Advertisement

“ನಾಗನ’ಮತ್ತೊಂದು ಸೀಡಿ ರಿಲೀಸ್; ಪರಂ ಒಪ್ಪಿದರೆ 10 ನಿಮಿಷದಲ್ಲೇ ಶರಣು

12:27 PM May 09, 2017 | Sharanya Alva |

ಬೆಂಗಳೂರು: ಭಾರೀ ಪ್ರಮಾಣದಲ್ಲಿ ಹಳೇ ನೋಟು ಸಂಗ್ರಹಿಸಿಟ್ಟುಕೊಂಡಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮಾಜಿ ಕಾರ್ಪೊರೇಟರ್, ರೌಡಿ ಬಾಂಬ್ ನಾಗ ಶರಣಾಗಲು ಕೋರ್ಟ್ ಮತ್ತು ಪೊಲೀಸರಿಗೆ ಷರತ್ತು ವಿಧಿಸಿದ್ದ ಬೆನ್ನಲ್ಲೇ ಮಂಗಳವಾರ 2ನೇ ಸೀಡಿ ಬಿಡುಗಡೆ ಮಾಡಿದ್ದಾನೆ! ಅಷ್ಟೇ ಅಲ್ಲ ಗೃಹ ಸಚಿವ ಜಿ.ಪರಮೇಶ್ವರ್ ಅವರು ಒಪ್ಪಿದರೆ 10 ನಿಮಿಷದಲ್ಲೇ ಶರಣಾಗುತ್ತೇನೆ ಎಂಬ ಭರವಸೆಯನ್ನೂ ನೀಡಿದ್ದಾನೆ.

Advertisement

2ನೇ ಸೀಡಿಯಲ್ಲಿ ಏನಿದೆ?
ರೌಡಿ ಶೀಟರ್ ಬಾಂಬ್ ನಾಗ ಬಿಡುಗಡೆ ಮಾಡಿರುವ 2ನೇ ವಿಡಿಯೋದಲ್ಲಿ, ಗೃಹ ಸಚಿವ ಡಾ.ಪರಮೇಶ್ವರ್ ಓರ್ವ ಜಂಟಲ್ ಮ್ಯಾನ್. ಹಾಗಾಗಿ ಜಿ.ಪರಮೇಶ್ವರ್ ಅವರು ನನಗೆ ನ್ಯಾಯ ಕೊಡಿಸುವುದಾಗಿ ಒಪ್ಪಿದರೆ ನಾನು ಹತ್ತು ನಿಮಿಷದಲ್ಲೇ ಪೊಲೀಸರಿಗೆ ಶರಣಾಗುವೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ತನ್ನ ಮೇಲೆ ಪರಮೇಶ್ವರ್ ಅವರ ಶ್ರೀರಕ್ಷೆ ಇದೆ ಎಂದು ತಿಳಿಸಿದ್ದಾನೆ. ನನಗೆ ನ್ಯಾಯ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ.

ನಾಗನ ಪರ ವಕೀಲರಾದ ಶ್ರೀರಾಮರೆಡ್ಡಿ ಮೂಲಕ 2ನೇ ಸೀಡಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗಿದೆ. 2ನೇ ಸೀಡಿಯಲ್ಲಿಯೂ ನಿವೃತ್ತ ಅಧಿಕಾರಿಗಳಾದ ಸಂಗ್ರಾಮ್ ಸಿಂಗ್ ಹಾಗೂ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾನೆ.

ಭಾರೀ ಪ್ರಮಾಣದಲ್ಲಿ ಕಪ್ಪು ಹಣ ಹೊಂದಿದ್ದ ಪೊಲೀಸ್ ಅಧಿಕಾರಿಗಳು, ರಾಜಕಾರಣಿಗಳು ನನ್ನ ಬಳಿ ಬಂದು ಹಣ ವಿನಿಮಯ ಮಾಡಿಕೊಡುವಂತೆ ಹೇಳುತ್ತಿದ್ದರು. ಆ ನಿಟ್ಟಿನಲ್ಲಿ ನನ್ನ ಕಾಲ್ ಡೀಟೆಲ್ಸ್ ತೆಗೆದ್ರೆ ನನ್ನೊಂದಿಗೆ ಯಾರೆಲ್ಲ ಸಂಪರ್ಕದಲ್ಲಿದ್ದರು ಎಂಬ ಮಾಹಿತಿ ತಿಳಿಯುತ್ತೆ ಎಂದು ವಿವರಿಸಿದ್ದಾನೆ.

ಬಾಂಬ್ ನಾಗನ ಹೇಳಿಕೆ ಬಗ್ಗೆ ಗೊತ್ತಿಲ್ಲ: ಪರಮೇಶ್ವರ್
ಒಂದೆಡೆ ತಲೆಮರೆಸಿಕೊಂಡು ವಿಡಿಯೋ ಬಿಡುಗಡೆ ಮಾಡಿರುವ ಮಾಜಿ ಕಾರ್ಪೊರೇಟರ್ ನಾಗರಾಜ್ ಆಲಿಯಾಸ್ ಬಾಂಬ್ ನಾಗ ಗೃಹ ಸಚಿವರಾದ ಪರಮೇಶ್ವರ್ ಅವರು ಹೇಳಿದರೆ ಹತ್ತು ನಿಮಿಷದಲ್ಲೇ ಶರಣಾಗುವೆ ಎಂದು ತಿಳಿಸಿದ್ದರೆ, ಮತ್ತೊಂದೆಡೆ ಬಾಂಬ್ ನಾಗನ ಬಗ್ಗೆ ಮಾಹಿತಿ ಇಲ್ಲ ಎಂದು ಸಚಿವ ಪರಮೇಶ್ವರ್ ತಿಳಿಸಿದ್ದು, ಆತನ ಹೇಳಿಕೆ ಬಗ್ಗೆಯೂ ಗೊತ್ತಿಲ್ಲ ಎಂದು ಸಮಜಾಯಿಷಿ ನೀಡಿದರು. ಯಾರೇ ತಪ್ಪು ಮಾಡಿದರು ಕಾನೂನಿನಂತೆ ಕ್ರಮ ಎಂದು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next