಪ್ರದರ್ಶನಕ್ಕೆ ಮುಂದಾಗಿದೆ.

ಸಭೆ ಬಳಿಕ ಸುದ್ದಿಗಾರರಿಗೆ ಈ ಕುರಿತು ಮಾಹಿತಿ ನೀಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ, ಜುಲೈ 1 ಮತ್ತು 2ರಂದು ಬೆಂಗಳೂರಿನಲ್ಲಿ ಚುನಾವಣಾ ನಿರ್ವಹಣಾ ಸಭೆ ನಡೆಯಲಿದೆ. ಅಲ್ಲದೆ, ಬಿಜೆಪಿ ರಾಷ್ಟ್ರೀಯ
ಕಾರ್ಯಕಾರಿಣಿ ಜೂ. 15 ಮತ್ತು 16ರಂದು ವಿಶಾಖಪಟ್ಟಣದಲ್ಲಿ ನಡೆಯಲಿದ್ದು, ಇದಾದ ಬಳಿಕ ಜುಲೈ 22 ಮತ್ತು 23ರಂದು ರಾಜ್ಯ ಕಾರ್ಯಕಾರಿಣಿಯನ್ನು ಬಳ್ಳಾರಿಯ ಬದಲು ಬೆಂಗಳೂರಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ
ಎಂದು ಹೇಳಿದರು. ರಾಜ್ಯ ಬಿಜೆಪಿಯಲ್ಲಿ ಅಸಮಾಧಾನಕ್ಕೆ ಕಾರಣವಾಗಿದ್ದ ಪದಾಧಿಕಾರಿಗಳ ನೇಮಕ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಹೊಸ ಪದಾಧಿಕಾರಿಗಳ ನೇಮಕದ ಬಗ್ಗೆ ಕೋರ್ಕ ಮಿಟಿ ಸಭೆಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

ಚುನಾವಣೆಗೆ ಪೂರ್ವಸಿದ್ಧತೆ ಆರಂಭ
ಬೆಂಗಳೂರು
: ಮುಂಬರುವ ವಿಧಾನಸಭಾ ಚುನಾವಣೆಗೆ ಈಗಾಗಲೇ ಪೂರ್ವಸಿದ್ಧತೆ ಆರಂಭಿಸಿರುವ ಬಿಜೆಪಿ, ಇದೀಗ ಪಕ್ಷದ ವಿವಿಧ ಮೋರ್ಚಾಗಳನ್ನು ಆ ನಿಟ್ಟಿನಲ್ಲಿ ಸಂಘಟಿಸುವ ಕಾರ್ಯಕ್ಕೆ ಚಾಲನೆ ನೀಡಿದೆ. ಭಾನುವಾರ ಒಂದೇ ದಿನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಯುವ ಮೋರ್ಚಾ ಮತ್ತು ರೈತ
ಮೋರ್ಚಾ ಕಾರ್ಯಕಾರಿಣಿ ನಡೆಸಲಾಗಿದೆ. ಅಲ್ಲದೆ, ಇಡೀ ದಿನ ಯುವ ಸಂಪರ್ಕ ಅಭಿಯಾನ ಆಯೋಜಿಸಲಾಗಿತ್ತು. ಜತೆಗೆ ಪಕ್ಷದ ಮಾಧ್ಯಮ ಪ್ರಮುಖ್‌ಗಳಿಗೆ ಮಾಧ್ಯಮ ಕಾರ್ಯಾಗಾರವನ್ನೂ ಏರ್ಪಡಿಸಲಾಗಿತ್ತು. ಬೆಳಗ್ಗೆ ರಾಜ್ಯ ರೈತ ಮೋರ್ಚಾ ಕಾರ್ಯಕಾರಿಣಿಗೆ ಚಾಲನೆ ನೀಡಿ ಮಾತನಾಡಿದ ಯಡಿಯೂರಪ್ಪ, ಬರದಿಂದ ಬಸವಳಿದಿರುವ ರಾಜ್ಯದ ರೈತರ ಹಿತಕಾಪಾಡುವ, ಅವರ ದನಿಗೆ ದನಿಯಾಗುವ ಗುರುತರ ಹೊಣೆಗಾರಿಕೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ನಿಟ್ಟಿನಲ್ಲಿ ಪದಾಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು. ನಂತರ ಮಾಧ್ಯಮ ಕಾರ್ಯಾಗಾರ ಉದ್ಘಾಟಿಸಿ, ದಲಿತರ ಮನೆಯಲ್ಲಿ ಬಿಜೆಪಿ ನಾಯಕರು ಊಟ-ಉಪಾಹಾರ ಸೇವಿಸುವುದನ್ನು ವಿರೋಧಿಸುವವರಿಗೆ ಸಾಮಾನ್ಯ ಜ್ಞಾನವೂ ಇಲ್ಲ. ಇದನ್ನು ಸಹಿಸದ ಪ್ರತಿಪಕ್ಷಗಳು ನನ್ನ ವಿರುದ್ಧ ಕಲ್ಪನೆಗೂ ನಿಲುಕದ ಅಪಪ್ರಚಾರ ಮಾಡಿದರಾದರೂ ಅದನ್ನು ಪರಿಣಾಮಕಾರಿಯಾಗಿ ಎದುರಿಸಿದೆ. ಅದೇ ರೀತಿ ಮಾಧ್ಯಮ ವಿಭಾಗವೂ ಬಿಜೆಪಿ ವಿರುದ್ಧದ ಟೀಕೆಗಳಿಗೆ ಪರಿಣಾಮಕಾರಿ ಪ್ರತಿಕ್ರಿಯೆ ಕೊಟ್ಟು ಎದುರಾಳಿಗಳ ಬಾಯಿ ಮುಚ್ಚಿಸಬೇಕು ಎಂದು ಕರೆ ನೀಡಿದರು.

ಸಾಧನಾ ಸಮಾವೇಶಗಳ ಪಟ್ಟಿ ಪ್ರಕಟ
ಬೆಂಗಳೂರು
: ಬಿಜೆಪಿ ವತಿಯಿಂದ ರಾಜ್ಯದಲ್ಲಿ ಕೈಗೊಂಡಿರುವ “ಸಬ…ಕಾ ಸಾಥ್‌- ಸಬ… ಕಾ ವಿಕಾಸ್‌’ ಹೆಸರಿನ 33 ಸಾಧನಾ ಸಮಾವೇಶಗಳ ಸ್ಥಳ ನಿಗದಿಯಾಗಿದ್ದು, ಸಭೆಯಲ್ಲಿ ಪಾಲ್ಗೊಳ್ಳಲಿರುವ ಗಣ್ಯರ ಪಟ್ಟಿಯೂ ಸಿದ್ಧವಾಗಿದೆ. ಪಾಲ್ಗೊಳ್ಳಲಿರುವ ಕೇಂದ್ರ ಸಚಿವರು: ಕೃಷ್ಣನ್‌ಪಾಲ್‌ ಗುರ್ಜರ್‌ ಅವರು ಮೇ 30ರಂದು ಮೈಸೂರಿನಲ್ಲಿ, ಪಿ.ಪಿ.ಚೌಧರಿ- ಜೂ. 6 ಹಾಸನ, ಜೂ. 7 ದಕ್ಷಿಣ ಕನ್ನಡ, ಪಿಯೂಷ್‌ ಗೋಯಲ್‌- ಜೂ. 7 ಮತ್ತು 8ರಂದು ಬೆಂಗಳೂರು ದಕ್ಷಿಣ, ಡಾ.ಹರ್ಷವರ್ದನ್‌- ಜೂ. 12ರಂದು ಬೆಂಗಳೂರು ಉತ್ತರ, ರಾಜವರ್ಧನ್‌ ರಾಥೋಡ್‌- ಜೂ. 12 ಮತ್ತು 13ರಂದು ಬೆಳಗಾವಿ, ನಿರ್ಮಲಾ ಸೀತಾರಾಮನ್‌- ಜೂ. 14 ಚಿಕ್ಕಮಗಳೂರು, ಜೂ. 15 ಉಡುಪಿ ಜಿಲ್ಲೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಅನಂತಕುಮಾರ್‌ ಅವರು ಬಳ್ಳಾರಿಯಲ್ಲಿ ಮತ್ತು ಡಿ.ವಿ.ಸದಾನಂದಗೌಡ ಅವರು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಾರ್ಯಕ್ರಮ ನಡೆಸಲಿದ್ದು, ದಿನಾಂಕ ನಿಗದಿಯಾಗಿಲ್ಲ.

ಇತರ ಗಣ್ಯರು: ಅದೇ ರೀತಿ ಗುಜರಾತ್‌ ಮುಖ್ಯಮಂತ್ರಿ ವಿಜಯ್‌ ರೂಪಾಣಿ ಅವರು ಜೂ. 19ರಂದು ಹುಬ್ಬಳ್ಳಿ ಧಾರವಾಡ, ಮಧ್ಯಪ್ರದೇಶದ ಮಂತ್ರಿಗಳಾದ ಜಯಂತ್‌ ಮಲಯ- ಜೂ. 1ರಂದು ಕಲಬುರಗಿ, ಯಶೋಧರಾ ರಾಜೆ ಸಿಂಧ್ಯಾ- ಜೂ.2ರಂದು ಬೀದರ್‌, ಮಾಯಾ ಸಿಂಗ್‌- ಜೂ. 9ರಂದು ಬೆಂಗಳೂರು ಗ್ರಾಮಾಂತರ, ನರೋತ್ತಮ್‌ ಮಿಶ್ರಾ- ಜೂ. 14ರಂದು ಬಾಗಲಕೋಟೆ, ಜೂ. 15ರಂದು ಗದಗ್‌, ಅರ್ಚನಾ ಚಟ್ನೀಸ್‌- ಜೂ. 14 ಮತ್ತು 15ರಂದು ಚಿತ್ರದುರ್ಗದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಉಳಿದಂತೆ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್‌ ಅವರು ದಾವಣಗೆರೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ರಾಜ್ಯಸಭೆ ಸದಸ್ಯ ಪ್ರಭಾಕರ್‌ ಕೋರೆ- ಉತ್ತರ ಕನ್ನಡ, ಸಂಸದ ಪ್ರತಾಪ್‌ ಸಿಂಹ- ರಾಮನಗರ, ಗದ್ದಿಗೌಡರ್‌- ಬಾಗಲಕೋಟೆ, ಬಿ.ಎಸ್‌.ಯಡಿಯೂರಪ್ಪ- ಶಿವಮೊಗ್ಗ, ಶ್ರೀರಾಮುಲು ಮತ್ತು ಸಂಗಣ್ಣ ಕರಡಿ- ಕೊಪ್ಪಳ, ಸಂಗಣ್ಣ ಕರಡಿ- ರಾಯಚೂರು, ಶ್ರೀರಾಮುಲು- ಯಾದಗಿರಿ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳುತ್ತಾರೆ. ಈ ಕಾರ್ಯಕ್ರಮದ ದಿನಾಂಕ ಇನ್ನಷ್ಟೇ ನಿಗದಿಯಾಗಬೇಕಿದೆ.

ಮುಂದಿನ ಚುನಾವಣೆ ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುತ್ತದೆ ಎಂದು ಬಿಜೆಪಿಯಲ್ಲಿ ಸ್ಪಷ್ಟತೆ ಇದೆ. ಆದರೆ, ಕಾಂಗ್ರೆಸ್‌ನಲ್ಲಿ ಕೇಂದ್ರ ಮತ್ತು ರಾಜ್ಯ ಎರಡೂ ಕಡೆ ಸಮರ್ಥ ನಾಯಕರಿಲ್ಲ. ಪರಿಸ್ಥಿತಿ ಹೇಗಿದೆ ಎಂದರೆ, ಮದುಮಗ ಯಾರು ಎಂದರೆ ಎಲ್ಲರೂ ನಾನು ಅಂತಾರೆ. ಮದುವೆ ಯಾರಾಗ್ತಿàರಿ ಎಂದರೆ ಗೊತ್ತಿಲ್ಲ ಎನ್ನುವ ಸ್ಥಿತಿ ಕಾಂಗ್ರೆಸ್‌ನಲ್ಲಿದೆ.
ಅನಂತಕುಮಾರ್‌, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next