Advertisement

ಏಣಗಿ ಬಾಳಪ್ಪನವರಿಗೆ ಅವರೇ ಸಾಟಿ: ಕಾಟ್ಕರ್‌

12:07 PM May 24, 2022 | Team Udayavani |

ಬೆಳಗಾವಿ: ಎಂಟು ದಶಕಗಳವರೆಗೆ ರಂಗಭೂಮಿ ಮೇಲೆ ಮಿಂಚಿದ ಏಣಗಿ ಬಾಳಪ್ಪ ಈ ನಾಡಿನ ಹೆಮ್ಮೆ. ಅವರ ಆತ್ಮಕಥೆ ಇಡೀ ಕರ್ನಾಟಕದ ರಂಗಭೂಮಿಯ ಅಪೂರ್ವ ಕಥೆಯಿದ್ದಂತೆ. ಬಾಳಪ್ಪನವರಿಗೆ ಅವರೇ ಸಾಟಿ ಎಂದು ಸಾಹಿತಿ ಡಾ| ಸರಜೂ ಕಾಟ್ಕರ್‌ ಹೇಳಿದರು.

Advertisement

ಜಿಲ್ಲಾ ಲೇಖಕಿಯರ ಸಂಘ, ಬೆಳಗಾವಿ ರಂಗಸಂಪದ ಹಾಗೂ ಚಂದ್ರಕಾಂತ ಕೂಸನೂರು ಪ್ರತಿಷ್ಠಾನದ ಆಶ್ರಯದಲ್ಲಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಂಗಕರ್ಮಿ ಏಣಗಿ ಬಾಳಪ್ಪ ಅವರ ರಂಗಾನುಭವ ಕುರಿತು ಗಣೇಶ ಅಮೀನಗಡ ನಿರೂಪಿಸಿದ ಬಣ್ಣದ ಬದುಕಿನ ಚಿನ್ನದ ದಿನಗಳು ಕೃತಿಯ 8ನೇ ಮುದ್ರಣ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಬಾಳಪ್ಪನವರ ಕಲಾ ಬದುಕು ಹೂವಿನ ಹಾಸಿಗೆಯಂತಿರಲಿಲ್ಲ. ಅವರು ಬೇರೆ ಕಂಪನಿಗಳಲ್ಲೂ ನಟಿಸಿದರು, ತಾವೇ ಕಂಪನಿ ಹುಟ್ಟು ಹಾಕಿ ಅದನ್ನೂ ನಡೆಸಿದರು. ತಾವೇ ನಡೆಸುತ್ತಿದ್ದ ನಾಟಕ ಕಂಪನಿ ಉಛ್ರಾಯ ಸ್ಥಿತಿ ತಲುಪಿತ್ತು. ಅಂತೆಯೇ ಕೆಲಕಾಲ ಅವರೂ ಕಷ್ಟದ ದಿನಗಳನ್ನೂ ಕಂಡಿದ್ದರು. ಆದರೆ, ರಂಗಭೂಮಿಯೊಂದಿಗಿನ ನಂಟು ಕಳಚಿಕೊಳ್ಳಲಿಲ್ಲ ರಂಗಭೂಮಿಯಲ್ಲಿ ದೀರ್ಘ‌ ಕಾಲ ಗಟ್ಟಿಯಾಗಿ ಉಳಿದರು. ಅದನ್ನು ಉಳಿಸಿದರು, ಬೆಳೆಸಿದರು ಎಂದರು.

ಏಣಗಿ ಬಾಳಪ್ಪ ಅವರಿಗೆ ಹೆಸರು ತಂದುಕೊಟ್ಟ ನಾಟಕ ಮತ್ತು ಪಾತ್ರ ಬಸವೇಶ್ವರ. ಈ ನಾಟಕ ನಡೆದಾಗ ಒಂದು ಬಾರಿ ಪ್ರಸಿದ್ಧ ಮಠದ ಮಠಾಧೀಶರೊಬ್ಬರು ವೇದಿಕೆ ಏರಿ ಬಸವೇಶ್ವರ ಪಾತ್ರಧಾರಿ ಬಾಳಪ್ಪನವರ ಕಾಲಿಗೆ ಎರಗಿದ ಘಟನೆ ನಡೆಯಿತು. ಅಷ್ಟರಮಟ್ಟಿಗೆ ಬಸವೇಶ್ವರ ಪಾತ್ರ ಮತ್ತು ನಾಟಕ ಖ್ಯಾತಿಗಳಿಸಿತ್ತು ಎಂದ ಅವರು, ಬಾಳಪ್ಪನವರ ನಾಟಕಗಳನ್ನು ಕುಟುಂಬದವರೆಲ್ಲ ಕುಳಿತು ನೋಡಬಹುದಾಗಿತ್ತು ಎಂದು ಸ್ಮರಿಸಿದರು. ಬಾಳಪ್ಪ ಸಮಾಜಮುಖೀಯೂ ಆಗಿದ್ದರು. ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದ ನಾಟಕಗಳನ್ನು ರಚಿಸಿ ಪ್ರದರ್ಶಿಸಿದ್ದರು. ಕರ್ನಾಟಕ ಏಕೀಕರಣ ಚಳವಳಿ ಮತ್ತು ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಬಂಧಪಟ್ಟಂತೆ ಜನಜಾಗೃತಿ  ಮೂಡಿಸುವಂತಹ ನಾಟಕಗಳ ಮೂಲಕ ಪ್ರೇಕ್ಷಕರ ಮನಗೆದ್ದಿದ್ದರು. ಅವರ ಕುರಿತಾದ ಈ ಕೃತಿ ಕನ್ನಡ, ಇಂಗ್ಲಿಷ್‌ ಮತ್ತು ಮರಾಠಿಯಲ್ಲಿ ಮುದ್ರಣ ಕಂಡಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಬಿ.ಎಸ್‌. ಗವಿಮಠ ಮಾತನಾಡಿ, ಕನ್ನಡ ರಂಗಭೂಮಿಯ ಶತಮಾನದ ಇತಿಹಾಸವೆಂದರೆ ಏಣಗಿ ಬಾಳಪ್ಪ. 1984ರಿಂದ ಅವರೊಂದಿಗೆ ಒಡನಾಟ ಆರಂಭವಾಯಿತು. ರಂಗಭೂಮಿ ಬಗ್ಗೆ ನನಗೆ ಪ್ರೀತಿ ಬೆಳೆಯಿತು. ರಂಗಭೂಮಿಯಲ್ಲಿ ಶಾಸ್ತ್ರೀಯವಾಗಿ ಕಲಿಯಬಯಸುವವರು ನಾಟ್ಯಭೂಷಣ ಕೃತಿಯನ್ನು ಓದಲೇಬೇಕು ಎಂದ ಅವರು, ಸರ್ಕಾರದಿಂದ ಬಾಳಪ್ಪನವರನ್ನು ಗುರುತಿಸುವ ಕೆಲಸ ಇಂದಿಗೂ ಆಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

Advertisement

ಲೇಖಕಿ ಆಶಾ ಕಡಪಟ್ಟಿ ಮಾತನಾಡಿ, ಸ್ವರಧಾರೆ ಗುಂಪು ಕಟ್ಟಿಕೊಂಡು ಏಣಗಿ ಬಾಳಪ್ಪನವರ ರಂಗಗೀತೆಗಳನ್ನು ನಾವೆಲ್ಲ ಕಲಿತಿದ್ದೇವೆ. ಬಯಲಾಟದಿಂದ ಆರಂಭವಾದ ಅವರ ಕಲಾ ಬದುಕು ರಂಗಭೂಮಿಯಲ್ಲಿ ಉನ್ನತ ಶಿಖರವೇರಿತು. ಅವರು ರಂಗಭೂಮಿ ಉಳಿಸಿ, ಬೆಳೆಸಿದರು. ಅದರ ಗೌರವವನ್ನೂ ಹೆಚ್ಚಿಸಿದರು ಎಂದು ಸ್ಮರಿಸಿದರು.

ಲೇಖಕ ಗಣೇಶ ಅಮೀನಗಡ ಮಾತನಾಡಿ, ಬಣ್ಣದ ಬದುಕಿನ ಚಿನ್ನದ ದಿನಗಳ ರಚನೆಗೆ 4 ವರ್ಷ ಬೇಕಾಯಿತು. 2007 ರಲ್ಲಿ ಮೊದಲ ಬಾರಿಗೆ ಬೆಳಗಾವಿಯಲ್ಲಿ ಬಿಡುಗಡೆಗೊಂಡ ಕೃತಿ ಒಂದೇ ವರ್ಷದಲ್ಲಿ 6 ಕಡೆ ಬಿಡುಗಡೆ ಕಂಡಿತು ಎಂದರು.

ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಹೇಮಾ ಸೊನೊಳ್ಳಿ ಮಾತನಾಡಿ, ಬಾಳಪ್ಪನವರದು ವರ್ಣನಾತೀತ ವ್ಯಕ್ತಿತ್ವ. ಮರಾಠಿ ಪ್ರದೇಶವಾದ ಖಾನಾಪೂರದಲ್ಲಿ ಬಾಳಪ್ಪನವರ ನಾಟಕಗಳು ನಡೆದಾಗಿನ ದಿನಗಳು ಮತ್ತು ಬಾಳಪ್ಪನವರ ಕುಟುಂಬದೊಂದಿಗಿನ ಸೊನಳ್ಳಿ ಕುಟುಂಬದ ಸಂಬಂಧವನ್ನು ನೆನಪಿಸಿಕೊಂಡರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಭವನದ ಕಾರ್ಯದರ್ಶಿ ಆರ್‌.ಬಿ.ಕಟ್ಟಿ, ಡಾ| ಬಸವರಾಜ ಜಗಜಂಪಿ, ಡಾ| ರಾಮಕೃಷ್ಣ ಮರಾಠೆ, ಡಾ| ಎಚ್‌ .ಬಿ.ರಾಜಶೇಖರ, ಡಾ| ಎಚ್‌.ಬಿ.ಕೋಲಕಾರ, ಡಾ| ಎಸ್‌.ಎಸ್‌.ಅಂಗಡಿ, ಯ.ರು.ಪಾಟೀಲ, ಸುಭಾಸ ಏಣಗಿ, ಮುರುಗೇಶ ಶಿವಪೂಜಿ ಉಪಸ್ಥಿತರಿದ್ದರು. ಬಸವರಾಜ ಗಾರ್ಗಿ ನಿರೂಪಿಸಿದರು. ಹಮೀದಾಬೇಗಂ ದೇಸಾಯಿ ಸ್ವಾಗತಿಸಿದರು. ನೈನಾ ಗಿರಿಗೌಡರ ಪ್ರಾರ್ಥಿಸಿದರು. ಸುನೀತಾ ದೇಸಾಯಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next