Advertisement

ಉಜಿರೆ ನಾರಾಯಣ ಹಾಸ್ಯಗಾರರಿಗೆ ಬೋಳೂರು ದೋಗ್ರ ಪೂಜಾರಿ ಪ್ರಶಸ್ತಿ

09:22 AM Jul 14, 2017 | |

ಯಕ್ಷಗಾನ ರಂಗದಲ್ಲಿ ನಾಲ್ಕು ದಶಕಗಳಿಂದಲೂ ಹೆಚ್ಚಿನ ಕಲಾನುಭವ ಇರುವ ಅನುಭವೀ ಕಲಾವಿದ ಉಜಿರೆ ನಾರಾಯಣ ಹಾಸ್ಯಗಾರರಿಗೆ ಈ ಬಾರಿಯ ಬೋಳೂರು ದೋಗ್ರ ಪೂಜಾರಿ ಪ್ರಶಸ್ತಿ ಪ್ರದಾನವಾಗಲಿದೆ. ಕರಾವಳಿ ಕರ್ನಾಟಕದ ಅಗ್ರಮಾನ್ಯ ಯಕ್ಷಗಾನ ಪುರಸ್ಕಾರಗಳಲ್ಲಿ ಒಂದಾದ ದೋಗ್ರ ಪೂಜಾರಿ ಪ್ರಶಸ್ತಿಯ ನಿಮಿತ್ತವಾಗಿ ನಾರಾಯಣ ಹಾಸ್ಯಗಾರರ ಕಲಾಜೀವನದ ಪ್ರಮುಖ ಅಂಶಗಳು ಸ್ಮರಣಾರ್ಹವಾಗಿವೆ. 

Advertisement

ಸುಂಕದಕಟ್ಟೆ, ಪುತ್ತೂರು, ಕುಂಬಳೆ, ಸುರತ್ಕಲ್‌, ಕರ್ನಾಟಕ, ಮಂಗಳಾದೇವಿ, ಕದ್ರಿ ಮೇಳಗಳಲ್ಲಿ ಕಲಾಸೇವೆ ಮಾಡಿರುವ ನಾರಾಯಣ ಹಾಸ್ಯಗಾರರು ಕಳೆದ 15 ವರ್ಷಗಳಿಂದ ಕಟೀಲು ಮೇಳದಲ್ಲಿ ಪ್ರಧಾನ ಹಾಸ್ಯಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 
1957ರ ಜೂನ್‌ 11ರಂದು ಬೆಳ್ತಂಗಡಿ ತಾಲೂಕು ಉಜಿರೆಯ ಕೊಳಪಲದಲ್ಲಿ ಅಣ್ಣು ಪೂಜಾರಿ ಮತ್ತು ಧರ್ಣಮ್ಮ ದಂಪತಿಯ ನಾಲ್ಕನೇ ಪುತ್ರರಾಗಿ ಜನಿಸಿದ ನಾರಾಯಣ ಅವರು ಏಳನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. 

ಎಳೆಯ ಪ್ರಾಯದಲ್ಲಿ ಯಕ್ಷಗಾನದತ್ತ ಆಕರ್ಷಿತ ರಾಗಿ 1973-74ರಲ್ಲಿ ಧರ್ಮಸ್ಥಳದ ಲಲಿತಕಲಾ ಕೇಂದ್ರ ದಲ್ಲಿ ಯಕ್ಷಗಾನ ನಾಟ್ಯವನ್ನು ಕಲಿಯಲು ತೊಡಗಿದರು. ಯಕ್ಷಗುರು ಪಡ್ರೆ ಚಂದು ಅವರು ನಾರಾಯಣರ ಗುರುಗಳು. ಭಾರ್ಗವ, ಅಭಿಮನ್ಯು, ಬಭುವಾಹನ ಮೊದಲಾದ ಪುಂಡುವೇಷಗಳನ್ನು ಮಾಡುತ್ತ ಒಳ್ಳೆಯ ಕಲಾವಿದನಾಗಿ ಬೆಳೆಯತೊಡಗಿದರು. ಸುಂಕದಕಟ್ಟೆ ಮೇಳದಲ್ಲಿದ್ದಾಗ “ಮಣಿಕಂಠ ವಿಜಯ’ ಪ್ರಸಂಗದಲ್ಲಿ ಇವರ ಅಯ್ಯಪ್ಪನ ಪಾತ್ರಕ್ಕೆ ಅಭಿಮಾನಿಗಳ ಉತ್ತಮ ಪ್ರತಿಕ್ರಿಯೆ ಇತ್ತು. ಅಕ್ರೂರ, ಸಂಜಯ, ಸುಗ್ರೀವ ಮೊದಲಾದ ವೇಷಗಳನ್ನು ಭಾವಪೂರ್ಣವಾಗಿ ನಿರ್ವಹಿಸುವ ಇವರು ಉತ್ತಮ ಕಲಾವಿದರು. 

ತಮ್ಮ ಕಲಾ ವ್ಯವಸಾಯಕ್ಕೆ ಸಹಕಾರಿಗಳಾದ ಹಿರಿಯ, ಕಿರಿಯ ಕಲಾವಿದರನ್ನು ಕೃತಜ್ಞತೆಯಿಂದ ಹೆಸರಿಸುವ ಇವರು ಸಹೃದಯಿ ಕಲಾವಿದರು. ಸುಂಕದಕಟ್ಟೆಯ ನಿರಂಜನ ಸ್ವಾಮೀಜಿ, ಸಂಚಾಲಕರಾಗಿದ್ದ ಸುಂದರ ಶೆಟ್ಟಿ ಪೊರ್ಕೋಡಿ, ಭಾಗವತ ಪುತ್ತಿಗೆ ತಿಮ್ಮಪ್ಪ ರೈ, ಮುಳಿಯಾಲ ಭೀಮ ಭಟ್‌, ಬಜಾಲ್‌ ಜನಾರ್ದನ ಮೊದಲಾದವರ ಪ್ರೋತ್ಸಾಹವನ್ನು ನಾರಾಯಣರು ಉಲ್ಲೇಖೀಸುತ್ತಾರೆ. ಸುರತ್ಕಲ್‌ ಮೇಳದಲ್ಲಿ ಕೆಲವಾರು ವರ್ಷಗಳ ತಿರುಗಾಟ ಮಾಡಿದ ಇವರಿಗೆ ರಂಗಾನುಭವ ಸಿದ್ಧಿಸಲು, ಹಾಸ್ಯಗಾರನಾಗಿ ರೂಪುಗೊಳ್ಳಲು ವೇಣೂರು ಸುಂದರ ಆಚಾರ್ಯ ಅವರ ಒಡನಾಟ ಪೂರಕವಾಯಿತು. ಎಂ. ಕೆ. ರಮೇಶ ಆಚಾರ್ಯರು ಉಜಿರೆ ಅವರಿಗೆ ಉತ್ತೇಜನ ನೀಡಿದರು.

ಉತ್ತಮ ನಾಟ್ಯ, ಒಳ್ಳೆಯ ಮಾತುಗಾರಿಕೆ, ಭಾವಪೂರ್ಣ ಅಭಿನಯ ಇವುಗಳನ್ನು ಕರಗತ ಮಾಡಿಕೊಂಡ ಯೋಗ್ಯ ಕಲಾವಿದ ಉಜಿರೆಯವರು ಈಗ ಕಟೀಲು ಯಕ್ಷಗಾನ ಮಂಡಳಿಯ 5ನೆಯ ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕಾಲ್ಪನಿಕ ಪ್ರಸಂಗಗಳಲ್ಲಿಯೂ ಉಜಿರೆಯವರದು ಸಮರ್ಥ ನಿರ್ವಹಣೆ. ಬಣ್ಣದ ವೇಷಗಳನ್ನೂ ಮಾಡ ಬಲ್ಲ ನಾರಾಯಣ ಹಾಸ್ಯಗಾರರು ಬಹುವಿಧ ವೇಷಗಳನ್ನು ನಿರ್ವಹಿಸಿ ಸೂಕ್ತ ಕಲಾವಿದರಾಗಿ ಅಭಿನಂದನಾರ್ಹರಾಗಿದ್ದಾರೆ. ದೇವಿ ಮಹಾತ್ಮೆ, ಕಟೀಲು ಕ್ಷೇತ್ರ ಮಹಾತ್ಮೆ, ವಿವಿಧ ಪೌರಾಣಿಕ ಪ್ರಸಂಗಗಳಲ್ಲಿ ಸ್ತ್ರೀವೇಷ, ಪುಂಡು ವೇಷ, ದೇವದೂತ, ರಾಕ್ಷಸದೂತ ಇತ್ಯಾದಿ ಬಹುಬಗೆಯ ವೇಷಗಳನ್ನು ಸಂದಭೋìಚಿತವಾಗಿ ಮಾಡಬಲ್ಲ ನಾರಾಯಣ ಹಾಸ್ಯಗಾರರು ಹಲವಾರು ಸಮ್ಮಾನ -ಗೌರವಗಳಿಗೆ ಪಾತ್ರರಾಗಿದ್ದಾರೆ. ಮುಂಬೈ, ಕಾಂದಿವಿಲಿ ಕನ್ನಡ ಸಂಘ, ತೀಯ ಸಮಾಜ, ಬಿಲ್ಲವಾಸ್‌ ದುಬೈ, ಸುವರ್ಣ ಪ್ರತಿಷ್ಠಾನ ಕರ್ನಿರೆ, ಗೋಪಾಲ ಕೃಷ್ಣ ಆಸ್ರಣ್ಣ ಸಂಸ್ಮರಣಾ ಪ್ರಶಸ್ತಿ, ವಿಟ್ಲದ ಭಗವತಿ ಯುವಕ ಮಂಡಲದ ಸಮ್ಮಾನ ಸಹಿತ ಅನೇಕ ಪುರಸ್ಕಾರಗಳು ನಾರಾಯಣರನ್ನು ಅರಸಿಕೊಂಡು ಬಂದಿವೆ.  

Advertisement

ಮುಂಬೈಯಲ್ಲಿ ಹಲವಾರು ಮಂದಿ ಶಿಷ್ಯರಿಗೆ ಯಕ್ಷಗಾನ ತರಬೇತಿ ನೀಡಿದ್ದಾರೆ. ಎರಡು ವರ್ಷಗಳ ಹಿಂದೆ ಕುವೈಟ್‌ ಪ್ರವಾಸ ಕೈಗೊಂಡು ಅಲ್ಲಿನ ಆಸಕ್ತರಿಗೆ ಒಂದು ತಿಂಗಳ ಯಕ್ಷಗಾನ ತರಬೇತಿಯನ್ನು ನೀಡಿದ್ದಾರೆ. ಈ ತರಬೇತಿಯಲ್ಲಿ ಬಾಲಕಿಯರೂ ಇದ್ದುದು ಗಮನಾರ್ಹ. ಯಕ್ಷಗಾನ ತರಬೇತಿಗಾಗಿ ವಿದೇಶ ಪ್ರವಾಸ ಕೈಗೊಳ್ಳಲು ಭಾಗವತ ಪಟ್ಲ ಸತೀಶ್‌ ಶೆಟ್ಟಿ ಅವರು ಸಹಕರಿಸಿದ್ದಾರೆ. ಅನುಭವೀ ಕಲಾವಿದರಾದ ಉಜಿರೆ ನಾರಾಯಣ ಹಾಸ್ಯಗಾರರು ಪತ್ನಿ, ಪುತ್ರ, ಪುತ್ರಿಯರನ್ನು ಹೊಂದಿದ್ದಾರೆ. 

ಜುಲೈ 17ರಂದು ಪ್ರಶಸ್ತಿ

ಪ್ರದಾನ ಮಂಗಳೂರು ಪುರಭವನದಲ್ಲಿ ಜುಲೈ 17ರಂದು ಬೋಳೂರು ದೋಗ್ರ ಪೂಜಾರಿ ಪ್ರಶಸ್ತಿ ಪ್ರದಾನವಾಗಲಿದೆ. ಯಕ್ಷಗಾನ ಮೇಳಗಳ ಸಂಚಾಲಕರಾಗಿ, ಕಲಾವಿದರಾಗಿ, ಯಕ್ಷಗಾನ ತರಗತಿಗಳ ಸ್ಥಾಪಕರಾಗಿ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪ್ರಸಿದ್ಧರಾಗಿದ್ದ ಬೋಳೂರು ದೋಗ್ರ ಪೂಜಾರಿ ಅವರ ಸಂಸ್ಮರಣೆ ಮತ್ತು ಪ್ರಶಸ್ತಿ ಪುರಸ್ಕಾರ ನಡೆಯಲಿದೆ. ಇದೇ ಸಂದರ್ಭದಲ್ಲಿ ಪ್ರಸಿದ್ಧ ಕಲಾವಿದರಿಂದ “ಶ್ರೀರಾಮ ನಿರ್ಯಾಣ’ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಪ್ರಶಸ್ತಿಗಾಗಿ ಯೋಗ್ಯ ಕಲಾವಿದರನ್ನು ಗುರುತಿಸಿದ ಡಾ| ಅಮೃತ ಸೋಮೇಶ್ವರ ನೇತೃತ್ವದ ಸಮಿತಿಯ ಆಯ್ಕೆ ಸೂಕ್ತವಾಗಿದೆ. ಪುರಸ್ಕಾರವನ್ನು ಪೋಷಿಸುತ್ತಿರುವ ದಾಮೋದರ ನಿಸರ್ಗ ಮತ್ತು ಮಧುಕುಮಾರ್‌ ನಿಸರ್ಗ ಅವರು ಅಭಿನಂದನಾರ್ಹರು.

ಲ್‌. ಎನ್‌. ಭಟ್‌ ಮಳಿ

Advertisement

Udayavani is now on Telegram. Click here to join our channel and stay updated with the latest news.

Next