Advertisement

ಬೋರುಕಟ್ಟೆ: ಇಂಥವರಿದ್ದರೆ ತ್ಯಾಜ್ಯ ಸಮಸ್ಯೆಯೇ ಇಲ್ಲ!

05:04 PM Jul 25, 2024 | Team Udayavani |

ಬಜಪೆ: ಕಂಡ ಕಂಡಲ್ಲಿ ಕಸ, ತ್ಯಾಜ್ಯ ಎಸೆಯುವವರೇ ಹೆಚ್ಚು. ಎಲ್ಲಾದರೂ ಒಂದು ಕಡೆ ಒಂದು ಪ್ಲಾಸ್ಟಿಕ್‌ ಕವರ್‌ ನಲ್ಲಿ ಯಾರಾದರೂ ಕಸ ಎಸೆದು ಹೋದರೆ, ಮರುದಿನ ಅಲ್ಲಿ ತ್ಯಾಜ್ಯದ ರಾಶಿಯೇ ಆಗಿ ಬಿಡುತ್ತದೆ. ಪಂಚಾಯತ್‌ ನವರು ಒಮ್ಮೆ ಕಸದ ರಾಶಿ ತೆಗೆದರೂ ಮರು ದಿನ ಮತ್ತೆ ಅದೇ ಪರಿಸ್ಥಿತಿ. ಕಸ ಹಾಕಬಾರದು ಎಂದು ಫಲಕ ಹಾಕಿ ದಂಡ ವಿಧಿಸುತ್ತೇವೆ ಎಂದು ಬೋರ್ಡ್‌ ಹಾಕಿದರೆ ಅದರ ಬುಡಕ್ಕೆ ಕಸ ಎಸೆದು ಹೋಗುವವರಿದ್ದಾರೆ. ಕೆಲವರು ಅಲ್ಲಿ ಬಿಟ್ಟು ಬೇರೆಡೆ ಎಸೆಯುತ್ತಾರೆ. ಅವರವರ ಊರನ್ನು ಅವರೇ ತಿಪ್ಪೆಗುಂಡಿ ಮಾಡುವ ಇವರನ್ನು ನಿಯಂತ್ರಿಸುವುದು ಹೇಗೆ? ಊರಿನ ಜನರೇ ಸೇರಿ ಇದಕ್ಕೊಂದು ಪರಿಹಾರ ಕಂಡುಕೊಂಡ ಅಪರೂಪದ ಘಟನೆ ಕುತ್ತೆತ್ತೂರಿನಲ್ಲಿ ನಡೆದಿದೆ. ಆ ಮೂಲಕ ಒಂದು ಸಮಿತಿ ಜನರ ಜವಾಬ್ದಾರಿ ಮತ್ತು ಬದ್ಧತೆಯ ಶಕ್ತಿಯನ್ನು ತೋರಿಸಿದೆ.

Advertisement

ಏನಾಗಿದೆ ಬೋರುಕಟ್ಟೆಯಲ್ಲಿ?
ಪೆರ್ಮುದೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕುತ್ತೆತ್ತೂರು ಗ್ರಾಮದ ಬೋರುಕಟ್ಟೆ ಪ್ರದೇಶದಲ್ಲಿ ಹಲವಾರು ವರ್ಷಗಳಲ್ಲಿ ಕೆಲವರು ಬೇಕಾಬಿಟ್ಟಿ ತ್ಯಾಜ್ಯವನ್ನು ಎಸೆಯುತ್ತಿದ್ದರು. ಇದು ಈ ಪ್ರದೇಶದ ಬಹಳ ದೊಡ್ಡ ಸಮಸ್ಯೆಯಾಗಿತ್ತು. ಹಲವಾರು ಬಾರಿ ಈ ಪ್ರದೇಶದಲ್ಲಿ ವಿವಿಧ ಸಂಘ-ಸಂಸ್ಥೆಯ ವತಿಯಿಂದ ಹಾಗೂ ಪೆರ್ಮುದೆ ಗ್ರಾಮ ಪಂಚಾಯತ್‌ ವತಿಯಿಂದ ಸ್ವಚ್ಛತ ಕಾರ್ಯ ನಡೆಸಿದ್ದರು. ಆದರೆ, ಯಾವುದೇ ಪ್ರಯೋಜನವಾಗಿರಲಿಲ್ಲ. ಸಮಸ್ಯೆ ಪರಿಹಾರವಾಗಿರಲಿಲ್ಲ. ಪೆರ್ಮುದೆ ಗ್ರಾಮ ಪಂಚಾಯತ್‌ ಇಲ್ಲಿ ಸ್ವಚ್ಛ ಮಾಡಿಮಾಡಿ ಸೋತು ಹೋಗಿತ್ತು. ಆಗ ಹುಟ್ಟಿಕೊಂಡ ಒಂದು ಸಮಿತಿ ಬೋರುಕಟ್ಟೆಯ ಕಸದ ಕಥೆಯನ್ನೇ ಬದಲಾಯಿಸಿತು. ಈಗ ಹಲವು ಪತ್ತೆ ಕಾರ್ಯ, ದಂಡನೆಗಳ ಜತೆಗೆ ಒಂದು ತಿಂಗಳಿಗೊಮ್ಮೆ ಈ ಪ್ರದೇಶವನ್ನು ಸಮಿತಿ ಸ್ವಚ್ಚ ಮಾಡುತ್ತಿದೆ.

ಯಾರಿದ್ದಾರೆ ಈ ಸಮಿತಿಯಲ್ಲಿ?
ಸಮಿತಿಯಲ್ಲಿ ಮಾಧವ ಭಟ್‌ ಕುಲ್ಲಂಗಾಲ್‌, ಪ್ರಸಾದ್‌ ಅಂಚನ್‌ ಕುತ್ತೆತ್ತೂರು, ನವೀನ್‌ ಶೆಟ್ಟಿ, ಶಶಿಧರ ಶೆಟ್ಟಿ ಸೂರಿಂಜೆ, ಜಯ ಪ್ರಕಾಶ್‌ ಸೂರಿಂಜೆ, ಸಚಿನ್‌ ಬೋರುಕಟ್ಟೆ, ವಿಘ್ನೇಶ್‌ ಸೂರಿಂಜೆ, ದಯಾನಂದ ಆಚಾರ್ಯ, ಕವಿತ, ಹೇಮಾವತಿ, ರವಿಚಂದ್ರ ಕುಲಾಲ್‌, ದೀಪಕ್‌ ಬೋರುಕಟ್ಟೆ, ಯೋಗೀಶ್‌ ದೇವಾಡಿಗ, ಹರೀಶ್‌ ಆದರ್ಶನಗರ, ದಿವಾಕರ ಶೆಟ್ಟಿ ಕುಲ್ಲಂಗಾಲ್‌ ಇದ್ದಾರೆ.

ಸಮಿತಿಗೆ ಪಂಚಾಯತ್‌ ಸಮ್ಮಾನ
ಈ ಪ್ರದೇಶದಲ್ಲಿ ಸ್ವಚ್ಛತ ಕಾರ್ಯ ಸಾಧ್ಯವಾಗದೇ ಇರುವಾಗ ಈ ಸಮಿತಿ ಆ ಪ್ರದೇಶದ ಮೇಲೆ ನಿಗಾ ಇಟ್ಟು ತ್ಯಾಜ್ಯ ಎಸೆಯುವುದುನ್ನು ತಡೆದಿರುವುದು ನಿಜಕ್ಕೂ ಆದರ್ಶ ಕೆಲಸ. ಇಂತಹ ಸಮಿತಿಗಳು ಗ್ರಾಮಗ್ರಾಮಗಳಲ್ಲಿ ಇದ್ದರೆ,
ಕಸ, ತ್ಯಾಜ್ಯ ಒಂದು ಸಮಸ್ಯೆಯೇ ಅಲ್ಲ. ಪೆರ್ಮುದೆ ಗ್ರಾ.ಪಂ.ಈ ಸಮಿತಿಯ ಸದಸ್ಯರನ್ನು ಸಮ್ಮಾನಿಸಿ ಗೌರವಿಸಿದೆ. ನಮಗೆ ಯಾವುದೇ ಪುರ ಸ್ಕಾರಗಳು ಬೇಕಿಲ್ಲ. ಊರು ಸ್ವಚ್ಛವಾಗಿದ್ದರೆ ಸಾಕು ಎನ್ನುತ್ತಾರೆ ಸಮಿತಿ ಸದಸ್ಯರು.

ಸ್ವಂತ ದುಡ್ಡಿನಿಂದ ಸಿಸಿ ಕೆಮರಾ!
ಮಾಧವ ಭಟ್ರು ಮತ್ತು ಆ ಪ್ರದೇಶದ ಜನರು ಸ್ವಂತ ದುಡ್ಡಿನಿಂದ ಸಿಸಿ  ಕೆಮರಾವನ್ನು ಅಳವಡಿಸಿದರು. ಕಸ ಹಾಕುವವರ ವಿವರವನ್ನು ಸಿ.ಸಿ. ಕೆಮರಾದಿಂದ ಸಂಗ್ರಹಿಸಿ ಪಂಚಾಯತ್‌‌ ಮೂಲಕ ದಂಡ ಕಟ್ಟಿಸುವ ಪ್ರಕ್ರಿಯೆ ಕಳೆದ ಒಂದು ವರ್ಷದಿಂದ ನಿರಂತರವಾಗಿ ನಡೆಯುತ್ತಿದೆ. ಪಂಚಾಯತ್‌ ಒಂದು ವರ್ಷದಲ್ಲಿ ಒಟ್ಟು 12 ಸಾವಿರ ರೂಪಾಯಿ ದಂಡ ವಸೂಲು ಮಾಡಿದೆ. ಬಜಪೆ ಪೊಲೀಸ್‌ ಠಾಣೆಗೆ ದೂರು ನೀಡಿ, ನಾಲ್ಕು ಪ್ರಕರಣವನ್ನು ದಾಖಲಿಸಿದೆ.

Advertisement

ಒಂದು ತಿಂಗಳು ನಿಗಾ ಇಟ್ಟ ಸಮಿತಿ
ಬೋರುಕಟ್ಟೆಯ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡುವ ದೃಷ್ಟಿಯಿಂದ ಈ ಪ್ರದೇಶದ ಜನರು ಮಾಧವ ಭಟ್‌ ಅವರ ನೇತೃತ್ವದಲ್ಲಿ ಬೋರುಕಟ್ಟೆ ಆದರ್ಶನಗರ ಸ್ವ ತಾ ಸಮಿತಿಯನ್ನು ರಚಿಸಿದರು. ಈ ಸಮಿತಿಯ ವತಿಯಿಂದ ಜನರಿಗೆ ತಿಳುವಳಿಕೆಯನ್ನು ನೀಡಲು ಬೃಹತ್‌ ಸ್ವಚ್ಛತಾ ಕಾರ್ಯಕ್ರಮಗಳನ್ನು ಆ ಪ್ರದೇಶದಲ್ಲಿ ಹಮ್ಮಿಕೊಳ್ಳಲಾಯಿತು. ಟನ್‌ ಗಟ್ಟಲೆ ಕಸವನ್ನು ಸಂಗ್ರಹಿಸಲಾಯಿತು. ಜನಜಾಗೃತಿ , ಜಾಥಾ, ಪೋಸ್ಟರ್‌ ಅಳವಡಿಸುವುದು. ಈ ರೀತಿಯ ವಿವಿಧ ಪ್ರಯೋಗವನ್ನು ಕೂಡ ಮಾಡಲಾಯಿತು.ಅಲ್ಲದೇ ಕಸ ,ತ್ಯಾಜ್ಯ ಎಸೆಯುವವರು ಯಾರೆಂದು ತಿಳಿಯಲು ಸುಮಾರು ಒಂದು ತಿಂಗಳು 4 ಪ್ರದೇಶದ
ಸಮಿತಿಯ ಜನರು 24 ಗಂಟೆ ಈ ಪ್ರದೇಶದಲ್ಲಿ ಕಾದು ಕುಳಿತು ಕಸ ಹಾಕುತ್ತಿದ್ದವರನ್ನು ಹಿಡಿದರು. ಬಳಿಕ ಪಂಚಾಯತ್‌ ಮುಖಾಂತರ ದಂಡವನ್ನು ವಿಧಿಸಲಾಯಿತು.

*ಸುಬ್ರಾಯ ನಾಯಕ್‌ ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next