Advertisement

ಕಾಂಗ್ರೆಸ್‌ನಲ್ಲಿ ಹೊಸಬರ ಪ್ರವೇಶಕ್ಕೆ ರಂಗ ಸಜ್ಜು

01:09 AM Apr 23, 2022 | Team Udayavani |

ಮಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆ ದಕ್ಷಿಣ ಕನ್ನಡ ಜಿಲ್ಲೆಯ ರಾಜಕೀಯ ವಲಯದಲ್ಲಿ ಚುನಾವಣ ಪೂರ್ವ ರಂಗಸಜ್ಜಿಕೆ ಆರಂಭಗೊಂಡಿದೆ. ಮುಖ್ಯವಾಗಿ ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಗೆಲುವಿನ ಲೆಕ್ಕಾಚಾರ, ಪೂರಕ ಕಾರ್ಯತಂತ್ರಗಳ ತಯಾರಿ ನಡೆಯುತ್ತಿವೆ.

Advertisement

ಜಿಲ್ಲೆಯ 8 ಕ್ಷೇತ್ರಗಳ ಪೈಕಿ ಪ್ರಸ್ತುತ ಏಳರಲ್ಲಿ ಬಿಜೆಪಿ ಶಾಸಕರಿದ್ದಾರೆ. ಮಂಗಳೂರು ಕ್ಷೇತ್ರ ಮಾತ್ರ ಕಾಂಗ್ರೆಸ್‌ನ ತೆಕ್ಕೆಯಲ್ಲಿದ್ದು ಇಲ್ಲಿ ವಿಧಾನಸಭೆ ವಿಪಕ್ಷದ ಉಪನಾಯಕ ಯು.ಟಿ. ಖಾದರ್‌ ಶಾಸಕರಾಗಿದ್ದಾರೆ. ಕಾಂಗ್ರೆಸ್‌ನಲ್ಲಿ ಕೆಲವು ಕ್ಷೇತ್ರಗಳಲ್ಲಿ ಹೊಸಬರ ಪ್ರವೇಶಕ್ಕೆ ರಂಗ ಸಜ್ಜುಗೊಳಿಸಲಾಗುತ್ತಿದ್ದು, ಕ್ಷೇತ್ರಗಳಲ್ಲಿ ಅವರು ಈಗಾಗಲೇ ಸಕ್ರಿಯ ವಾಗಿದ್ದಾರೆ.

ಬಿಜೆಪಿಯಲ್ಲಿ ಹಾಲಿ ಶಾಸಕರಿಗೇ ಮಣೆ?: ಜಿಲ್ಲೆಯಲ್ಲಿ ಪ್ರಸ್ತುತ ರಾಜಕೀಯ ವಾತಾವರಣ ಮತ್ತು ಪಕ್ಷಗಳ ಆಂತರಿಕ ಚಟುವಟಿಕೆ ಅವ ಲೋಕಿಸಿದಾಗ ಬಿಜೆಪಿಯಲ್ಲಿ ಹೊಸ ಮುಖಗಳ ಸಾಧ್ಯತೆಗಳು ಕಡಿಮೆಯಾಗಿದ್ದು, ಹಾಲಿ ಶಾಸಕರೇ ಮುಂದಿನ ಚುನಾವಣೆಯಲ್ಲೂ ಅಭ್ಯರ್ಥಿಗಳಾಗುವುದು ಬಹುತೇಕ ಖಚಿತವಾಗಿದೆ. ಆದರೆ ಕಾಂಗ್ರೆಸ್‌ನಲ್ಲಿ ಮೂರು ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರಗಳಲ್ಲೂ ಹೊಸಮುಖಗಳಿಗೆ ಅವಕಾಶ ನೀಡುವ ಸಾಧ್ಯತೆ ಹೆಚ್ಚು.

ಬಿಜೆಪಿಯ ಹಾಲಿ ಶಾಸಕರಲ್ಲಿ ಸುಳ್ಯ ಕ್ಷೇತ್ರದ ಶಾಸಕ ಎಸ್‌. ಅಂಗಾರ ಅವರನ್ನು ಹೊರತುಪಡಿಸಿ ಮಂಗಳೂರು ಉತ್ತರದ ಡಾ| ಭರತ್‌ ಶೆಟ್ಟಿ, ಮಂಗಳೂರು ದಕ್ಷಿಣದ ವೇದವ್ಯಾಸ ಕಾಮತ್‌, ಬಂಟ್ವಾಳದ ರಾಜೇಶ್‌ ನಾೖಕ್‌, ಬೆಳ್ತಂಗಡಿಯ ಹರೀಶ್‌ ಪೂಂಜ, ಪುತ್ತೂರಿನ ಸಂಜೀವ ಮಠಂದೂರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೊಸಮುಖಗಳಾಗಿ ಕಣಕ್ಕಿಳಿದವರು. ಈಗಾಗಲೇ 6 ಬಾರಿ ಶಾಸಕರಾಗಿ ಪ್ರಸ್ತುತ ಸಚಿವರೂ ಆಗಿರುವ ಅಂಗಾರ ಒಂದು ವೇಳೆ ಸ್ಪರ್ಧೆಯಿಂದ ಹಿಂದೆ ಸರಿದರೆ ಆಗ ಸುಳ್ಯದಲ್ಲಿ ಹೊಸ ಮುಖದ ಬಗ್ಗೆ ಪಕ್ಷ ಚಿಂತಿಸಲಿದೆ.

ಯುವನಾಯಕರತ್ತ ಕಾಂಗ್ರೆಸ್‌ ನೋಟ: ಕಾಂಗ್ರೆಸ್‌ನಲ್ಲಿ ಈ ಬಾರಿ ಕೆಲವು ಹೊಸ ಮುಖಗಳಾಗಿ ಯುವನಾಯಕರನ್ನು ಕಣಕ್ಕಿಳಿಸಲು ಸಿದ್ಧತೆ ನಡೆದಿವೆ. ಮೂಡುಬಿದಿರೆ ಕ್ಷೇತ್ರದಲ್ಲಿ ಮಿಥುನ್‌ ರೈ ಟಿಕೆಟ್‌ ಆಕಾಂಕ್ಷಿ. ಬೆಳ್ತಂಗಡಿ, ಮಂಗಳೂರು ಉತ್ತರದಲ್ಲೂ ಹೊಸ ಮುಖಗಳು ಕಂಡರೂ ಅಚ್ಚರಿ ಇಲ್ಲ. ಇದಕ್ಕೆ ಪೂರಕ ಎನ್ನುವಂತೆ ಕೆಲವು ಕ್ಷೇತ್ರಗಳಲ್ಲಿ ಹೊಸ ಮುಖಗಳು ಹೆಚ್ಚು ಕ್ರಿಯಾಶೀಲವಾಗಿವೆ.

Advertisement

ಪುತ್ತೂರಿನಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಜತೆಗೆ ಧನಂಜಯ ಅಡ³ಂಗಾಯ ಸೇರಿ ಕೆಲವು ಮಂದಿ ಆಕಾಂಕ್ಷಿಗಳಾಗಿದ್ದಾರೆ. ಬಂಟ್ವಾಳದಲ್ಲಿ ಮಾಜಿ ಸಚಿವ ಹಾಗೂ ಈ ಕ್ಷೇತ್ರವನ್ನು 6 ಬಾರಿ ಪ್ರತಿನಿಧಿಸಿರುವ ಬಿ. ರಮಾನಾಥ ರೈ ಹಾಗೂ ಮಂಗಳೂರು ಕ್ಷೇತ್ರದಲ್ಲಿ ಕಳೆದ ಮೂರು ಅವಧಿಗಳಿಂದ ಶಾಸಕರಾಗಿರುವ ಯು.ಟಿ. ಖಾದರ್‌ ಅಭ್ಯರ್ಥಿಗಳಾಗುವುದು ಖಚಿತ. ಮಂಗಳೂರು ದಕ್ಷಿಣದಲ್ಲಿ ಮಾಜಿ ಶಾಸಕ ಹಾಗೂ ಕಳೆದ ಬಾರಿಯ ಕಾಂಗ್ರೆಸ್‌ ಅಭ್ಯರ್ಥಿ ಜೆ.ಆರ್‌.ಲೋಬೋ ಪ್ರಸ್ತುತ ಪಕ್ಷದ ಅಭ್ಯರ್ಥಿಗಳ ಪಟ್ಟಿಯಲ್ಲಿ ಹೆಸರು ಕೇಳಿಬರುತ್ತಿದೆ. ಆದರೆ ಆಸ್ಕರ್‌ ಫೆರ್ನಾಂಡಿಸ್‌ ಪ್ರತಿನಿಧಿಸುತ್ತಿದ್ದ ರಾಜ್ಯಸಭಾ ಸ್ಥಾನ ಜೂನ್‌ನಲ್ಲಿ ತೆರವಾಗಲಿದ್ದು, ಎಐಸಿಸಿ ಕಾರ್ಯದರ್ಶಿ ಐವನ್‌ ಡಿ’ಸೋಜಾ ಇದರ ಮೇಲೆ ಕಣ್ಣಿಟ್ಟಿದ್ದಾರೆ. ಒಂದೊಮ್ಮೆ ಇದು ದೊರೆಯದಿದ್ದರೆ ಆಗ ಅವರ ಹೆಸರು ಕೂಡ ಮುನ್ನೆಲೆಗೆ ಬರುವ ಸಾಧ್ಯತೆಗಳಿವೆ.

ಕಾಂಗ್ರೆಸ್‌ನಲ್ಲಿ ಟಿಕೆಟ್‌ಗೆ ಪೈಪೋಟಿ ಸಾಧ್ಯತೆ
ಪ್ರಸ್ತುತ ಜಿಲ್ಲೆಯ ರಾಜಕೀಯ ಪರಿಸ್ಥಿತಿ ಅವಲೋಕಿಸಿದರೆ ಬಿಜೆಪಿಯಲ್ಲಿ ಹಾಲಿ ಇರುವ ಶಾಸಕರಿಗೆ ಟಿಕೆಟ್‌ ಖಾತ್ರಿಯ ಹಿನ್ನೆಲೆಯಲ್ಲಿ ಹೆಚ್ಚಿನ ಪೈಪೋಟಿ, ಗುದ್ದಾಟದ ಸಾಧ್ಯತೆಗಳು ಕಡಿಮೆ. ಆದರೆ ಕಾಂಗ್ರೆಸ್‌ನಲ್ಲಿ ಒಂದಷ್ಟು ಪೈಪೋಟಿ ನಡೆಯುವ ಲಕ್ಷಣಗಳು ಗೋಚರಿಸುತ್ತಿದ್ದು ಇದು ಆಂತರಿಕವಾಗಿ ಭಿನ್ನಮತಕ್ಕೂ ಕಾರಣವಾಗುವ ಸಾಧ್ಯತೆಗಳಿವೆ. ಪ್ರತಿಯೊಂದು ಕ್ಷೇತ್ರಕ್ಕೂ ಪಕ್ಷದಲ್ಲಿ ಹಲವು ಆಕಾಂಕ್ಷಿಗಳಿದ್ದು ಈಗಾಗಲೇ ತಮ್ಮ ಆಪ್ತ ನಾಯಕರ ಮೂಲಕ ಪ್ರಯತ್ನಗಳನ್ನು ಆರಂಭಿಸಿದ್ದಾರೆ. ಮಂಗಳೂರು ಮತ್ತು ಮಂಗಳೂರು ಉತ್ತರ ಕ್ಷೇತ್ರಗಳು ಮುಸ್ಲಿಂ ಸಮುದಾಯದ ಹಾಗೂ ಮಂಗಳೂರು ದಕ್ಷಿಣ ಕ್ಷೇತ್ರ ಕ್ರೈಸ್ತ ಸಮುದಾಯದ ಅಭ್ಯರ್ಥಿಗಳಿಗೆ ಕಾಂಗ್ರೆಸ್‌ ಪ್ರಾತಿನಿಧ್ಯ ನೀಡುತ್ತಾ ಬಂದಿರುವುದರಿಂದ ಈ ಬಾರಿ ಈ ಸಮುದಾಯದವರಿಗೆ ಇಲ್ಲಿ ಟಿಕೆಟ್‌ ಖಚಿತ. ಆದರೆ ಅಭ್ಯರ್ಥಿ ಯಾರೆಂಬುದು ನಿರ್ಧಾರವಾಗಿಲ್ಲ. ಉಳಿದ ಕೆಲವು ಪಕ್ಷಗಳ ಲೆಕ್ಕಾಚಾರ ಇನ್ನೂ ಆರಂಭವಾಗಬೇಕಿದೆ.

-ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next