Advertisement

ಪುಷ್ಕರಣಿ ಮುಹೂರ್ತ ದಿನದಂದೇ ಅರಳಿತು ಬ್ರಹ್ಮಕಮಲ

08:40 AM Sep 14, 2017 | |

ಕಾಸರಗೋಡು: ಬೀರಂತ ಬೈಲು ನಿವಾಸಿ ಜಯಪ್ರಕಾಶ್‌ ಅವರ ಮನೆಯಲ್ಲಿ ಕೈತೋಟದಲ್ಲಿ ಪುಷ್ಕರಣಿ ಮುಹೂರ್ತ ಪರ್ವಕಾಲದ ಅವಧಿಯಲ್ಲೇ ಸೃಷ್ಟಿಕರ್ತ ಬ್ರಹ್ಮನ ಸಾನ್ನಿಧ್ಯವಿದೆ ಎಂದು ಸಂಕಲ್ಪಿಸಲಾಗುವ ಬ್ರಹ್ಮ ಕಮಲ ಅರಳಿದೆ. ಅಪರೂಪದ ಈ ಹೂ ಅರಳುವುದು ಮಧ್ಯರಾತ್ರಿ. ಇದನ್ನು ಕಾಣಲು ಮೊಬೈಲ್‌ನಲ್ಲಿ ಸೆರೆ ಹಿಡಿಯಲು ನಾಲ್ಕು ದಿನಗಳಿಂದ ನೆರೆಕರೆಯವರು ಕಾದು ಕುಳಿತಿದ್ದರು. ಆದರೆ ಇದು ಅರಳಿದ್ದು ಪವಿತ್ರ ದಿನವಾದ ಪುಷ್ಕರಣಿ ದಿನದಂದೇ. ಬ್ರಹ್ಮಕಮಲ ಅರಳಿದರೆ ಸಂಪತ್‌ ಸಮೃದ್ಧಿಯಾಗುತ್ತದೆ ಅನ್ನುವುದು ವಿಶ್ವಾಸ. ಇದೀಗ ಸೃಷ್ಟಿಕರ್ತನ ಸಾನ್ನಿಧ್ಯದ ಈ ಹೂ ಅರಳಿರುವುದೂ ಬ್ರಹ್ಮನ ಒಡಂಬಡಿಕೆಯ ದಿನದಂದೇ ಅನ್ನುವ ಕಾರಣಕ್ಕೆ ಈ ಹೂವಿಗೆ ಮತ್ತಷ್ಟು ಪವಿತ್ರತೆ ಬಂದಿದೆ.

Advertisement

ನಗರದ ಪ್ರಸಿದ್ಧ ಛಾಯಾಚಿತ್ರಗ್ರಾಹಕ ಜಯಪ್ರಕಾಶ್‌ ಅವರ ಪತ್ನಿ ಕಿರಣ್‌ ಜಯಪ್ರಕಾಶ್‌ ಅವರು ತೀರ್ಥಹಳ್ಳಿಯ ತಮ್ಮ ಸಹೋದರಿ ಸಜನಿ ಎಸ್‌. ರಾವ್‌ ಅವರಲ್ಲಿಂದ ಕಳೆದ ಆಗಸ್ಟ್‌ ತಿಂಗಳಲ್ಲಿ ಪುಟ್ಟ ಗಾತ್ರದ ಬ್ರಹ್ಮ ಕಮಲ ಗಿಡ ತಂದು ತಮ್ಮ ಕೈ ತೋಟದಲ್ಲಿ ನೆಟ್ಟಿದ್ದರು. ಹೆಚ್ಚೇನೂ ಆರೈಕೆ ಅವರು ಮಾಡಿಲ್ಲ. ಒಂದು ಬಾರಿ ಗಿಡದ ಬುಡದ ಮಣ್ಣನ್ನು ಒಮ್ಮೆ ಕೆದಕಿ ಹಸನು ಮಾಡಿದ್ದರು ಅಷ್ಟೆ. ಬರೀ ಮಳೆಯ ನೀರಿನಲ್ಲಿ ಗಿಡ ಹುಲುಸಾಗಿ ಬೆಳೆದು ಬಂದು ನೋಡುತ್ತಿದ್ದಂತೆ ಒಂದು ಎಲೆಯಲ್ಲಿ ಹಾವಿನ ಆಕೃತಿಯ ದಂಟು ಮೂಡಿಬಂದು ತುದಿಯಲ್ಲಿ ಮೊಗ್ಗು ಗೋಚರಿಸಿತು. ಕೇವಲ ತಿಂಗಳಲ್ಲೇ ಗಿಡದಲ್ಲಿ ಹೂ ಮೂಡಿದ್ದೂ ಸೋಜಿಗವೇ ಸರಿ. ಅಂತು ಮೊಗ್ಗು ಮೂಡಿದ ಬಳಿಕ ಇದು ಅರಳುವ ದೃಶ್ಯ ಕಾಣಲು ಉತ್ಸುಕರಾದವರು ಸುತ್ತಮುತ್ತಲಿನವರು.

ನೆರೆಕರೆಯ ಸುಂದರ ಅವರ ಹಿತ್ತಿಲಿನ ಆವರಣ ಗೋಡೆಯ ಬದಿಯಲ್ಲೇ ಇರುವ ಕೈತೋಟದಲ್ಲಿ ಈ ಗಿಡವಿದ್ದು ಸುಂದರ ಅವರು ತಮ್ಮ ಪುತ್ರರನ್ನು ಹಾಗೂ ಸಮೀಪದ ಕೃಷ್ಣಾನಂದ ಶೆಣೈ ಅವರ ಪುತ್ರರಾದ ಗಣನಾಥ ಶೆಣೈ ಮತ್ತು ಅಮರನಾಥ ಶೆಣೈ ಅವರನ್ನು ಜತೆ ಸೇರಿಸಿ ಮೂರು ದಿನಗಳಿಂದ ರಾತ್ರಿ ವೇಳೆ ಕಾದು ನಿಂತು ನಾಲ್ಕನೇ ರಾತ್ರಿ ಈ ಹೂ ಅರಳುವ ವೈಭವ ದೃಶ್ಯ ಕಣ್ಣಾರೆ ಕಂಡು ಹರುಷಿತಗೊಂಡರು. ಜಯಪ್ರಕಾಶ್‌ ದಂಪತಿಯೂ ಈ ವೇಳೆ ಉತ್ಸುಕರಾದರು. ಹೂ ಅರಳಿದಂತೆ ಪರಿಮಳವೂ ಸೂಸಿ ಸುತ್ತಲೂ ರಾತ್ರಿ ವೇಳೆಯ ನಿಶ್ಶಬ್ದದ ಆಹ್ಲಾದ ವಾತಾವರಣ ಮೂಡಿತು. ನೋಡು ನೋಡುತ್ತಿದ್ದಂತೆ ಅರಳಿದ ಹೂ ಮುದು ಡಲು ತೊಡಗಿ ನಾಲ್ಕೈದು ಗಂಟೆಗಳಲ್ಲೇ ಕತ್ತು ಅಡ್ಡಲಾಕಿತು. ಅಂತೂ ಅಲ್ಪ ಗಳಿಗೆಯ ಹೂವಿನ ದೃಶ್ಯ ಮನದಲ್ಲಿ ಚಿರಕಾಲ ಉಳಿಯಲು ಸಾಕಾಯಿತು.

ಕಿರಣ್‌ ಜಯಪ್ರಕಾಶ್‌ ಅವರ ತವರು ಮನೆ ಇರುವುದು ಕರ್ನಾಟಕದ ಹೊಸನಗರದಲ್ಲಿ. ಅವರ ತಾಯಿ ಮನೆಯಲ್ಲಿ ಹಿಂದೆ ಯಥೇಷ್ಟವಾಗಿ ಬ್ರಹ್ಮಕಮಲ ಹೂ ಅರಳುತ್ತಿತ್ತಂತೆ. ಒಂದು ಬಾರಿ ಸುಮಾರು 70ಕ್ಕೂ ಮಿಕ್ಕಿ ಹೂ ಅರಳಿದ್ದು ಇವರು ತಾಯಿ ಜತೆ ಹೂ ಮುಂದೆ ನಿಂತು ಫೋಟೋ ಕ್ಲಿಕ್ಕಿಸಿದ್ದರು. ಹಿಂಭಾಗದ ಅಷ್ಟೂ ಹೂಗಳ ಆಕರ್ಷಣೆಗೆ ಇವರ ಚಿತ್ರ ಸರಿಯಾಗಿ ಗೋಚರಿಸಲೇ ಇಲ್ಲವಂತೆ. ಮಲೆನಾಡಿನಲ್ಲಿ ಈ ಹೂ ಯಥೇಷ್ಟ ಬೆಳೆಯುತ್ತಿದ್ದು, ಹೂ ತೋಟದಲ್ಲಿ ಅನೇಕರು ಇದನ್ನು ನೆಟ್ಟು ಬೆಳೆಸುತ್ತಾರೆ. ವರ್ಷಕ್ಕೆ ಒಂದು ಬಾರಿ ಮಾತ್ರ ಅರಳುವ ಇದರ ಕಾಲಮಾನ ಜೂನ್‌ನಿಂದ ಜುಲೈ ತಿಂಗಳು. ಇದೀಗ ಪರಿಸರದ ವಿಪರೀತ ಬದಲಾವಣೆ ಇದರ ಮೇಲೂ ಪ್ರಭಾವ ಬೀರಿದ್ದೂ ಹೂ ಅರಳುವ ಸಮಯ ಸೆಪ್ಟಂಬರ್‌ ತಿಂಗಳ ವರೆಗೂ ವಿಸ್ತರಣೆ ಆಗಿದೆ.

ಕಿರಣ್‌ ಜಯಪ್ರಕಾಶ್‌ ಅನ್ನುವಂತೆ ಸುಮಾರು 30 ವರ್ಷದ ಹಿಂದೆ ಕಾಸರ ಗೋಡಿನ ಅಚ್ಚುತನ್‌ ಅವರ ಮನೆಯಲ್ಲಿ ಈ ಹೂ ಅರಳಿತ್ತು. ಅದೇ ರೀತಿ ಗೀತಾ ಅನ್ನುವವರ ಅಣಂಗೂರಿನ ಮನೆಯಲ್ಲೂ ಅರಳಿತ್ತಂತೆ. ಛಾಯಾಗ್ರಾಹಕರಾಗಿರುವ ಜಯಪ್ರಕಾಶ್‌ ಕುಟುಂಬ ಸಮೇತ ರಾತ್ರಿ ವೇಳೆ ಹೋಗಿ ಇದನ್ನು ಕ್ಲಿಕ್ಕಿಸಿದ್ದರಂತೆ. ಬೀರಂತಬೈಲಿನ ವೆಂಕಟೇಶ್‌ ಶೆಣೈ ಅವರ ಮನೆಯಲ್ಲೂ 25 ವರ್ಷದ ಹಿಂದೆ ಒಮ್ಮೆ ಈ ಹೂ ಅರಳಿವೆ ಎಂದು ಅವರೂ ತಿಳಿಸುತ್ತಾರೆ.

Advertisement

ಬ್ರಹ್ಮನಿಗೆ ಸಂಬಂಧಿಸಿ ಇರುವ ಕತೆಯೂ ಇನ್ನೊಂದಿದೆ. ತುಂದಿಲ ನೆಂಬ ಋಷಿ ಶಿವನನ್ನು ಕುರಿತು ತಪಸ್ಸು ಮಾಡಿ ಶಿವನ ಅಂಶಗಳಲ್ಲಿ ಒಂದಾದ ನೀರು ಆಗಿ ಪುಷ್ಕರ (ಜಲದೇವತೆ) ಆದನಂತೆ. ಬ್ರಹ್ಮ ಜಗತ್ತನ್ನು ಸೃಷ್ಟಿಸುವಾಗ ಈ ಪುಷ್ಕರನ ಜತೆ ದೇವತೆಗಳ ಮತ್ತು ಬ್ರಹಸ್ಪತಿಯ (ಗುರು) ಸಹಾಯ ಪಡೆದ. ಬ್ರಹ್ಮ, ಪುಷ್ಕರ ಮತ್ತು ಗುರು ಈ ಮೂವರೂ ಕೈಗೊಂಡ ಒಪ್ಪಂದದಂತೆ ಗುರು ಗ್ರಹವು ನಿರ್ದಿಷ್ಟವಾದ ರಾಶಿ ಪ್ರವೇಶಿಸಿದಾಗ ಪವಿತ್ರವಾದ ನದಿಗಳಲ್ಲಿ ಒಂದೊಂದು ನದಿ ಪುಷ್ಕರವಾಗುತ್ತದೆ. ಈ ವೇಳೆ ನದಿಗಳು ಸಕಲ ದೇವತೆಗಳ ಶಕ್ತಿಯನ್ನು ಪಡೆದುಕೊಳ್ಳುತ್ತವೆ. ಇದು ಪುಷ್ಕರದ ಅವಧಿ ಎನ್ನಲಾಗಿದೆ. ಪುಷ್ಕರವಾದ ನದಿ 12 ದಿನಗಳ ವರೆಗೆ ದೈವೀ ಶಕ್ತಿ ಹೊಂದಿರುತ್ತದೆ. ಹೀಗಾಗಿ ಈ ದಿನಗಳಲ್ಲಿ ನದಿ ಸ್ನಾನ ಶ್ರೇಷ್ಠ ಎನಿಸಿದೆ.

ಈ ಬಾರಿ ಗುರು ತುಲಾ ರಾಶಿಗೆ ಪ್ರವೇಶವಾಗುತ್ತಿದ್ದು, ಕಾವೇರಿ ನದಿಯಲ್ಲಿ ಮಹಾ ಪುಷ್ಕರಣಿಗೊಳ್ಳಲಿದೆ. ಹೀಗಾಗಿ ಸೆ. 12ರಂದು ಲಕ್ಷಾಂತರ ಭಕ್ತರು ಶ್ರೀ ರಂಗ ಪಟ್ಟಣಕ್ಕೆ ಆಗಮಿಸಿ ಕಾವೇರಿ ನದಿಯಲ್ಲಿ ಮಿಂದು ಪುಣ್ಯ ಪ್ರಾಪ್ತಿಗೆ ಮುಂದಾದರು. ಹದಿನೆರಡು ವರ್ಷಕ್ಕೆ ಒಮ್ಮೆ ಬರುವ ಒಂದು ಸುಯೋಗವಿದು.

ಜಯಪ್ರಕಾಶ್‌ ಅವರ ತೋಟದಲ್ಲಿ ಪುಷ್ಕರಣಿಯ ದಿನದಂದೇ ಬ್ರಹ್ಮ ಕಮಲ ಅರಳಿದೆ. ಪುರಷ್ಕರಣಿಯ ದಿನವೂ ಬ್ರಹ್ಮನಿಗೆ ಸಂಬಂಧಪಟ್ಟದ್ದು. ಎಷ್ಟೊಂದು ಸೋಜಿಗ ಈ ಪಾವಿತ್ರÂದ ಜೋಡಣೆ.

– ರಾಮದಾಸ್‌ ಕಾಸರಗೋಡು

Advertisement

Udayavani is now on Telegram. Click here to join our channel and stay updated with the latest news.

Next