ಅಮೃತಸರ : ಅಕ್ರಮವಾಗಿ ಪಾಕಿಸ್ತಾನದಿಂದ ಭಾರತದ ಗಡಿಯೊಳಗೆ ನುಗ್ಗಿದ ಪಾರಿವಾಳದ ವಿರುದ್ಧ FIR ದಾಖಲಿಸಲು ಗಡಿ ಭದ್ರತಾ ಪಡೆ (ಬಿಎಸ್ಎಫ್) ಕೋರಿದ್ದು, ಈ ಸಂಬಂಧ ಪಂಜಾಬ್ ಪೊಲೀಸರು ಕಾನೂನು ಅಭಿಪ್ರಾಯ ಕೋರಿದ್ದಾರೆ.
ಕಳೆದ ಶನಿವಾರ ಇಲ್ಲಿನ ರೊರಾವಾಲಾ ಪೋಸ್ಟ್ ನಲ್ಲಿರುವ ಗಡಿ ಭದ್ರತಾ ಪಡೆಯ ಜವಾನ್ ಭುಜದ ಮೇಲೆ ಪಾರಿವಾಳ ಕೂತಿದೆ. ಅಲ್ಲದೆ ಪಾರಿವಾಳವು ಗಡಿಯುದ್ದ ಹಾರಟ ನಡೆಸಿದೆ.
ಅನುಮಾನಕ್ಕೆ ಕಾರಣವಾದ ವಿಚಾರ ಏನೆಂದರೆ ಆ ಪಾರಿವಾಳದ ಕಾಲಿಗೆ ಚಿಕ್ಕ ಕಾಗದದ ತುಣುಕನ್ನು ಅಂಟಿಸಲಾಗಿದ್ದು, ಅದರಲ್ಲಿ ಕಾಂಟ್ಯಾಕ್ಟ್ ನಂಬರ್ ಅನ್ನು ಬರೆಯಲಾಗಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವಂತೆ ಬಿಎಸ್ ಎಫ್ ಸಿಬ್ಬಂದಿಯು ಪೊಲೀಸರಿಗೆ ಲಿಖಿತ ದೂರು ನೀಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಪೊಲೀಸ್ ವರಿಷ್ಠಾಧಿಕಾರಿ ಧ್ರುವ್ ದಹಿಯಾ, ಪಾರಿವಾಳದ ವಿರುದ್ಧ FIR ದಾಖಲಿಸುವಂತೆ ಬಿಎಸ್ ಎಫ್ ಒತ್ತಾಯ ಮಾಡುತ್ತಿದೆ. ಆದ್ರೆ ಪಾರಿವಾಳವು ಪಕ್ಷಿಯಾಗಿದ್ದರಿಂದ ಇದರ ವಿರುದ್ಧವಾಗಿ FIR ದಾಖಲಿಸಲು ಸಾಧ್ಯವಾಗುವುದಿಲ್ಲ. ಈ ಬಗ್ಗೆ ತನಿಖೆ ನಡೆಸುವಂತೆ ಕಾನೂನು ತಜ್ಞರಿಗೆ ಸೂಚಿಸುವುದಾಗಿ ಧ್ರುವ್ ಹೇಳಿದ್ದಾರೆ.